ಎರಡು ದಿನಗಳ ಹಿಂದ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ನಲ್ಲಿ ಅಮೆರಿಕಾದ ಮಿನ್ನಿಯಾಪೋಲಿಸ್ನಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ ಬಲಿಯಾದ ಜಾರ್ಜ್ ಫ್ಲಾಯ್ಡ್ ಹೇಗೆ ಸಾವಿಗೀಡಾದರು ಎಂದು ವಿವರಿಸಿದ್ದಾರೆ. ಅದಕ್ಕಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ’ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕಪ್ಪು ಜೀವವೂ ವಿಷಯವೇ) ಎಂದು ಜಗತ್ತಿನಾದ್ಯಂತ ಜನರು ಅನುಭೂತಿ ತೋರಿಸುತ್ತಿರುವಂತೆ ಅವರ ಪೋಸ್ಟ್ ಕೂಡಾ ಅದನ್ನೇ ಒತ್ತಿಹೇಳುತ್ತದೆ.
ಸಾಂಕ್ರಾಮಿಕ ರೋಗವು, ಕಳೆದ ಕೆಲವು ವಾರಗಳಲ್ಲಿ ಸಾವನ್ನು ಎಷ್ಟರ ಮಟ್ಟಿಗೆ ನಮ್ಮ ಹತ್ತಿರಕ್ಕೆ ತಂದಿದೆಯೆಂದರೆ, ಈಗ ಸಾವೆಂದರೆ ಕೇವಲ ಸಂಖ್ಯೆ ಎನ್ನುವಷ್ಟು. ರಾಜಕೀಯ ತಪ್ಪು ನಿರ್ಧಾರದಿಂದಾಗಿ ಆದ ಈ ಎಲ್ಲಾ ಸಾವುಗಳನ್ನೂ ಹಲವಾರು ಜನ ರಾಜಕೀಯೇತರವಾಗಿ ನೋಡುತ್ತಾರೆ. ಅವರು ರೋಗವನ್ನು ದೂಷಿಸುತ್ತಾರೆ ವಿನಃ ಲಕ್ಷಾಂತರ ಜನರು ಕಷ್ಟಪಡುವ ಹಾಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಸರ್ಕಾರವನ್ನಲ್ಲ.
ದಿನದ ಕೊನೆಯಲ್ಲಿ, ಕೊರೊನಾದಿಂದಾದ ಸಾವುಗಳ ಪಟ್ಟಿ ಮಾಡುತ್ತಾ, ಸರ್ಕಾರಿ ಚೀರ್ ಲೀಡರ್ಸ್ಗಳು “ನಾವೆಲ್ಲರೂ ಒಟ್ಟಿಗೆ ಇದ್ದೇವೆ” ಎಂದು ಒತ್ತಿ ಹೇಳುತ್ತಾರೆ. ಆದರೆ ನಾವು ಎಷ್ಟು ಸಾವುಗಳಿಗೆ ಶೋಕಿಸುತ್ತೇವೆ? ಎಷ್ಟು ಮುರಿದ ಕುಟುಂಬಗಳಿಗೆ ಸಾಂತ್ವನ ನೀಡುತ್ತೇವೆ? ಎಷ್ಟು ಜನರಿಗೆ ಸಹಾಯ ಮಾಡುತ್ತೇವೆ? ನಾವು ಮನುಷ್ಯರು, ನಾವು ಜೀವಂತವಾಗಿದ್ದೇವೆ, ನಮ್ಮಲ್ಲಿ ಸೀಮಿತ ವಸ್ತು ಹಾಗೂ ಭಾವನಾತ್ಮಕ ಸಂಪನ್ಮೂಲಗಳಿವೆ. ನಾವು ನಮ್ಮ ಜೀವನವನ್ನು ಮುಂದುವರಿಸಬೇಕಾಗಿದೆ, ಅಲ್ಲವೇ?
