Homeಅಂಕಣಗಳುಬಹುಜನ ಭಾರತ; ಕೆಡವಲಾದ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?

ಬಹುಜನ ಭಾರತ; ಕೆಡವಲಾದ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?

- Advertisement -
- Advertisement -

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಿಂದ ಸ್ಫೂರ್ತಿ ಪಡೆದಿರುವ ಶಕ್ತಿಗಳು ಕಾಶಿ-ಮಥುರಾ ವಿವಾದಗಳನ್ನು ಬಡಿದೆಬ್ಬಿಸಲು ತೊಡಗಿವೆ. ಹಿಂದೂ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳಿವು ಎಂಬುದು ಈ ಶಕ್ತಿಗಳ ವಾದ. ಮುಸ್ಲಿಮ್ ದಾಳಿಕೋರರು- ದೊರೆಗಳು ಹಲವು ದೇವಾಲಯಗಳನ್ನು ಕೆಡವಿದ್ದು ಹೌದು. ಆದರೆ ಹಿಂದು ರಾಜರು ಕೂಡ ಹಿಂದೂ ಧರ್ಮದ ಪುನರುತ್ಥಾನದ ಹೆಸರಿನಲ್ಲಿ ಬೌದ್ಧ ಮತ್ತು ಜೈನ ಧಾರ್ಮಿಕ ನೆಲೆಗಳನ್ನು ಕೆಡವಿರುವ ಹೇರಳ ಉದಾಹರಣೆಗಳಿವೆ.

ಸೋಮೇಶ್ವರ ದೇವಾಲಯವನ್ನು ಅಪವಿತ್ರಗೊಳಿಸಿ ಮೂರ್ತಿಯನ್ನು ಭಂಗ ಮಾಡಿದ ಮಹಮ್ಮದ್ ಘಜನಿ ಮುಲ್ತಾನದ ಮಸೀದಿಗಳ ಮೇಲೆಯೂ ದಾಳಿ ನಡೆಸಿದ್ದ ಮತ್ತು ಐವತ್ತು ಸಾವಿರ ಮಂದಿ ಶಿಯಾ ಮುಸಲ್ಮಾನರನ್ನೂ ಕೊಂದುಹಾಕಿದ್ದ ಎಂಬ ಸಂಗತಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ವಿವಾದಗಳನ್ನು ಕೆದಕುವವರು ಇತಿಹಾಸವನ್ನು ಓದಿಕೊಳ್ಳಬೇಕಿದೆ.

ಸಾಮಾಜಿಕ ಸಾಮರಸ್ಯದಿಂದ ಕೂಡಿದ್ದು, ಧಾರ್ಮಿಕ ಹಿಂಸಾಚಾರವೇ ಇಲ್ಲದ ಸುವರ್ಣಯುಗ ಎಂಬ ಪ್ರಾಚೀನ ಭಾರತದ ಕಾಲಮಾನದ ಬಣ್ಣನೆಯನ್ನು ಇತಿಹಾಸಜ್ಞ ದ್ವಿಜೇಂದ್ರ ನಾರಾಯಣ ಝಾ ಅವರು ಒಪ್ಪಿಲ್ಲ.

ಎದುರಾಳಿಗಳ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳಲ್ಲಿನ ಪ್ರತಿಮೆಗಳನ್ನು ನೆಲಸಮಗೊಳಿಸಿ ಅಪವಿತ್ರಗೊಳಿಸುವುದೇ ಅಲ್ಲದೆ ಅವುಗಳ ಸ್ವಾಧೀನ- ಬಳಕೆಯು ಇಸ್ಲಾಮ್ ಆಗಮಿಸುವ ಮುನ್ನವೇ ಭಾರತದಲ್ಲಿ ರೂಢಿಯಲ್ಲಿತ್ತು ಎಂದು ಝಾ ವಿವರಿಸಿದ್ದಾರೆ.

ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸ ತಜ್ಞರಾದ ಝಾ ಅವರು “Against the Grain- Notes on Identity, Intolerance and History” ಎಂಬ ತಮ್ಮ ಕೃತಿಯಲ್ಲಿ ಈ ಸಂಗತಿಯನ್ನು ವಿಷದವಾಗಿ ತಿಳಿಸಿದ್ದಾರೆ.

