ಪಕ್ಷ ಸಂಘಟನೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯಿಂದ (ಡಿ.20) ಉತ್ತರ ಪ್ರದೇಶ ಕಾಂಗ್ರೆಸ್ ‘ಯುಪಿ ಜೋಡೋ’ ಯಾತ್ರೆ ಕೈಗೊಂಡಿದೆ.
ಸಹರಾನ್ಪುರದ ಶಾಕುಂಭಾರಿ ದೇವಿ ದೇವಸ್ಥಾನದಿಂದ ಆರಂಭವಾಗಿರುವ 20 ದಿನಗಳ ಯಾತ್ರೆ 11 ಜಿಲ್ಲೆಗಳು ಮತ್ತು 16 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.
ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ರೋಹಿಲ್ಖಂಡ್ ಪ್ರದೇಶದ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಯಾತ್ರೆ ಆಯೋಜಿಸಿದೆ. ಸಹರಾನ್ಪುರ, ಮುಜಾಫರ್ನಗರ, ಬಿಜ್ನೋರ್, ಅಮ್ರೋಹಾ, ಮೊರಾದಾಬಾದ್, ರಾಂಪುರ ಮತ್ತು ಬರೇಲಿ ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳಲ್ಲಿ ಶೇ.35 ರಿಂದ 40 ಮುಸ್ಲಿಮರ ಮತಗಳು ನಿರ್ಣಾಯಕವಾಗಿವೆ.
दिलों को जोड़ रही UP जोड़ो यात्रा का दूसरे दिन का यात्रा मार्ग
यह यात्रा सहारनपुर के असगरया मदरसा से गोपाली तक चलेगी।
आज की यात्रा शाकम्भरी देवी के मंदिर से आरम्भ हुई और कल की यात्रा असगरया मदरसे से आरम्भ होगी। क्योंकि हम 'सर्व धर्म समभाव' में विश्वास रखते हैं।
हम केवल कहते… pic.twitter.com/ZrOIm9eSPd
— UP Congress (@INCUttarPradesh) December 20, 2023
‘ಯುಪಿ ಜೋಡೋ’ ಯಾತ್ರೆಯ ಮೂಲಕ ರೈತರು, ಯುವಜನರು, ಮಹಿಳೆಯರು, ವ್ಯಾಪಾರಿಗಳು, ಧಾರ್ಮಿಕ ಮುಖಂಡರು ಮತ್ತು ಕುಶಲಕರ್ಮಿಗಳನ್ನು ತಲುಪಲು ಕಾಂಗ್ರೆಸ್ ಉದ್ದೇಶಿಸಿದೆ.
ಯಾತ್ರೆಯ ವೇಳೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಸಹರಾನ್ಪುರದಲ್ಲಿ ಮರದ ಪೀಠೋಪಕರಣ ತಯಾರಕರೊಂದಿಗೆ ಸಂವಾದ ನಡೆಸಲಿದ್ದಾರೆ. ಮುಜಾಫರ್ನಗರ ಮತ್ತು ಬಿಜ್ನೋರ್ನಲ್ಲಿ ಕಬ್ಬು ಬೆಳೆಯುವ ರೈತರು, ಮೊರಾದಾಬಾದ್ನಲ್ಲಿ ಹಿತ್ತಾಳೆ ತಯಾರಕರು, ಬರೇಲಿಯಲ್ಲಿ “ಝರಿ ಜರ್ಡೋಜಿ” ಕೆಲಸಗಾರರು ಮತ್ತು ಬಿದಿರು ಕುಶಲಕರ್ಮಿಗಳು, ರಾಂಪುರದಲ್ಲಿ ಕುಶಲಕರ್ಮಿಗಳು, ಶಹಜಹಾನ್ಪುರ ಮತ್ತು ಲಖಿಂಪುರದಲ್ಲಿ ಕಬ್ಬು ಬೆಳೆಯುವ ರೈತರು ಮತ್ತು ವಿವಿಧ ಜಿಲ್ಲೆಗಳಲ್ಲಿ ಪ್ರಮುಖ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಯಾತ್ರೆಯಲ್ಲಿ ಒಳಗೊಳ್ಳಲಿರುವ 16 ಲೋಕಸಭಾ ಕ್ಷೇತ್ರಗಳು ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಗಳಾಗಿದ್ದವು. 2009ರ ಲೋಕಸಭಾ ಚುನಾವಣೆಯಲ್ಲಿ, ಯಾತ್ರೆ ಸಾಗಲಿರುವ ಬರೇಲಿ, ಖೇರಿ, ಧೌರ್ಹರಾ ಮತ್ತು ಮೊರಾದಾಬಾದ್ ಕ್ಷೇತ್ರಗಳು ಸೇರಿದಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿತ್ತು.
2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸ್ಥಾನಗಳನ್ನು ಕಳೆದುಕೊಂಡಿದೆ. ಹಾಗಾಗಿ, ಮುಸ್ಲಿಮರು, ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ದಲಿತರ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದೆ. ಈ ಸಮುದಾಯಗಳನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಜೋಡೋ ಯಾತ್ರೆ ಹಮ್ಮಿಕೊಂಡಿದೆ.
2022ರ ಸೆಪ್ಟೆಂಬರ್ 7ರಿಂದ ಜನವರಿ 30, 2023ರವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು. ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ 136 ದಿನಗಳ ಕಾಲ ನಡೆದ ಈ ಯಾತ್ರೆ ಕಾಂಗ್ರೆಸ್ಗೆ ಹೊಸ ಹುರುಪು ನೀಡಿತ್ತು.
ಭಾರತ್ ಜೋಡೋ ಯಾತ್ರೆಯ ಬಳಿಕ ನಡೆದ ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಜೋಡೋ ಯಾತ್ರೆ ಈ ಎರಡೂ ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೇರುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಲಾಗ್ತಿದೆ.
ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಎರಡನೇ ಭಾರತ್ ಜೋಡೋ ಯಾತ್ರೆ ಪೂರ್ವ ಭಾರತದಿಂದ ಪಶ್ಚಿಮ ಭಾರತಕ್ಕೆ ನಡೆಯುವ ಸಾಧ್ಯತೆ ಇದೆ. ಮುಂದಿನ ಜನವರಿಯಲ್ಲಿ ಈ ಯಾತ್ರೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: ನಾನು ದಲಿತ ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂದು ಹೇಳಬೇಕೆ?: ಖರ್ಗೆ