Homeಅಂಕಣಗಳುಬಹುಜನ ಭಾರತ; ಕೆಡವಲಾದ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?

ಬಹುಜನ ಭಾರತ; ಕೆಡವಲಾದ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?

- Advertisement -
- Advertisement -

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಿಂದ ಸ್ಫೂರ್ತಿ ಪಡೆದಿರುವ ಶಕ್ತಿಗಳು ಕಾಶಿ-ಮಥುರಾ ವಿವಾದಗಳನ್ನು ಬಡಿದೆಬ್ಬಿಸಲು ತೊಡಗಿವೆ. ಹಿಂದೂ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳಿವು ಎಂಬುದು ಈ ಶಕ್ತಿಗಳ ವಾದ. ಮುಸ್ಲಿಮ್ ದಾಳಿಕೋರರು- ದೊರೆಗಳು ಹಲವು ದೇವಾಲಯಗಳನ್ನು ಕೆಡವಿದ್ದು ಹೌದು. ಆದರೆ ಹಿಂದು ರಾಜರು ಕೂಡ ಹಿಂದೂ ಧರ್ಮದ ಪುನರುತ್ಥಾನದ ಹೆಸರಿನಲ್ಲಿ ಬೌದ್ಧ ಮತ್ತು ಜೈನ ಧಾರ್ಮಿಕ ನೆಲೆಗಳನ್ನು ಕೆಡವಿರುವ ಹೇರಳ ಉದಾಹರಣೆಗಳಿವೆ.

ಸೋಮೇಶ್ವರ ದೇವಾಲಯವನ್ನು ಅಪವಿತ್ರಗೊಳಿಸಿ ಮೂರ್ತಿಯನ್ನು ಭಂಗ ಮಾಡಿದ ಮಹಮ್ಮದ್ ಘಜನಿ ಮುಲ್ತಾನದ ಮಸೀದಿಗಳ ಮೇಲೆಯೂ ದಾಳಿ ನಡೆಸಿದ್ದ ಮತ್ತು ಐವತ್ತು ಸಾವಿರ ಮಂದಿ ಶಿಯಾ ಮುಸಲ್ಮಾನರನ್ನೂ ಕೊಂದುಹಾಕಿದ್ದ ಎಂಬ ಸಂಗತಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ವಿವಾದಗಳನ್ನು ಕೆದಕುವವರು ಇತಿಹಾಸವನ್ನು ಓದಿಕೊಳ್ಳಬೇಕಿದೆ.

ಸಾಮಾಜಿಕ ಸಾಮರಸ್ಯದಿಂದ ಕೂಡಿದ್ದು, ಧಾರ್ಮಿಕ ಹಿಂಸಾಚಾರವೇ ಇಲ್ಲದ ಸುವರ್ಣಯುಗ ಎಂಬ ಪ್ರಾಚೀನ ಭಾರತದ ಕಾಲಮಾನದ ಬಣ್ಣನೆಯನ್ನು ಇತಿಹಾಸಜ್ಞ ದ್ವಿಜೇಂದ್ರ ನಾರಾಯಣ ಝಾ ಅವರು ಒಪ್ಪಿಲ್ಲ.

ಎದುರಾಳಿಗಳ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳಲ್ಲಿನ ಪ್ರತಿಮೆಗಳನ್ನು ನೆಲಸಮಗೊಳಿಸಿ ಅಪವಿತ್ರಗೊಳಿಸುವುದೇ ಅಲ್ಲದೆ ಅವುಗಳ ಸ್ವಾಧೀನ- ಬಳಕೆಯು ಇಸ್ಲಾಮ್ ಆಗಮಿಸುವ ಮುನ್ನವೇ ಭಾರತದಲ್ಲಿ ರೂಢಿಯಲ್ಲಿತ್ತು ಎಂದು ಝಾ ವಿವರಿಸಿದ್ದಾರೆ.

ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸ ತಜ್ಞರಾದ ಝಾ ಅವರು “Against the Grain- Notes on Identity, Intolerance and History” ಎಂಬ ತಮ್ಮ ಕೃತಿಯಲ್ಲಿ ಈ ಸಂಗತಿಯನ್ನು ವಿಷದವಾಗಿ ತಿಳಿಸಿದ್ದಾರೆ.