ಬೌದ್ಧ ಮಠಗಳು, ಸ್ತೂಪಗಳು ಹಾಗೂ ಇತರೆ ಕಟ್ಟಡಗಳನ್ನು ಬ್ರಾಹ್ಮಣ್ಯ ಶಕ್ತಿಗಳು ಅಪವಿತ್ರಗೊಳಿಸಿ, ಕೆಡವಿ, ಸ್ವಾಧೀನಕ್ಕೆ ಪಡೆದು ಬಳಸಿರುವುದಕ್ಕೆ ಸಾಕ್ಷ್ಯಗಳಿವೆ. ಇಂತಹ ಸಾಕ್ಷ್ಯಗಳು ಅಶೋಕನ ಆಳ್ವಿಕೆಯ ಅಂತ್ಯದವರೆಗೆ ವಿಸ್ತರಿಸಿವೆ.

ಅಶೋಕನ ಮಕ್ಕಳಲ್ಲೊಬ್ಬನಾದ ಜಾಲೌಕನು ವೈಷ್ಣವನಾಗಿದ್ದ. ಬೌದ್ಧ ವಿಹಾರಗಳನ್ನು ನೆಲಸಮಗೊಳಿಸಿದ ಕುರಿತು ಹನ್ನೆರಡನೆಯ ಶತಮಾನದ ಕಲ್ಹಣನ ಕಾಶ್ಮೀರಿ ಪಠ್ಯ ’ರಾಜತರಂಗಿಣಿ’ಯಲ್ಲಿ ಉಲ್ಲೇಖವಿದೆ. ಈ ಪುರಾವೆಯನ್ನು ಗಮನಿಸಿದರೆ ಶ್ರಮಣ ಧರ್ಮಗಳ ಮೇಲಿನ ದಾಳಿ ಅಶೋಕನ ಜೀವಿತಕಾಲ ಇಲ್ಲವೇ ಆತನ ಮರಣದ ತಕ್ಷಣವೇ ಆರಂಭವಾಯಿತು ಎಂಬುದಕ್ಕೆ ಈ ಉಲ್ಲೇಖವೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಮೌರ್ಯರ ಆಳ್ವಿಕೆಯ ನಂತರದ ಅವಧಿಯ ಶ್ರಮಣರನ್ನು ಕಾಡಿದ ಸಾಕ್ಷ್ಯವನ್ನು ದಿವ್ಯವದನ ಎಂಬ ಬೌದ್ಧ- ಸಂಸ್ಕೃತ ಪಂಡಿತನು ದಾಖಲಿಸಿದ್ದಾನೆ. ಪುಷ್ಯಮಿತ್ರ ಶುಂಗನೆಂಬ ಬ್ರಾಹ್ಮಣ ದೊರೆಯು ಬೌದ್ಧ ಧರ್ಮದ ಮಹಾನ್ ಪೀಡಕನೆಂದು ಗುರುತಿಸಿದ್ದಾನೆ. ಅವನ ಭಾರೀ ಸೇನೆಯು ಸ್ತೂಪಗಳನ್ನು ಹಾಳುಗೆಡವುತ್ತ, ವಿಹಾರಗಳನ್ನು ಸುಡುತ್ತ, ಭಿಕ್ಷುಗಳನ್ನು ಕೊಲ್ಲುತ್ತ ಸಾಕಲದ ಕಡೆಗೆ (ಈಗಿನ ಸಿಯಾಲ್ ಕೋಟ್) ಸಾಗಿತು. ಪ್ರತಿ ಶ್ರಮಣನ ತಲೆಗೆ ನೂರು ವರಹಗಳ ಬಹುಮಾನವನ್ನು ಶುಂಗನು ಸಾಕಲದಲ್ಲಿ ಘೋಷಿಸಿದ. ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮುಂಗುಸಿಗಳಂತೆ ಶಾಶ್ವತ ಶತ್ರುಗಳು ಎಂದು ಪತಂಜಲಿಯ ತನ್ನ ಮಹಾಭಾಷ್ಯ ಕೃತಿಯಲ್ಲಿ ಬಣ್ಣಿಸಿದ್ದಾನೆ. ವಿಶೇಷವಾಗಿ ಮಧ್ಯಪ್ರದೇಶದ ಅನೇಕ ಬೌದ್ಧ ಕೇಂದ್ರಗಳಲ್ಲಿ ಕಂಡು ಬಂದಿರುವ ಅವಶೇಷಗಳ ರಾಶಿಯ ಪದರಗಳು ಬೌದ್ಧ ಸ್ಮಾರಕಗಳ ಮೇಲೆ ಶುಂಗನು ನಡೆಸಿದ ದಾಳಿಯ ಸಾಧ್ಯತೆಯನ್ನು ಗಟ್ಟಿಗೊಳಿಸುತ್ತವೆ. ಉದಾಹರಣೆಗೆ ಅಶೋಕನ ಕಾಲದಿಂದ ಪ್ರಮುಖ ಬೌದ್ಧ ತಾಣವಾಗಿದ್ದ ಸಾಂಚಿಯು ಶುಂಗನ ಕಾಲದಲ್ಲಿ ಹಲವು ಸೌಧಗಳನ್ನು ಒಡೆದು ಹಾಕಿದ ಪುರಾವೆಗಳತ್ತ ಬೆರಳು ಮಾಡುತ್ತದೆ. ಸುತ್ತಮುತ್ತಲ ಕಟನಿ ಮತ್ತು ರೇವಾ ಜಿಲ್ಲೆಗಳ ಸತಧಾರ ಮತ್ತು ದೂರಕೊಥಾರದಂತಹ ಜಾಗಗಳಲ್ಲಿಯೂ ಇಂತಹುದೇ ಪುರಾವೆಗಳು ದೊರೆಯುತ್ತವೆ ಎಂದು ಝಾ ವಿವರಿಸಿದ್ದಾರೆ.

