ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ತೊರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ‘ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಭಾನುವಾರ ಹೇಳಿದ್ದಾರೆ.
ಇಂಡಿಯಾ ಬಣದ ಪ್ರಮುಖ ಪಕ್ಷವಾಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ದಕ್ಷಿಣ ಮುಂಬೈ ಲೋಕಸಭಾ ಸ್ಥಾನಕ್ಕೆ ಹಕ್ಕು ಮಂಡಿಸಲು ದಿಯೋರಾ ಇತ್ತೀಚೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಈಗ ಠಾಕ್ರೆ ಬಣದಲ್ಲಿರುವ ಅವಿಭಜಿತ ಶಿವಸೇನೆಯ ಅರವಿಂದ್ ಸಾವಂತ್ ಅವರು 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ದಿಯೋರಾ ಅವರನ್ನು ಸೋಲಿಸಿದ್ದರು.
‘ಸಾವಂತ್ ಎರಡು ಬಾರಿ ಸಂಸದರಾಗಿದ್ದಾರೆ. ಅವರು ಮತ್ತೆ ಸ್ಪರ್ಧಿಸುವುದರಲ್ಲಿ ತಪ್ಪೇನು? ಇದರಲ್ಲಿ ಯಾವುದೇ ರಾಜಿ ಇಲ್ಲ’ ಎಂದು ರಾವುತ್ ಪ್ರತಿಪಾದಿಸಿದರು.
ದಿಯೋರಾ ಅವರು ಕಾಂಗ್ರೆಸ್ ತೊರೆದ ಬಗ್ಗೆ ಪ್ರಶ್ನಿಸಿದ ರಾವುತ್, ‘ನಮಗೆ ಮುರಳಿ ದಿಯೋರಾ ಅವರ ಬಗ್ಗೆ ಚೆನ್ನಾಗಿ ತಿಳಿದಿತ್ತು. ಪಕ್ಷಕ್ಕಾಗಿ ಕೆಲಸ ಮಾಡುವುದು, ಅದಕ್ಕಾಗಿ ತ್ಯಾಗ ಮಾಡುವುದು ಏನು ಎಂದು ನಮಗೆ ತಿಳಿದಿದೆ. ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯರನ್ನು ಬದಲಾಯಿಸಿದರೆ, ಇದು ರಾಜ್ಯದಲ್ಲಿ ಹೊಸ ಟ್ರೆಂಡ್ ಪ್ರಾರಂಭವಾಗಿದೆ ಎಂದು ತೋರಿಸುತ್ತದೆ’ ಎಂದು ಹೇಳಿದರು.
ದಿಯೋರಾ ಅವರು ಒಂದು ಕಾಲದಲ್ಲಿ ಮುಂಬೈ ಕಾಂಗ್ರೆಸ್ನ ಮುಖ್ಯಸ್ಥರೂ ಆಗಿದ್ದರು. ಅವರು ಪಕ್ಷದ ಪ್ರಮುಖ ನಾಯಕರಾಗಿದ್ದ ದಿವಂಗತ ಮುರಳಿ ದಿಯೋರಾ ಅವರ ಪುತ್ರ.
ಇದನ್ನೂ ಓದಿ; ಪಕ್ಷ ತೊರೆದ ಕಾಂಗ್ರೆಸ್ ಹಿರಿಯ ನಾಯಕ ಮಿಲಿಂದ್ ದಿಯೋರಾ: ಶಿಂಧೆ ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