ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಪರಾರಿಯಾಗಿರುವ ರಾಜಕಾರಣಿ ಶ್ರೀಕಾಂತ್ ತ್ಯಾಗಿ ಅವರನ್ನು ಹಿಡಿದುಕೊಟ್ಟವರಿಗೆ 25,000 ರೂಪಾಯಿ ಬಹುಮಾನವನ್ನು ನೋಯ್ಡಾ ಪೊಲೀಸರು ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನೋಯ್ಡಾದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ, ಬಿಜೆಪಿ ನಾಯಕ ಎಂದು ಹೇಳಿಕೊಳ್ಳುವ ಶ್ರೀಕಾಂತ್ ತ್ಯಾಗಿ ಅವರ ಮನೆಯ ಒಂದು ಭಾಗವನ್ನು ಯೋಗಿ ಸರ್ಕಾರದ ಬುಲ್ಡೋಜರ್ಗಳು ಕೆಡವಿವೆ. ಈ ಬೆನ್ನಲ್ಲೇ ತ್ಯಾಗಿ ಬಂಧನಕ್ಕೆ ಆಗ್ರಹಗಳು ಕೇಳಿಬರುತ್ತಿವೆ.
ಗ್ರೀನ್ ಬೆಲ್ಟ್ಅನ್ನು ಅತಿಕ್ರಮಿಸಿದ ಆರೋಪದ ಮೇಲೆ ತ್ಯಾಗಿ ವಿರುದ್ಧ ನೋಯ್ಡಾ ಪ್ರಾಧಿಕಾರ ಮತ್ತು ಗೌತಮ್ ಬುದ್ಧ ನಗರ ಪೊಲೀಸರಿಗೆ 2019ರಲ್ಲಿ ಹೌಸಿಂಗ್ ಸೊಸೈಟಿಯ ನಿವಾಸಿಗಳು ದೂರು ನೀಡಿದ್ದರು.
Noida police announces Rs 25,000 reward on arrest of absconding politician Shrikant Tyagi who is accused of assaulting woman: Official
— Press Trust of India (@PTI_News) August 8, 2022
ಅಕ್ಟೋಬರ್ 16, 2019ರಂದು, ನೋಯ್ಡಾ ಪ್ರಾಧಿಕಾರವು 15 ದಿನಗಳಲ್ಲಿ ಅತಿಕ್ರಮಣವನ್ನು ತೆರವು ಮಾಡುವಂತೆ ತ್ಯಾಗಿಗೆ ನೋಟಿಸ್ ನೀಡಿತ್ತು. ಆದಾಗ್ಯೂ ನೋಯ್ಡಾ ಪ್ರಾಧಿಕಾರವು ಕಳೆದ ವರ್ಷ ನೋಟಿಸ್ ಅನ್ನು ರದ್ದುಗೊಳಿಸಿದೆ ಎಂದು ತ್ಯಾಗಿ ಹೇಳಿಕೊಂಡಿದ್ದರು.
ಸೋಮವಾರ ಬುಲ್ಡೋಜರ್ಗಳು ನೋಯ್ಡಾದ ಸೆಕ್ಟರ್ 93 ಬಿನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿರುವ ತ್ಯಾಗಿ ಅವರ ಮನೆಯ ಎರಡು ಗಾಜಿನ ಛಾವಣಿಗಳನ್ನು ಒಡೆದು ಹಾಕಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಅಪಾರ್ಟ್ಮೆಂಟ್ನ ಕಾಮನ್ ಏರಿಯಾ ಜಾಗವನ್ನು ಶ್ರಿಕಾಂತ್ ತ್ಯಾಗಿ ಅತಿಕ್ರಮಣ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಈ ಕುರಿತು ಅಪಾರ್ಟ್ಮೆಂಟ್ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಶ್ರೀಕಾಂತ್ ತ್ಯಾಗಿ ಬಳಿ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ಶಬ್ದಗಳಿಂದ ಮಹಿಳೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದನು.
ಮಹಿಳೆಯೊಬ್ಬರಿಗೆ ಅಶ್ಲೀಲವಾಗಿ ನಿಂದಿಸಿ ಹಲ್ಲೆ ನಡೆಸಿದ್ದ ಶ್ರೀಕಾಂತ್ ತ್ಯಾಗಿ ಅವರನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಶನಿವಾರ ಹೇಳಿದೆ. ಆದರೆ ಆರೋಪಿಯು ಪರಾರಿಯಾಗಿದ್ದು, ಆತನ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಉತ್ತರ ಪ್ರದೇಶ ಡಿಜಿಪಿಗೆ ಪತ್ರ ಬರೆದು ಘಟನೆಯ ಬಗ್ಗೆ ನ್ಯಾಯಯುತ ಮತ್ತು ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದು, ದುಷ್ಕರ್ಮಿಯ ವಿರುದ್ಧ ಎಫ್ಐಆರ್ ದಾಖಲಿಸಿ ಅವನನ್ನು ಬಂಧಿಸುವಂತೆ ಕೋರಿದ್ದಾರೆ.
ಇದನ್ನೂ ಓದಿರಿ: ಬಿಹಾರ ಬಿಕ್ಕಟ್ಟು: ಬಿಜೆಪಿ ವಿರುದ್ಧ ನಿತೀಶ್ ಬಂಡೇಳಲು ಕಾರಣವಾದ ಐದು ಈ ಅಂಶಗಳು…
ತ್ಯಾಗಿ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ಆಡಳಿತ ಪಕ್ಷದ ಯುವ ಕಿಸಾನ್ ಸಮಿತಿಯ ರಾಷ್ಟ್ರೀಯ ಸಹ-ಸಂಯೋಜಕ ಎಂದು ಗುರುತಿಸಿಕೊಂಡಿದ್ದಾನೆ. ಆದರೆ, ಬಿಜೆಪಿ ನೋಯ್ಡಾ ಮಹಾನಗರ ಮುಖ್ಯಸ್ಥ ಮನೋಜ್ ಗುಪ್ತಾ ಅವರು ತ್ಯಾಗಿ ಆಡಳಿತ ಪಕ್ಷದ ಸದಸ್ಯನಲ್ಲ ಎಂದು ಹೇಳಿಕೊಂಡಿದ್ದಾರೆ.
ಇದರ ನಡುವೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಏಳು ಜನರು ಗಲಾಟೆ ಮಾಡಿದ ನಂತರ ನೋಯ್ಡಾ ಎರಡನೇ ಹಂತದ ಪೊಲೀಸ್ ಠಾಣೆಯ ಉಸ್ತುವಾರಿ ಸುಜಿತ್ ಉಪಾಧ್ಯಾಯ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ ಎಂದು ನೋಯ್ಡಾ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ಹೇಳಿದ್ದಾರೆ. ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.