Homeಕರ್ನಾಟಕಯಮಕನಮರಡಿ: ವಿಚಾರವಾದಿ ರಾಜಕಾರಣಿ ಸತೀಶ್ ಜಾರಕಿಹೊಳಿ ಸೋಲಿಸಲು ಸಂಘ ಪರಿವಾರ ಸ್ಕೆಚ್!

ಯಮಕನಮರಡಿ: ವಿಚಾರವಾದಿ ರಾಜಕಾರಣಿ ಸತೀಶ್ ಜಾರಕಿಹೊಳಿ ಸೋಲಿಸಲು ಸಂಘ ಪರಿವಾರ ಸ್ಕೆಚ್!

- Advertisement -
- Advertisement -

ಯಮಕನಮರಡಿ ವಿಧಾನಸಭಾ ಕ್ಷೇತ್ರ ಪಶ್ಚಿಮಘಟ್ಟದ ತಪ್ಪಲಲ್ಲಿ ಮೈಚಾಚಿಕೊಂಡಿರುವ ಗುಡ್ಡಗಾಡು ಪ್ರದೇಶ. ಕೃಷಿ ಕಾಯಕದಿಂದ ಬದುಕುಕಟ್ಟಿಕೊಂಡಿರುವ ಈ ರೈತಾಪಿ ವರ್ಗದ ಸೀಮೆ ಬಂಧುತ್ವ ವರ್ಸೆಸ್ ಹಿಂದುತ್ವದ “ಧರ್ಮಯುದ್ಧ”ದಿಂದಾಗಿ ರಾಜ್ಯದ ಗಮನ ಸೆಳೆದಿರುವ ಪ್ರತಿಷ್ಠೆಯ ರಣಕಣವಾಗಿದೆ. ಸೋಗಲಾಡಿ ಸನಾತನ ಸಂಪ್ರದಾಯ ಆಚರಣೆಯ ಅಪಾಯದ ಅರಿವು ಮೂಡಿಸುತ್ತಿರುವ ವಿಚಾರವಾದಿ ರಾಜಕಾರಣಿ ಎಂಬ ಹೆಗ್ಗಳಿಕೆಯ ಸತೀಶ್ ಜಾರಕಿಹೊಳಿ ಸಹಜವಾಗಿಯೇ ಹಿಂದುತ್ವವಾದಿ ಪಡೆಯ ಕಣ್ಣುರಿಗೆ ಕಾರಣರಾಗಿದ್ದಾರೆ. “ಮಾನವ ಬಂಧುತ್ವ ವೇದಿಕೆ” ಕಟ್ಟಿಕೊಂಡು ಪುರೋಹಿತಶಾಹಿ ಶೋಷಣೆ ಮತ್ತು ಮೂಢನಂಬಿಕೆ ವಿರುದ್ಧ ಸಮರ ಸಾರಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ-ಶಾಸಕ ಸತೀಶ್ ಜಾರಕಿಹೊಳಿ ಸೋಲಿಸಲು ಸಂಘ ಪರಿವಾರ ಟೊಂಕಕಟ್ಟಿ ನಿಂತಿದೆ.

ವೈದಿಕ, ಜ್ಯೋತಿಷ್ಯ ಸಂಪ್ರದಾಯದಲ್ಲಿ ಅಶುಭ-ಅನಿಷ್ಟವೆಂದು ಪರಿಗಣಸಲ್ಪಟ್ಟಿರುವ “ರಾಹುಕಾಲ”ದಲ್ಲಿಯೇ ಕಠಿಣ ಕೆಲಸಕ್ಕೆ ಕೈಹಾಕುವುದು ಮತ್ತು ಸ್ಮಶಾನದಲ್ಲಿ ಜತೆಗಾರರೊಂದಿಗೆ ರಾತ್ರಿ ವಾಸ್ತವ್ಯ ಮಾಡುವಂಥ ವೈಚಾರಿಕ-ಕ್ರಾಂತಿಕಾರಕ ಮತ್ತು ಸಹಿಷ್ಣುತೆ-ಸಹಬಾಳ್ವೆ ಪ್ರೇರೇಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಸತೀಶ್ ಜಾರಕಿಹೊಳಿ ಇತ್ತೀಚಿನ ವರ್ಷದಲ್ಲಿ ಅಮಾಯಕರಲ್ಲಿ ಧಾರ್ಮಿಕ ಭಯಬಿತ್ತಿ ಹೊಟ್ಟೆಹೊರೆದುಕೊಳ್ಳುವ ಪುರೋಹಿತಶಾಹಿ ಪಂಗಡಕ್ಕೆ ತಲೆನೋವಾಗಿದ್ದಾರೆ. ಈಚೆಗೆ ಸತೀಶ್ ಜಾರಕಿಹೊಳಿ ‘ಹಿಂದೂ ಶಬ್ದ ಪರ್ಷಿಯನ್ ಮೂಲದ್ದು; ಅದಕ್ಕೆ ಅಶ್ಲೀಲ ಎಂಬರ್ಥವಿದೆ’ ಎಂದು ನಿಪ್ಪಾಣಿಯ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದು ಹಿಂದುತ್ವ ‘ಲೋಕ’ದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು!