ಇಂತಹ ದಾಳಿಗಳು ಮಧ್ಯಪ್ರದೇಶದಲ್ಲಿ ಶುಂಗನ ನಂತರವೂ ನಡೆಯುತ್ತವೆ. ಉದಾಹರಣೆಗೆ ಅಹ್ಮದ್‌ಪುರದಲ್ಲಿ ಐದನೆಯ ಶತಮಾನದ ಸ್ತೂಪವೊಂದರ ಮೇಲೆ ಬ್ರಾಹ್ಮಣ ದೇಗುಲವನ್ನು ಕಟ್ಟಿದಂತೆ ತೋರುತ್ತದೆ. ವಿದಿಶಾದ ಸುತ್ತಮುತ್ತ ಎಂಟನೆಯ ಶತಮಾನದಲ್ಲಿ ಬೌದ್ಧ ಕೇಂದ್ರಗಳು ಶೈವ ಅಥವಾ ಜೈನ ಪೂಜಾ ಸ್ಥಾನಗಳಾಗಿ ಬದಲಾಗಿರುವ ಹಲವು ತಾಣಗಳು ಪತ್ತೆಯಾಗಿವೆ. ವಿದಿಶಾದ ಈಶಾನ್ಯ ದಿಕ್ಕಿನಲ್ಲಿ 250ಕಿ.ಮೀ. ದೂರದಲ್ಲಿ ಹತ್ತನೆಯ ಶತಮಾನದ ನಂತರ ಚಾಂದೇಲರ ಆಳ್ವಿಕೆಯಲ್ಲಿ ದೇವಾಲಯ ನಗರವಾಗಿ ಖಜುರಾಹೋ ತಲೆಯೆತ್ತುವ ಮುನ್ನ ಅಲ್ಲಿದ್ದದ್ದು ಬೌದ್ಧ ನೆಲೆ. ಐದನೆಯ ಶತಮಾನದ ಸ್ತೂಪದ ತಳಹದಿಯ ಮೇಲೆ ಬ್ರಾಹ್ಮಣ ದೇವಾಲಯವನ್ನು ನಿರ್ಮಿಸಿರುವಂತೆ ಕಂಡುಬಂದಿದೆ. ಸುತ್ತಮುತ್ತ ಪ್ರತೀಕಗಳು ಪತ್ತೆಯಾಗಿವೆ. ಇದೇ ತಾಣದಲ್ಲಿ ಬೌದ್ಧ ಸ್ಮಾರಕವೊಂದರ ಅವಶೇಷಗಳ ಮೇಲೆ ಒಂಬತ್ತನೆಯ ಅಥವಾ ಹತ್ತನೆಯ ಶತಮಾನದಲ್ಲಿ ಘಂಟೈ ದೇವಾಲಯವನ್ನು ಆಗಿನ ಕಾಲಮಾನದಲ್ಲಿ ಪ್ರಬಲ ನೆಲೆ ಹೊಂದಿದ್ದ ಜೈನರು ನಿರ್ಮಿಸಿದ್ದಾಗಿ ತೋರುತ್ತದೆ.