ಬೌದ್ಧ ಮಠಗಳು, ಸ್ತೂಪಗಳು ಹಾಗೂ ಇತರೆ ಕಟ್ಟಡಗಳನ್ನು ಬ್ರಾಹ್ಮಣ್ಯ ಶಕ್ತಿಗಳು ಅಪವಿತ್ರಗೊಳಿಸಿ, ಕೆಡವಿ, ಸ್ವಾಧೀನಕ್ಕೆ ಪಡೆದು ಬಳಸಿರುವುದಕ್ಕೆ ಸಾಕ್ಷ್ಯಗಳಿವೆ. ಇಂತಹ ಸಾಕ್ಷ್ಯಗಳು ಅಶೋಕನ ಆಳ್ವಿಕೆಯ ಅಂತ್ಯದವರೆಗೆ ವಿಸ್ತರಿಸಿವೆ.

ಅಶೋಕನ ಮಕ್ಕಳಲ್ಲೊಬ್ಬನಾದ ಜಾಲೌಕನು ವೈಷ್ಣವನಾಗಿದ್ದ. ಬೌದ್ಧ ವಿಹಾರಗಳನ್ನು ನೆಲಸಮಗೊಳಿಸಿದ ಕುರಿತು ಹನ್ನೆರಡನೆಯ ಶತಮಾನದ ಕಲ್ಹಣನ ಕಾಶ್ಮೀರಿ ಪಠ್ಯ ’ರಾಜತರಂಗಿಣಿ’ಯಲ್ಲಿ ಉಲ್ಲೇಖವಿದೆ. ಈ ಪುರಾವೆಯನ್ನು ಗಮನಿಸಿದರೆ ಶ್ರಮಣ ಧರ್ಮಗಳ ಮೇಲಿನ ದಾಳಿ ಅಶೋಕನ ಜೀವಿತಕಾಲ ಇಲ್ಲವೇ ಆತನ ಮರಣದ ತಕ್ಷಣವೇ ಆರಂಭವಾಯಿತು ಎಂಬುದಕ್ಕೆ ಈ ಉಲ್ಲೇಖವೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಮೌರ್ಯರ ಆಳ್ವಿಕೆಯ ನಂತರದ ಅವಧಿಯ ಶ್ರಮಣರನ್ನು ಕಾಡಿದ ಸಾಕ್ಷ್ಯವನ್ನು ದಿವ್ಯವದನ ಎಂಬ ಬೌದ್ಧ- ಸಂಸ್ಕೃತ ಪಂಡಿತನು ದಾಖಲಿಸಿದ್ದಾನೆ. ಪುಷ್ಯಮಿತ್ರ ಶುಂಗನೆಂಬ ಬ್ರಾಹ್ಮಣ ದೊರೆಯು ಬೌದ್ಧ ಧರ್ಮದ ಮಹಾನ್ ಪೀಡಕನೆಂದು ಗುರುತಿಸಿದ್ದಾನೆ. ಅವನ ಭಾರೀ ಸೇನೆಯು ಸ್ತೂಪಗಳನ್ನು ಹಾಳುಗೆಡವುತ್ತ, ವಿಹಾರಗಳನ್ನು ಸುಡುತ್ತ, ಭಿಕ್ಷುಗಳನ್ನು ಕೊಲ್ಲುತ್ತ ಸಾಕಲದ ಕಡೆಗೆ (ಈಗಿನ ಸಿಯಾಲ್ ಕೋಟ್) ಸಾಗಿತು. ಪ್ರತಿ ಶ್ರಮಣನ ತಲೆಗೆ ನೂರು ವರಹಗಳ ಬಹುಮಾನವನ್ನು ಶುಂಗನು ಸಾಕಲದಲ್ಲಿ ಘೋಷಿಸಿದ. ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮುಂಗುಸಿಗಳಂತೆ ಶಾಶ್ವತ ಶತ್ರುಗಳು ಎಂದು ಪತಂಜಲಿಯ ತನ್ನ ಮಹಾಭಾಷ್ಯ ಕೃತಿಯಲ್ಲಿ ಬಣ್ಣಿಸಿದ್ದಾನೆ. ವಿಶೇಷವಾಗಿ ಮಧ್ಯಪ್ರದೇಶದ ಅನೇಕ ಬೌದ್ಧ ಕೇಂದ್ರಗಳಲ್ಲಿ ಕಂಡು ಬಂದಿರುವ ಅವಶೇಷಗಳ ರಾಶಿಯ ಪದರಗಳು ಬೌದ್ಧ ಸ್ಮಾರಕಗಳ ಮೇಲೆ ಶುಂಗನು ನಡೆಸಿದ ದಾಳಿಯ ಸಾಧ್ಯತೆಯನ್ನು ಗಟ್ಟಿಗೊಳಿಸುತ್ತವೆ. ಉದಾಹರಣೆಗೆ ಅಶೋಕನ ಕಾಲದಿಂದ ಪ್ರಮುಖ ಬೌದ್ಧ ತಾಣವಾಗಿದ್ದ ಸಾಂಚಿಯು ಶುಂಗನ ಕಾಲದಲ್ಲಿ ಹಲವು ಸೌಧಗಳನ್ನು ಒಡೆದು ಹಾಕಿದ ಪುರಾವೆಗಳತ್ತ ಬೆರಳು ಮಾಡುತ್ತದೆ. ಸುತ್ತಮುತ್ತಲ ಕಟನಿ ಮತ್ತು ರೇವಾ ಜಿಲ್ಲೆಗಳ ಸತಧಾರ ಮತ್ತು ದೂರಕೊಥಾರದಂತಹ ಜಾಗಗಳಲ್ಲಿಯೂ ಇಂತಹುದೇ ಪುರಾವೆಗಳು ದೊರೆಯುತ್ತವೆ ಎಂದು ಝಾ ವಿವರಿಸಿದ್ದಾರೆ.