ಇದನ್ನೂ ಓದಿರಿ: ಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

ಮಹಾರಾಷ್ಟ್ರ ಕಡೆಯ ಅತ್ಯುಗ್ರ ಕಾವಿಧಾರಿಗಳಾದಿಯಾಗಿ ಸನಾತನ ಸಂಘಟನೆಯ ಹಲವು ಪ್ರಚೋದನಾತ್ಮಕ ಮಾತುಗಾರರು ಯಮಕನಮರಡಿಗೆ ಬಂದು ಜಾರಕಿಹೊಳಿಯನ್ನು 2023ರ ಅಸೆಂಬ್ಲಿ ಚುನಾವಣೆಯಲ್ಲಿ ಹಿಮ್ಮೆಟ್ಟಿಸುವ ಭೀಷಣ ಭಾಷಣ ಬಿಗಿದುಹೋಗಿದ್ದರು; ಹಿಂದುತ್ವ ಹೀರೋ ಆಗುವ ಭರದಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಾರೆಂದು ಆರೋಪಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳರಂಥವರು ಯಮಕನಮರಡಿಯಲ್ಲಿ ನಖಶಿಖಾಂತ ಉರಿದುಬಿದ್ದಿದ್ದರು. ಆ ಮೂಲಕ ಹಿಂದುತ್ವಕ್ಕೆ ಪ್ರಬಲ ತೊಡಕಾಗಿರುವ ಸತೀಶ್ ಜಾರಕಿಹೊಳಿಯನ್ನು ಕಟ್ಟಿಹಾಕುವ ಧರ್ಮಕಾರಣದ ಸರಣಿ ತಂತ್ರಗಾರಿಕೆಗಳು ಆರೆಂಟು ತಿಂಗಳುಗಳಿಂದ ಕ್ಷೇತ್ರದಲ್ಲಿ ಬಹಿರಂಗ-ರಹಸ್ಯವಾಗಿ ನಡೆಯುತ್ತಲೇ ಇದೆ. ಹಿಂದುಳಿದ ವರ್ಗದ ಕಾಳಜಿಯ ಕಾರ್ಯವೈಖರಿಯ ನೆಲೆಯಲ್ಲಿ ಅಹಿಂದ ವರ್ಗವನ್ನು ಪ್ರಭಾವಿಸುವ ಸತೀಶ್ ಜಾಕಿಹೊಳಿಯನ್ನು ಹಿಂದೂ ವಿರೋಧಿಯೆಂದು ಬಿಂಬಿಸಿ ಮಣಿಸುವ ಸಂಘ ಪರಿವಾರದ ಹಿಕಮತ್ತಿನ ಹಿನ್ನಲೆಯಲ್ಲಿ ಯಮಕನಮರಡಿ ಚುನಾವಣಾ ಕದನ ಕುತೂಹಲಕರವಾಗಿದೆ.

ಪಿಚ್ ಹೇಗಿದೆ?

ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಾಂಡೇಯ ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೀವ ನದಿಗಳು. ಕೃಷಿ ಆಧಾರಿತ ಆರ್ಥಿಕತೆಯ ಈ ಪ್ರದೇಶದಲ್ಲಿ ಮುಖ್ಯವಾಗಿ ಕಬ್ಬು, ಹತ್ತಿ, ಕಡಲೆ ಮತ್ತು ತರಕಾರಿ ಬೆಳೆಯಲಾಗುತ್ತಿದೆ. ಉದ್ಯೋಗ ಮತ್ತು ಶಿಕ್ಷಣ ಅರಸುತ್ತ ಯುವಸಮೂಹ ಬೆಳಗಾವಿ ಮತ್ತು ಮಹಾರಾಷ್ಟ್ರದ ಕೆಲವು ನಗರಗಳತ್ತ ಗುಳೆಹೋಗುತ್ತಿದೆ. ಕೃಷಿ, ಶಿಕ್ಷಣ ಮತ್ತು ಔದ್ಯೋಗಿಕ ವಲಯದಲ್ಲಿ ಸಮಸ್ಯೆ ತಾಂಡವಾಡುತ್ತಿದೆ. ಜಿಲ್ಲೆಯಲ್ಲಿ ತೀರಾ ಹಿಂದುಳಿದ ಪ್ರದೇಶವಾಗಿರುವ ಯಮಕನಮರಡಿಯಲ್ಲಿ ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿರುವ ಹಳ್ಳಿಗಳಿವೆ; ಖರೀದಿಸಿ ನೀರು ಕುಡಿಯವ ಪರಿಸ್ಥಿತಿ ಇದೆ. ಕಳೆದ ಹದಿನೈದು ವರ್ಷದಿಂದ ಕ್ಷೇತ್ರವನ್ನು ಪ್ರಗತಿಯ ಹಳಿಗೇರಿಸಿರುವ ಸತೀಶ್ ಜಾರಕಿಹೊಳಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ; ಆದರೆ ನೀರಾವರಿ ಯೋಜನೆಗಳನ್ನು ಆದ್ಯತೆಯಿಂದ ಮಾಡಿಮುಗಿಸಬೇಕಿದೆ ಎಂದು ಜನರು ಹೇಳುತ್ತಾರೆ. ಕ್ಷೇತ್ರದೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿರುವ “ಸತೀಶ್ ಸಾಹುಕಾರ್” ಎಂದರೆ ಬಹಪಾಲು ಜನರಿಗೆ ಅಚ್ಚುಮೆಚ್ಚು; ಆದರೆ ಹೋಬಳಿ ಮಟ್ಟದ ಹಿಂಬಾಲಕರ ಹುಚ್ಚಾಟದಿಂದ ಜಾರಕಿಹೊಳಿಗೆ ಕೆಟ್ಟಹೆಸರು ಬಂದಿದೆ ಎಂಬ ಮಾತು ಕೇಳಿಬರುತ್ತಿದೆ.

2007ರಲ್ಲಿ ಮಾಡಲಾದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಕ್ಷೇತ್ರ ಯಮಕನಮರಡಿ. ಹುಕ್ಕೇರಿ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಯಮಕನಮರಡಿಯ ಸುತ್ತಲಿನ ಗ್ರಾಮಾಂತರ ಪ್ರದೇಶಗಳೊಂದಿಗೆ ಬೆಳಗಾವಿಯ ಕೆಲವು ಹಳ್ಳಿಗಳನ್ನು ಸೇರಿಸಿ ಹೊಸ ಕ್ಷೇತ್ರ ರಚಿಸಲಾಯಿತು. ಅದುವರೆಗೆ ಸತೀಶ್ ಜಾರಕಿಹೊಳಿ ಅವರ ಅಣ್ಣ ರಮೇಶ್ ಜಾರಕಿಹೊಳಿ ಪ್ರತಿನಿಧಿಸುತ್ತಿದ್ದ ಗೋಕಾಕ್‌ನ ಪರಿಶಿಷ್ಟ ಪಂಗಡ ಮೀಸಲಾತಿ ತೆಗೆದು ಸಾಮಾನ್ಯ ಕ್ಷೇತ್ರವಾಗಿ ಮಾರ್ಪಡಿಸಲಾಯಿತು; ಆ ಎಸ್ಟಿ ಮೀಸಲಾತಿಯನ್ನು ಯಮಕನಮರಡಿಗೆ ನಿಗದಿ ಪಡಿಸಲಾಯಿತು.

