“ನಮ್ಮದು ಗಾಂಧೀಜಿ ಹಿಂದುತ್ವ, ಇತರ ಪಕ್ಷಗಳದ್ದು ಗೋಡ್ಸೆ ಹಿಂದುತ್ವ” ಎಂದು ಮಾಜಿ ಸಚಿವ, ಸಹಕಾರಿ ಕ್ಷೇತ್ರದ ಧುರೀಣ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ರೈತರ ಬಗರ್ ಹುಕುಂ ಸಾಗುವಳಿ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವ ಅರಣ್ಯ ಇಲಾಖೆ ಹಾಗೂ ಸರ್ಕಾರದ ಹುನ್ನಾರದ ವಿರುದ್ಧ ಮಧುಗಿರಿ ತಾಲ್ಲೂಕಿನ ಬಂದ್ರೇಹಳ್ಳಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದ್ದಾರೆ.
ಹಿಂದುತ್ವದ ಬಗ್ಗೆ ಮಾತನಾಡುವವರಿಗೆ ಹೇಳುತ್ತೇನೆ. ನಾವು ಎಲ್ಲರೂ ಹಿಂದೂಗಳೇ. ನಾವೇನು ಕ್ರಿಶ್ಚಿಯನ್, ಪಾರ್ಸಿ ಮತ್ಯಾವುದೋ ಧರ್ಮದವರಲ್ಲ. ಆದರೆ ನಾವು ಪ್ರತಿಪಾದನೆ ಮಾಡುವುದು ಮಹಾತ್ಮ ಗಾಂಧೀಜಿಯವರ ಹಿಂದುತ್ವ. ಬೇರೆ ಪಕ್ಷದವರು ಪ್ರತಿಪಾದನೆ ಮಾಡುವುದು ಗೋಡ್ಸೆ ಹಿಂದುತ್ವ. ಗೋಡ್ಸೆ ಹಿಂದುತ್ವನ್ನು ನಾವು ವಿರೋಧ ಮಾಡಲೇಬೇಕು. ಗಾಂಧಿಯ ಹಿಂದುತ್ವದ ಜನರು ನಾವಾಗಬೇಕು ಎಂದು ಹೇಳಿದ್ದಾರೆ.
ಗೋಡ್ಸೆ ಹಿಂದುತ್ವವನ್ನು ತೋರಿಸಿ ಹಿಂದೂಗಳೆಲ್ಲ ಒಂದೇ ಎನ್ನುವವರು, ಪರಿಶಿಷ್ಟ ಜಾತಿಯವರನ್ನಾಗಲೀ, ನಮ್ಮೊಂದಿಗಾಗಲೀ ಸಂಬಂಧ ಮಾಡಲಿ ನೋಡೋಣ. ವೋಟ್ಗಾಗಿ ಮಾತ್ರ ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಚೀನಾದವರು ಬಂದು ಇಂಡಿಯಾ ದೇಶದಲ್ಲಿ ಕೂತಿದ್ದಾರಲ್ಲ, 58 ಇಂಚಿನ ಎದೆಯವರು, ದೇಶಭಕ್ತರು ಹೋಗಿ ಅವರನ್ನು ಓಡಿಸಲಿ. ದೇಶಭಕ್ತಿಯನ್ನು ಇಲ್ಲಿ ತೋರಿಸುವುದಲ್ಲ ಎಂದು ಟೀಕಿಸಿದ್ದಾರೆ.
ಹಿಂದುತ್ವದ ಆಧಾರದ ಮೇಲೆ ಜಾತಿ, ಜಾತಿಗಳನ್ನು ಎತ್ತಿಕಟ್ಟಲಾಗುತ್ತಿದೆ. ಐದು ರಾಜ್ಯಗಳಲ್ಲಿ ಗೆದ್ದಿರಬಹುದು. ಅದು ಬೇರೆ ವಿಚಾರ. ವಿರೋಧ ಪಕ್ಷಗಳ ಲೋಪಗಳೂ ಇದಕ್ಕೆ ಕಾರಣವಾಗಿರುತ್ತವೆ. ಆದರೆ ಈ ದೇಶವನ್ನು, ಜನರನ್ನು ಒಡೆಯುವುದು, ದ್ವೇಶವನ್ನು ಹುಟ್ಟುಹಾಕುವುದು ದೇಶಕ್ಕೆ ಅಪಾಯ ಎಂದು ಎಚ್ಚರಿಸಿದ್ದಾರೆ.
