ಕಳೆದುಹೋದ ಪಶ್ಚಿಮ ಬಂಗಾಳದ ವೈಭವವನ್ನು ಮರುಸ್ಥಾಪಿಸುವ ಅವಶ್ಯಕತೆಯಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ “ರಾಜಿ ರಾಜಕೀಯವು” ರಾಷ್ಟ್ರದ ಧಾರ್ಮಿಕ ಪ್ರಜ್ಞೆಯನ್ನು ಎತ್ತಿಹಿಡಿಯುವ ತನ್ನ ಹಳೆಯ ಸಂಪ್ರದಾಯವನ್ನು ಘಾಸಿಗೊಳಿಸಿದೆ ಎಂದಿದ್ದಾರೆ.
ಬಂಗಾಳವು ಚೈತನ್ಯ ಮಹಾಪ್ರಭು, ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರಂತವರ ನೆಲವಾಗಿದ್ದು, ಒಂದು ಕಾಲದಲ್ಲಿ ರಾಜ್ಯವು ಇಡೀ ದೇಶದಲ್ಲಿ ಆಧ್ಯಾತ್ಮಿಕ ಜಾಗೃತಿಯ ಕೇಂದ್ರವಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.
“ಅದರಲ್ಲೂ ತುಷ್ಠಿಕರಣ ರಾಜಕಾರಣವು ಬಂಗಾಳದ ಅದ್ಭುತ ಸಂಪ್ರದಾಯವನ್ನು ಘಾಸಿಗೊಳಿಸಿದ್ದು, ರಾಜ್ಯದ ವೈಭವವನ್ನು ಮರಳಿ ಪಡೆಯಲು ಬಂಗಾಳದ ಜನರು ಎಚ್ಚರಗೊಳ್ಳಲು ಮತ್ತು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಈ ಮೂಲಕ ಕರೆ ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಮಿತ್ ಶಾ ಪಣ: ಹಗಲುಗನಸು ಎಂದ ಟಿಎಂಸಿ!
ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿಯ ಎರಡನೇ ದಿನವಾದ ಇಂದು ದಕ್ಷಿಣೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶತಮಾನಗಳಷ್ಟು ಹಳೆಯದಾದ ದೇಗುಲದ ಗರ್ಭಗೃಹಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು.
“ರಾಜ್ಯ ಸೇರಿದಂತೆ ಇಡೀ ದೇಶದ ಜನರ ಯೋಗಕ್ಷೇಮಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಜಗತ್ತಿನಲ್ಲಿ ತನ್ನ ವೈಭವವನ್ನು ಉಳಿಸಿಕೊಳ್ಳಬೇಕೆಂದು ನಾವು ಪ್ರಾರ್ಥಿಸಿದ್ದೇವೆ” ಎಂದು ಅವರು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಗ್ನಿಮಿತ್ರ ಪಾಲ್ ಸೇರಿದಂತೆ ಅವರ ಸದಸ್ಯರು ಅಮಿತ್ ಶಾ ಅವರನ್ನು ದೇವಾಲಯದಲ್ಲಿ ಸ್ವಾಗತಿಸಿದರು.
ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಖ್ಯಾತ ಗಾಯಕ ಪಂಡಿತ್ ಅಜಯ್ ಚಕ್ರವರ್ತಿಯವರ ಸಂಗೀತ ಶಾಲೆ ಹಾಗೂ ನಿವಾಸವಾದ ‘ಶ್ರುತಿನಂದನ್’ಗೆ ತೆರಳಿ, ಅಲ್ಲಿ ಅವರ ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪ್ರವಾಸ: ಜೆ.ಪಿ.ನಡ್ಡಾ ಬಿಟ್ಟು ಅಮಿತ್ ಶಾಗೆ ಮಣೆ ಹಾಕಿದ ಬಿಜೆಪಿ!