ಯಮಕನಮರಡಿ ಹುಟ್ಟಿದಾರಭ್ಯ ವ್ಯಕ್ತಿನಿಷ್ಠ ಕ್ಷೇತ್ರವಾಗಿದೆ. ಎಸ್ಸಿ-ಎಸ್ಟಿ ಪ್ರಥಮ ಬಹುಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ಮೇಲ್ವರ್ಗದ ಜಾತಿ ಪ್ರತಿಷ್ಠೆಯ “ಆಟ” ನಡೆಯದು. ಅಹಿಂದ ಮತಗಳನ್ನು ಕ್ರೋಢೀಕರಿಸುವ ಚಾಕಚಕ್ಯತೆಯ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರ ಉದಯವಾದಂದಿಂದ ಶಾಸಕನಾಗಿ ಪ್ರತಿನಿಧಿಸುತ್ತಿದ್ದಾರೆ. ಯಮಕನಮರಡಿಯಲ್ಲಿ ಒಟ್ಟು 1,90,339 ಮತದಾರರಿದ್ದಾರೆ; ಇದರಲ್ಲಿ ಎಸ್ಸಿ-ಎಸ್ಟಿ-70,000, ಮರಾಠ-40,000, ಲಿಂಗಾಯತ-20,000, ಮುಸ್ಲಿಮ್-15,000, ಜೈನ್-10,000, ನೇಕಾರ ಮತ್ತು ಬ್ರಾಹ್ಮಣರು ತಲಾ 6,000 ಜತೆಗೆ ಇತರ ಒಬಿಸಿಗಳು 20,000 ಇರಬಹುದೆಂದು ಅಂದಾಜಿಸಲಾಗಿದೆ.

