ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸುವ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯ ವಿರುದ್ಧದ ಅರ್ಜಿಯ ಮೇಲಿನ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಆಗಸ್ಟ್ 3 ರವರೆಗೆ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯ ತಡೆಯನ್ನು ವಿಸ್ತರಿಸಿದ್ದಾರೆ.
ಕಳೆದ ವಾರ ವಾರಣಾಸಿ ಜಿಲ್ಲಾ ನ್ಯಾಯಾಲಯವು ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶಿಸಿ ಆದೇಶ ಹೊರಡಿಸಿತ್ತು. ವಾರಣಾಸಿಯ ಜ್ಞಾನವಾಪಿ ಮಸೀದಿಯ ಉಸ್ತುವಾರಿಯಾಗಿರುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿಯು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು.
ಮಸೀದಿಯ ಆವರಣದೊಳಗೆ ಪ್ರಾರ್ಥನೆ ನಡೆಸುವ ಹಕ್ಕನ್ನು ಕೋರಿ ಹಿಂದೂ ದಾವೆದಾರರ ಗುಂಪು ಸಲ್ಲಿಸಿದ ಅರ್ಜಿಯ ಮೇರೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು ಆದರೆ, ಸುಪ್ರೀಂ ಕೋರ್ಟ್ ಸೋಮವಾರ ಆದೇಶಕ್ಕೆ ತಡೆ ನೀಡಿದ್ದು, ಬುಧವಾರ ಸಂಜೆ 5 ಗಂಟೆಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚಿಸಿತ್ತು.
ಇದರ ಬೆನ್ನಲ್ಲೇ, ಮಸೀದಿಯ ಉಸ್ತುವಾರಿ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯು ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಬುಧವಾರ ಹೈಕೋರ್ಟ್ ವೈಜ್ಞಾನಿಕ ಸಮೀಕ್ಷೆಗೆ ಮರುದಿನದವರೆಗೆ ತಡೆ ನೀಡಿತ್ತು.
ಪ್ರಕರಣದಲ್ಲಿ ಎರಡೂ ಕಡೆಯ ಸಾಕ್ಷ್ಯವನ್ನು ಸಲ್ಲಿಸಿದ ನಂತರ ಅಂತಹ ಸಮೀಕ್ಷೆಗಳನ್ನು ನಂತರದ ಹಂತದಲ್ಲಿ ಮಾಡಲಾಗುತ್ತದೆ ಎಂದು ಮಸೀದಿ ಸಮಿತಿಯು ವಾದಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಉತ್ಖನನ ಕಾರ್ಯವು ಮಸೀದಿಯ ರಚನಾತ್ಮಕ ಸಮಗ್ರತೆಗೆ ಹಾನಿಯುಂಟುಮಾಡಬಹುದು ಎಂದು ಅದು ಹೈಕೋರ್ಟ್ಗೆ ತಿಳಿಸಿದೆ.
ಕಟ್ಟಡಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಸುಪ್ರೀಂ ಕೋರ್ಟ್ನ ಆದೇಶದಂತೆ ಸೀಲ್ ಮಾಡಿದ ಪ್ರದೇಶದಲ್ಲಿ ಯಾವುದೇ ಕೆಲಸವನ್ನು ಕೈಗೊಳ್ಳಲಾಗುವುದಿಲ್ಲ ಎಂದು ದಾಖಲೆಯಲ್ಲಿ ಹೇಳಿಕೆ ನೀಡುತ್ತಿದ್ದೇವೆ ಎಂದು ಹಿಂದೂ ದಾವೆದಾರರು ಬುಧವಾರ ಹೈಕೋರ್ಟ್ಗೆ ತಿಳಿಸಿದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯ ಪುರಾತತ್ವ ಸರ್ವೇಗೆ ತಾತ್ಕಾಲಿಕ ತಡೆ: ಅಲಹಾಬಾದ್ ಹೈಕೋರ್ಟ್