ರಾಜ್ಯದಲ್ಲಿ ಕೊಳ್ಳೆ ಹೊಡೆದವರು ಯಾರು, ಕೊಳ್ಳೆ ಹೊಡೆದವರನ್ನು ಯಾರು ಮೆರವಣಿಗೆ ಮಾಡ್ತಿದ್ದಾರೆ ಎನ್ನುವುದು ಎಲ್ಲವನ್ನೂ ನಾನು ನೋಡಿದ್ದೇನೆ ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಆ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಎಚ್.ಡಿ.ಕೆ ವಾಗ್ದಾಳಿ ನಡೆಸಿದ್ದಾರೆ.
ಮೊನ್ನೆ ಜಾಮೀನು ಪಡೆದು ಹೊರಬಂದ ಡಿ.ಕೆ ಶಿವಕುಮಾರ್ರನ್ನು ಸ್ವಾಗತಿಸಲು ಎಚ್.ಡಿ.ಕೆ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅದಕ್ಕೆ ಬಿಜೆಪಿ ಕೊಳ್ಳೆ ಹೊಡೆದವರ ಪರ ಇದ್ದೀರಿ ಎಂದು ಟೀಕಿಸಿತ್ತು. ಅದಕ್ಕೆ ಇಂದು ಕುಮಾರಸ್ವಾಮಿ ಕೊಳ್ಳೆ ಹೊಡೆದವರೆಲ್ಲಾ ನಿಮ್ಮ ಪಕ್ಷದಲ್ಲೇ ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಕೊಳ್ಳೆ ಹೊಡೆದವರು ಯಾರು, ಕೊಳ್ಳೆ ಹೊಡೆದವರನ್ನು ಯಾರು ಮೆರವಣಿಗೆ ಮಾಡ್ತಿದ್ದಾರೆ ಎನ್ನುವುದನ್ನು ನೋಡಿದ್ದೇನೆ. ಜಾತಿ ಹೆಸರಲ್ಲಿ, ಕಾಮಾಲೆ ಕಣ್ಣಲ್ಲಿ ಎಲ್ಲವನ್ನೂ ನೋಡಿದ್ದಿದೆ. ಈ ಕಾಲದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎನ್ನುವುದನ್ನು ಯೋಚಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಕೊಳ್ಳೆ ಹೊಡೆದವರೆಲ್ಲರನ್ನೂ ಜೈಲಿಗೆ ಕಳುಹಿಸಿ. ಜನತೆಯ ದುಡ್ಡನ್ನು ಲೂಟಿ ಹೊಡೆದವರನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ ಎಂದು ಸವಾಲೆಸೆದಿದ್ದಾರೆ.
‘ಈ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ್ದನ್ನೂ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಒಳ್ಳೆಯದಕ್ಕೆ ಮತ್ತು ಕೆಟ್ಟದನ್ನು ಯೋಚನೆ ಮಾಡಲು ಈಗ ವ್ಯವಸ್ಥೆಗಳಿಲ್ಲ. ಕೊಳ್ಳೆ ಹೊಡೆದರೆ ಜೈಲಿಗೆ ಕಳುಹಿಸಿ, ಅದನ್ನು ಬಿಟ್ಟು ಪತ್ರಿಕೆಗಳೆದುರು ಹೇಳುವುದಲ್ಲ. ಇನ್ನೂ ಯಾಕೆ ಸುಮ್ಮನೇ ಬಿಟ್ಟಿದ್ದೀರಿ. ನಿಮಗೆ ಅಧಿಕಾರ ಕೊಟ್ಟಿರುವುದು ಯಾತಕ್ಕೆ ಎಂದು ಪ್ರಶ್ನಿಸಿದ್ದಾರೆ.