ಇಂತಹ ದಾಳಿಗಳು ಮಧ್ಯಪ್ರದೇಶದಲ್ಲಿ ಶುಂಗನ ನಂತರವೂ ನಡೆಯುತ್ತವೆ. ಉದಾಹರಣೆಗೆ ಅಹ್ಮದ್‌ಪುರದಲ್ಲಿ ಐದನೆಯ ಶತಮಾನದ ಸ್ತೂಪವೊಂದರ ಮೇಲೆ ಬ್ರಾಹ್ಮಣ ದೇಗುಲವನ್ನು ಕಟ್ಟಿದಂತೆ ತೋರುತ್ತದೆ. ವಿದಿಶಾದ ಸುತ್ತಮುತ್ತ ಎಂಟನೆಯ ಶತಮಾನದಲ್ಲಿ ಬೌದ್ಧ ಕೇಂದ್ರಗಳು ಶೈವ ಅಥವಾ ಜೈನ ಪೂಜಾ ಸ್ಥಾನಗಳಾಗಿ ಬದಲಾಗಿರುವ ಹಲವು ತಾಣಗಳು ಪತ್ತೆಯಾಗಿವೆ. ವಿದಿಶಾದ ಈಶಾನ್ಯ ದಿಕ್ಕಿನಲ್ಲಿ 250ಕಿ.ಮೀ. ದೂರದಲ್ಲಿ ಹತ್ತನೆಯ ಶತಮಾನದ ನಂತರ ಚಾಂದೇಲರ ಆಳ್ವಿಕೆಯಲ್ಲಿ ದೇವಾಲಯ ನಗರವಾಗಿ ಖಜುರಾಹೋ ತಲೆಯೆತ್ತುವ ಮುನ್ನ ಅಲ್ಲಿದ್ದದ್ದು ಬೌದ್ಧ ನೆಲೆ. ಐದನೆಯ ಶತಮಾನದ ಸ್ತೂಪದ ತಳಹದಿಯ ಮೇಲೆ ಬ್ರಾಹ್ಮಣ ದೇವಾಲಯವನ್ನು ನಿರ್ಮಿಸಿರುವಂತೆ ಕಂಡುಬಂದಿದೆ. ಸುತ್ತಮುತ್ತ ಪ್ರತೀಕಗಳು ಪತ್ತೆಯಾಗಿವೆ. ಇದೇ ತಾಣದಲ್ಲಿ ಬೌದ್ಧ ಸ್ಮಾರಕವೊಂದರ ಅವಶೇಷಗಳ ಮೇಲೆ ಒಂಬತ್ತನೆಯ ಅಥವಾ ಹತ್ತನೆಯ ಶತಮಾನದಲ್ಲಿ ಘಂಟೈ ದೇವಾಲಯವನ್ನು ಆಗಿನ ಕಾಲಮಾನದಲ್ಲಿ ಪ್ರಬಲ ನೆಲೆ ಹೊಂದಿದ್ದ ಜೈನರು ನಿರ್ಮಿಸಿದ್ದಾಗಿ ತೋರುತ್ತದೆ.