ದೇವೇಗೌಡರನ್ನು ಸೆಕ್ಯುಲರ್ ಫ್ಯಾಬ್ರಿಕ್ ಅಂತಾರೆ. ಈ ಪದವನ್ನು ಎಲ್ಲಿಂದ ಹಿಡಿದುಕೊಂಡು ಬಂದರೋ ಗೊತ್ತಿಲ್ಲ. ಸೆಕ್ಯೂಲರ್ ಫ್ಯಾಬ್ರಿಕ್ ಅಂದರೆ ಏನಪ್ಪ? ಅಲ್ಲಿ ಹೋಗಿ ಮೋದಿಯನ್ನು ಭೇಟಿ ಮಾಡ್ತಾರೆ, ಇಲ್ಲಿ ಗೋ ಹತ್ಯೆ ನಿಷೇಧ ಮಸೂದೆಗೆ ವಿಧಾನಪರಿಷತ್ನಲ್ಲಿ ಬೆಂಬಲ ಕೊಟ್ಟು ಪಾಸ್ ಮಾಡಿಸುತ್ತಾರೆ. ನಂತರ ಮೌರ್ಯ ಸರ್ಕಲ್ನಲ್ಲಿ ಕೂತು ಮಸೂದೆ ವಿರುದ್ಧವಾಗಿ ಧರಣಿ ಮಾಡ್ತಾರೆ. ಈ ರೀತಿಯ ಇಬ್ಬಂದಿ ರಾಜಕಾರಣ ಮಾಡುವುದರಿಂದ ದೇಶಕ್ಕೆ ಅಪಾಯವಿದೆ ಎಂದಿದ್ದಾರೆ.
ಹಾನಗಲ್, ಬಸವ ಕಲ್ಯಾಣ, ಸಿಂಧಗಿ ಉಪಚುನಾವಣೆಯಲ್ಲಿ ಜೆಡಿಎಸ್ನವರು ಮುಸ್ಲಿಮರಿಗೆ ಟಿಕೆಟ್ ನೀಡಿತು. ರಾಮನಗರದಲ್ಲಿ, ಚೆನ್ನಪಟ್ಟಣದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ, ಅಲ್ಲಿ ಜೆಡಿಎಸ್ ಮುಸ್ಲಿಮರಿಗೆ ಟಿಕೆಟ್ ಕೊಡಲಿ. ಕಡಿಮೆ ಸಂಖ್ಯೆಯಲ್ಲಿರುವಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದರೂ ಜನ ಮತ ಹಾಕಲಿಲ್ಲ ಅನ್ನುತ್ತಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾದವರು ಕಾಂಗ್ರೆಸ್ ಪಕ್ಷವನ್ನೇ ನಾಶ ಮಾಡುತ್ತೇನೆ ಎನ್ನುತ್ತಾರೆ. 13 ಜನ ಇದ್ದರೆ ಮಾತ್ರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯ. 37 ಜನ ಎಂಎಲ್ಎಗಳಿದ್ದರೂ ಕಾಂಗ್ರೆಸ್ ಬೆಂಬಲದಿಂದಾಗಿ ಮುಖ್ಯಮಂತ್ರಿಯಾದರು. ಅಧಿಕಾರ ಹೋದ ತಕ್ಷಣ ಕಾಂಗ್ರೆಸ್ ಮುಗಿಸುತ್ತೇನೆ ಅಂತಾರೆ. ಇವರಿಗೆ ಉಪಕಾರ ಸ್ಮರಣೆ ಇದೆಯಾ? ಇವರಿಗೆ ಲಾಟರಿ ಪ್ರಧಾನಿ, ಲಾಟರಿ ಮುಖ್ಯಮಂತ್ರಿ ಎಂದು ಹೇಳುತ್ತೇನೆ. 