ಮುಂಬರುವ ಉತ್ತರಾಖಂಡ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಭೇಟಿ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಲವು ಪ್ರಮುಖ ಚುನಾವಣಾ ಘೋಷಣೆಗಳನ್ನು ಮಾಡಿದ್ದಾರೆ. ದಿನವಿಡೀ ವಿದ್ಯುತ್ ಕಡಿತವಿರುವುದಿಲ್ಲ. ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್ ಸೇರಿದಂತೆ ಅನೇಕ ಭರವಸೆ ನೀಡಿದ್ದಾರೆ.
ಉತ್ತರಾಖಂಡದ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾನುವಾರ ರಾಜ್ಯ ಪ್ರವಾಸ ನಡೆಸಿದ್ದಾರೆ. ಫೆಬ್ರವರಿ 2022 ರಲ್ಲಿ ನಡೆಯಲಿರುವ ಉತ್ತರಾಖಂಡ ಚುನಾವಣೆಗೆ ತಯಾರಾಗುತ್ತಿರುವ ಆಮ್ ಆದ್ಮಿ ಪಾರ್ಟಿಯಿಂದ ಕೆಲವು ಪ್ರಮುಖ ಚುನಾವಣಾ ಭರವಸೆಗಳನ್ನು ಘೋಷಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಈ ಹಿಂದೆ ಘೋಷಿಸಿದೆ.
ದೆಹಲಿಯ ವಿದ್ಯುತ್ ಯೋಜನೆಯಲ್ಲಿ ಪ್ರಶಂಸೆಗೆ ಪಾತ್ರವಾಗಿರುವ ಕೇಜ್ರಿವಾಲ್ ಸರ್ಕಾರ, ಇದನ್ನೇ ಉತ್ತರಾಖಂಡದಲ್ಲೂ ಪ್ರಯೋಗಿಸಲು ಸಜ್ಜಾಗಿದೆ. ವಿದ್ಯುತ್ ಕಡಿತವಿಲ್ಲದಿರುವುದು. ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್, ಹಿಂದಿನ ಬಿಲ್ಗಳನ್ನು ಮನ್ನಾ ಮಾಡುವುದು ಮತ್ತು ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದು ಈ ಘೋಷಣೆಗಳಲ್ಲಿ ಪ್ರಮುಖವಾಗಿವೆ.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಭಿನ್ನಮತ ಶಮನ: ಕೇಜ್ರಿವಾಲ್ ವಿರುದ್ಧ ಸಿಧು ಟ್ವೀಟ್ ವಾರ್
ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿವೆ. ಇದರಿಂದ ರಾಜ್ಯವನ್ನು ತಪ್ಪಿಸಬೇಕಾಗಿದೆ, ಎರಡು ಪಕ್ಷಗಳು ಅಧಿಕಾರದ ಹಿಂದೆ ಬಿದ್ದಿವೆ, ಅಭಿವೃದ್ಧಿ ಹಿಂದೆಯಲ್ಲ ಎಂದು ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಕರೆಂಟ್ ಉತ್ಪಾದಿಸಿ, ಬೇರೆ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಾಗಿದ್ದರೂ ರಾಜ್ಯದಲ್ಲಿ ವಿದ್ಯುತ್ ದರ ಬಹಳ ದುಬಾರಿಯಾಗಿದೆ. ರಾಜ್ಯದ ಜನರಿಗೆ ಉಚಿತ ವಿದ್ಯುತ್ ಒದಗಿಸುವುದನ್ನು ಯಾವುದಾದರೂ ಪಕ್ಷ ಪರಿಗಣಿಸಿದೆಯೇ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
“ಉತ್ತರಾಖಂಡದ ಜನರು ಕಳೆದ 20 ವರ್ಷಗಳಿಂದ ಈ ಎರಡು ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಿಕ್ಕು ಒದ್ದಾಡುತ್ತಿದ್ದಾರೆ. ಎರಡು ಪಕ್ಷಗಳು ಕುರ್ಚಿಗಾಗಿ ಮಾತ್ರ ಹೋರಾಡುತ್ತಿವೆ. ಉತ್ತರಾಖಂಡದ ಜನರ ಅಭಿವೃದ್ಧಿಯ ಬಗ್ಗೆ ಯಾರು ಯೋಚಿಸುತ್ತಾರೆ?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
“ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆಯಾದರೆ, ಐದು ವರ್ಷಗಳವರೆಗೆ ಯಾವುದೇ ತೆರಿಗೆಯನ್ನು ಹೆಚ್ಚಿಸಲಾಗುವುದಿಲ್ಲ. ರಾಜ್ಯವು ಯಾವುದೇ ಸಾಲವನ್ನು ಪಡೆಯುವುದಿಲ್ಲ. ಇಂತಹ ಯೋಜನೆಗಳನ್ನು ನಾವು ದೆಹಲಿಯಲ್ಲಿ ಮಾಡಿದ್ದೇನೆ. ಅದನ್ನು ಉತ್ತರಾಖಂಡದಲ್ಲೂ ಮಾಡುತ್ತೇವೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಆಮ್ ಆದ್ಮಿ ಪಕ್ಷವು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಈ ಹಿಂದೆ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಪರಿಸ್ಥಿತಿ ಈಗ ಬದಲಾಗಲಿದೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್


