Homeಅಂಕಣಗಳುಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

ಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

- Advertisement -
- Advertisement -

ಮೊನ್ನೆ ಹೈದರಾಬಾದಿನ ಬೀದಿಯೊಂದರಲ್ಲಿ ದಲಿತ ಯುವಕ ನಾಗರಾಜುವನ್ನು ಮತಾಂಧ ಮುಸ್ಲಿಮನೊಬ್ಬ ಭೀಕರವಾಗಿ ಕೊಂದುಹಾಕಿದ. ಹದಿನೈದು ನಿಮಿಷಗಳ ಕಾಲ ನಡೆದ ಈ ಹಲ್ಲೆಯಿದು. ಕಬ್ಬಿಣದ ಸರಳಿನಿಂದ ಬಡಿದು ತಲೆ ಒಡೆಯಲಾಯಿತು. ಈ ಅಮಾನುಷ ಹತ್ಯೆ ಜರುಗಿದ್ದು ಧರ್ಮಕ್ಕಿಂತ ಹೆಚ್ಚಾಗಿ ಜಾತಿಯ ಕಾರಣಕ್ಕೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಶಾಲಾದಿನಗಳಿಂದಲೂ ಪ್ರೀತಿಸುತ್ತಿದ್ದ ಅಶ್ರಿನ್ ಸುಲ್ತಾನಾ ಮತ್ತು ನಾಗರಾಜು ವಿವಾಹವಾಗಿ ಮೂರು ತಿಂಗಳು ಕಳೆದಿತ್ತು. ಈ ಮದುವೆಗೆ ಸುಲ್ತಾನಾ ಮನೆಯವರ ವಿರೋಧವಿತ್ತು. ನಾಗರಾಜು ದಲಿತ ಕುಲದಲ್ಲಿ ಹುಟ್ಟಿದ್ದೇ ಕೊಲ್ಲುವ ಕಡು ಹಗೆಗೆ ಕಾರಣ. ತನ್ನ ಪ್ರೀತಿಯನ್ನು ದಕ್ಕಿಸಿಕೊಂಡು ಬಾಳಲು ಬಯಸಿದ್ದ ನಾಗರಾಜು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಸಿದ್ಧನಿದ್ದ. ವಿವಾಹಕ್ಕೆ ಮುನ್ನ ಈ ಇರಾದೆಯನ್ನು ಅಶ್ರಿನ್ ಕುಟುಂಬಕ್ಕೆ ತಿಳಿಯಪಡಿಸಿ ಅವರ ಸಮ್ಮತಿ ಬಯಸಿದ್ದ. ಮತಾಂತರ ಹೊಂದಿದರೆ ಸಾಮಾನ್ಯವಾಗಿ ಮದುವೆಗೆ ಸಮ್ಮತಿ ದೊರೆತ ಪ್ರಕರಣಗಳು ಸಾಕಷ್ಟಿವೆ. ಆದರೆ ’ಹೊಲೆಯ’ನೊಂದಿಗೆ ರಕ್ತಸಂಬಂಧ ಬೆಳೆಸಲು ಅಶ್ರಿನ್ ಸೋದರ ಸಿದ್ಧನಿರಲಿಲ್ಲ. ಕುಟುಂಬದ-ಕುಲದ ’ಗರಿಮೆಗೆ ಕಳಂಕ’ ತಂದ ತಂಗಿಯನ್ನು ನೇಣುಹಾಕಿ ಕೊಲ್ಲಲು ಮದುವೆಗೆ ಮುಂಚೆಯೇ ಎರಡು ಸಲ ಪ್ರಯತ್ನಿಸಿದ್ದ. ಪರಾರಿಯಾಗಿ ಆರ್ಯಸಮಾಜ ಮಂದಿರದಲ್ಲಿ ಮದುವೆಯಾಗಿತ್ತು ಈ ಜೋಡಿ. ಆದರೆ ಪ್ರಾಣಾಪಾಯ ತಪ್ಪಿರಲಿಲ್ಲ. ಸೋದರ ಸಾಯಹೊಡೆಯುತ್ತಾನೆಂಬ ಎಚ್ಚರಿಕೆಯನ್ನು ಖುದ್ದು ಅಶ್ರಿನ್ ತಾಯಿಯೇ ನೀಡಿದ್ದಳು. ತಲೆಮರೆಸಿಕೊಂಡಿದ್ದ ಈ ಜೋಡಿ ತಮ್ಮ ಮೊಬೈಲುಗಳ ಸಿಮ್ ಕಾರ್ಡುಗಳನ್ನು ಕೂಡ ಬದಲಾಯಿಸಿದ್ದರು. ಪೊಲೀಸರಿಂದ ರಕ್ಷಣೆ ಕೋರಿದ್ದರು.

ಅಶ್ರಿನ್ ಕುಟುಂಬ ಸೈಯದ್ ಎಂಬ ಅಘೋಷಿತ ಕುಲೀನ ’ಜಾತಿ’ಗೆ ಸೇರಿದ್ದು. ಮೇಲುಕೀಳು- ಜಾತಿಭೇದವನ್ನು ಇಸ್ಲಾಂ ಬೋಧಿಸುವುದಿಲ್ಲ ನಿಜ. ಆದರೆ ಈ ಧರ್ಮದ ಅನುಯಾಯಿಗಳು ಬಹುತೇಕರು ಈ ತಾರತಮ್ಯವನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಆಚರಿಸುತ್ತಾರೆ. ಹಿಂದುವಿಗೆ ಅಸ್ಪೃಶ್ಯ ಎನಿಸುವ ವ್ಯಕ್ತಿ, ಮುಸಲ್ಮಾನನಿಗೂ ಅಸ್ಪೃಶ್ಯನೇ ಎಂದು ಬಾಬಾಸಾಹೇಬರು ಹೇಳಿದ್ದಾರೆ.

ನಾಗರಾಜು ಒಂದು ವೇಳೆ ದಲಿತನಾಗಿರದೆ ಹಿಂದು ಸವರ್ಣೀಯನಾಗಿದ್ದರೆ ಹತ್ಯೆಗೆ ಈಡಾಗುತ್ತಿದ್ದನೇ ಎಂಬುದಾಗಿ ಎದ್ದಿರುವ ಪ್ರಶ್ನೆ ಅತ್ಯಂತ ಪ್ರಸ್ತುತ. ಇದೇ ರೀತಿ ಹಿಂದು ಸವರ್ಣೀಯನಿಂದ ಹತ್ಯೆಗೀಡಾಗುವ ದಲಿತನ ಪರ ಏಳುವ ದನಿಗಳು ಅತಿ ಕ್ಷೀಣ. ನಾಗರಾಜುವಿನ ಹತ್ಯೆ ಮೂಲಭೂತವಾಗಿ ಜಾತಿಯ ಪ್ರಶ್ನೆ ಎಂಬುದನ್ನು ಆತನ ಪರ ಎದ್ದಿರುವ ಸಹಾನುಭೂತಿಯ ಬಹುಪಾಲು ದನಿಗಳು ಒಪ್ಪಲು ತಯಾರಿಲ್ಲ. ಈ ದನಿಗಳಿಗೆ ಮುಸ್ಲಿಮರನ್ನು ಖಳನಾಯಕರನ್ನಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಏಕೈಕ ಉದ್ದೇಶ. ಈ ಉದ್ದೇಶಕ್ಕೆ ಯಾರು ಒದಗಿ ಬಂದರೂ ಅವರನ್ನು ಬಳಸಿಕೊಂಡೇ ಸಿದ್ಧ.

ಹೆಣ್ಣು ಕುಟುಂಬದ ಆಸ್ತಿಪಾಸ್ತಿ ಎಂಬ ಪುರಾತನ ಪುರುಷಾಧಿಪತ್ಯ ಭಾರತೀಯ ಸಮಾಜದಲ್ಲಿ ಸಿಡಿಲಾಗಿ ಅಬ್ಬರಿಸಿದೆ. ಮಧ್ಯಯುಗದ ಅನಾಗರಿಕ ಮನಸ್ಥಿತಿಯಿದು. ಮನಸು ಬಯಸಿದ ಸಂಗಾತಿಯನ್ನು ಆರಿಸಿಕೊಂಡು ಬದುಕುವ ಸ್ವಾತಂತ್ರ್ಯವನ್ನು ಸಮಾನತೆಯನ್ನು ಆಕೆಗೆ ನಿರಾಕರಿಸಲಾಗಿದೆ. ಲಿಂಗ ತಾರತಮ್ಯದ ಮನುವಾದ, ಪುರುಷಾಧಿಪತ್ಯ, ಜಾತಿವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಹಲವು ಅಂಶಗಳು ಕಲೆತು ಬೆರೆತಿರುವ ಸಂಕೀರ್ಣ ವಿದ್ಯಮಾನವಿದು.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆದಿದೆ. ನಾಗರಾಜುವಿಗೆ ನ್ಯಾಯ ಕೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಯಾಕಿದ್ದಾರೆಂದರೆ ನಾಗರಾಜುವಿನ ಹಂತಕ ಒಬ್ಬ ಮುಸಲ್ಮಾನ. ಒಬ್ಬ ಹಿಂದು ಬಲಿಷ್ಠ ಜಾತಿಯವನು ನಾಗರಾಜುವನ್ನು ಕೊಂದಿದ್ದರೆ ನ್ಯಾಯ ಕೇಳುವವರೇ ದಿಕ್ಕಿರುತ್ತಿರಲಿಲ್ಲ. ಜಾತಿ ಎಂಬುದು ಸಾಮಾಜಿಕ ಅನಿಷ್ಟ. ಅರಿವು, ಅಧಿಕಾರ, ಆಸ್ತಿಪಾಸ್ತಿ, ಸಂಪನ್ಮೂಲಗಳು, ಘನತೆ ಗೌರವ, ಲೈಂಗಿಕ ದೃಷ್ಟಿಕೋನದ ನಿಯಂತ್ರಣ ಮತ್ತು ವಿತರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಿಡುಗು.

ಭಾರತೀಯ ಮುಸಲ್ಮಾನರೂ ಈ ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆಯ ಬಲಿಪಶುಗಳು. ಈ ಶ್ರೇಣಿಯ ತುತ್ತತುದಿಯಲ್ಲಿರುವವರು ಅಶ್ರಫ್ ಮುಸ್ಲಿಮರು. ಸೈಯದ್, ಶೇಖ್, ಮುಘಲ್, ಪಠಾಣ್ ಎಂದು ಕರೆದುಕೊಳ್ಳುವವರು ತಮ್ಮ ಮೂಲ ಪಶ್ಚಿಮ ಅಥವಾ ಮಧ್ಯ ಏಷ್ಯಾ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಭಾರತದ ಬಲಿಷ್ಠ ಜಾತಿಗಳಿಂದ ಇಸ್ಲಾಮಿಗೆ ಮತಾಂತರ ಹೊಂದಿದವರು ತಮ್ಮನ್ನು ಮುಸ್ಲಿಮ್ ರಜಪೂತ, ತಾಗಾ ಅಥವಾ ತ್ಯಾಗಿ ಮುಸ್ಲಿಮ್, ಗಾಢೆ ಅಥವಾ ಗೌಡ್ ಮುಸ್ಲಿಮರೆಂದು ಹೇಳಿಕೊಳ್ಳುತ್ತಾರೆ. ಸೈಯದ್ ಎಂದು ಕರೆದುಕೊಳ್ಳುವವರು ಹಿಂದು ವರ್ಣವ್ಯವಸ್ಥೆಯ ಬ್ರಾಹ್ಮಣ ಜಾತಿಗೆ ಸರಿಸಮಾನ. ಈ ಅಸಮಾನತೆಯನ್ನು ’ಸೈಯದ್ ವಾದ’ ಎಂದು ಕರೆಯಲಾಗಿದೆ. ಈ ಅಶ್ರಫ್ ಯಜಮಾನಿಕೆಯ ವಿರುದ್ಧ ಕೆಳವರ್ಗದ ಅಜ್ಲಾಫ್ (ಹಿಂದುಳಿದವರು) ಮತ್ತು ಅರ್ಜಲ್ (ದಲಿತರು) ಮುಸಲ್ಮಾನರು ಹೋರಾಟ ನಡೆಸಿದ್ದಾರೆ. ಭಾರತೀಯ ಮುಸಲ್ಮಾನರ ಪೈಕಿ ಸವರ್ಣೀಯರ ಪ್ರಮಾಣ ಶೇ.15. ಉಳಿದವರು ಹಿಂದುಳಿದ, ದಲಿತ ಹಾಗು ಬುಡಕಟ್ಟು ಮುಸ್ಲಿಮರು. ಮುಸಲ್ಮಾನರಲ್ಲಿ ಅಸ್ಪೃಶ್ಯತೆ ಆಚರಣೆಯೂ ಉಂಟು. ಸ್ಟ್ಯಾಲಿನ್ ಪದ್ಮಾ ಎಂಬ ಪ್ರತಿಭಾವಂತ ನಿರ್ಮಿಸಿರುವ ಹೊಳಪಿನ ಸಾಕ್ಷ್ಯಚಿತ್ರ ’ಇಂಡಿಯಾ ಅನ್‌ಟಚ್ಡ್’ (India Untouched) ಈ ಮಾತಿಗೆ ಜೀವಂತ ಸಾಕ್ಷ್ಯ ನುಡಿಯುತ್ತದೆ.

