Homeಅಂಕಣಗಳುಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ...

ಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ…

- Advertisement -
- Advertisement -

ಕೆಡುಕುಗಳು ಧಾರಾಕಾರ ಸುರಿಯುವ ಮಳೆಯಂತೆ ಅಪ್ಪಳಿಸಿದಾಗ

ಕಚೇರಿ ಸಮಯದ ನಂತರ ಬಹುಮುಖ್ಯ ಪತ್ರವನ್ನು ಕೌಂಟರ್‌ಗೆ ತರುವವನಂತೆ: ಕೌಂಟರ್ ಈಗಾಗಲೇ ಮುಚ್ಚಿದೆ.

ನಗರಕ್ಕೆ ಅಪ್ಪಳಿಸಲಿರುವ ಪ್ರವಾಹದ ಬಗ್ಗೆ ಎಚ್ಚರಿಸುವವನಂತೆ, ಆದರೆ ಅವನಾಡುವ ಭಾಷೆ ಬೇರೆ: ಅವರಿಗೆ ಅವನ ಮಾತು ಅರ್ಥವಾಗುತ್ತಿಲ್ಲ.

ಐದನೇ ಬಾರಿ ಮನೆ ಬಾಗಿಲು ತಟ್ಟುವ ಭಿಕ್ಷುಕನಂತೆ, ಅವನಿಗೆ ನಾಲ್ಕು ಬಾರಿ ಏನನ್ನಾದರೂ ನೀಡಲಾಗಿದೆ: ಐದನೇ ಸಾರ್ತಿ ಅವನು ಹಸಿವಿನಲ್ಲಿದ್ದಾನೆ.

ಗಾಯಗೊಂಡು ರಕ್ತಸ್ರಾವದಿಂದ ನರಳುತ್ತಿರುವವನು ವೈದ್ಯನಿಗೆ ಕಾಯುತ್ತಿರುವಂತೆ: ರಕ್ತ ಹೋಗುತ್ತಲೇ ಇದೆ.

ನಮಗೆ ಬಂದಪ್ಪಳಿಸಿದ ಕೆಡುಕಿನ ಬಗ್ಗೆ ನಾವು ಮುಂದೆ ಬಂದು ವರದಿ ಮಾಡುವುದು ಹೀಗೆ.

ಬರ್‍ಟೋಲ್ಟ್ ಬ್ರೆಕ್ಟ್

ಮೊದಲ ಬಾರಿಗೆ ನಮ್ಮ ಗೆಳೆಯರನ್ನು ಕೊಚ್ಚಿಕೊಲೆಗೈಯ್ಯುತ್ತಿರುವ ವರದಿಯಾದಾಗ, ನಡುಕದಿಂದ ಹಾಹಾಕಾರವೆದ್ದಿತ್ತು. ನಂತರ ನೂರು ಜನರನ್ನು ಹತ್ಯೆಗೈಯ್ಯಲಾಯಿತು. ಆದರೆ ಯಾವಾಗ ಸಾವಿರ ಜನರನ್ನು ಹತ್ಯೆಗೈಯ್ಯಲಾಯಿತೋ, ಆ ಹತ್ಯೆಗಳಿಗೆ ಕೊನೆಯೇ ಇಲ್ಲದಾಯಿತು, ಮೌನದ ಹೊದಿಕೆ ಹರಡಿತ್ತು.

ಧಾರಾಕಾರ ಸುರಿಯುವ ಮಳೆಯಂತೆ ಕೆಡುಕುಗಳು ಬಂದಪ್ಪಳಿಸಿದಾಗ, ಯಾರೂ ’ನಿಲ್ಲು!’ ಎಂದು ಆದೇಶಿಸುವುದಿಲ್ಲ.

ಅಪರಾಧಗಳು ರಾಶಿರಾಶಿಯಾಗಿ ಬೆಳೆದಾಗ ಅವು ಅದೃಶ್ಯವಾಗುತ್ತವೆ. ನೋವುಗಳನ್ನು ಸಹಿಸಿಕೊಳ್ಳುವುದು ಅಸಾಧ್ಯವಾದಾಗ ಆಕ್ರಂದನ ಕೇಳುವುದೇ ಇಲ್ಲ. ಆಕ್ರಂದನ ಕೂಡ ಮಳೆಯ ರೀತಿಯಲ್ಲೇ ಬರುತ್ತದೆ, ಬೇಸಿಗೆಯ ಮಳೆಯಂತೆ.