ಅದರಾಚೆಗೂ ಫ್ಲಾಯ್ಡ್ನ ಸಾವು ರಾಜಕೀಯ ದೃಷ್ಟಿಯಿಂದ ನೋಡಲ್ಪಟ್ಟಿತು. ವ್ಯಾಪಕವಾಗಿ ಹರಿದಾಡಿದ ಅವರ ಮೇಲಿನ ದೌರ್ಜನ್ಯದ ವಿಡಿಯೋವು ಸ್ಪಷ್ಟವಾಗಿ ಆಕ್ರಮಣಕಾರ ಮತ್ತು ಬಲಿಪಶುವನ್ನು ತೋರಿಸಿತ್ತು. ಇದು ನಮ್ಮಲ್ಲಿ ಹೆಚ್ಚಿನವರಿಗೆ ಮಾನವೀಯತೆಯೂ ಕ್ಷೀಣಿಸುತ್ತಿದೆ ಎಂದು ಅನಿಸತೊಡಗಿದೆ.
ನಾವು ಕನಿಷ್ಟ ರಾಜಕೀಯ ಎಂದು ನಿರೀಕ್ಷಿಸುವ ಜನರ ಇನ್ಸ್ಟಾಗ್ರಾಮ್ ಸ್ಟೊರಿಗಳು ಮತ್ತು ಪೋಸ್ಟ್ಗಳಲ್ಲಿ ಕೂಡಾ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಘೋಷಣೆಗಳು ಹೊರಬಂದವು. ಭಾರತದಲ್ಲಿ ನಿಂತು, ಮತ್ತೊಂದು ರಾಷ್ಟ್ರದ ಫ್ಯಾಸಿಸಂ ಅನ್ನು ಖಂಡಿಸುವುದು ಕೆಲವು ಜನರ ಸಾರ್ವಜನಿಕ ಇಮೇಜ್ಗೆ ಸದ್ದಿಲ್ಲದೆ ಲಾಭತಂದು ಕೊಡುತ್ತದೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪಾಗಲಾರದು. ಆದರೆ ಈ ಪ್ರಭಾವಶಾಲಿಗಳು ಭಾರತದಲ್ಲಿ ಜಾತಿ ಮತ್ತು ಧಾರ್ಮಿಕ ಹಿಂಸಾಚಾರದ ಬಗ್ಗೆ ಮಾತಾನಾಡುವುದಿಲ್ಲ.
ಅಮೆರಿಕಾದಲ್ಲಿ ಮಹಿಳೆಯ ಚರ್ಮದ ಬಣ್ಣದ ವಿಷಯವಾಗಿ ತನ್ನ ಹೋರಾಟಗಳ ಬಗ್ಗೆ ಯಾವಾಗಲೂ ಮಾತನಾಡುವ ಪ್ರಿಯಾಂಕ ಚೋಪ್ರಾ, ಅದೇ ವಿಷಯವಾಗಿ ಇನ್ನೊಬ್ಬ ವ್ಯಕ್ತಿಯ ಮೇಲೆ ಪೊಲೀಸ್ ನಡೆಸಿದ ದೌರ್ಜನ್ಯವನ್ನು ಖಂಡಿಸಿದರು. “ಅಮೆರಿಕಾ ಮತ್ತು ವಿಶ್ವದಾದ್ಯಂತ ಈ ಜನಾಂಗೀಯ ಯುದ್ಧವನ್ನು ಕೊನೆಗೊಳಿಸಿ” ಎಂದು ಅವರು ಹೇಳಿದರು.