274 ಜನ ಎಂಪಿಗಳಿದ್ದರೆ ಮಾತ್ರ ಪ್ರಧಾನಿಯಾಗಲು ಸಾಧ್ಯ. 16 ಜನ ಸದಸ್ಯರಿದ್ದರೂ ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾದರು. ಈಗ ಕಾಂಗ್ರೆಸ್ ಮುಗಿಸುತ್ತೇನೆ ಎಂದರೆ ಇವರಿಗೆ ಉಪಕಾರ ಸ್ಮರಣೆ ಇದೆಯಾ? ಸುಳ್ಳು ಹೇಳಿಕೊಂಡು, ಜಾತಿ ಹೇಳಿಕೊಂಡು ಇರುವವರಿಗೆ ಯಶಸ್ಸು ದೊರಕುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2023ರ ಚುನಾವಣೆಯಲ್ಲಿ ಮತ ಕೇಳಲು ಬಂದಿಲ್ಲ. ಚುನಾವಣೆಯಲ್ಲಿ ಮತ ಕೇಳಿ ಎಂಎಲ್ಎ ಆಗಬಹುದು. ಎಂಎಲ್ಎ ಎಂದು ಕರೆಸಿಕೊಳ್ಳುವ ಚಟವಿಲ್ಲ. ಜನರ ಹೃದಯದಲ್ಲಿ ಸ್ಥಾನ ಬಯಸುತ್ತೇನೆ. ವಿಧಾನಸಭೆಯಲ್ಲಿ ಅಲ್ಲ. ಎಲ್ಲ ಅಪಪ್ರಚಾರದ ನಡುವೆ 70,000 ಮತದಾರರು ನನಗೆ ಮತ ಹಾಕಿದ್ದೀರಿ. ದುಡ್ಡು ಹಾಗೂ ಜಾತಿ ಮೀರಿ ಬೆಂಬಲ ನೀಡಿದ್ದೀರಿ. ದುಡ್ಡಿದ್ದರೆ ಸಾಕು ಮಧುಗಿರಿಯಲ್ಲಿ ಗೆದ್ದು ಬಿಡ್ತಾರೆ ಎಂಬ ಭಾವನೆ ಹೊರಗಡೆ ಬೆಳೆದುಬಿಟ್ಟಿದೆ. ಇದನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದ್ದಾರೆ.
2008ರಲ್ಲಿ 500 ಮತಗಳ ಅಂತರದಲ್ಲಿ ಸೋಲು ಕಂಡೆ. ಅದಕ್ಕೆ ಕಾರಣಗಳು ಬೇರೆ ಇರಬಹುದು. ಮುಂದಿನ ಚುನಾವಣೆಯಲ್ಲಿ 1,000 ಮತಗಳ ಅಂತರದಲ್ಲಿ ಸೋತೆ. ನನಗೆ ಆಗಲೂ ಬೇಸರವಾಗಲಿಲ್ಲ. 2018 ಸೋತ ಮೇಲೆ ಮತ್ತೆ ಚುನಾವಣೆಯತ್ತ ತಲೆಯೂ ಹಾಕಬಾರದು ಎಂದುಕೊಂಡಿದ್ದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲ ಗೌರವ ತಂದಿರಿ. ನಾವು ಬಿಜೆಪಿಗೆ ಮತ ಹಾಕಿಸಿಲ್ಲ. ಆದರೆ ಜಿ.ಎಸ್.ಬಸವರಾಜು ಅವರಿಗೆ ಮತ ಹಾಕಿಸಿದೆವು ಅಷ್ಟೇ. ಯಾಕೆಂದರೆ ಬಸವರಾಜು ಅವರು ಹಳೆಯ ಕಾಂಗ್ರೆಸ್ಸಿಗರು. ಅವರು ಜನಪರವಾಗಿರುತ್ತಾರೆಂದು ಮತ ಹಾಕಿಸಿದ್ದೇವೆ. ಅದರಲ್ಲಿ ಎರಡನೇ ಮಾತಿಲ್ಲ. ಬಸವರಾಜು ಬಿಜೆಪಿಯವರು ಎಂದು ನಾವು ಭಾವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