ಪಶ್ಚಿಮ ಉತ್ತರಪ್ರದೇಶದ ಮಥುರಾದಲ್ಲಿ ಕುಶಾನರ ಕಾಲದಲ್ಲಿ ಈಗ ನೆಲೆ ನಿಂತಿರುವ ಭೂತೇಶ್ವರ ಮತ್ತು ಗೋಕರ್ಣೇಶ್ವರ ದೇವಾಲಯಗಳು ಪ್ರಾಚೀನಕಾಲದ ಬೌದ್ಧ ಕೇಂದ್ರಗಳಾಗಿದ್ದವು. ಅಲಹಾಬಾದಿನ ಸನಿಹದ ಕೌಶಾಂಬಿಯಲ್ಲಿ ಘೋಸಿತಾರಂ ಎಂಬ ಮಹಾನ್ ಬೌದ್ಧ ಮಠವನ್ನು ಸುಟ್ಟು ಹಾಕಿ ಧ್ವಂಸ ಮಾಡಿದ ಕೃತ್ಯ ಪುಷ್ಯಮಿತ್ರ ಶುಂಗನದೇ. ಬುದ್ಧ ತನ್ನ ಮೊದಲ ಪ್ರವಚನ ನೀಡಿದ ವಾರಾಣಸಿ ಬಳಿಯ ಸಾರನಾಥ ಕೂಡ ಬ್ರಾಹ್ಮಣ ದಾಳಿಗೆ ಗುರಿಯಾಯಿತು. ಮೌರ್ಯರ ಕಾಲದ ವಸ್ತುಗಳನ್ನು ಮರುಬಳಸಿ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಲಾಯಿತು. ಬುದ್ಧನು ತನ್ನ ಬಹುಪಾಲು ಜೀವಿತಕಾಲವನ್ನು ಕಳೆದ ಶ್ರಾವಸ್ತಿಯ ಕುಶಾನ ಬೌದ್ಧ ತಾಣವನ್ನು ಬ್ರಾಹ್ಮಣರು ಸ್ವಾಧೀನಪಡಿಸಿಕೊಂಡು ಗುಪ್ತರ ಕಾಲದಲ್ಲಿ ರಾಮಾಯಣ ಗೋಡೆ ಚಿತ್ರಗಳ ಗುಡಿಯನ್ನು ನಿರ್ಮಿಸಿದರು. ಈ ಮಾತಿಗೆ ಐದನೆಯ ಶತಮಾನದ ಚೀನೀ ಯಾತ್ರಿಕ ಫಾಹಿಯಾನನ ಉಲ್ಲೇಖವೇ ಸಾಕ್ಷಿ ಎಂದು ಝಾ ಹೇಳಿದ್ದಾರೆ.

ದ್ವಿಜೇಂದ್ರ ನಾರಾಯಣ ಝಾ

ಬೌದ್ಧ ಮತದ ಮೇಲೆ ಬ್ರಾಹ್ಮಣವಾದವು ಅಂತಿಮ ವಿಜಯ ಸಾಧಿಸಿದ ನಂತರ ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯೊಂದರಲ್ಲೇ 49 ಬೌದ್ಧ ತಾಣಗಳಿಗೆ ಬೆಂಕಿ ಇಟ್ಟು ನಾಶ ಮಾಡಿರುವುದಾಗಿ ಕಂಡುಬಂದಿದೆ. ಪುರಾತತ್ವ ಶಾಸ್ತ್ರಜ್ಞ ಆಲೋಯ್ಸ್ ಆಂಟನ್ ಫೂಹ್ರರ್ ಅವರ ಸಂಶೋಧನಾ ಪ್ರಬಂಧವೊಂದು ಈ ಸಂಗತಿಯ ಮೇಲೆ ಬೆಳಕು ಚೆಲ್ಲಿದೆ.