ನಿಜ, ಫ್ಲಾಯ್ಡ್ ಕೊಲ್ಲಲ್ಪಟ್ಟ ದೃಶ್ಯ ಭಯಾನಕವಾಗಿದೆ, ಈ ಅತಿರೇಕವನ್ನು ಕ್ಷಮಿಸಲಾಗದು. ಭಾರತದಲ್ಲಿಯೂ ಸಹ, ಕಳೆದ ಕೆಲವು ವಾರಗಳಿಂದ ಕ್ರೂರ ಹಾಗೂ ವಿವರಿಸಲಾಗದ ದೃಶ್ಯಗಳನ್ನು ನೋಡಿದ್ದೇವೆ. ಭಾರತದ ರೈಲು ನಿಲ್ಧಾಣದಲ್ಲಿ ಅಂಬೆಗಾಲಿಡುವ ಮಗು ತನ್ನ ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ವಿಡಿಯೋ, ಮಾಸ್ಕ್ ಸಹಿತ ಮನುಷ್ಯನೊಬ್ಬ ನಿದ್ದೆ ಮಾಡುತ್ತಿರುವ ಫೋಟೋ, ಫುಟ್ಪಾತ್ ಬದಿಯಲ್ಲಿ ವಲಸೆ ಕಾರ್ಮಿಕನೊಬ್ಬ ಮೊಬೈಲ್ ಫೋನ್ನಲ್ಲಿ ಅಳುತ್ತಾ ಮಾತನಾಡುತ್ತಿರುವ ಫೋಟೋ, ರೈಲ್ವೆ ಹಳಿಗಳಲ್ಲಿ ನಿದ್ರಿಸುವಾಗ, ರೈಲು ಹರಿದು ಜೀವ ಕಳೆದುಕೊಂಡ 16 ಕಾರ್ಮಿಕರು ತಮ್ಮ ಸುದೀರ್ಘ ನಡಿಗೆಗಾಗಿ ಪ್ಯಾಕ್ ಮಾಡಿದ್ದ ಚಪಾತಿಗಳ ಫೋಟೋಗಳಿಗೆ ಪ್ರಿಯಾಂಕ ಚೋಪ್ರಾ ಅಥವಾ ಅವರಂತಿರುವ ಗಣ್ಯವ್ಯಕ್ತಿಗಳು ಈ ಚಿತ್ರಗಳಿಗೆ ದೊಡ್ಡ ದೊಡ್ಡ ಟಿಪ್ಪಣಿಗಳನ್ನು ಮರೆತು ಬಿಡಿ, ಕೆವಲ ಒಂದೇ ಒಂದು ಪದವನ್ನು ಬರೆಯಲಿಲ್ಲ.
ಈ ಚಿತ್ರಗಳಲ್ಲಿರುವ ವ್ಯತ್ಯಾಸವೇನು? ಈ ದೌರ್ಜನ್ಯದ ನಡೆಸಿದ ದುಷ್ಕರ್ಮಿಗಳು (ಅರ್ಥಾತ್ ಸರ್ಕಾರ) ಈ ಮೇಲೆ ಹೇಳಿದ ಯಾವುದೇ ಚಿತ್ರ ಹಾಗೂ ದೃಶ್ಯಗಳಲ್ಲಿ ದೈಹಿಕವಾಗಿ ಇರಲಿಲ್ಲ. ಆದರೆ ಮಗುವಿನ ತಾಯಿಯನ್ನು ಕೊಂದದ್ದು ಏನು? ಹಸಿವು. ಮಲಗಿದ್ದ ವಲಸಿಗರನ್ನು ಕೊಂದದ್ದು ಏನು? ರೈಲು. ಮನುಷ್ಯನು ರಸ್ತೆ ಬದಿಯಲ್ಲಿ ಅಳಲು ಬಿಟ್ಟದ್ದು ಏನು? ಅವನನ್ನು ಮನೆಗೆ ಕರೆದೊಯ್ಯಲು ಸಿಗದ ವಾಹನ. ಈ ಎಲ್ಲ ಕರಳು ಹಿಂಡುವ ಚಿತ್ರಣಗಳಿಗೆ ಕಾರಣವೇನು? ದೇಶದ 80% ಜನಸಂಖ್ಯೆಯ ಜನರು ಹೇಗಿದ್ದಾರೆ ? ಅವರು ಹೇಗೆ ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿಯದೆ ಘೋಷಿಸಿದ ಕೆಟ್ಟ ಹಾಗೂ ಕಠಿಣ ಲಾಕ್ಡೌನ್. ಇದನ್ನು ಯಾರು ಮಾಡಿದರು? ಓಹ್, ಅವರನ್ನು ಇಸ್ಟ್ಟ್ರಾಗ್ರಾಂ ಪೋಸ್ಟುಗಳಲ್ಲಿ ಹೆಸರಿಸಬಾರದು.