ಪಶ್ಚಿಮ ಉತ್ತರಪ್ರದೇಶದ ಮಥುರಾದಲ್ಲಿ ಕುಶಾನರ ಕಾಲದಲ್ಲಿ ಈಗ ನೆಲೆ ನಿಂತಿರುವ ಭೂತೇಶ್ವರ ಮತ್ತು ಗೋಕರ್ಣೇಶ್ವರ ದೇವಾಲಯಗಳು ಪ್ರಾಚೀನಕಾಲದ ಬೌದ್ಧ ಕೇಂದ್ರಗಳಾಗಿದ್ದವು. ಅಲಹಾಬಾದಿನ ಸನಿಹದ ಕೌಶಾಂಬಿಯಲ್ಲಿ ಘೋಸಿತಾರಂ ಎಂಬ ಮಹಾನ್ ಬೌದ್ಧ ಮಠವನ್ನು ಸುಟ್ಟು ಹಾಕಿ ಧ್ವಂಸ ಮಾಡಿದ ಕೃತ್ಯ ಪುಷ್ಯಮಿತ್ರ ಶುಂಗನದೇ. ಬುದ್ಧ ತನ್ನ ಮೊದಲ ಪ್ರವಚನ ನೀಡಿದ ವಾರಾಣಸಿ ಬಳಿಯ ಸಾರನಾಥ ಕೂಡ ಬ್ರಾಹ್ಮಣ ದಾಳಿಗೆ ಗುರಿಯಾಯಿತು. ಮೌರ್ಯರ ಕಾಲದ ವಸ್ತುಗಳನ್ನು ಮರುಬಳಸಿ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಲಾಯಿತು. ಬುದ್ಧನು ತನ್ನ ಬಹುಪಾಲು ಜೀವಿತಕಾಲವನ್ನು ಕಳೆದ ಶ್ರಾವಸ್ತಿಯ ಕುಶಾನ ಬೌದ್ಧ ತಾಣವನ್ನು ಬ್ರಾಹ್ಮಣರು ಸ್ವಾಧೀನಪಡಿಸಿಕೊಂಡು ಗುಪ್ತರ ಕಾಲದಲ್ಲಿ ರಾಮಾಯಣ ಗೋಡೆ ಚಿತ್ರಗಳ ಗುಡಿಯನ್ನು ನಿರ್ಮಿಸಿದರು. ಈ ಮಾತಿಗೆ ಐದನೆಯ ಶತಮಾನದ ಚೀನೀ ಯಾತ್ರಿಕ ಫಾಹಿಯಾನನ ಉಲ್ಲೇಖವೇ ಸಾಕ್ಷಿ ಎಂದು ಝಾ ಹೇಳಿದ್ದಾರೆ.

ದ್ವಿಜೇಂದ್ರ ನಾರಾಯಣ ಝಾ

ಬೌದ್ಧ ಮತದ ಮೇಲೆ ಬ್ರಾಹ್ಮಣವಾದವು ಅಂತಿಮ ವಿಜಯ ಸಾಧಿಸಿದ ನಂತರ ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯೊಂದರಲ್ಲೇ 49 ಬೌದ್ಧ ತಾಣಗಳಿಗೆ ಬೆಂಕಿ ಇಟ್ಟು ನಾಶ ಮಾಡಿರುವುದಾಗಿ ಕಂಡುಬಂದಿದೆ. ಪುರಾತತ್ವ ಶಾಸ್ತ್ರಜ್ಞ ಆಲೋಯ್ಸ್ ಆಂಟನ್ ಫೂಹ್ರರ್ ಅವರ ಸಂಶೋಧನಾ ಪ್ರಬಂಧವೊಂದು ಈ ಸಂಗತಿಯ ಮೇಲೆ ಬೆಳಕು ಚೆಲ್ಲಿದೆ.

