ತನ್ನ ಕರಡು ಜನಸಂಖ್ಯಾ ನಿಯಂತ್ರಣ ಮಸೂದೆಯಿಂದ ‘ಒನ್-ಚೈಲ್ಡ್’ ನೀತಿಯನ್ನು ತೆಗೆದುಹಾಕುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಸೂಚಿಸಿದೆ. ಇದು ವಿವಿಧ ಸಮುದಾಯಗಳ ನಡುವಿನ ಜನಸಂಖ್ಯೆಯ ಅಸಮತೋಲನ ಮತ್ತು ಕುಗ್ಗುವಿಕೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅದು ಹೇಳಿದೆ .
ಉತ್ತರ ಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ಯಲ್ಲಿನ ಪೋಷಕರ ಬದಲು ಮಗುವಿಗೆ ನೀಡಲಾಗುವ ಬಹುಮಾನ ಅಥವಾ ಶಿಕ್ಷೆಯ ಅಸಂಗತತೆಯನ್ನು ತೆಗೆದುಹಾಕುವಂತೆ ವಿಹೆಚ್ಪಿ ಆದಿತ್ಯನಾಥ್ ಸರ್ಕಾರವನ್ನು ಕೇಳಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಪ್ರಕಟ
“ಮಸೂದೆಯ ಮುನ್ನುಡಿಯಲ್ಲಿ ಇದು ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಎರಡು ಮಕ್ಕಳ ನೀತಿಯನ್ನು ಉತ್ತೇಜಿಸುವ ಮಸೂದೆ ಎಂದು ಹೇಳುತ್ತದೆ. ವಿಶ್ವ ಹಿಂದೂ ಪರಿಷತ್ ಎರಡೂ ವಿಷಯಗಳನ್ನು ಒಪ್ಪುತ್ತದೆ” ಎಂದು ಸಂಘಟನೆಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗಕ್ಕೆ (ಯುಪಿಎಸ್ಸಿಎಲ್) ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆದರೂ, ಮಸೂದೆಯ ಸೆಕ್ಷನ್ 5, 6 (2) ಮತ್ತು 7 ರಲ್ಲಿ ಹೇಳುವ, ಸಾರ್ವಜನಿಕ ನೌಕರರು ಮತ್ತು ಇತರರನ್ನು ತಮ್ಮ ಕುಟುಂಬದಲ್ಲಿ ಒಂದೇ ಮಗುವನ್ನು ಹೊಂದಲು ಪ್ರೇರೇಪಿಸುವ ವಿಷಯವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಒಂದು ಮಗುವಿನ ನೀತಿಯ ಅನಪೇಕ್ಷಿತ ಸಾಮಾಜಿಕ, ಆರ್ಥಿಕ ಪರಿಣಾಮಗಳು ಮತ್ತು ಹೆತ್ತವರ ಬದಲು ಮಗುವಿಗೆ ಬಹುಮಾನ ಅಥವಾ ಶಿಕ್ಷೆ ನೀಡುವ ಅಸಂಗತತೆಯನ್ನು ತೆಗೆದುಹಾಕಲು ನಾವು ಸೂಚಿಸುತ್ತೇವೆ ಎಂದು ಕುಮಾರ್ ಹೇಳಿದ್ದಾರೆ. ಆದರೆ ಜನಸಂಖ್ಯೆಯ ಸ್ಥಿರತೆಯನ್ನು ಸಾಧಿಸಲು ಎರಡು ಮಕ್ಕಳ ನೀತಿಯನ್ನು ನಾವು ಒಪ್ಪುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜನಸಂಖ್ಯಾ ನೀತಿಯಲ್ಲಿ ಮತ್ತೆ ಬದಲಾವಣೆ ತಂದ ಚೀನಾ ಕಮ್ಯುನಿಸ್ಟ್ ಪಕ್ಷ!
ಉತ್ತರ ಪ್ರದೇಶದ ಒಟ್ಟು ಫಲವತ್ತತೆ ದರವನ್ನು (ಟಿಎಫ್ಆರ್) ನಿರ್ದಿಷ್ಟ ಸಮಯದೊಳಗೆ 1.7 ಕ್ಕೆ ಇಳಿಸಲು ಪ್ರಯತ್ನಿಸುವ ಮಸೂದೆಯ ಉದ್ದೇಶವನ್ನು ಮರುಪರಿಶೀಲಿಸುವಂತೆ ವಿಹೆಚ್ಪಿ ಯುಪಿಎಸ್ಸಿಎಲ್ಗೆ ಸೂಚಿಸಿದೆ.
ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ರ ಕರಡನ್ನು ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ನೀಡುವಂತೆ ಆಹ್ವಾನ ನೀಡಿತ್ತು.
ಪ್ರಸ್ತುತ ಒಂದು ಮಗುವಿನ ನೀತಿಯಿಂದ, ದುಡಿಯುವ ವಯಸ್ಸಿನ ಜನಸಂಖ್ಯೆ ಮತ್ತು ಅವಲಂಬಿತ ಜನಸಂಖ್ಯೆಯ ನಡುವೆ ಅನುಪಾತದಲ್ಲಿ ಏರುಪೇರಾಗುತ್ತದೆ. ಇದು ಇಬ್ಬರು ಪೋಷಕರು ಮತ್ತು ನಾಲ್ಕು ಅಜ್ಜ ಅಜ್ಜಿಯರನ್ನು ನೋಡಿಕೊಳ್ಳಲು ಕೇವಲ ಒಬ್ಬ ದುಡಿಯುವ ವ್ಯಕ್ತಿಯಿರುವಂತಹ ಪರಿಸ್ಥಿತಿಗೆ ತಂದೊಡ್ಡುತ್ತದೆ ಎಂದು ವಿಹೆಚ್ಪಿ ಹೇಳಿದೆ.
1980 ರಲ್ಲಿ ಒನ್-ಚೈಲ್ಡ್ ನೀತಿಯನ್ನು ಅಳವಡಿಸಿಕೊಂಡಿದ್ದ ಚೀನಾ ಕೂಡಾ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದರಿಂದ ಮೂರು ದಶಕಗಳ ನಂತರ ಈ ನೀತಿಯನ್ನು ಹಿಂತೆಗೆದುಕೊಂಡಿತು ವಿಎಚ್ಪಿ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: ‘ಕಷ್ಟಗಳಿದ್ದರೆ ಸುಖದ ಬೆಲೆ ತಿಳಿಯುತ್ತದೆ’ – ಪೆಟ್ರೋಲ್ ದರ ಏರಿಕೆಗೆ ಬಿಜೆಪಿ ಸಚಿವನ ಸಮರ್ಥನೆ!