“ಕೃಷಿ ಕಾಯ್ದೆಗಳ ವಿರುದ್ಧದ ನಮ್ಮ ಈ ಹೋರಾಟವು ದಿರ್ಘಕಾಲ ಇರಲಿದ್ದು, ಪ್ರತಿಭಟನಾಕಾರರು ಶಾಂತಿ ಕಾಪಾಡಿಕೊಳ್ಳಬೇಕು” ಎಂದು ಪ್ರತಿಭಟನೆಯ ಮುಂಚೂಣಿಯಲ್ಲಿರುವ ಸಂಘಟನೆಗಳ ನಾಯಕರು ಮನವಿ ಮಾಡಿದರು.
ನಿನ್ನೆಯ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಅಲ್ಲಲ್ಲಿ ಪೊಲೀಸರು ಮತ್ತು ರೈತರ ಸಡುವೆ ಜಟಾಪಟಿ ನಡೆದಿತ್ತು. ರೈತರ ಒಂದು ಗುಂಪು ಉದ್ದೇಶಿತ ಮಾರ್ಗ ಬಿಟ್ಟು ಚಲಿಸಿದ್ದಲ್ಲದೇ ಕೆಂಪುಕೋಟೆ ಆವರಣ ಪ್ರವೇಶಸಿ ಅಲ್ಲಿ ಸಿಖ್ ಧ್ವಜ ಹಾರಿಸಿತ್ತು.
ಇದನ್ನೂ ಓದಿ: ಟ್ರಾಕ್ಟರ್ ಪರೇಡ್: 22 ಜನರ ಮೇಲೆ ಎಫ್ಐಆರ್ ದಾಖಲಿಸಿದ ದೆಹಲಿ ಪೊಲೀಸರು
ದೆಹಲಿ-ಹರಿಯಾಣ ಗಡಿಯಲ್ಲಿ ಮಾತನಾಡಿದ ರೈತ ಮುಖಂಡರು, ಅಹಿತಕರ ಘಟನೆಗೆ ಕಾರಣವಾದ ಗುಂಪಿನೊಂದಿಗೆ ಅಂತರ ಕಾಯ್ದುಕೊಂಡು ಮಾತನಾಡಿದರು. “ನಮ್ಮ ಪ್ರತಿಭಟನೆಗೆ ಹಿನ್ನಡೆ ಮಾಡುವ ಮತ್ತು ಕೆಟ್ಟ ಹೆಸರು ತರುವ ಉದ್ದೇಶದಿಂದ ಸಂಚು ರೂಪಿಸಲಾಗಿದೆ. ಕೆಂಪುಕೋಟೆಯಲ್ಲಿ ಗಲಭೆ ಸೃಷ್ಟಿಸಿದವರು ಸರ್ದಾರ್ಗಳಲ್ಲ ಗದ್ದಾರ್ಗಳು” ಎಂದು ರೈತ ನಾಯಕರೊಬ್ಬರು ಟೀಕಿಸಿದರು.
ಹಲವು ನಾಯಕರು, “ನಿನ್ನೆಯ ಹಿಂಸಾಚಾರ ಮತ್ತು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದಕ್ಕೆ ಪಂಜಾಬಿ ನಟ ದೀಪೇನ್ ಸಿಧುವಿನ ಪ್ರಚೋದನೆಯೇ ಕಾರಣ. ದೀಪೇನ್ ಸರ್ಕಾರದ ಕಡೆಯ ಮನುಷ್ಯ. ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಬಿಟ್ಟಿದ್ದೇಕೆ? ಇದು ಸಂಚಿನ ಭಾಗ” ಎಂದು ಆರೋಪಿಸಿದರು.
ಇಂದು ಸಂಜೆ ಸಿಂಘು ಗಡಿಯಲ್ಲಿ ರೈತ ಸಂಘಟನೆಗಳ ನಾಯಕರು ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು