ಮಧ್ಯಪ್ರದೇಶದ ಪನ್ನಾದಲ್ಲಿ ರಾಜಮನೆತನದ ಮಹಿಳೆ ಜಿತೇಶ್ವರಿ ದೇವಿಯನ್ನು ದೇವಸ್ಥಾನದ ನಿಯಮಗಳನ್ನು ಮೀರಿ ಗರ್ಭಗುಡಿ ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನದಿಂದ ಹೊರಹಾಕಿರುವ ಘಟನೆ ನಡೆದಿದೆ.
ಪ್ರತಿ ವರ್ಷ ಪನ್ನಾ ಜಿಲ್ಲೆಯ ಬುಂದೇಲ್ಖಂಡ್ ಪ್ರದೇಶದ ಜನಪ್ರಿಯ ಧಾರ್ಮಿಕ ಕ್ಷೇತ್ರವಾದ ಶ್ರೀ ಜುಗಲ್ ಕಿಶೋರ್ ದೇವಸ್ಥಾನದಲ್ಲಿ ಮಧ್ಯರಾತ್ರಿಯಲ್ಲಿ ಹಿಂದೂ ದೇವರು ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿ ಕೂಡ ಆಚರಿಸಲಾಗಿದೆ.
ದೇವಾಲಯದ ಅಧಿಕಾರಿಗಳ ಪ್ರಕಾರ, ಜಿತೇಶ್ವರಿ ದೇವಿಯು ಗರ್ಭಗುಡಿ ಪ್ರವೇಶಿಸಿ ಸ್ವತಃ ಆರತಿ ಮಾಡಬೇಕೆಂದು ಒತ್ತಾಯಿಸುವ ಮೂಲಕ ದೇವಾಲಯದ ಧಾರ್ಮಿಕ ಕ್ರಿಯೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆಗೆ ದೇವಸ್ಥಾನದಿಂದ ಹೊರ ನಡೆಯುವಂತೆ ಕೇಳುವ ಮತ್ತು ಅವರನ್ನು ದೇವಸ್ಥಾನದಿಂದ ಹೊರ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸುವುದು ಕಂಡು ಬಂದಿದೆ.
ಪನ್ನಾ ಪೊಲೀಸ್ ಅಧೀಕ್ಷಕ ಸಾಯಿ ಕೃಷ್ಣ ಎಸ್ ತೋಟಾ ಅವರು ಈ ಕುರಿತು ಮಾತನಾಡಿದ್ದು, ಸಂಪ್ರದಾಯದಂತೆ, ರಾಜಮನೆತನದ ಪುರುಷರು ಮಾತ್ರ ದೇವಾಲಯದಲ್ಲಿ ಜನ್ಮಾಷ್ಟಮಿ ಸಮಯದಲ್ಲಿ ಶುಚಿಗೊಳಿಸುವ ಆಚರಣೆಯಾದ “ಚಾನ್ವಾರ್” ನ್ನು ಅರ್ಪಿಸುತ್ತಾರೆ. ಜಿತೇಶ್ವರಿ ದೇವಿಯ ಮಗನಿಗೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಕಾರಣ, ಅವರೇ ಸ್ವತಃ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಂಡರು ಎಂದು ಹೇಳಿದ್ದಾರೆ.
ಇದೀಗ ಆಕೆಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮಧ್ಯಪ್ರದೇಶ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪೊಲೀಸರು ಕರೆದುಕೊಂಡು ಹೋಗುವಾಗ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಜಿತೇಶ್ವರಿ ದೇವಿ ಅವರು ಗಂಭೀರ ಆರೋಪ ಮಾಡಿದ್ದು, ರಕ್ಷಣಾ ಕಲ್ಯಾಣ ನಿಧಿಯಿಂದ ಪನ್ನಾದಲ್ಲಿ 65,000 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಆಪಾದಿತ ಹಗರಣದ ಬಗ್ಗೆ ಧ್ವನಿಯೆತ್ತಿದ್ದಕ್ಕಾಗಿ ತನ್ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಒಳಚರಂಡಿ ಸ್ವಚ್ಛಗೊಳಿಸುವಾಗ ಇಬ್ಬರು ದಲಿತ ಕಾರ್ಮಿಕರು ಉಸಿರುಗಟ್ಟಿ ಸಾವು