ಉತ್ತರ ಪ್ರದೇಶದ ಪೊಲೀಸರು ಮಹಿಳೆಯರ ಮೇಲೆ ಲಾಠಿ ಪ್ರಹಾರ ನಡೆಸಿ, ಅವ್ಯಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೊಲೀಸರ ವರ್ತನೆಗೆ ಜನಾಕ್ರೋಶ ವ್ಯಕ್ತವಾಗಿದೆ.
ಮಹಿಳೆಯರು ತಮ್ಮ ವಾಹನದ ಮೇಲೆ ಕಲ್ಲುಗಳನ್ನು ತೂರಲು ಆರಂಭಿಸಿದ ಬಳಿಕ ಸಣ್ಣಮಟ್ಟದಲ್ಲಿ ಬಲಪ್ರಯೋಗ ಮಾಡಲಾಯಿತು ಎಂದು ಪೊಲೀಸರು ಸಮರ್ಥನೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ಪುರದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಬಿ.ಆರ್.ಅಂಬೇಡ್ಕರ್ರವರ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ವಿರುದ್ಧ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಪ್ರತಿಮೆ ಇರುವ ಜಾಗಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲಾಗುತ್ತಿದೆ.
#Video | UP Cops Rain Blows On Women, Police Say They Threw Stones pic.twitter.com/UKI7ybGy9m
— NDTV (@ndtv) November 7, 2022
ಸದರಿ ಸ್ಥಳದಲ್ಲಿ ಮಹಿಳೆಯರ ಗುಂಪು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಮಹಿಳೆಯರನ್ನು ಚದುರಿಸಲು ಭಾನುವಾರ ಆಗಮಿಸಿದ್ದರು. ಪೊಲೀಸರ ಪ್ರಕಾರ, ಕೆಲವು ಪ್ರತಿಭಟನಾಕಾರರು ಹಿರಿಯ ಅಧಿಕಾರಿ ಸೇರಿದಂತೆ ಪೊಲೀಸರ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದರು.
ಕೆಲವು ಮಹಿಳೆಯರು ಮಹಿಳಾ ಪೊಲೀಸ್ ಸಿಬ್ಬಂದಿಯ ಕೂದಲಿಗೆ ಕೈಹಾಕಿ ಹಲ್ಲೆ ನಡೆಸಿದ್ದಾರೆಂಬ ಆರೋಪಗಳೂ ಬಂದಿವೆ.
“ಗೊಂದಲದ ಸಮಯದಲ್ಲಿ, ಕೆಲವು ಪ್ರತಿಭಟನಾಕಾರರು ಪೊಲೀಸ್ ಕಾರಿನ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು. ಆಗ ಪೊಲೀಸರು ಸಣ್ಣಮಟ್ಟದಲ್ಲಿ ಕ್ರಮ ಜರುಗಿಸಿದ್ದಾರೆ” ಎಂದು ಅಂಬೇಡ್ಕರ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.