ಬರ್‍ಟೋಲ್ಟ್ ಬ್ರೆಕ್ಟ್

ಜರ್ಮನಿಯ ಫ್ಯಾಸಿಸ್ಟ್ ದುರಾಡಳಿತವನ್ನು ಮತ್ತು ಅದನ್ನು ಸಾಧ್ಯವಾಗಿಸಿದ ಸಮಾಜದ ಅಂದಿನ ದುಸ್ಥಿತಿಯ ಬಗ್ಗೆ ಸೃಜನಶೀಲ ಬರಹಗಳ ಮೂಲಕ ದಾಖಲೆ ಮಾಡಿದ ಪ್ರಮುಖರಲ್ಲಿ ಬ್ರೆಕ್ಟ್ ಕೂಡ ಒಬ್ಬರು. 40ರ ದಶಕದಲ್ಲಿ ಬರೆದ ಈ ಪದ್ಯ ಕರ್ನಾಟಕದ ಇಂದಿನ ಪರಿಸ್ಥಿತಿಯನ್ನೂ ಚಿತ್ರಿಸುತ್ತಿದೆಯೆಂದರೆ ಸೋಜಿಗವೆನ್ನಬೇಕೋ, ದುರಂತವೆನ್ನಬೇಕೋ! ಒಟ್ಟಿನಲ್ಲಿ ಧಾರಾಕಾರವಾಗಿ ಅಪ್ಪಳಿಸುವ ಮಳೆಯಂತೆಯೇ ಇಂದು ಕರ್ನಾಟಕದಲ್ಲಿ ಕೆಡುಕುಗಳು ಭೋಗರೆಯುತ್ತಿವೆ. ಆದರೆ ಅವುಗಳಿಗೆ ಪ್ರತಿರೋಧವಾಗಿ ಬರುತ್ತಿರವ ಪ್ರತಿಕ್ರಿಯೆಗಳು, ಮುಚ್ಚಿದ ಕೌಂಟರ್‌ಗೆ ತರುವ ಮುಖ್ಯ ಪತ್ರದಂತಾಗಬಾರದಲ್ಲವೇ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಳೆದ ಕೆಲವು ತಿಂಗಳುಗಳಿಂದ ಸಂಘಪರಿವಾರ ಕರ್ನಾಟಕದಲ್ಲಿ ಅಶಾಂತಿ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನದ ಭಾಗವಾಗಿ, ಟೂಲ್‌ಕಿಟ್ ಸಿದ್ಧಪಡಿಸಿಕೊಂಡು ಎಲ್ಲ ರೀತಿಯ ಪ್ರಯೋಗಗಳಿಗೆ ಮುಂದಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲಂತೂ ಸಣ್ಣ ಅಡೆತಡೆಯೂ ಇಲ್ಲದಂತಾಗಿದೆ; ಅತ್ತ ಕಿವಿಮಾತು ಹೇಳುವವರೂ ಇಲ್ಲದೆ, ಅನ್‌ರೆಸ್ಟ್ ಸೃಷ್ಟಿಸುವ ಕೆಲಸಗಳಿಗೆ ಬಿಡುವೇ ನೀಡದಂತೆ, ಒಂದರ ಹಿಂದೆ ಒಂದರಂತೆ ಪೋಣಿಸಲಾಗುತ್ತಿದೆ. ಹಿಜಾಬ್ ವಿಷಯವನ್ನು ವಿವಾದವಾಗಿಸಿ, ಕೋರ್ಟ್ ಆದೇಶ ಬರುವುದೇ ತಡ, ಜಾತ್ರೆ-ದೇವಸ್ಥಾನಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧ ಹೇರುವ ಕೆಲಸಗಳನ್ನು ಶುರುಹಚ್ಚಿಕೊಂಡಿತು. ಅದಕ್ಕೆ ಒಂದಷ್ಟು ಪ್ರತಿರೋಧ ಬಂದು, ಜಾತ್ರೆಗಳಲ್ಲಿ ಸಾಮರಸ್ಯದಿಂದ ವ್ಯಾಪಾರ ಮಾಡಿದ ಕೆಲವು ಘಟನೆಗಳು ವರದಿಯಾದದ್ದೇ ತಡ, ಯುಗಾದಿ-ವರ್ಷತೊಡಕನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್ ಕಟ್ ಮಾಂಸದ ಬಗ್ಗೆ ಅಪಪ್ರಚಾರ ಆರಂಭಿಸಿತು. ಹಿಂದೂಗಳು ಯಾವುದೇ ಕಾರಣಕ್ಕೂ ಹಲಾಲ್ ಕಟ್ ಮಾಂಸವನ್ನು ಕೊಳ್ಳಬಾರದು, ಜಟ್ಕಾ ಅಥವಾ ಹಿಂದವೀ ಕಟ್ ಮಾಂಸವನ್ನೇ ಬಳಸಬೇಕು ಎನ್ನುವ ದುರುದ್ದೇಶಪೂರಿತ ಪ್ರಚಾರಕ್ಕೆ ಕೈಹಾಕಿತು. ’ಮುಖ್ಯವಾಹಿನಿ’ ಮಾಧ್ಯಮಗಳು ತಮ್ಮ ಗಿಳಿಪಾಠವನ್ನು ಉಲಿದು, ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಎಂದಿನಂತೆ ಮುನ್ನುಗ್ಗಿದವು. ಆದರೆ ಒಂದು ಮಟ್ಟಕ್ಕೆ ಉಳಿದುಕೊಂಡಿರುವ ಸಣ್ಣ ವಿವೇಕವೋ, ಆರ್ಥಿಕವಾಗಿ ಸಾಧುವಲ್ಲ ಎಂಬ ಕಾರಣಕ್ಕೋ ಅಥವಾ ತಮ್ಮ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲು ಬಂದಿರುವ ಕೆಡುಕಿಗೆ ಪ್ರತಿರೋಧವಾಗಿಯೋ ಈ ಹಲಾಲ್ ವಿವಾದ ನಿರೀಕ್ಷಿತ ಫಲ ನೀಡದೇ ಇದ್ದಾಗ, ಈಗ ’ಮುಸ್ಲಿಮರ ಅಜಾನ್ ಪ್ರಾರ್ಥನೆ ವರ್ಸಸ್ ಹಿಂದೂಗಳ ಭಜನೆ’ಗೆ ತಾಳ ಹಾಕುತ್ತಿದ್ದಾರೆ. ಮಾರಿಕೊಂಡ ಮಾಧ್ಯಮಗಳು ಎಂದಿನಂತೆ ತಮ್ಮ ಧ್ವನಿಪೆಟ್ಟಿಗೆಯನ್ನು ಹರಿದುಕೊಳ್ಳುತ್ತಿವೆ ಮತ್ತು ದ್ವೇಷ ಕಾರಿಕೊಳ್ಳುತ್ತಿವೆ.

ಹಲಾಲ್ ಕಟ್ ಮಾಂಸದ ವಿಷಯದಲ್ಲಿ ಹೂವು ’ಬಲ’ಮೊಗ್ಗಲಿಗೆ ಬೀಳಲಿಲ್ಲವೇಕೇ?

ಹಲಾಲ್ ಕಟ್ ಎಂಬ ಪದ್ಧತಿಯ ಬಗ್ಗೆ ಎಷ್ಟೆಲ್ಲಾ ಸುಳ್ಳುಸುದ್ದಿಗಳನ್ನು ಸಂಘಪರಿವಾರದ ಐಟಿ ಸೆಲ್‌ಗಳು ಹರಡಲು ಪ್ರಯತ್ನಿಸಿದರೂ, ಅದು ನಿರೀಕ್ಷಿತ ಮಟ್ಟಕ್ಕೆ ಅವರ ಪರವಾಗಿ ಕೆಲಸ ಮಾಡದಿರದ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಹಲವು ನೆಲೆಗಳಲ್ಲಿ ಕಾರಣಗಳನ್ನು ಹುಡುಕಬಹುದು. ಮೊದಲನೆಯದಾಗಿ, ಸಂಘ ಪರಿವಾರ ಚಿತಾವಣೆ ಮಾಡಿದ ಈ ಕೆಡುಕು ಬಹುಸಂಖ್ಯಾತರ ಬಾಗಿಲಿಗೇ ಬಂದುನಿಂತದ್ದು; ಯುಗಾದಿ ಮರುದಿನ ವರ್ಷತೊಡಕು ಹಬ್ಬದಲ್ಲಿ ಮಾಂಸಾಹಾರ ಅಡುಗೆಯ ವೈಶಿಷ್ಟ್ಯ ಕರ್ನಾಟಕದಾದ್ಯಂತ ಮನೆಮಾತು. ಅಲ್ಲದೆ ಮಾಂಸಾಹಾರ ಸುಮಾರು 79% ಕರ್ನಾಟಕದ ಜನತೆಯ ಆಹಾರ ಪದ್ಧತಿ. ಹಲವು ವರ್ಷಗಳಿಂದ ಮಾಂಸವನ್ನು ಕತ್ತರಿಸುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಒಳ್ಳೆಯ ಮಾಂಸ ಸಿಗುವ ಕಡೆಯಿಂದ ತಂದು ಆಸ್ವಾದಿಸುತ್ತಿದ್ದ ಪದ್ಧತಿಯನ್ನು ದ್ವೇಷದ ಕಾರಣಕ್ಕೆ ಬದಲಾಯಿಸಿಕೊಳ್ಳಿ ಎಂದು ಕೊಟ್ಟ ಕರೆ ಕರ್ನಾಟಕದ ಜನತೆಯನ್ನು ಕನ್ವಿನ್ಸ್ ಮಾಡುವುದಕ್ಕೆ ಆಗಿಲ್ಲ. ಅದೂಅಲ್ಲದೆ, ಇಂದು ಹಲಾಲ್ ಕಟ್ ಮಾಂಸದ ವಿರುದ್ಧದ ದ್ವೇಷ ಮುಂದೊಂದು ದಿನ ಮಾಂಸಾಹಾರವನ್ನೇ ವಿರೋಧಿಸುವ ಅಭಿಯಾನವಾಗಿ ಬೆಳೆಯುವ ಅಪಾಯವನ್ನು ಊಹಿಸಿರಲಿಕ್ಕೂ ಸಾಧ್ಯತೆಯಿದೆ. ಈಗ ಅಂತಹುದೇ ಒಂದು ಆದೇಶ ದೆಹಲಿಯಲ್ಲಿ ಹೊರಬಿದ್ದಿದೆ. ದಕ್ಷಿಣ ದೆಹಲಿಯ ನಗರಸಭಾ ಮೇಯರ್ ಹೊರಡಿಸಿರುವ ಆದೇಶದ ಪ್ರಕಾರ ಏಪ್ರಿಲ್ 2ರಿಂದ 11ರವರೆಗೆ ಚೈತ್ರ ನವರಾತ್ರಿ ಹಬ್ಬದ ಪ್ರಯುಕ್ತ ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. ದ್ವೇಷದ ಅಭಿಯಾನಗಳ ಕೊಡುಕೊಳ್ಳುವಿಕೆಯಲ್ಲಿ ಚುರುಕಾಗಿರುವ ಸಂಘಪರಿವಾರ ಈ ಅಭಿಯಾನವನ್ನು ಕರ್ನಾಟಕದಲ್ಲೂ ವಿಸ್ತರಿಸುವ ಅಪಾಯವನ್ನು ಮಾಂಸಾಹಾರ ಪದ್ಧತಿಯನ್ನು ಅನುಸರಿಸುವ ಸಮುದಾಯಗಳು ಊಹಿಸಿದವೇ?

ಅಪಾಯಗಳು ತಮ್ಮ ಪಾದಕ್ಕೆ ಎರಗಿದಾಗ ಸ್ವಾತಂತ್ರ್ಯದ ಅರಿವು ಎಂಥವರಿಗೂ ಆಗುತ್ತದೆ ಎಂಬುದನ್ನೂ ಇದು ತೋರಿಸಿಕೊಡುತ್ತದೆ. ಒಳ್ಳೆಯ ಆಹಾರವನ್ನು ತಮಗೆ ಬೇಕಾದವರಿಂದ ಕೊಳ್ಳುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಸಂಘಪರಿವಾರದ ಹಲಾಲ್ ವಿರೋಧಿ ಅಭಿಯಾನ ಸುಪ್ತವಾಗಿಯಾದರೂ ಬಹುಸಂಖ್ಯಾತ ನಾಗರಿಕರಲ್ಲಿ ತಮ್ಮ ಆಯ್ಕೆಯ ಸ್ವಾತಂತ್ರ್ಯದ ಹಕ್ಕನ್ನು ಬಡಿದೆಚ್ಚರಿಸಿರುವ ಸಾಧ್ಯತೆಯಿದೆ. ಆದರೆ, ಇದು ಅಲ್ಪಸಂಖ್ಯಾತರ ಆಯ್ಕೆಗಳಿಗೂ ಅನ್ವಯಿಸುತ್ತದೆ ಎಂಬುದನ್ನು, ಅನ್ಯ ಸಂಗತಿಗಳಲ್ಲಿ ಕೋಮು ಧ್ರುವೀಕರಣದ ಪರವಾಗಿ ನಿಲ್ಲುವ ಬಹುಸಂಖ್ಯಾತರಿಗೆ ಅರ್ಥಪಡಿಸುವುದು ಇಂದಿನ ದೊಡ್ಡ ಸವಾಲು! ಸಂವಿಧಾನ ಭಾರತದ ನಾಗರಿಕರಿಗೆ ಕೊಟ್ಟಿರುವ ಹಕ್ಕುಗಳನ್ನು ಇನ್ನೂ ಜನಪ್ರಿಯವಾಗಿಸುವ, ಜನಪದವಾಗಿಸುವ ನಿಟ್ಟಿನಲ್ಲಿ ದೊಡ್ಡ ಕೆಲಸವಾಗಬೇಕಿದೆ.

ಎರಡನೆಯದಾಗಿ, ಕರ್ನಾಟಕವನ್ನು ಉತ್ತರಪ್ರದೇಶವನ್ನಾಗಿಸಲೋ ಅಥವಾ ಗುಜರಾತ್ ಆಗಿ ಬದಲಾಯಿಸಲೋ ಪ್ರಯತ್ನ ಪಟ್ಟಷ್ಟೂ, ಈ ನಾಡಿನ ಇತಿಹಾಸ, ಪರಂಪರೆ ಮತ್ತು ವೈಶಿಷ್ಟ್ಯಗಳಿಂದ ಬೆಳೆದಿರುವ, ಕಟ್ಟಿಕೊಂಡಿರುವ ಸಾಮಾಜಿಕ ಸಚ್ಚಾರಿತ್ರ್ಯವನ್ನು ತಿದ್ದುವ, ವಿರೂಪಗೊಳಿಸುವ ಕೆಲಸಗಳನ್ನು ತೀವ್ರತರದಲ್ಲಿ ಮಾಡಬೇಕಾಗುತ್ತದೆ. ಹತ್ತುಹಲವು ಸಂಗತಿಗಳಲ್ಲಿ ಇಂತಹ ವಿರೂಪಗೊಳಿಸುವ ಕೆಲಸದಲ್ಲಿ ಸಂಘಪರಿವಾರಕ್ಕೆ ಯಶಸ್ಸು ಸಿಕ್ಕಿದ್ದರೂ, ಅವು ಮುಖ್ಯವಾಗಿ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯವನ್ನು ಅನ್ಯಗೊಳಿಸುವುದರ ಸುತ್ತ ನಡೆದಂತವು. ಹಿಂದುತ್ವದ ಹೆಸರಿನಲ್ಲಿ ಹಲವು ಜಾತಿ ಸಮುದಾಯಗಳಿಗೆ ’ನಾವೆಲ್ಲಾ ಒಂದು-ಹಿಂದೂ’ ಎಂದು ಬಾಯಿಮಾತಿನಲ್ಲಿ ಹೇಳಿ ನಂಬಿಸಿ, ವೈದಿಕ ವರ್ಣಾಶ್ರಮವನ್ನು ಪ್ರತಿಷ್ಠಾಪಿಸಲು ನಡೆಸುತ್ತಿರುವ ಪ್ರಯತ್ನ ನಿಧಾನಕ್ಕಾದರೂ ಜನರಿಗೆ ತಿಳಿಯುತ್ತಿದೆ ಎಂದು ಭಾವಿಸಬಹುದು. ಆ ಹಿನ್ನೆಲೆಯಲ್ಲಿ ಹಲಾಲ್ ವಿವಾದ ಸಂಬಂಧವಾಗಿ ಅವಲೋಕಿಸುವುದಾದರೆ, ಕರ್ನಾಟಕದ ಸಾವಿರಾರು ವರ್ಷಗಳ ಪರಂಪರೆಯಿಂದ ಕಟ್ಟಿಕೊಂಡು ಬಂದಿರುವ ಮತ್ತು ಇನ್ನಷ್ಟು ಸುಧಾರಿಸುವ ಹಾದಿಯಲ್ಲಿ ಮುಂದಡಿಯಿಡುತ್ತಿರುವ ಸಾಮಾಜಿಕ ಸಚ್ಚಾರಿತ್ರ್ಯವನ್ನು ವಿರೂಪಗೊಳಿಸಲು ಮಾಡಿದ ಪ್ರಯತ್ನ ನಿರೀಕ್ಷಿತ ಯಶಸ್ಸು ನೀಡಿಲ್ಲ.

ಮೂರನೆಯದಾಗಿ ಇದೇ ಹಿಂದುತ್ವದ ಬೆಂಬಲಿಗರು ಹಲಾಲ್ ಕಟ್ ಉದ್ದಿಮೆಗಳನ್ನು ನಡೆಸಿ ಮಾಂಸ ರಫ್ತು ಮಾಡುವ ಸಂಸ್ಥೆಗಳನ್ನು ಯಥೇಚ್ಛವಾಗಿ ಹೊಂದಿರುವುದು ತಿಳಿದೇ ಇದೆ. ಆರ್ಥಿಕವಾಗಿ ನಷ್ಟ ತಂದೊಡ್ಡುವ ದ್ವೇಷದ ಅಭಿಯಾನಗಳು ದೀರ್ಘ ಕಾಲದವರೆಗೆ ಬೆಲೆಬಾಳುವುದಿಲ್ಲ ಎಂಬುದೂ ಒಂದು ಮಟ್ಟಿಗೆ ನಿಜ.

ಮುಂದಿನ ಆಜಾನ್ ನಿಷೇಧ- ಮುಸಲ್ಮಾನರಿಂದ ಮಾವು ಕೊಳ್ಳಬೇಡಿ ಅಭಿಯಾನಗಳ ಪಾಡೇನು?

ವರ್ಷತೊಡಕಿಗೆ ಹುಟ್ಟುಹಾಕಬೇಕೆಂದುಕೊಂಡಿದ್ದ ಮತದ್ವೇಷ ಅಭಿಯಾನದಲ್ಲಿ ಮಾನಕಳೆದುಕೊಂಡ ಸಂಘಪರಿವಾರ ಮತ್ತು ಮಾಧ್ಯಮಗಳು, ಮುಂದಿನ ದಿನ ಹಲ್ಲುಜ್ಜುವುದಕ್ಕೂ ಮುಂಚೆಯೇ ’ಆಜಾನ್ ವಿರೋಧಿ’ ಮಾತುಕತೆಯಲ್ಲಿ ಕುಳಿತ ವಾಸನೆ ಕನ್ನಡ ನಾಡನ್ನು ಎಚ್ಚರಿಸಿತು. ಇದಕ್ಕೆ ಒಂದೆರಡು ದಿನಗಳ ಮೊದಲೇ, ಮಹಾರಾಷ್ಟ್ರದಲ್ಲಿ ಜೋರುಮಾತಿಗೆ ಮಾತ್ರ ಹೆಸರಾದ ರಾಜ್ ಠಾಕ್ರೆ ಈ ಅಭಿಯಾನಕ್ಕೆ ನಾಂದಿ ಹಾಡಿದ್ದರು. ಕಳೆದ ಚುನಾವಣೆಗಳಲ್ಲಿ ತಮ್ಮ ದಾಯಾದಿಯ ಪಕ್ಷ ಶಿವಸೇನೆ ಬಿಜೆಪಿ ಜೊತೆಗೆ ಹೊಂದಾಣಿಕೆಯಲ್ಲಿದ್ದಾಗ, ಹಿಂದುತ್ವವನ್ನು ಒಂದು ಮಟ್ಟಿಗೆ ವಿರೋಧಿಸಿಕೊಂಡು ಮರಾಠಿ ಗರ್ವದ ಮಾತನಾಡುತ್ತಿದ್ದ ರಾಜ್ ಠಾಕ್ರೆ ಈಗ ಅದನ್ನು ಬದಿಗಿಟ್ಟು ಮತ್ತೆ ಹಿಂದುತ್ವಕ್ಕೆ ಶರಣಾಗಿದ್ದಾರೆ. ಒಟ್ಟಿನಲ್ಲಿ ರಾಜಕೀಯಕ್ಕಾಗಿ ಯಾವ ಬಟ್ಟೆಯನ್ನಾದರೂ ತೊಡುವ ಈ ಠಾಕ್ರೆ ಕರ್ನಾಟಕಕ್ಕೆ ದ್ವೇಷವನ್ನು ರಫ್ತು ಮಾಡಲು ಸಹಕರಿಸಿದರು. ಇಲ್ಲಿಂದ ಸಂಘಪರಿವಾರ ’ಹಿಜಾಬ್’ ವಿವಾದವನ್ನು ಉತ್ತರಕ್ಕೆ ರಫ್ತು ಮಾಡಿದಂತೆಯೇ!

ಯಾವುದೇ ರಚನಾತ್ಮಕವಾದ ಅಜೆಂಡಾವಿಲ್ಲದೆ ಸೊರಗುತ್ತಿರುವ ಹಿಂದುತ್ವದ ಫ್ರಿಂಜ್ ಎಲಿಮೆಂಟ್‌ಗಳು ಈಗ ಮಸೀದಿ ಮುಂದೆ ಹನುಮಾನ ಚಾಲೀಸದ ಮೈಕ್ ಹಾಕುತ್ತೀವಿ ಎಂಬಿತ್ಯಾದಿಯಾಗಿ ಅಬ್ಬರಿಸುತ್ತಿವೆ. ಪರೀಕ್ಷೆಗಳು ನಡೆಯುವಾಗ ಇಂತಹ ಕಿರಿಕಿರಿ ಮಧ್ಯಮವರ್ಗದ ತಾಳ್ಮೆಯನ್ನೂ ಪರೀಕ್ಷಿಸೀತು. ಹೀಗಾಗಿ ಹಲಾಲ್ ವಿವಾದದಲ್ಲಿ ಹುಟ್ಟಿದ ತಿಳಿವು ಬಹುಸಂಖ್ಯಾತರಲ್ಲಿ ಮತ್ತೆ ತಳೆದೀತೇ? ಅದು ಒಂದು ಹಂತ ಮುಂದೆ ಹೋಗಿ, ಮುಸಲ್ಮಾನ ಸಮುದಾಯವನ್ನು, ಅವರ ಆಚರಣೆಗಳನ್ನು ಅನ್ಯೀಕರಿಸುವ, ರಾಕ್ಷಸೀಕರಣಗೊಳಿಸುವ ಹಿಂದುತ್ವದ ಯೋಜನೆಗಳು ಒಟ್ಟಾರೆ ಸಾಮಾಜಿಕ ವಿವೇವಕ್ಕೆ ಕೊಡಲಿ ಪೆಟ್ಟು ಎಂಬುದು ಅರ್ಥವಾಗುವುದೇ? ಮುಂದೆ ಇದೇ ಕೆಡುಕು ಮತ್ತೊಂದು ರೂಪ ಪಡೆದು, ತಮ್ಮ ಆಚರಣೆಗಳನ್ನೇ ರಾಕ್ಷಸೀಕರಿಸುವತ್ತ ವೈದಿಕ ಶಕ್ತಿಗಳು ಹೆಜ್ಜೆಯಿಡುತ್ತವೆ ಎಂಬುದನ್ನು ಶೂದ್ರ ಮತ್ತು ಹಿಂದುಳಿದ ಮಧ್ಯಮ ವರ್ಗ ಊಹಿಸಿಕೊಳ್ಳುವರೆ? ಆಜಾನ್ ಪ್ರಾರ್ಥನೆ ವಿರೋಧಿ ಅಭಿಯಾನ ಕೂಡ ಠುಸ್ ಆದರೆ ಮುಸಲ್ಮಾನರಿಂದ ಮಾವು ಕೊಳ್ಳಬೇಡಿ ಅಭಿಯಾನ ಚುರುಕು ಪಡೆದುಕೊಳ್ಳುವುದೇ?

