ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ಸಶಸ್ತ್ರ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಕಾಂಗ್ಪೋಕ್ಪಿ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆದಿದೆ.
ಕಲಹ ಪೀಡಿತ ಮಣಿಪುರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಇದೀಗ ಲೋಕಸಭೆ ಚುನಾವಣೆ 6 ದಿನಗಳು ಮಾತ್ರ ಬಾಕಿ ಇರುವಾಗ ಮತ್ತೆ ಹಿಂಸಾಚಾರ ನಡೆದಿದೆ. ಗುರುವಾರ ರಾತ್ರಿಯಿಂದ ಮೂರು ಪ್ರತ್ಯೇಕ ಹಿಂಸಾಚಾರದ ಘಟನೆಗಳು ವರದಿಯಾಗಿದೆ.
ಶುಕ್ರವಾರ, ತೆಂಗನೌಪಾಲ್ನಲ್ಲಿ ಸಶಸ್ತ್ರ ಗುಂಪಿನಿಂದ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದರು. ಸಂಜೆಯ ನಂತರ, ಬಿಷ್ಣುಪುರ ಜಿಲ್ಲೆಯಲ್ಲಿ ಮಣಿಪುರದ ಕಾಂಗ್ರೆಸ್ ಅಭ್ಯರ್ಥಿ ಬಿಮೋಲ್ ಅಕೋಯಿಜಮ್ ಅವರನ್ನು ಭೇಟಿ ಮಾಡಲು ಸೇರಿದ್ದ ಜನರ ಮೇಲೆ ಸಶಸ್ತ್ರ ದಾರಿ ಗುಂಪು ದಾಳಿ ನಡೆಸಿ ಅವರನ್ನು ಚದುರಿಸಿದ್ದರು.
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕುಕಿ ಮತ್ತು ಮೈತೈ ಗ್ರಾಮಗಳ ನಡುವಿನ ಗಡಿ ಪ್ರದೇಶದಲ್ಲಿ ಎರಡು ಕಡೆಯ ಸಶಸ್ತ್ರದಾರಿಗಳು ಗುಂಡಿನ ಚಕಮಕಿಯನ್ನು ನಡೆಸಿದ್ದಾರೆ. ಘಟನೆಯ ಹಿಂಸಾತ್ಮಕ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೃತಪಟ್ಟವರು ಕಾಂಗ್ಪೋಕ್ಪಿ ಜಿಲ್ಲೆಯ ನಿವಾಸಿಗಳಾದ 23 ವರ್ಷದ ಕಮ್ಮಿನ್ ಲಾಲ್ ಲುಫೆಂಗ್ ಹಾಗೂ 22 ವರ್ಷದ ಕಾಮ್ಲೆಂಗ್ ಸ್ಯಾಟ್ ಲುಂಕಿಮ್ ಎಂದು ಕುಕಿ-ಝೋಮಿ ಸಂಘಟನೆಗಳು ಹೇಳಿದೆ. ಪೂರ್ವ ಇಂಫಾಲ ಹಾಗೂ ಕಾಂಗ್ಪೋಕ್ಪಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಮೂಲಗಳ ಪ್ರಕಾರ, ಬೆಳಗ್ಗೆ9 ಗಂಟೆಯ ವೇಳೆಗೆ ಎರಡು ಸಶಸ್ತ್ರ ಗುಂಪುಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಪೂರ್ವ ಇಂಫಾಲ, ಕಾಂಗ್ಪೋಕ್ಪಿ ಹಾಗೂ ನಾಗಾ ಬಾಹುಳ್ಯದ ಉಖ್ರುಲ್ ಜಿಲ್ಲೆಗಳು ಸಂಧಿಸುವ ಪ್ರಾಂತ್ಯವಾದ ಮಫೌದಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಾವ ಗುಂಪು ಗುಂಡಿನ ಚಕಮಕಿಯನ್ನು ಮೊದಲು ಪ್ರಾರಂಭಿಸಿತು ಎಂಬುದರ ಕುರಿತು ಭದ್ರತಾ ಪಡೆಗಳು ಪ್ರತಿಕ್ರಿಯಿಸಲಿಲ್ಲ, ಆದರೆ ಗುಂಡಿನ ಚಕಮಕಿ ನಡೆದಿರುವುದನ್ನು ದೃಢಪಡಿಸಿದ್ದಾರೆ ಮತ್ತು ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ:ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ: ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