ಮಲ್ಪೆಯಿಂದ ಉಡುಪಿವರೆಗಿನ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿಯಲ್ಲಿ ನಡೆದ ಸಭೆಯಲ್ಲಿ ಮೀನುಗಾರರ ಒಕ್ಕೂಟದ ಮುಖಂಡರು ವಾಗ್ದಾಳಿ ನಡೆಸಿದರು. ‘ನಮಗಾಗಿ ನೀವು ಏನು ಮಾಡಿದ್ದೀರಿ?’ ಎಂದು ಪ್ರಶ್ನಿಸಿದ ಸ್ಥಳೀಯರ ಮುಖಂಡರು ಮತ್ತು ಸಚಿವರ ನಡುವೆ ಮಾತಿನ ಚಕಮಕಿ ನಡೆಯಿತು.
ಉಡುಪಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮೀನುಗಾರರ ಸಂಘದ ಮುಖಂಡ ಕಿಶೋರ್ ಸುವರ್ಣ ಬಿಜೆಪಿ ಸಂಸದರ ಮುಂದೆ ವಿಷಯ ಪ್ರಸ್ತಾಪಿಸಿದರು. ಮೂನುಗಾರ ಸಂಘಟನೆಗಳ ಮುಖಂಡರು ಪ್ರಶ್ನಿಸಿರುವ ಸಭೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂರೂವರೆ ಕಿಲೋಮೀಟರ್ ಉದ್ದದ ಹೆದ್ದಾರಿ ನಿರ್ಮಾಣ ವಿಳಂಬದ ಬಗ್ಗೆ ಸಂಘದ ಸದಸ್ಯರು ಸಚಿವರನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು.
’10 ವರ್ಷಗಳಿಂದ ನಾವು ನಿಮಗೆ ಮತ ಹಾಕಿದ್ದೇವೆ, ನೀವು ನಮಗಾಗಿ ಏನು ಮಾಡಿದ್ದೀರಿ? ನೀವು ಈ ಭಾಗದ ಜನರನ್ನು ಕರೆದು ಸಭೆ ನಡೆಸಿದ್ದೀರಾ? ನೀವು ಮಾಡಿಲ್ಲ, ಯಾಕೆ ಮಾಡಲಿಲ್ಲ? ನೀವು ನಮ್ಮ ಪ್ರತಿನಿಧಿಯಲ್ಲವೇ? ನಿಮಗೆ ಜವಾಬ್ದಾರಿಗಳಿಲ್ಲವೇ? ಆ ರಸ್ತೆಯ ಬಗ್ಗೆ ನೀವು ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಕರಂದ್ಲಾಜೆ ಅವರ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟರು.
‘ಸಚಿವ ನಿತಿನ್ ಗಡ್ಕರಿ ಅವರು ನಿಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ನೀವು ಹೇಳುತ್ತೀರಿ. ನೀವು ಅವರ ಮಾತನ್ನು ಕೇಳಿದ್ದೀರಿ. ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದು ಲಿಖಿತವಾಗಿ ಬರೆದುಕೊಡಿ; ನಾವು ನಿಮ್ಮನ್ನು ಮತ್ತೆ ಕೇಳುವುದಿಲ್ಲ. ನಮ್ಮೊಂದಿಗೆ ಒಂದೇ ಒಂದು ಮಾಹಿತಿಯನ್ನು ಹಂಚಿಕೊಂಡಿಲ್ಲ, ನೋಟಿಫಿಕೇಶನ್ ಕೂಡ ಆಗಿಲ್ಲ ಎಂದು ಬರವಣಿಗೆಯಲ್ಲಿ ಕೊಡಿ’ ಎಂದು ಮತ್ತೊಬ್ಬರು ಜೋರು ಮಾಡಿದರು.
ವಿಶೇಷವೆಂದರೆ, ಮಲ್ಪೆಯಿಂದ ಉಡುಪಿವರೆಗಿನ ಹೆದ್ದಾರಿಯ ಮೂರೂವರೆ ಕಿಲೋಮೀಟರ್ ಉದ್ದದ ರಸ್ತೆ ಹಳ್ಳಕೊಳ್ಳಗಳಿಂದ ತುಂಬಿ ಹದಗೆಟ್ಟ ಸ್ಥಿತಿಯಲ್ಲಿದೆ. ದ್ವಿಚಕ್ರ ವಾಹನಗಳು ಮತ್ತು ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳು, ನಿವಾಸಿಗಳು ಮತ್ತು ವ್ಯಾಪಾರಿಗಳು ಹಲವಾರು ಅಪಘಾತಗಳನ್ನು ಎದುರಿಸಿದ್ದಾರೆ.
ಇದನ್ನೂ ಓದಿ; ‘ರಾಜ್ಯದ ಪರವಾಗಿ ಎಂದಾದರೂ ಧ್ವನಿ ಎತ್ತಿದ್ದೀರಾ; ನಿಮ್ಮನ್ನು ಜನ ಯಾಕೆ ಗೆಲ್ಲಿಸಬೇಕು?: ಕಟೀಲ್-ಕರಂದ್ಲಾಜೆ ವಿರುದ್ಧ ಸಿಎಂ ಕಿಡಿ