ಆರನೆಯ ಶತಮಾನದ ಹೂಣ ರಾಜ ಮಿಹಿರಕುಲನು ಶಿವನ ಆರಾಧಕ. ಸುಮಾರು 1,600 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೆ ಸಾವಿರಾರು ಮಂದಿ ಭಿಕ್ಷುಗಳನ್ನು ಕೊಂದು ಹಾಕಿದ. ಗಾಂಧಾರದ ಸಾವಿರ ಸಂಘಾರಾಮಗಳು ಅಳಿದು ಅವಶೇಷಗಳಾದವು. ಉಡ್ಡಿಯಾನದ 1,400 ಸಂಘಾರಾಮಗಳಿಗೂ ಇದೇ ಸ್ಥಿತಿ ಒದಗಿತ್ತು ಎಂದು ಗುಪ್ತರ ಆಳ್ವಿಕೆಯ ನಂತರದ ಶತಮಾನಗಳಲ್ಲಿ 631ರಿಂದ 645ರ ನಡುವೆ ಹರ್ಷವರ್ಧನನ ಆಳ್ವಿಕೆಯಲ್ಲಿ ಪ್ರವಾಸ ನಡೆಸಿದ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್ ದಾಖಲಿಸಿದ್ದಾನೆ. ಗೌಡದೇಶದ ರಾಜ ಶಶಾಂಕನು ಬಿಹಾರದ ಬೋಧ ಗಯಾದ ಬೋಧಿವೃಕ್ಷವನ್ನು ಕಡಿದು ಹಾಕಿಸಿದ. ಸ್ಥಳೀಯ ದೇವಾಲಯವೊಂದರಿಂದ ಬುದ್ಧನ ಪ್ರತಿಮೆಯನ್ನು ತೆಗೆದು ಮಹೇಶ್ವರನ ವಿಗ್ರಹವನ್ನು ಇರಿಸುವಂತೆ ಆದೇಶ ನೀಡಿದನೆಂದೂ ಹ್ಯೂಯೆನ್ ತ್ಸಾಂಗ್ ಹೇಳಿದ್ದಾನೆ. ಬೋಧ ಗಯಾ ಪುನಃ ಬೌದ್ಧರ ಸುಪರ್ದಿಗೆ ಬಂದದ್ದು ಬೌದ್ಧ ಮತಾವಲಂಬಿ ಪಾಲ ಸಂತತಿಯ ದೊರೆಗಳ ಕಾಲದಲ್ಲಿ. ಅಂತಾರಾಷ್ಟ್ರೀಯ ಖ್ಯಾತಿಯ ನಳಂದ ವಿಶ್ವವಿದ್ಯಾಲಯದ ವಿಶಾಲ ಸಮುಚ್ಚಯದಲ್ಲಿ ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗೂ ಹೆಚ್ಚು ಕಾಲ ವಾಸವಿದ್ದ. ಈ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಸುಟ್ಟು ಹಾಕಿದ್ದು ಭಕ್ತಿಯಾರ್ ಖಿಲ್ಜಿ ಎಂಬ ಪ್ರಚಾರದಲ್ಲಿ ತಥ್ಯಾಂಶವಿಲ್ಲ ಎಂದು ಝಾ ಹೇಳುತ್ತಾರೆ. ಹನ್ನೆರಡನೆಯ ಶತಮಾನದಲ್ಲಿ ನಿರ್ಮಿಸಲಾದ ಪುರಿಯ ಜಗನ್ನಾಥ ಮಂದಿರದ ಕೂಡ ತಲೆಯೆತ್ತಿದ್ದು ಬೌದ್ಧ ತಾಣದ ಮೇಲೆಯೇ. ಸ್ವಾಮಿ ವಿವೇಕಾನಂದರು ಕೂಡ ಈ ಅಂಶವನ್ನು ಪುಷ್ಟೀಕರಿಸಿದ್ದಾರೆ. ಜಗನ್ನಾಥ ರಥೋತ್ಸವದ ಜಗನ್ನಾಥ, ಬಲರಾಮ ಹಾಗೂ ಸುಭದ್ರರ ಪ್ರತಿಮೆಗಳ ಮೆರವಣಿಗೆಯು ಬೌದ್ಧ ಧರ್ಮದ ಬುದ್ಧ, ಧಮ್ಮ ಹಾಗೂ ಸಂಘದ ರಥೋತ್ಸವವನ್ನು ಆಧರಿಸಿದಂತಹವು ಎಂದು ಬಂಕಿಮಚಂದ್ರ ಚಟರ್ಜಿ ಕೂಡ ಹೇಳಿದ್ದಾರೆ.

