ಗುಜರಾತ್, ಒಡಿಶಾ ಮತ್ತು ರಾಜಸ್ಥಾನ ಸರ್ಕಾರಗಳು ಎಲ್ಲರಿಗೂ ಉಚಿತ ಲಸಿಕೆ ಎಂದು ಭಾನುವಾರ ಘೋಷಣೆ ಮಾಡಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈಗಾಗಲೇ ಉತ್ತರ ಪ್ರದೇಶ, ಅಸ್ಸಾಂ, ಕೇರಳ, ಛತ್ತೀಸ್ಗಡ, ಮಹಾರಾಷ್ಟ್ರ, ದೆಹಲಿ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು ಉಚಿತ ಲಸಿಕೆ ನಿಡುವುದಾಗಿ ಘೋಷಿಸಿವೆ. ಸದ್ಯ ಒಟ್ಟು 11 ರಾಜ್ಯಗಳು ತಮ್ಮ ಸಂಪನ್ಮೂಲ ಬಳಸಿ ಉಚಿತ ಲಸಿಕೆ ಘೋಷಿಸಿದಂತಾಗಿದೆ.
ಮೇ 1ರಿಂದ ಆರಂಭವಾಗಬೇಕಿರುವ ಲಸಿಕಾ ಅಭಿಯಾನಕ್ಕೆ ಇನ್ನು ಐದು ದಿನಗಳು ಮಾತ್ರ ಇವೆ. ಆದರೆ ಕರ್ನಾಟಕ ಸರ್ಕಾರ ತನ್ನ ಬಳಿ ಎಷ್ಟು ಲಸಿಕೆಗಳು ಸ್ಟಾಕ್ ಇವೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಹಾಗೆಯೇ 18-45 ವಯಸ್ಸಿನವರು ಲಸಿಕೆಗೆ ಹಣ ಪಾವತಿ ಮಾಡಬೇಕೆ ಅಥವಾ ಉಚಿತವೇ ಎಂಬುದರ ಕುರಿತು ಯಾವದೇ ನಿರ್ಧಾರ ತೆಗೆದುಕೊಂಡಿಲ್ಲ.
45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡಿತು. ಆದರೆ, ನಂತರದಲ್ಲಿ ಲಸಿಕಾ ಕಂಪನಿಗಳಿಗೆ ದರ ನಿಗದಿ ಮಾಡಲು ತಿಳಿಸಿತು. ಈಗ ರಾಜ್ಯ ಸರ್ಕಾರಗಳು ಲಸಿಕೆ ಖರೀದಿಸಿ ಅದನ್ನು ಜನರಿಗೆ ಒದಗಿಸಬೇಕಿದೆ.
ಗುಜರಾತ್ ಮತ್ತು ರಾಜಸ್ಥಾನಗಳು 18-45 ವಯಸ್ಸಿನವರಿಗೆ ಲಸಿಕೆಗಳನ್ನು ಉಚಿತವಾಗಿ ನೀಡಿವೆ. ಜೊತೆಗೆ ಒಡಿಶಾದಲ್ಲಿ 18 ರಿಂದ 44 ವಯಸ್ಸಿನ ನಡುವಿನವರಿಗೆ ಉಚಿತವೆಂದು ಘೋಷಿಸಿದೆ.
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, “ಮಹಾರಾಷ್ಟ್ರ ಸರ್ಕಾರ 18-45ರ ವಯಸ್ಸಿನವರಿಗೂ ಉಚಿತ ಲಸಿಕೆ ನಿಡಲು ಯೋಚಿಚಿದೆ. ಮೇ 1 ರಂದು ಸಿಎಂ ಉದ್ಧವ್ ಠಾಕ್ರೆ ಅವರು ಔಪಚಾರಿಕ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ಒಕ್ಕೂಟವು ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ಉಚಿತವಾಗಿರಬೇಕು ಎಂಬ ಅಭಿಪ್ರಾಯ ಹೊಂದಿದೆ. ಅದರಂತೆ ರಾಜ್ಯ ಸರ್ಕಾರ ತನ್ನ ಕಾರ್ಯತಂತ್ರವನ್ನು ರೂಪಿಸುತ್ತಿದೆ ಎನ್ನಲಾಗಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 18-44 ವಯಸ್ಸಿನ ಸುಮಾರು 2 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ. “ಖರೀದಿಗಾಗಿ ಈಗಾಗಲೇ ಆರ್ಡರ್ ನೀಡಲಾಗಿದೆ ಮತ್ತು ಇದಕ್ಕಾಗಿ ಸರ್ಕಾರವು ಸುಮಾರು 2,000 ಕೋಟಿ ರೂ. ಖರ್ಚು ಮಾಡುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 377 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಸಂಗ್ರಹಿಸಲು ರಾಜ್ಯ ಸಜ್ಜಾಗಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ 18-45 ವಯೋಮಾನದವರಲ್ಲಿ ಸುಮಾರು 3.75 ಕೋಟಿ ಜನರಿದ್ದಾರೆ, ಮತ್ತು ಪ್ರತಿ ವ್ಯಕ್ತಿಗೆ ಎರಡು ಲಸಿಕೆಗಳನ್ನು ಸುಮಾರು 3,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವ್ಯಯಿಸಲಿದೆ ಎಂದಿದ್ದಾರೆ. ಆದರೆ ಸೀರಂ ಸಂಸ್ಥೆಗೆ ಲಸಿಕೆ ಬೇಕು ಎಂದು ತಿಳಿಸಿದರೆ ಮೇ 15ರ ವರೆಗೂ ಪೂರೈಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ದೂರಿದ್ದಾರೆ.
ಕರ್ನಾಟಕದ ಸಮಸ್ಯೆ ಏನು?
ಬಿಹಾರ, ಉತ್ತರಪ್ರದೇಶ, ಛತ್ತೀಸಘಡ್ನಂತಹ ಆರ್ಥಿಕವಾಗಿ ಹಿಂದುಳಿದ ರಾಜ್ಯಗಳ ಸರ್ಕಾರಗಳೇ ಉಚಿತ ಲಸಿಕೆ ನೀಡಲು ತಯಾರು ಇರುವಾಗ, ಮುಂದುವರೆದ ರಾಜ್ಯ ಕರ್ನಾಟಕ ಈ ಕುರಿತು ಮಾತೇ ಆಡದಿರುವುದು ಆಶ್ಚರ್ಯ ಮೂಡಿಸಿದೆ. ಖಜಾನೆಯಲ್ಲಿ ಸಂಪನ್ಮೂಲ ಇಲ್ಲವೆ ಎಂಬ ಸಂಶಯ ಜನರನ್ನು ಕಾಡತೊಡಗಿದೆ. ಇತ್ತೀಚೆಗೆ ಸರ್ಕಾರ ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಿದ್ದನ್ನು ನೋಡಿದರೆ ಈ ಅನುಮಾನ ದಟ್ಟವಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಲಸಿಕೆ ಸ್ಟಾಕ್ ಇಲ್ಲ: ಮೇ 1ರಿಂದ ‘ಎಲ್ಲರಿಗೂ ಲಸಿಕೆ’ ಅಭಿಯಾನ ಅಸಾಧ್ಯವೆಂದ 4 ರಾಜ್ಯಗಳು