ಆರನೆಯ ಶತಮಾನದ ಹೂಣ ರಾಜ ಮಿಹಿರಕುಲನು ಶಿವನ ಆರಾಧಕ. ಸುಮಾರು 1,600 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೆ ಸಾವಿರಾರು ಮಂದಿ ಭಿಕ್ಷುಗಳನ್ನು ಕೊಂದು ಹಾಕಿದ. ಗಾಂಧಾರದ ಸಾವಿರ ಸಂಘಾರಾಮಗಳು ಅಳಿದು ಅವಶೇಷಗಳಾದವು. ಉಡ್ಡಿಯಾನದ 1,400 ಸಂಘಾರಾಮಗಳಿಗೂ ಇದೇ ಸ್ಥಿತಿ ಒದಗಿತ್ತು ಎಂದು ಗುಪ್ತರ ಆಳ್ವಿಕೆಯ ನಂತರದ ಶತಮಾನಗಳಲ್ಲಿ 631ರಿಂದ 645ರ ನಡುವೆ ಹರ್ಷವರ್ಧನನ ಆಳ್ವಿಕೆಯಲ್ಲಿ ಪ್ರವಾಸ ನಡೆಸಿದ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್ ದಾಖಲಿಸಿದ್ದಾನೆ. ಗೌಡದೇಶದ ರಾಜ ಶಶಾಂಕನು ಬಿಹಾರದ ಬೋಧ ಗಯಾದ ಬೋಧಿವೃಕ್ಷವನ್ನು ಕಡಿದು ಹಾಕಿಸಿದ. ಸ್ಥಳೀಯ ದೇವಾಲಯವೊಂದರಿಂದ ಬುದ್ಧನ ಪ್ರತಿಮೆಯನ್ನು ತೆಗೆದು ಮಹೇಶ್ವರನ ವಿಗ್ರಹವನ್ನು ಇರಿಸುವಂತೆ ಆದೇಶ ನೀಡಿದನೆಂದೂ ಹ್ಯೂಯೆನ್ ತ್ಸಾಂಗ್ ಹೇಳಿದ್ದಾನೆ. ಬೋಧ ಗಯಾ ಪುನಃ ಬೌದ್ಧರ ಸುಪರ್ದಿಗೆ ಬಂದದ್ದು ಬೌದ್ಧ ಮತಾವಲಂಬಿ ಪಾಲ ಸಂತತಿಯ ದೊರೆಗಳ ಕಾಲದಲ್ಲಿ. ಅಂತಾರಾಷ್ಟ್ರೀಯ ಖ್ಯಾತಿಯ ನಳಂದ ವಿಶ್ವವಿದ್ಯಾಲಯದ ವಿಶಾಲ ಸಮುಚ್ಚಯದಲ್ಲಿ ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗೂ ಹೆಚ್ಚು ಕಾಲ ವಾಸವಿದ್ದ. ಈ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಸುಟ್ಟು ಹಾಕಿದ್ದು ಭಕ್ತಿಯಾರ್ ಖಿಲ್ಜಿ ಎಂಬ ಪ್ರಚಾರದಲ್ಲಿ ತಥ್ಯಾಂಶವಿಲ್ಲ ಎಂದು ಝಾ ಹೇಳುತ್ತಾರೆ. ಹನ್ನೆರಡನೆಯ ಶತಮಾನದಲ್ಲಿ ನಿರ್ಮಿಸಲಾದ ಪುರಿಯ ಜಗನ್ನಾಥ ಮಂದಿರದ ಕೂಡ ತಲೆಯೆತ್ತಿದ್ದು ಬೌದ್ಧ ತಾಣದ ಮೇಲೆಯೇ. ಸ್ವಾಮಿ ವಿವೇಕಾನಂದರು ಕೂಡ ಈ ಅಂಶವನ್ನು ಪುಷ್ಟೀಕರಿಸಿದ್ದಾರೆ. ಜಗನ್ನಾಥ ರಥೋತ್ಸವದ ಜಗನ್ನಾಥ, ಬಲರಾಮ ಹಾಗೂ ಸುಭದ್ರರ ಪ್ರತಿಮೆಗಳ ಮೆರವಣಿಗೆಯು ಬೌದ್ಧ ಧರ್ಮದ ಬುದ್ಧ, ಧಮ್ಮ ಹಾಗೂ ಸಂಘದ ರಥೋತ್ಸವವನ್ನು ಆಧರಿಸಿದಂತಹವು ಎಂದು ಬಂಕಿಮಚಂದ್ರ ಚಟರ್ಜಿ ಕೂಡ ಹೇಳಿದ್ದಾರೆ.

ಪುರಿ ಜಿಲ್ಲೆಯ ಪೂರ್ಣೇಶ್ವರ, ಕಾಂತೇಶ್ವರ, ಕೇದಾರೇಶ್ವರ, ಸೋಮೇಶ್ವರ ಹಾಗೂ ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ ಇಲ್ಲವೇ ಬೌದ್ಧ ವಿಹಾರಗಳ ಸಾಮಗ್ರಿಗಳಿಂದ ಕಟ್ಟಲಾಗಿದೆ ಎಂಬುದು ಝಾ ವಾದ.

ಎಪಿಗ್ರಾಫಿಯಾ ಇಂಡಿಯಾದ ಇಪ್ಪತ್ತನಾಲ್ಕನೆಯ ಸಂಪುಟದ 141-144 ಪುಟಗಳಲ್ಲಿ ದಾಖಲಾಗಿರುವ ಸಂಗತಿಯಿದು- ’ದಕ್ಷಿಣ ಭಾರತದ ರಾಜ ವೀರ ಗೊಗ್ಗಿದೇವ ತನ್ನನ್ನು ತಾನು ಜೈನ ಶಾಸನಗಳ ಪಾಲಿನ ಬೆಂಕಿ ಎಂದೂ, ಜಿನ ಅನುಯಾಯಿಗಳೆಂಬ ವನ್ಯಮೃಗಗಳ ಬೇಟೆಗಾರನೆಂದೂ, ಬೌದ್ಧ ಕಟ್ಟಳೆಗಳ ನೆಲಸಮಗಾರನೆಂದೂ’ ಬಣ್ಣಿಸಿಕೊಂಡಿದ್ದಾನೆ. ಲೋಕಾಯತ-ಚಾರ್ವಾಕ ಮುಂತಾದ ಬ್ರಾಹ್ಮಣೇತರ ಕೃತಿಗಳ ಉದ್ದೇಶಪೂರ್ವಕ ನಾಶವನ್ನು ಈ ಸಂಪುಟದಲ್ಲಿ ಬಣ್ಣಿಸಲಾಗಿದೆ. ನಾಗಾರ್ಜುನಕೊಂಡದಂತಹ ಬೃಹತ್ ಬೌದ್ಧ ವಿಹಾರವನ್ನು ನಾಶಪಡಿಸಲಾಗುತ್ತದೆ. ಶಂಕರದಿಗ್ವಿಜಯದ ಪ್ರಕಾರ ಹೊಸದಾಗಿ ನಿಯುಕ್ತರಾದ ಬ್ರಹ್ಮಕ್ಷತ್ರ ರಾಜರು ಬೌದ್ಧ ಮತಾವಲಂಬಿಗಳನ್ನು ಕೊಲ್ಲುವಂತೆಯೂ, ಅವರನ್ನು ಕೊಲ್ಲಲು ಒಪ್ಪದವರನ್ನು ಕೂಡ ಸಂಹರಿಸಲು ಕ್ಷತ್ರಿಯರಿಗೆ ಆದೇಶ ನೀಡುತ್ತಾರೆ.

ಈಗ, ಕೆಡವಲಾದ ಈ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?


ಇದನ್ನೂ ಓದಿ: ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...