ಸಾಹುಕಾರ್ ಸಾಮ್ರಾಜ್ಯ

ಹ್ಯಾಟ್ರಿಕ್ ದಿಗ್ವಿಜಯ ಸಾಧಿಸಿರುವ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಮನುಷ್ಯ ಸಂಬಂಧಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆಂಬ ಮಾತು ಎಲ್ಲೆಡೆ ಕೇಳಿಬರುತ್ತದೆ; ಬಸವ-ಬುದ್ಧ-ಅಂಬೇಡ್ಕರ್ ತತ್ವ-ಸಿದ್ಧಾಂತದ ಮಂತ್ರ ಪಠಿಸುತ್ತ ಬೆಳಗಾವಿ ಜಿಲ್ಲಾ ರಾಜಕಾರಣದ ಆಯಕಟ್ಟಿನ ಪ್ರಭಾವಿ-ಮಹತ್ವದ ರಾಜಕಾರಣಿಯಾಗಿ ರೂಪುಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಸಕ್ಕರೆ ಉದ್ಯಮ ಲಾಬಿಯ ಮೃದು ಸ್ವಭಾವದ ಚತುರ ರಾಜಕಾರಣಿ ಎಂದು ಚಿರಪರಿಚಿತರಾಗಿರುವ ಸತೀಶ್ ಜಾರಕಿಹೊಳಿ ಮತ್ತವರ ಸುದ್ದಿ-ಸದ್ದು ಮಾಡುತ್ತಿರುವ ಅಣ್ಣ ರಮೇಶ್ ಜಾರಕಿಹೊಳಿ ನಡೆ-ನಡಿಯಲ್ಲಿ ಅಜಗಜಾಂತರ ವ್ಯತ್ಯಾಸ. ಅಣ್ಣನದು ಸ್ವಪ್ರತಿಷ್ಠೆ ಗೊಂದಲದ ರಾಜಕಾರಣವಾದರೆ, ತಮ್ಮನದು ಸೈದ್ಧಾಂತಿಕ ಸ್ಪಷ್ಟತೆಯ ನೀತಿ-ನಿಲುವು ಎಂದು ಜಾರಕಿಹೊಳಿ ಬ್ರದರ್ಸ್ “ಪರ್ವ”ವನ್ನು ಹತ್ತಿರದಿಂದ ಕಂಡ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಸತೀಶ್ ಜಾರಕಿಹೊಳಿ ಅಧಿಕಾರ ರಾಜಕಾರಣ ಶುರುವಾಗಿದ್ದು ಜನತಾ ಪರಿವಾರದ ಮೂಲಕ; ಅಂದಿನಿಂದಲೂ ಸಿದ್ದರಾಮಯ್ಯರ ನಿಷ್ಠಾವಂತ ಅನುಯಾಯಿಯಾಗಿದ್ದ ಸತೀಶ್ ಜಾರಕಿಹೊಳಿ ಅಣ್ಣ ರಮೇಶ್ ಜಾರಕಿಹೊಳಿ ವಿಧಾನಸಭೆ ಪ್ರವೇಶಿಸುವುದಕ್ಕಿಂತ ಕೊಂಚ ಮೊದಲೇ ವಿಧಾನ ಪರಿಷತ್‌ಗೆ ಪಾದಾರ್ಪಣೆ ಮಾಡಿದ್ದರು. 1998ರಿಂದ 2008ರ ತನಕ ಎಮ್ಮೆಲ್ಸಿಯಾಗಿದ್ದ ಸತೀಶ್ ಜಾರಕಿಹೊಳಿ ಅಣ್ಣನಿಗಿಂತ ಮುಂಚೆಯೆ ಮಂತ್ರಿಯೂ ಆಗಿದ್ದರು. ಧರ್ಮಸಿಂಗ್(ಕಾಂಗ್ರೆಸ್)- ಸಿದ್ದರಾಮಯ್ಯ(ಜೆಡಿಎಸ್) ಸರಕಾರದಲ್ಲಿ ಜವಳಿ ಸಚಿವರಾಗಿದ್ದರು. ಸಿದ್ದರಾಮಯ್ಯರ ಸಂಗಡ ಕಾಂಗ್ರೆಸ್ ಸೇರಿದ್ದ ಸತೀಶ್ 2008ಲ್ಲಿ ಜೆಡಿಎಸ್‌ನ ಬಾಳಗೌಡ ಪಾಟೀಲ್‌ರನ್ನು 16,961 ಮತಗಳಿಂದ ಮಣಿಸಿ ಮೊದಲ ಬಾರಿ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಎಮ್ಮೆಲ್ಲೆಯಾದರು; 2013ರಲ್ಲಿ ಬಿಜೆಪಿಯ ಮಾರುತಿ ಅಷ್ಟಗಿ ವಿರುದ್ಧ ಭರ್ಜರಿ 24,350 ಮತದಂತರದಿಂದ ವಿಜಯಿಯಾದರು. ಸಿದ್ದರಾಮಯ್ಯನವರ ಸರಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದ ಸತೀಶ್ ತನಗೆ ಆ ಇಲಾಖೆ ಹೊಂದಿಕೆಯಾಗುವುದಿಲ್ಲ; ಬೇರೆ ಖಾತೆ ಕೊಡಿಯೆಂದು ತಗಾದೆ ತೆಗೆದು ಸಂಪುಟದಿಂದ ಹೊರನಡೆದರು. ಸತೀಶ್ ಖಾಲಿ ಮಾಡಿದ್ದ “ಜಾರಕಿಹೊಳಿ ಫ್ಯಾಮಿಲಿ ಕೋಟಾ”ವನ್ನು ರಮೇಶ್ ಜಾರಕಿಹೊಳಿಗೆ ಮಂತ್ರಿ ಮಾಡುವ ಮೂಲಕ ಸಿದ್ದು ತುಂಬಿಕೊಂಡಿದ್ದರು.

ರಾಹುಕಾಲಕ್ಕೆ ಸೆಡ್ಡು!