ತಮ್ಮದೇ ದೇಶದಲ್ಲಿ ’ಫ್ಲಾಯ್ಡ್’ ಪ್ರಕರಣದಂತೆ ಸಂಪೂರ್ಣವಾಗಿ ಸಮಾನವಾದ ವ್ಯವಸ್ಥಿತ ದಬ್ಬಾಳಿಕೆ, ಸರ್ಕಾರಿ ಬೆಂಬಲಿತ ಹಿಂಸಾಚಾರದ ಬಗ್ಗೆ ಇವರು ಯಾರೂ ಮಾತನಾಡುವುದಿಲ್ಲ. ಆದರೆ ಅಮೆರಿಕಾದ ಸಾಮಾಜಿಕ ಕಾರ್ಯಕರ್ತರು ಪ್ರಾರಂಭಿಸಿದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನದಲ್ಲಿ ಇವರು ಮಾತನಾಡುತ್ತಾರೆ. ಅಲ್ಲಿನ ಕಾರ್ಯಕರ್ತರು ಅವರ ದೇಶವನ್ನು ಅಶ್ರುವಾಯು ಎದುರಿಸುತ್ತಿದ್ದರೆ, ಇಲ್ಲಿ ನಮ್ಮ ಸೆಲೆಬ್ರಿಟಿಗಳು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ಗಳಿಂದ ಕಾರ್ಯಕರ್ತರ ಪರವಾಗಿ ಕೋರಸ್ ಕೊಟ್ಟರೆ ಕಳೆದುಕೊಳ್ಳಲು, ಭಯಪಡಲು ಅಥವಾ ಅಪಾಯಕ್ಕೆ ಒಳಗಾಗಲು ಏನೂ ಇಲ್ಲ. ಎಲ್ಲವೂ ಚೆನ್ನಾಗಿ ಕೊನೆಗೊಳ್ಳುತ್ತದೆ.
ಕೆಲವು ತಿಂಗಳುಗಳ ಹಿಂದೆ, ಹೆಚ್ಚಿನ ಸೆಲೆಬ್ರಿಟಿಗಳ ಪುಟಗಳಲ್ಲಿ ಯಾವುದೇ ಸ್ಥಳಾವಕಾಶ ಸಿಗದಂತಹ ದೃಶ್ಯಗಳ ಒಂದು ಸೆಟ್ ಇತ್ತು. ಅದು ಯಾವುದೆಂದರೆ ಪೊಲೀಸರು ಜಾಮಿಯಾ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನಡೆಸುಕೊಳ್ಳವ ದೃಶ್ಯಗಳು, ಗ್ರಂಥಾಲಯವನ್ನು ಧ್ವಂಸಗೊಳಸುವ ದೃಶ್ಯಗಳು, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ರಕ್ತಸಿಕ್ತ ವ್ಯಕ್ತಿಯನ್ನು ಸುತ್ತುವರೆದಿರುವ ಜನಸಮೂಹದ ಚಿತ್ರಗಳು ಇತ್ಯಾದಿ… ಆದರೆ ಇದನ್ನು ಇವರುಗಳು ಮರೆಮಾಚಲು ಪ್ರಯತ್ನಿಸುವುದಕ್ಕೆ ಕಾರಣಗಳಿವೆ. ಯಾಕೆಂದರೆ ನಿಜವಾಗಿ ಗಲಭೆಗಳನ್ನು ಪ್ರಾರಂಭಿಸಿದವರು ಯಾರು ಎಂಬುವುದು, ಅಷ್ಟೆ.