ಪುರಿ ಜಿಲ್ಲೆಯ ಪೂರ್ಣೇಶ್ವರ, ಕಾಂತೇಶ್ವರ, ಕೇದಾರೇಶ್ವರ, ಸೋಮೇಶ್ವರ ಹಾಗೂ ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ ಇಲ್ಲವೇ ಬೌದ್ಧ ವಿಹಾರಗಳ ಸಾಮಗ್ರಿಗಳಿಂದ ಕಟ್ಟಲಾಗಿದೆ ಎಂಬುದು ಝಾ ವಾದ.

ಎಪಿಗ್ರಾಫಿಯಾ ಇಂಡಿಯಾದ ಇಪ್ಪತ್ತನಾಲ್ಕನೆಯ ಸಂಪುಟದ 141-144 ಪುಟಗಳಲ್ಲಿ ದಾಖಲಾಗಿರುವ ಸಂಗತಿಯಿದು- ’ದಕ್ಷಿಣ ಭಾರತದ ರಾಜ ವೀರ ಗೊಗ್ಗಿದೇವ ತನ್ನನ್ನು ತಾನು ಜೈನ ಶಾಸನಗಳ ಪಾಲಿನ ಬೆಂಕಿ ಎಂದೂ, ಜಿನ ಅನುಯಾಯಿಗಳೆಂಬ ವನ್ಯಮೃಗಗಳ ಬೇಟೆಗಾರನೆಂದೂ, ಬೌದ್ಧ ಕಟ್ಟಳೆಗಳ ನೆಲಸಮಗಾರನೆಂದೂ’ ಬಣ್ಣಿಸಿಕೊಂಡಿದ್ದಾನೆ. ಲೋಕಾಯತ-ಚಾರ್ವಾಕ ಮುಂತಾದ ಬ್ರಾಹ್ಮಣೇತರ ಕೃತಿಗಳ ಉದ್ದೇಶಪೂರ್ವಕ ನಾಶವನ್ನು ಈ ಸಂಪುಟದಲ್ಲಿ ಬಣ್ಣಿಸಲಾಗಿದೆ. ನಾಗಾರ್ಜುನಕೊಂಡದಂತಹ ಬೃಹತ್ ಬೌದ್ಧ ವಿಹಾರವನ್ನು ನಾಶಪಡಿಸಲಾಗುತ್ತದೆ. ಶಂಕರದಿಗ್ವಿಜಯದ ಪ್ರಕಾರ ಹೊಸದಾಗಿ ನಿಯುಕ್ತರಾದ ಬ್ರಹ್ಮಕ್ಷತ್ರ ರಾಜರು ಬೌದ್ಧ ಮತಾವಲಂಬಿಗಳನ್ನು ಕೊಲ್ಲುವಂತೆಯೂ, ಅವರನ್ನು ಕೊಲ್ಲಲು ಒಪ್ಪದವರನ್ನು ಕೂಡ ಸಂಹರಿಸಲು ಕ್ಷತ್ರಿಯರಿಗೆ ಆದೇಶ ನೀಡುತ್ತಾರೆ.

ಈಗ, ಕೆಡವಲಾದ ಈ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?


ಇದನ್ನೂ ಓದಿ: ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...