ಮೂಢನಂಬಿಕೆ ಮತ್ತು ಗೊಡ್ಡು ಸಂಪ್ರದಾಯದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿರುವ ಸತೀಶ್ ಜಾರಕಿಹೊಳಿ ಕಂದಾಚಾರವನ್ನು ಸಾರ್ವಜನಿಕವಾಗಿಯೇ ಧಿಕ್ಕರಿಸಿ ತಾವೇ ಮಾದರಿಯಾಗುತ್ತಿದ್ದಾರೆ. 2018ರ ಚುನಾವಣೆ ಹೊತ್ತಲ್ಲಿ ಸತೀಶ್ ಜಾರಕಿಹೊಳಿ ವೈದಿಕ ಸಂಪ್ರದಾಯದ ಪ್ರಕಾರ ಕೇಡುಗಾಲವೆಂದು ಪರಿಗಣಿತವಾಗಿರುವ “ರಾಹುಕಾಲ”ದಲ್ಲಿ ನಾಮಪತ್ರ ಸಲ್ಲಿಸಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲ ಕ್ಷೇತ್ರದಲ್ಲಿ ಅಭ್ಯರ್ಥಿ ಪ್ರಚಾರ ಮಾಡದೇ ಗೆಲ್ಲಬಹುದೆಂಬ ಯಶಸ್ವಿ ಪ್ರಯೋಗವನ್ನೂ ಮಾಡಿದ್ದರು. ನಾಮಪತ್ರ ಸಲ್ಲಿಸಿದ ನಂತರ ನೇರ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಬಾದಾಮಿಗೆ ಹೋಗಿದ್ದ ಸತೀಶ್ ಜಾರಕಿಹೊಳಿ ಬಂದಿದ್ದು ಮತದಾನದ ದಿನ; ಆ ಚುನಾವಣೆಯಲ್ಲಿ ತೀರಾ ಸಣ್ಣ ಅಂತರದಿಂದ (2,850) ಬಚಾವಾಗಿದ್ದರು! ಇದು ರಾಹುಕಾಲದ ಮಹಿಮೆಯೆಂದು ಕರ್ಮಠರು ಡಂಗುರ ಸಾರಿದ್ದರು. “ನಾನು ಕ್ಷೇತ್ರದಲ್ಲಿ ಇಲ್ಲದಿದ್ದುದರಿಂದ ಹಿನ್ನಡೆಯಾಗಿದೆ; ಮುಂದಿನ ಬಾರಿ ಹೆಚ್ಚು ಲೀಡ್‌ನಲ್ಲಿ ಗೆದ್ದು ತೋರಿಸ್ತೇನೆ” ಎಂದು ಸತೀಶ್ ಹೇಳಿದ್ದರು.

ಈ ಬಾರಿಯೂ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸಿದ್ದಷ್ಟೇ ಅಲ್ಲ, ಸ್ಮಶಾನದಿಂದ ಪ್ರಚಾರ ಪ್ರಾರಂಭಿಸಿದ್ದಾರೆ. ಕ್ಷೇತ್ರದ ಉದ್ದಗಲಕ್ಕೆ ಓಡಾಡುತ್ತ ದಾಖಲೆಯ ಮತದಿಂದ ಗೆಲ್ಲುವ ಸ್ಕೆಚ್ ಹಾಕಿದ್ದಾರೆಂಬ ಮಾತು ಕೇಳಿಬರುತ್ತಿದೆ. ಅಪ್ಪನ ಪ್ರತಿಷ್ಠೆ ಉಳಿಸಲು ಮಗಳು ಮತ್ತು ಮಗ ಆಖಾಡಕ್ಕೆ ಇಳಿದಿದ್ದಾರೆ. ರಾಜಕೀಯದಲ್ಲಿ ಅಸಕ್ತಿಯಿರುವ ಮಗಳು ಪ್ರಿಯಾಂಕ ಚುನಾವಣೆಗೆ ಮೊದಲಿನಿಂದ ಯಮಕನಮರಡಿ ಕ್ಷೇತ್ರದಲ್ಲಿ ಸಂಪರ್ಕ ಸಾಧಿಸಿದ್ದಾರೆ. ಸತೀಶ್ ಜಾರಕಿಹೊಳಿ ಪ್ರಭಾವ ಕುಗ್ಗಿಸಲು ಸಂಘಿ ಪಡೆ ಹಿಂದುತ್ವದ ದಾಳ ಉರುಳಿಸುತ್ತಿದೆ. ನಿಪ್ಪಾಣಿ ಸಭೆಯಲ್ಲಿ ಸತೀಶ್ ಹಿಂದೂ- ಹಿಂದುತ್ವ ಪದದ ಒಂದು “ಅರ್ಥ” ಹೇಳಿದ್ದೇ ಬಿಜೆಪಿಗರಿಗೆ “ಅಸ್ತ್ರ”ವಾಗಿದೆ. ಹಿಂದುತ್ವದ ಫೈರ್ ಬ್ರಾಂಡ್-ಯುಪಿ ಸಿಎಂ ಆದಿತ್ಯನಾಥ್ ಆರ್ಭಟಿಸಿ ಹೋಗಿದ್ದಾರೆ.