ಫ್ಲಾಯ್ಡ್ ಬಗ್ಗೆ ಮಾತನಾಡಿದ ಚೋಪ್ರಾ ಹಾಗೂ ಅವರಂತಹ ಸೆಲೆಬ್ರಿಟಿ ವರ್ಗಕ್ಕೆ (ಕರೀನಾ ಕಫೂರ್ ಖಾನ್ ಸೇರಿ) ಬಲಪಂಥೀಯ ಹಿಂದುತ್ವದ ದ್ವೇಷಗಳು ತಿಳಿಯದವರೇನಲ್ಲ. ಚೋಪ್ರಾ ತನ್ನ ಟಿವಿ ಸರಣಿ ಕ್ವಾಂಟಿಕೊದ ದೃಶ್ಯಗಳಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾದಾಗ ತುಂಡುಡುಗೆ ಧರಿಸಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳಕ್ಕೊಳಗಾಗಿದ್ದರು. ಕರೀನಾ ಕಪೂರ್ ಅವರನ್ನು ಹಿಂದುತ್ವ ಗುಂಪುಗಳು ‘ಲವ್ ಜಿಹಾದ್’ನ ಮಹಿಳೆಯನ್ನಾಗಿ ಪೋಸ್ಟರ್ ಮಾಡಿದ್ದವು ಹಾಗೂ ತನ್ನ ಮಗನಿಗೆ ತೈಮೂರ್ ಎಂದು ಹೆಸರು ನೀಡಿದ್ದಕ್ಕೆ ಟ್ರೋಲ್ಗೆ ಒಳಗಾಗಿದ್ದರು. ಅಮೆಜಾನ್ ಪ್ರೈಮ್ ಸರಣಿಯಲ್ಲಿ ಪಾತಾಳ್ ಲೋಕ್ ಎಂಬ ವೆಬ್ ಸೀರಿಸ್ ಅನ್ನು ನಿರ್ಮಿಸಿದ್ದಕ್ಕಾಗಿ ಅನುಷ್ಕಾ ಶರ್ಮಾ ಅವರನ್ನು ಈಗ ಈ ಭಕ್ತ ಸೈನ್ಯ ಟ್ರೋಲ್ ಮಾಡುತ್ತಿದ್ದಾರೆ. ಜೆಎನ್ಯು ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಾಗ ಅವರ ಚಪಾಕ್ ಚಿತ್ರವನ್ನು ಬಹಿಷ್ಕರಿಸಬೇಕೆಂದು ಕರೆಕೊಡಲಾಗಿತ್ತು. ನೀವು ಕೇಳಬಹುದು, ಇಷ್ಟೆಲ್ಲ ಆಗಿಯೂ ಮತ್ತೆ ಯಾಕೆ ಸಮಸ್ಯೆಗಳನ್ನು ಎಳೆದುಕೊಳ್ಳಬೇಕು ಎಂದು?
ಆದರೆ ವಿಷಯ ಇರುವುದು ಇಲ್ಲಿ. ಸಫೂರ ಝರ್ಗರ್, ಉಮರ್ ಖಾಲಿದ್ ಮತ್ತು ಪಿಂಜ್ರಾ ಥೋಡ್ ಸದಸ್ಯರಂತಹ ಜನರಿಗೆ ಈ ಸೆಲೆಬ್ರಿಟಿಗಳು ಹೊಂದಿರುವ ಸವಲತ್ತುಗಳಿಲ್ಲ. ಯುನಿಸೆಫ್ನ ಗುಡ್ವಿಲ್ ರಾಯಭಾರಿಯಾಗಿರುವ ಪ್ರಿಯಾಂಕ ಚೋಪ್ರಾ ಬಡ ವಲಸೆ ಕಾರ್ಮಿಕರ ಹಾಗೂ ಮಕ್ಕಳ ಸಾವಿಗೆ ಕಾರಣವಾದವರ ಬಗ್ಗೆ ನಿಖರವಾಗಿ ಮಾತನಾಡಿದರೆ ಹೆಚ್ಚು ನಷ್ಟಕ್ಕೆ ಒಳಗಾಗುತ್ತಾರೆಯೆ?
