ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರಿಗೆ ಪ್ರಾರ್ಥನೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿ ನಿನ್ನೆ ಆದೇಶ ಹೊರಡಿಸಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ಮುಸ್ಲಿಂ ಪರ ಅರ್ಜಿದಾರರು ಮುಂದಾಗಿದ್ದಾರೆ.
ವಾರಣಾಸಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲ ಮಹಡಿ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಇನ್ನು ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನ್ಯಾಯಾಲಯವು ತನ್ನ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಬ್ಯಾರಿಕೇಡ್ಗಳನ್ನು ತೆಗೆಯುವುದು ಸೇರಿದಂತೆ ವ್ಯವಸ್ಥೆಗಳನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಅರ್ಚಕರಿಂದ ಪ್ರಾರ್ಥನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿತ್ತು.
ವಾರಣಾಸಿ ನ್ಯಾಯಾಲಯದ ಈ ಆದೇಶದ ಕುರಿತು ಪ್ರತಿಕ್ರಿಯಿಸಿದ ಮುಸ್ಲಿಂ ಪರ ವಕೀಲ ಅಖ್ಲಾಕ್ ಅಹ್ಮದ್, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ಗೆ ಮೊರೆ ಹೋಗುವುದಾಗಿ ಹೇಳಿದ್ದಾರೆ. ಈ ಆದೇಶವು 2022ರ ಅಡ್ವೊಕೇಟ್ ಕಮಿಷನರ್ ವರದಿ, 1937ರ ಎಎಸ್ಐ ವರದಿಯನ್ನು ಕಡೆಗಣಿಸಿದೆ. 1993ರ ಮೊದಲು ಪ್ರಾರ್ಥನೆಗಳನ್ನು ನಡೆಸಿರುವ ಬಗ್ಗೆ ಹಿಂದೂ ಕಡೆಯವರು ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಸ್ಥಳದಲ್ಲಿ ಅಂತಹ ಯಾವುದೇ ವಿಗ್ರಹವಿರಲಿಲ್ಲ ಎಂದು ಹೇಳಿದ್ದಾರೆ.
ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ವಕೀಲ ಮೆರಾಜುದ್ದೀನ್ ಸಿದ್ದಿಕಿ, ಅದೇಶದ ವಿರುದ್ಧ ಉನ್ನತ ನ್ಯಾಯಾಲಯಗಳ ಮೊರೆ ಹೋಗುತ್ತೇವೆ. ನಾನು ಅಂತಹ ಯಾವುದೇ ಆದೇಶವನ್ನು ಸ್ವೀಕರಿಸುವುದಿಲ್ಲ, ನಾವು ಕಾನೂನು ಹೋರಾಟ ಮಾಡುತ್ತೇವೆ, ರಾಜಕೀಯ ಲಾಭ ಪಡೆಯಲು ಇದು ನಡೆಯುತ್ತಿದೆ, ಬಾಬ್ರಿಯಲ್ಲಿ ಮಾಡಿದ ಅದೇ ವಿಧಾನವನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಮೊದಲು ಕಮಿಷನರ್ ವರದಿ ಮತ್ತು ಎಎಸ್ಐ ವರದಿಯು ಒಳಗೆ ಏನೂ ಇಲ್ಲ ಎಂದು ಹೇಳಿತ್ತು, ನ್ಯಾಯಾಲಯದ ಆದೇಶದಿಂದ ನಮಗೆ ತುಂಬಾ ಅಸಮಾಧಾನವಾಗಿದೆ. 1993ಕ್ಕಿಂತ ಮೊದಲು ಅಲ್ಲಿ ಪ್ರಾರ್ಥನೆಗಳು ನಡೆದಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮೆರಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ.
ನ್ಯಾಯಾಲಯ ನಿನ್ನೆ ನೀಡಿದ ಆದೇಶದ ಬಳಿಕ ಮಾತನಾಡಿದ್ದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ. ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಧರ್ಮದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಜಿಲ್ಲಾಡಳಿತವು ಈ ಬಗ್ಗೆ 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಒಟ್ಟು 4 ನೆಲ ಮಾಳಿಗೆಗಳಿದೆ. ಅವುಗಳ ಪೈಕಿ ಒಂದು ಇಲ್ಲಿ ವಾಸಿಸುತ್ತಿದ್ದ ಹಿಂದೂ ಕುಟುಂಬವೊಂದರ ವಶದಲ್ಲಿದೆ. ಹಾಗಾಗಿ, ಇದರಲ್ಲಿರುವ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.
ಇದನ್ನು ಓದಿ: ವರರಿಲ್ಲದೆ ನೂರಾರು ವಧುಗಳ ಸಾಮೂಹಿಕ ವಿವಾಹ: ಉತ್ತರಪ್ರದೇಶದ ಮ್ಯಾರೇಜ್ ಸ್ಕೀಂ ಹಗರಣ ಬಯಲು