ಧೋಬಿ, ಲೋಹಾರ-ಬಧಯಿ, ಧುನಿಯಾ- ಮನ್ಸೂರಿ, ಕಸಾಯಿ-ಖುರೇಶಿ, ಫಕೀರ್-ಆಲ್ವಿ, ಹಜ್ಜಾಮ್-ಸಲ್ಮಾನಿ, ಮೆಹ್ತಾರ್-ಹಲಾಲ್ಖೋರ್, ಗ್ವಾಲ-ಘೋಸಿ, ದರ್ಜಿ-ಇದ್ರಿಸಿ, ಕುಂಜ್ರೆ-ರಯೀನ್, ಜುಲಾಹೆ-ಅನ್ಸಾರಿ ಸಮುದಾಯಗಳು ’ಪಸ್ಮಾಂದ’ ಅಸ್ಮಿತೆಯಡಿ ಒಟ್ಟಾಗಿವೆ. ಪಸ್ಮಾಂದ ಎಂದರೆ ಹಿಂದುಳಿಸಲಾಗಿರುವವರು ಎಂದು ಅರ್ಥ.

ಮುಸ್ಲಿಮ್ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಕ್ಷೇತ್ರಗಳಲ್ಲಿ ಕುಲೀನ ಮುಸ್ಲಿಮರದೇ ಪ್ರಾಬಲ್ಯ. 1952ರಲ್ಲಿ ರಚಿತವಾದ ಒಂದನೆಯ ಲೋಕಸಭೆಯಿಂದ 2004ರ 14ನೆಯ ಲೋಕಸಭೆಯ ತನಕ ಲೋಕಸಭೆಗೆ ಆಯ್ಕೆಯಾದ ಮುಸಲ್ಮಾನ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ 400. ಈ ಪೈಕಿ ಸವರ್ಣೀಯ ಅಶ್ರಫ್ ಮುಸಲ್ಮಾನರ ಸಂಖ್ಯೆ 340. ಈ ಹದಿನಾಲ್ಕು ಲೋಕಸಭೆಗಳಲ್ಲಿ ಆಯ್ಕೆಯಾದ ಪಸ್ಮಾಂದ ಮುಸಲ್ಮಾನರ ಸಂಖ್ಯೆ ಕೇವಲ 60.

2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಶ್ರಫ್ ಮುಸ್ಲಿಮರ ಪ್ರಮಾಣ ಶೇ.2.1. ಪಸ್ಮಾಂದ ಮುಸ್ಲಿಮರ ಪ್ರಮಾಣ ಶೇ.11.4. ಲೋಕಸಭೆಯಲ್ಲಿ ಅಶ್ರಫ್ ಮುಸಲ್ಮಾನರ ಪ್ರಾತಿನಿಧ್ಯ ಒಟ್ಟು ಪ್ರಾತಿನಿಧ್ಯದ ಶೇ.2.1ರಷ್ಟಿದ್ದರೆ, ಪಸ್ಮಾಂದ ಮುಸಲ್ಮಾನರ ಪ್ರಾತಿನಿಧ್ಯ ಶೇ.0.8.

ಭಾರತೀಯ ಮುಸಲ್ಮಾನರ ಜೊತೆ ಬೆರೆತು ಕೆಲಸ ಮಾಡುವ ಅನುಭವವೊಂದನ್ನು ಕಾನ್ಶೀರಾಮ್ ಅವರು ಹೀಗೆ ಬಣ್ಣಿಸಿದ್ದಾರೆ: “ಮುಸಲ್ಮಾನ ಸಮುದಾಯವನ್ನು ಅವರ ನಾಯಕರ ಮೂಲಕ ಸಂಪರ್ಕಿಸುವುದು ಮೇಲೆಂದು ಅಂದುಕೊಂಡೆ. ಸುಮಾರು 50 ಮಂದಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿದ ಬಳಿಕ ಅವರಲ್ಲಿನ ಬ್ರಾಹ್ಮಣ್ಯವನ್ನು ಕಂಡು ದಂಗಾದೆ. ಸಮಾನತೆಯನ್ನು ಸಾಧಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಇಸ್ಲಾಮ್ ಹೇಳಿಕೊಡುತ್ತದೆ. ಆದರೆ ಮುಸ್ಲಿಮ್ ನಾಯಕತ್ವದಲ್ಲಿ ಸೈಯದ್‌ಗಳು, ಶೇಖ್‌ಗಳು, ಮುಘಲರು ಹಾಗೂ ಪಠಾಣರಂತಹ ಬಲಿಷ್ಠ ಜಾತಿಗಳದೇ ಪ್ರಾಬಲ್ಯ. ಅನ್ಸಾರಿಗಳು, ಧುನಿಯಾಗಳು, ಖುರೇಶಿಗಳಂತಹ ಅಧೀನ ಜಾತಿಗಳು ತಮ್ಮ ಸಮಾನಕ್ಕೆ ಏರುವುದನ್ನು ಈ ಪ್ರಬಲ ಜಾತಿಗಳು ಸಹಿಸುವುದಿಲ್ಲ. ಹೀಗಾಗಿ ಹಿಂದೂ ಪರಿಶಿಷ್ಟ ಸಮುದಾಯಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಮುಸಲ್ಮಾನರನ್ನು (ಪಸ್ಮಾಂದ) ಮಾತ್ರವೇ ಪ್ರೋತ್ಸಾಹಿಸಿ ಬೆಳೆಸಲು ನಾನು ತೀರ್ಮಾನಿಸಿದೆ”. (’ಕಾನ್ಶೀರಾಮ್ ಕಿ ನೇಕ್ ಕಮಾಯಿ ಜಿಸ್ನೆ ಸೋಟಿ ಕ್ವಾಮ್ ಜಗಾಯಿ’ ಹೆಸರಿನ ಪುಸ್ತಕವೊಂದರಲ್ಲಿ ಸತ್ನಾಮ್ ಸಿಂಗ್ ಎಂಬ ಲೇಖಕರು ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ).

’ಹಿಂದೂ ಸಮಾಜದ ಅದೇ ಸಾಮಾಜಿಕ ಅನಿಷ್ಟಗಳು ಭಾರತೀಯ ಮುಸ್ಲಿಂ ಸಮಾಜಕ್ಕೂ ಬಡಿದುಕೊಂಡಿವೆ’ ಎಂಬ ಡಾ.ಅಂಬೇಡ್ಕರ್ ಅವರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹೈದರಾಬಾದ್ ಮಾರ್ಯಾದೆಹೀನ ಹತ್ಯೆ: ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕ್ರಿಮಿನಲ್ ಕೃತ್ಯ – ಅಸಾದುದ್ದೀನ್ ಓವೈಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hope this News is to get attention of anti communal minds.
    First off all know one is aware of arms act.
    They were using airguns which is permitted subject to permission from concerning authority.

    Some people fearing in kodagu.
    It’s so peaceful hear.

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...