ಮಹಾರಾಷ್ಟ್ರದ ಭೂ ಹಗರಣವೊಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶೀವಸೇನೆಯ ಸಂಸದ ಸಂಜಯ್ ರಾವತ್ರವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಬೆನ್ನಲ್ಲೆ ಮಹಾರಾಷ್ಟ್ರ ಪೊಲೀಸರು ಬಿಜೆಪಿ ಮುಖಂಡ ಮತ್ತು ಮಾಜಿ ಸಂಸದ ಕಿರಿತ್ ಸೋಮಯ್ಯ ಮತ್ತು ಅವರ ಪುತ್ರನ ವಿರುದ್ಧ ಐಎನ್ಎಸ್ ವಿಕ್ರಾಂತ್ ಉಳಿಸಿ ಅಭಿಯಾನದ 57 ಕೋಟಿ ದುರ್ಬಳಕೆ ಆರೋಪ ಹೊರಿಸಿ FIR ದಾಖಲಿಸಿದ್ದಾರೆ.
ವಾಯುವಿಮಾನಗಳನ್ನು ಸಾಗಿಸುವ ದೇಶದ ಮೊದಲ ನೌಕೆಯಾದ ಐಎನ್ಎಸ್ ವಿಕ್ರಾಂತ್ ಹೊರೆಯಾಗತೊಡಗಿದ್ದಾಗ ಅದನ್ನು ಉಳಿಸಲು ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಲಾಗಿತ್ತು. ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮತ್ತು ಅವರ ಮಗ ನೀಲ್ ಆ ಅಭಿಯಾನದ ನೇತೃತ್ವ ವಹಿಸಿ 57 ಕೋಟಿ ರೂ ಸಂಗ್ರಹಿಸಿದ್ದರು. ಆದರೆ ಆ ಹಣವನ್ನು ರಾಜ್ಯದ ಬೊಕ್ಕಸಕ್ಕೆ ಹಾಕುವ ಬದಲು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ಈ ಬೆನ್ನಲ್ಲೆ ನಿವೃತ್ತ ಹಿರಿಯ ಮಿಲಿಟರಿ ಅಧಿಕಾರಿಯವರ ದೂರು ಆಧರಿಸಿ ಟ್ರಾಂಬೆ ಪೊಲೀಸರು ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಆಸ್ತಿ ಹಂಚಿಕೆಯಲ್ಲಿ ಅಪ್ರಾಮಾಣಿಕತೆ), 406 (ಕ್ರಿಮಿನಲ್ ಉಲ್ಲಂಘನೆಗಾಗಿ ಶಿಕ್ಷೆ) ಮತ್ತು 34 (ಸಾಮಾನ್ಯ ಉದ್ದೇಶಗಳು) ಪ್ರಕರಣಗಳ ಅಡಿಯಲ್ಲಿ ಸೋಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
“ಐಎನ್ಎಸ್ ವಿಕ್ರಾಂತ್ ಅನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಸಾರ್ವಜನಿಕರಿಂದ 56 ಕೋಟಿ ರೂ ಸಂಗ್ರಹಿಸಲು 2013-14ರಲ್ಲಿ ಕಿರಿತ್ ಸೋಮಯ್ಯ ನೇತೃತ್ವದಲ್ಲಿ ಅಭಿಯಾನ ನಡೆಸಲಾಗಿತ್ತು. ಈ ಮೊತ್ತವನ್ನು ರಾಜಭವನಕ್ಕೆ ಠೇವಣಿ ಇಡಬೇಕಿತ್ತು. ಆದರೆ ಆರ್ಟಿಐ ದಾಖಲೆಗಳ ಪ್ರಕಾರ ಆ ಹಣವನ್ನು ಎಂದಿಗೂ ಠೇವಣಿ ಮಾಡಲಾಗಿಲ್ಲ ಎಂದು ರಾವತ್ ಹೇಳಿದ್ದರು.
Mark my words
INS विक्रांत चया नावे 56 कोटी गोळा करून जनतेला देशाला फसवणाऱ्या सोमय्या बाप बेटायाना जेल मध्ये जावेच लागेल. किरीट सोमय्या हा महाराष्ट्र द्रोही तर होताच पण देशद्रोही असल्याचे उघड झाले आहे. लोकांनी आता गप्प बसू नये. जवानांचे शोषण करणाऱ्या bjp ला जाब विचाराच लागेल. pic.twitter.com/juqXvAUa68— Sanjay Raut (@rautsanjay61) April 7, 2022
ಈ ಕುರಿತು ಟ್ವೀಟ್ ಮಾಡಿದ್ದ ಅವರು, “ಐಎನ್ಎಸ್ ವಿಕ್ರಾಂತ್ ಹೆಸರಿನಲ್ಲಿ 56 ಕೋಟಿ ರೂಪಾಯಿ ವಸೂಲಿ ಮಾಡಿ ಜನರನ್ನು ವಂಚಿಸಿದ ಸೋಮಯ್ಯ ಮತ್ತು ಆತನ ಮಗ ಜೈಲು ಸೇರಬೇಕಾಗುತ್ತದೆ. ಕಿರಿತ್ ಸೋಮಯ್ಯ ಮಹಾರಾಷ್ಟ್ರ ದ್ರೋಹಿ ಮತ್ತು ದೇಶದ್ರೋಹಿ. ಇನ್ನು ಮುಂದೆ ಜನ ಸುಮ್ಮನಿರಬಾರದು. ಸೈನಿಕರ ಶೋಷಣೆ ಮಾಡುತ್ತಿರುವ ಬಿಜೆಪಿಯವರು ಉತ್ತರ ಕೊಡಬೇಕು” ಎಂದು ಕಿಡಿಕಾರಿದ್ದಾರೆ.
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು, “ಆರೋಪಗಳು ನಿರಾಧಾರವಾಗಿವೆ. ಶಿವಸೇನೆಗೆ ಧೈರ್ಯವಿದ್ದರೆ ದಾಖಲೆಗಳನ್ನು ಮುಂದಿಡಲಿ” ಎಂದು ಸವಾಲು ಹಾಕಿದ್ದಾರೆ.
2019ರ ವಿಧಾನಸಭಾ ಚುನಾವಣೆಯವರೆಗೂ ಬಿಜೆಪಿ ಮತ್ತು ಶಿವಸೇನೆ ಮಿತ್ರಪಕ್ಷಗಳಾಗಿದ್ದವು. ಆದರೆ ಫಲಿತಾಂಶ ಬಂದ ನಂತರ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಶಿವಸೇನೆಯು ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸಿದೆ. ಆಗಿನಿಂದ ಬಿಜೆಪಿ ವಿರುದ್ಧ ತೀವ್ರ ಟೀಕೆ ಮಾಡುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಚಂದ್ರು ಹತ್ಯೆ ಕುರಿತು ಸುಳ್ಳು ಹೇಳಿದ ಗೃಹ ಸಚಿವ; ಪ್ರಚಾರ ಮಾಡಿದ ಬಲಪಂಥೀಯ…