ಬಿಜೆಪಿಗೆ ಮೂರನೆ ಸ್ಥಾನ?

ಬಿಜೆಪಿ ಭೂಪರು ಮತ್ತು ಸಂಘಿ ಸರದಾರರು ಅದೆಷ್ಟೇ ಜೋರಾಗಿ ಓಡಾಡಿದರೂ ಸತೀಶ್ ಜಾರಕಿಹೊಳಿ ಬೆನ್ನು ಹಿಡಿಯಲಾಗುತ್ತಿಲ್ಲ. ಮತ ಧ್ರುವೀಕರಣ ತಂತ್ರಗಾರಿಕೆ ಪ್ರಯೋಜನಕ್ಕೆ ಬರುತ್ತಿಲ್ಲ. ಕ್ಷೇತ್ರದಲ್ಲಿ ಜಾರಕಿಹೊಳಿ ಬಗ್ಗೆ ಒಲವಿದೆ; ಕೆಲಸಗಾರ, ಜನಸಾಮಾನ್ಯರಿಗೆ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯವಿದೆ. ಜಾರಕಿಹೊಳಿಯ ಪ್ರಭಾವಳಿಯ ಪ್ರಖರತೆಗೆ ಬಿಜೆಪಿ ಕ್ಯಾಂಡಿಡೇಟ್ ಬಸವರಾಜ್ ಹುಂದ್ರಿ ಬಸವಳಿಯುತ್ತಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ. ಕಳೆದ ಬಾರಿ ಪ್ರಬಲ ಪೈಪೋಟಿ ಕೊಟ್ಟಿದ್ದ ಬಿಜೆಪಿಯ ಮಾರುತಿ ಅಷ್ಟಗಿ ತನ್ನ ತಾಕತ್ತಿನಿಂದಲೇ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿದ್ದವರು. ಆದರೆ ಅಷ್ಟಗಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅಷ್ಟಗಿ ಅಳುತ್ತಾ ಬಿಜೆಪಿಗೆ ವಿದಾಯ ಹೇಳಿ ಜೆಡಿಎಸ್ ಹುರಿಯಾಳಾಗಿದ್ದಾರೆ. ಗುಡ್ಡಗಾಡು ಭಾಗದಲ್ಲಿ ಜಾರಕಿಹೊಳಿಗಿರುವ ಹಿಡಿತ ತಪ್ಪಿಸುವ ಲೆಕ್ಕಾಚಾರದಿಂದ ಬಿಜೆಪಿ ಜಿಲ್ಲಾ ಮುಖಂಡರು ಬಸವರಾಜ್ ಹುಂದ್ರಿ ಹೆಸರು ಶಿಫಾರಸ್ಸು ಮಾಡಿದ್ದರೆನ್ನಲಾಗುತ್ತಿದೆ. ಹುಂದ್ರಿ ಗುಡ್ಡಗಾಡು ಪ್ರದೇಶದವರು. ಆದರೆ ಉಳಿದೆಡೆ ಅಪರಿಚಿತ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆೆ.  ಕಾರ್ತಕರ್ತರ ದೊಡ್ಡ ಪಡೆ ಕಟ್ಟಿಕೊಂಡು ಹೋಗಿರುವುದು ಬಿಜೆಪಿ ಪ್ರಚಾರಕ್ಕೆ ತೊಡಕಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿರಿ: ವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?