ಪ್ರಿಯಾಂಕಾ ಚೋಪ್ರಾ ಅವರು ಯುನಿಸೆಫ್ನ ಗುಡ್ವಿಲ್ ರಾಯಭಾರಿ ಮತ್ತು ಹಿಂದುಳಿದ ಮಕ್ಕಳಿಗಾಗಿ ಕೆಲಸ ಮಾಡುವ ಯಾರಾದರೂ ಎಂದು ಪರಿಗಣಿಸಿ ಮಕ್ಕಳು ಸೇರಿದಂತೆ ಅನೇಕ ಬಡ ವಲಸಿಗರ ಸಾವಿಗೆ ನಿಖರವಾಗಿ ಕಾರಣವಾದ ಬಗ್ಗೆ ಮಾತನಾಡಿದರೆ ಹೆಚ್ಚು ನಷ್ಟವಾಗುತ್ತದೆಯೇ?. ಇದನ್ನು ಆಕೆಯ ಪಿಆರ್ ತಂಡವು ಒಂದೆರಡು ದಿನಗಳ ತನಕ ಟ್ರೋಲಿಂಗ್ ಅನ್ನು ಎದುರಿಸಬೇಕಾಗಬಹುದು. ಕೆಲವೊಂದು ವ್ಯಕ್ತಿಗಳು ಕೆಲವೊಂದು ಕೇಸುಗಳನ್ನು ದಾಖಲಿಬಹುದು. ಆದರೆ ಅದನ್ನು ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ. ಸಾಂಕ್ರಾಮಿಕ ರೋಗದ ಮಧ್ಯೆ ಪ್ರಸ್ತುತ ಜೈಲಿನಲ್ಲಿದ್ದ ಸಫೂರಾ ಝರ್ಗರ್ ಗರ್ಭಿಣಿಯಾಗಿದ್ದು ಅವರು ಕಳೆದುಕೊಳ್ಳುವ ಜಗತ್ತು ಬಹಳ ಇದೆ. ಅಲ್ಪಸಂಖ್ಯಾತರ ಪರವಾಗಿ ಮಾತನಾಡುವ ತೊಂದರೆಯನ್ನು ಅವರು ಏಕೆ ತೆಗೆದುಕೊಂಡರು?
ಕೆಲವು ಪತ್ರಕರ್ತರು ಇದ್ದಾರೆ, ಆಗಾಗ್ಗೆ ಬಹಳ ಕಡಿಮೆ ಸಂಬಳ ಪಡೆಯುತ್ತಾರೆ. ಇವರು ಚೋಪ್ರಾ ತರದ ಸೆಲೆಬ್ರಿಟಿಗಳಿಂದ ತಪ್ಪಿಸಿಕೊಂಡಿರುವ, ವಲಸಿಗರು ತಮ್ಮ ಮನೆಗಳಿಗೆ ದಣಿದು, ಹಸಿವಿನಿಂದ ನಡೆದ ದೃಶ್ಯಗಳನ್ನು ದಾಖಲಿಸುತ್ತಾರೆ. ಅವರಲ್ಲಿ ಹಲವರು ಈಗ ತಮ್ಮ ಉದ್ಯೋಗದಾತರಿಂದಲೂ ಕೆಲಸದಿಂದ ತೆಗೆದುಹಾಕುವ ಅಪಾಯದಲ್ಲಿದ್ದಾರೆ. ಅವರು ಯಾಕೆ ತೊಂದರೆ ತೆಗೆದುಕೊಳ್ಳುತ್ತಿದ್ದಾರೆ?
ಚೋಪ್ರಾ ಮತ್ತು ಅವರಂತಹ ವರ್ಗದವರು ಓಡಾಡುವ ರಸ್ತೆಗಳಲ್ಲಿ, ಯಾರೂ ಇಲ್ಲದ ಕಾರ್ಮಿಕರಿಗೆ ಆಹಾರವನ್ನು ವಿತರಿಸುತ್ತಾ, ಸರ್ಕಾರದ ಕ್ರೌರ್ಯವನ್ನು ಪಟ್ಟುಬಿಡದೆ ಖಂಡಿಸುತ್ತಾ ಹಾಗೂ ಅದೇ ಸಮಯದಲ್ಲಿ ಪ್ರತಿಭಟಿಸುತ್ತಾ ಇರುವ ಕಾರ್ಯಕರ್ತರಿದ್ದಾರೆ. ಅವರು ಏನು ಕಳೆದುಕೊಳ್ಳಬೇಕು? ಕಳೆದ ಕೆಲವು ವರ್ಷಗಳಿಂದ ಸಾಬೀತಾದಂತೆ ಸರ್ಕಾರವನ್ನು ಟೀಕಿಸುವ ಸ್ವಾತಂತ್ರ್ಯವನ್ನು, ದೈಹಿಕ ಆರೋಗ್ಯ ಮತ್ತು ಅವರ ಕುಟುