ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳ ಟ್ರಸ್ಟ್ ವಿರುದ್ಧ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳದಲ್ಲಿ ವಿವಿಧ ಸಂಘಟನೆಗಳು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಪರವಾಗಿ ಪ್ರತಿಭಟನೆ ನಡೆಸಿತ್ತಿದ್ದವು. ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ ಅವರ ಮೇಲೆ ಹೆಗಡೆ ಬೆಂಬಲಿಗರು ಹಲ್ಲೆ ಯತ್ನ ನಡೆಸಿದ್ದಾರೆ.
ವೀರೇಂದ್ರ ಹೆಗಡೆ ಪರವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ‘ಜಸ್ಟಿಸ್ ಫಾರ್ ಸೌಜನ್ಯ’ ಎಂಬ ಪ್ಲೆಕಾರ್ಡ್ ಹಿಡಿದು ಕಾಣಿಸಿಕೊಂಡಿದ್ದಾರೆ. ವೇದಿಕೆ ಹತ್ತಲು ಮುಂದಾದಾಗ ಪ್ರತಿಭಟನಾನಿರತನೊಬ್ಬ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ.
11 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣದ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಮೂವರು ಜೈನ್ಗಳು ಸೌಜನ್ಯಳನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಾರೆ ಎಂದು ಸೌಜನ್ಯ ಕುಟುಂಬ ಮೊದಲಿನಿಂದಲೂ ಆರೋಪಿಸುತ್ತಾ ಬಂದಿದೆ.
ಇದೀಗ ಮತ್ತೆ ಸೌಜನ್ಯ ಪ್ರಕರಣ ವಿಚಾರವಾಗಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿವೆ. ಇದರಿಂದ ಧರ್ಮಸ್ಥಳದ ಅವಹೇಳನವಾಗುತ್ತಿದೆಯೆಂದು ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಆರೋಪಿಸಿದ್ದಾರೆ. ಅವರ ಬೆಂಬಲಿಗರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ, ‘ತನ್ನ ಮಗಳಿಗೆ ನ್ಯಾಯ ಬೇಕು’ ಎಂದು ವೇದಿಕೆ ಮುಂಭಾಗದಲ್ಲಿ ಘೋಷಣೆ ಕೂಗಿದ್ದಾರೆ. ಅವರನ್ನು ತಡೆದ ಧರ್ಮಾಧಿಕಾರಿ ಬೆಂಬಲಿಗನೊಬ್ಬ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ, ”ಇಲ್ಲಿ ನೆರೆದಿರುವವರು ಸೌಜನ್ಯಳಿಗೆ ನ್ಯಾಯ ದೊರೆಯಬೇಕೆಂದು ಹೋರಾಟ ಮಾಡುತ್ತಿಲ್ಲ. ಇದು ಸೌಜನ್ಯ ಪರ ಹೋರಾಟವಲ್ಲ. ಇಲ್ಲಿ ಯಾರೂ ಸೌಜನ್ಯ ಪರ ಪ್ಲೆಕಾರ್ಡ್ ಹಿಡಿದಿಲ್ಲ, ಘೋಷಣೆ ಕೂಗಿಲ್ಲ. ಸೌಜನ್ಯ ಪ್ರಕರಣ ದೇಶದ ಗಮನ ಸೆಳೆಯುತ್ತಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನ್ಯಾಯಗಳು ಜಗತ್ತಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಈ ಹೋರಾಟ ನಡೆಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
”ಸೌಜನ್ಯ ಪರ ಹೋರಾಟಗಾರರು ಧರ್ಮಾಧಿಕಾರಿಯ ಹೆಸರು ಹೇಳುತ್ತಿಲ್ಲ. ಧರ್ಮಸ್ಥಳದಲ್ಲಿ ನಡೆದ ಘಟನೆಗೆ ಧರ್ಮಸ್ಥಳದ ಹೆಸರು ಹೇಳದೆ, ಇನ್ಯಾವ ಹೆಸರು ಹೇಳಬೇಕು. ನಾವು ಧರ್ಮಸ್ಥಳದವರೇ, ಧರ್ಮಸ್ಥಳದಲ್ಲಿಯೇ ಹುಟ್ಟಿ-ಬೆಳೆದ ಹೆಣ್ಣುಮಗುವನ್ನು ಅತ್ಯಾಚಾರಗೈದು, ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಇಲ್ಲಿ ನೆರೆದಿರುವವರು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದಷ್ಟೇ ನಾವು ಕೇಳುತ್ತಿದ್ದೇವೆ” ಎಂದು ಹೇಳಿದ್ದಾರೆ.
”ನನ್ನ ಮಗಳಿಗೆ ಅನ್ಯಾಯ ಆಗಿದೆ. ನಾನು ನ್ಯಾಯ ಕೇಳುವುದು ತಪ್ಪೇ? ನಾವು ಶಂಕಿಸಿರುವ ಮೂವರ ವಿರುದ್ಧ ತನಿಖೆ ಮಾಡಲಿ. ಸರ್ಕಾರ ಎಸ್ಐಟಿ ರಚಿಸಿ, ಪ್ರಕರರಣವನ್ನು ಮರುತನಿಖೆ ಮಾಡಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಆಗ ಧರ್ಮಸ್ಥಳದಲ್ಲಿ ನನ್ನ ಮಗಳ ಮೇಲಾದ ಕೃತ್ಯ, ಮತ್ತೊಬ್ಬ ಹೆಣ್ಣು ಮಗಳ ಮೇಲಾಗದಂತೆ ತಡೆಯಬಹುದು. ಧರ್ಮಸ್ಥಳದ ಹೆಸರು ಹಾಳಾಗದಂತೆಯೂ ತಡೆಯಬಹುದು” ಎಂದು ಕುಸುಮಾವತಿ ಹೇಳಿದ್ದಾರೆ.