ಯಮಕನಮರಡಿಯಲ್ಲಿ ತ್ರಿಕೋನ ಕಾಳಗ ಏರ್ಪಟ್ಟಿದೆ; ಬಿಜೆಪಿಗೆ ಸೆಡ್ಡು ಹೊಡೆದು ಜೆಡಿಎಸ್‌ನಿಂದ ಅಖಾಡಕ್ಕೆ ಧುಮುಕಿರುವ ಅಷ್ಟಗಿ ಬಿಜೆಪಿ ಮತದ ಬುಟ್ಟಿಗೆ ಕೈಹಾಕಿ ಕುಂತಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಬಿಟ್ಟು ಬೇರೆ ಮತಗಳನ್ನು ಸ್ವಂತ ತಾಕತ್ತಿನಿಂದ ಸೆಳೆಯಲು ಚುನಾವಣಾ ಯುದ್ಧಕ್ಕೆ ಹೊಸಬರಾದ ಹುಂದ್ರಿಯಿಂದ ಆಗುತ್ತಿಲ್ಲ. ಭರಾಟೆ ಜೋರಾಗುತ್ತಿರುವ ರಣಕಣದಲ್ಲಿ ಜಾತಿ ಸಮೀಕರಣವಾಗಲಿ, ಧರ್ಮಕಾರಣವಾಗಲಿ ವರ್ಕ್ಔಟ್ ಆಗುತ್ತಿಲ್ಲ. ವ್ಯಕ್ತಿ ವರ್ಚಸ್ಸು ಮತ್ತು ಪ್ರಗತಿಯ ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಸಮರ ನಡೆಯುತ್ತಿದೆ. ಐಎಎಸ್, ಕೆಎಎಸ್, ಸೈನಿಕ, ಪೊಲೀಸ್, ಕಲೆ ಮತ್ತು ಜೀವನೋಪಾಯದ ವಿವಿಧ ಕೌಶಲ್ಯ ತರಬೇತಿಯನ್ನು ಯುವಜನರಿಗೆ ಉಚಿತವಾಗಿ ನೀಡುವ ತರಬೇತಿ ಕೇಂದ್ರ ಅಲ್ದಾಳ್ ಗೆಸ್ಟ್ ಹೌಸ್ ಮತ್ತು ಘಟಪ್ರಭಾ ಸೇವಾದಳವನ್ನು ಸತೀಶ್ ಫೌಂಡೇಶನ್‌ನಿಂದ ನಡೆಸಲಾಗುತ್ತಿರುವುದು ಸತೀಶ್ ಜಾರಕಿಹೊಳಿಯವರ ಮತ ಕೊಯ್ಲಿಗೆ ಅನುಕೂಲಕರವಾಗಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಸತತ ಮೂರು ಬಾರಿ ಗೆದ್ದು ಪಿಚ್ ಮರ್ಮ ಅರಿತಿರುವ ಬಲಾಢ್ಯ ಸತೀಶ್ ಜಾರಕಿಹೊಳಿ ಹಿಂದಿಕ್ಕಲು ದುರ್ಬಲ ಪ್ರತಿಸ್ಪರ್ಧಿಗಳಿಗೆ ಸಾಧ್ಯವಾಗುತ್ತಿಲ್ಲ. ನಿರ್ಣಾಯಕವಾಗಿರುವ ಮರಾಠ ಮತದಾರರ ನಿಕಟ ಸಂಪರ್ಕವಿರುವ ಸತೀಶ್ ಜಾರಕಿಹೊಳಿ ಗೆಲ್ಲುವ ಸೂಚನೆಗಳು ಗೋಚರಿಸುತ್ತಿವೆ ಎಂದು ಚುನಾವಣಾ “ಹವಾಮಾನ” ವೀಕ್ಷಕರು ಅಭಿಪ್ರಾಯಪಡುತ್ತಾರೆ. ಜಾರಕಿಹೊಳಿಯ ಗೆಲುವಿನ ಲೀಡ್ ಎಷ್ಟಾದೀತು? ರನ್ನರ್ ಅಪ್ ಬಿಜೆಪಿಯೋ? ಬಿಜೆಪಿ ಬಂಡುಕೋರ ಜೆಡಿಎಸ್ ಅಭ್ಯರ್ಥಿಯೋ? ಎಂಬ ರಣರೋಚಕ ಚರ್ಚೆಗಳೀಗ ಯಮಕನಮರಡಿಯ ರಾಜಕೀಯ ಕಟ್ಟೆಯಲ್ಲಿ ಬಿರುಸಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...