ಈಗಾಗಲೇ ಉದ್ದಿಮೆದಾರರಾದ ಕಿರಣ್ ಮಜುಂದಾರ ಶಾ ಅಂತಹವರು ಇಂತಹ ದ್ವೇಷ ಅಭಿಯಾನದ ವಿರುದ್ಧ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವುದು, ಸಣ್ಣದಾಗಿ ಪ್ರಾರಂಭವಾಗುವ ಇಂತಹ ವ್ಯಾಪಾರ-ವಹಿವಾಟಿನ ನಿರ್ಬಂಧದ ಕರೆಗಳು ಕೊನೆಗೆ ಕಾರ್ಪೊರೆಟ್ ಮಟ್ಟಕ್ಕೆ ಬಂದು ನಿಂತರೆ ಏನಾಗಬಹುದೆಂಬ ಊಹೆಯೊಂದಿಗೇ! ಆದರೆ ಬಹುತೇಕ ಕಾರ್ಪೊರೆಟ್ ವಲಯದ ಉದ್ದಿಮೆದಾರರು ಕೆಡುಕು ತಮ್ಮ ಹತ್ತಿರ ಇನ್ನೂ ಸುಳಿದಿಲ್ಲವೆಂದು ನಿದ್ರಿಸುತ್ತಿದ್ದಾರೆ. ಅದು ಅಪ್ಪಳಿಸುವ ಹೊತ್ತಿಗೆ ಯೋಚಿಸಲು ಪ್ರಾರಂಭಿಸಿದರೆ ಬಹಳ ತಡವಾಗುತ್ತದೆ.

ಗೊಂದಲಮಯ ಕಾಂಗ್ರೆಸ್ ಮತ್ತು ಬೀದಿಗಿಳಿದ ಎಚ್ ಡಿ ಕುಮಾರಸ್ವಾಮಿ

ಈ ಕೇಡಿನ ಸಂಗತಿಗಳಿಂದ ಅತಿ ಹೆಚ್ಚು ಭಾದಿತವಾಗಿರುವ ಕಾಂಗ್ರೆಸ್ ದಾರಿ ಕಾಣದಂತಾಗಿ ದಿನೇದಿನೇ ಕೃಶವಾಗುತ್ತಿದೆ. ನುಂಗಲೂ ಆಗದೆ ಉಗುಳಲೂ ಆಗದೆ ಮೃದು ಹಿಂದುತ್ವವನ್ನು ಪಾಲಿಸುತ್ತಿದ್ದಾರೇನೋ ಎಂಬ ಸಂಶಯ ಮೂಡುವಂತೆ ಕೆಲವೊಮ್ಮೆ ಗೊಂದಲಮಯವಾಗಿ ವರ್ತಿಸುತ್ತಿರುವುದು ಅಚ್ಚರಿಯೂ ಆತಂಕಕಾರಿಯೂ ಆಗಿದೆ. ಕಠಿಣ ಮತ್ತು ತೀವ್ರವಾದ ಹಿಂದುತ್ವವೇ ಆ ಸಿದ್ಧಾಂತವನ್ನು ಬೆಂಬಲಿಸುವರ ಕಣ್ಮನ ತಣಿಸುತ್ತಿರುವಾಗ ಮೃದು ಹಿಂದುತ್ವ ಆಕರ್ಷಣೀಯವಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಹಲವು ಮುಖಂಡರಿಗೆ ತಿಳಿಯುತ್ತಿಲ್ಲ. ಕೊನೆಗೆ ಹಿಂದುತ್ವವನ್ನು ಕೆಡವಿ ಬೀಳಿಸುವುದೇ ತಮ್ಮ ಪಾಲಿಗೆ ರಾಜಕೀಯ ಪುನರುಜ್ಜೀವನ ಎಂಬ ತಿಳಿವಳಿಕೆ ಮೂಡುವ ಹೊತ್ತಿಗೆ ಇರುವುದೂ ಕಳೆದುಹೋಗುವ ಸಂಭವವಿದೆ. ಈ ನಿಟ್ಟಿನಲ್ಲಿ ಹಿಜಾಬ್ ಮುಂತಾದ ವಿಷಯಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ನಿಲುವು ತಳೆದು, ಹಿಂದುತ್ವ ಅಜೆಂಡಾಗಳನ್ನು ಬುಡಮೇಲು ಮಾಡಲು ಹೊರಟಾಗ ಅವರದ್ದೇ ಪಕ್ಷದ ಸಂಪೂರ್ಣ ಬೆಂಬಲ ಸಿಗದೆ ಹೋದದ್ದು, ’ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹೊದೆಯುವುದಿಲ್ಲವೇ’ ಎಂದು ಪ್ರಶ್ನಿಸಿದ ಘಟನೆಯಲ್ಲಿ ಸಾಬೀತಾಯಿತು. ಇತ್ತೀಚಿಗೆ ಕರ್ನಾಟಕಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಸಿದ್ದರಾಮಯ್ಯನವರ ನಿಲುವಿಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಗುಲ್ಲು ಇದ್ದರೂ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಕಾದುನೋಡಬೇಕು!

ಈ ಸಮಯದಲ್ಲಿ ಅಚ್ಚರಿಯಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜಾನಪದ ವಿವೇಕವನ್ನು ಹಿಂದುತ್ವದ ವಿರುದ್ಧವಾಗಿ ಬಳಸುತ್ತಿರುವುದು ಆಶಾದಾಯಕ ಬೆಳವಣಿಗೆ. ಅದು ದೀರ್ಘಕಾಲದ ತಂತ್ರ, ಕಾಂಗ್ರೆಸ್ ವೋಟುಗಳಿಗೆ ಕನ್ನಹಾಕಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಹುನ್ನಾರ. ಮುಂದೆ ಬಿಜೆಪಿ ಜೊತೆ ಹೋಗುವುದು ಶತಸಿದ್ಧ ಎಂಬ ಮಾತುಗಳೂ ಕೇಳಿಬರುತ್ತಿವೆ. ಇತ್ತೀಚಿಗೆ ಹಿಜಾಬ್ ವಿಷಯದಲ್ಲಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳುವಂತೆ ಮತ್ತು ಕಾಂಗ್ರೆಸ್‌ಅನ್ನು ದೂಷಿಸುವಂತೆ ಮಾತನಾಡಿದ್ದ ಹಾಗೂ ಆಗಾಗ ಬಿಜೆಪಿ ಮೈತ್ರಿ ವಿಷಯದ ಬಗ್ಗೆ ವದಂತಿಗಳು ಏಳುವ ಹಿನ್ನೆಲೆಯಲ್ಲಿ ಈ ಆತಂಕಕ್ಕೆ ಒಂದು ಮಟ್ಟದ ತೂಕವಿದ್ದರೂ, ಹಿಂದೆಂದೂ ಕಂಡಿರದಂತಹ ಅಶಾಂತಿಯ ವಾತಾವರಣ ಕರ್ನಾಟಕದಲ್ಲಿ ತಲೆದೋರಿರುವಾಗ, ತಂತ್ರಗಾರಿಕೆಯ ಸಲುವಾಗಿಯಾದರೂ ಶಾಂತಿಯನ್ನು ಪಠಿಸುವ ಮತ್ತು ಅದನ್ನು ಕದಡುವವರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವುದು ಶ್ಲಾಘನೀಯ ಸಂಗತಿಯೇ. ಕೇವಲ ವಿಎಚ್‌ಪಿ-ಭಜರಂಗದಳದವರನ್ನು ಮಾತ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿಯವರು, ಸಂಘ ಪರಿವಾರದ ಸೈದ್ಧಾಂತಿಕ ಮೂಲಬಿಂದು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ವಿಮರ್ಶೆ ಮಾಡುವತ್ತ ಬೆಳೆಯಬೇಕಿದೆ ಮತ್ತು ಈ ಬದ್ಧತೆ ಎಂದೆಂದಿಗೂ ಉಳಿದು ಕರ್ನಾಟಕದ ನಿಜ ಪ್ರಾದೇಶಿಕ ಪಕ್ಷವಾಗಿ ಕೋಮುವಾದಿಗಳಿಗೆ ಪಾಠ ಕಲಿಸಲಿ ಎಂದು ಆಶಿಸೋಣ. ಏಕೆಂದರೆ ಈಗ ಪ್ರಾರಂಭವಾಗಿರುವ ಕೆಡುಕು ಎಲ್ಲ ಪ್ರಾದೇಶಿಕತೆಯನ್ನೂ, ಪ್ರಾದೇಶಿಕ ಪಕ್ಷಗಳನ್ನೂ ನುಂಗಿ ನೀರುಕುಡಿಯುವ ಕೆಡುಕಿನ ರೂಪದಲ್ಲಿ ಮುಂದೆ ಬರುವುದನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಶೂದ್ರರನ್ನು ಬಳಸಿಕೊಂಡು ಶೂದ್ರರ ವಿರುದ್ದವೆ ಬಾಣ ಪ್ರಯೋಗ: ಬಿಜೆಪಿಯ ಕೋಮುದ್ರುವೀಕರಣದ ವಿರುದ್ದ ‘ಕರ್ನಾಟಕ ಶೂದ್ರಶಕ್ತಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...