ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ನಕಲಿ ಶಿವಸೇನಾ’ ದಾಳಿಗೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ‘ನಮ್ಮ ಪಕ್ಷವನ್ನು ಮಣ್ಣಿನ ಮಕ್ಕಳ ಹಕ್ಕುಗಳಿಗಾಗಿ ಹೋರಾಡಲು ಬಾಳಾ ಠಾಕ್ರೆ ಸ್ಥಾಪಿಸಿದ್ದಾರೆ’ ಎಂದು ಹೇಳಿರುವ ಅವರು, “ನಕಲಿ ಎಂದು ಹೇಳುವುದಕ್ಕೆ ನಮ್ಮ ಪಕ್ಷವು ನಿಮ್ಮ ಪದವಿ ಅಲ್ಲ’ ಎಂದು ಲೇವಡಿ ಮಾಡಿದ್ದಾರೆ.
“ಮಣ್ಣಿನ ಮಕ್ಕಳ ಹಕ್ಕುಗಳಿಗಾಗಿ ಹೋರಾಡಲು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ಥಾಪಿಸಿದ ಪಕ್ಷವನ್ನು ನಕಲಿ ಎಂದು ಕರೆಯಲಾಗುತ್ತಿದೆ; ನಕಲಿ ಎಂದು ಕರೆಯುವುದಕ್ಕೆ ಅದು ನಿಮ್ಮ ಪದವಿ ಅಲ್ಲ” ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಧವ್ ಠಾಕ್ರೆ ನೇತೃತ್ವದ ರಾಜಕೀಯ ಪಕ್ಷವನ್ನು “ನಕಲಿ ಶಿವಸೇನೆ” ಎಂದು ಕರೆದರು.
“ಇಂಡಿಯಾ ಮೈತ್ರಿಕೂಟದ ಪಾಲುದಾರ ಡಿಎಂಕೆ ಸನಾತನವನ್ನು ಮುಗಿಸುವ ಬಗ್ಗೆ ಮತ್ತು ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸುವ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್ ಮತ್ತು ನಕಲಿ ಶಿವಸೇನೆ ಅದೇ ಜನರನ್ನು ಮಹಾರಾಷ್ಟ್ರದಲ್ಲಿ ರ್ಯಾಲಿಗಳಿಗೆ ಕರೆಯುತ್ತಿದೆ” ಎಂದು ಪ್ರಧಾನಿ ಹೇಳಿದ್ದರು.
ಠಾಕ್ರೆ ಕುಟುಂಬದ ಮಾಜಿ ನಿಷ್ಠಾವಂತ ಏಕನಾಥ್ ಶಿಂಧೆ ಅವರು 2022 ರಲ್ಲಿ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಶಿವಸೇನಾ ಶಾಸಕರು ಮತ್ತು ಸಂಸದರ ಬಂಡಾಯವನ್ನು ಮುನ್ನಡೆಸಿದರು. ಪಕ್ಷದಲ್ಲಿ ಭಾರೀ ವಿಭಜನೆಗೆ ಕಾರಣವಾದರು. ನಂತರ, ಶಿಂಧೆ ಬಿಜೆಪಿಯೊಂದಿಗೆ ಕೈಜೋಡಿಸಿದರು.
ಈ ವರ್ಷದ ಆರಂಭದಲ್ಲಿ, ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಏಕನಾಥ್ ಶಿಂಧೆ ಅವರ ಬಣ ನಿಜವಾದ ಶಿವಸೇನೆ ಎಂದು ತೀರ್ಪು ನೀಡಿದ್ದಾರೆ. ಆ ಮೂಲಕ ಉದ್ಧವ್ ಠಾಕ್ರೆ ಅವರನ್ನು ಮಹಾರಾಷ್ಟ್ರದ ರಾಜಕೀಯದ ಅಂಚಿಗೆ ತಳ್ಳಿದರು.
ಇಂಡಿಯಾ ಗೆಲ್ಲುವ ಭವಿಷ್ಯ ನುಡಿದ ಉದ್ಧವ್
ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ – ಶರದ್ಚಂದ್ರ ಪವಾರ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಶುಕ್ರವಾರ ಬೋಯಿಸರ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ; ರಾಜಸ್ಥಾನದಲ್ಲಿ ಕಾಂಗ್ರೆಸ್ಗೆ ಭಾರೀ ಹಿನ್ನಡೆ; ಪಕ್ಷ ತೊರೆದ 400 ಕಾರ್ಯಕರ್ತರು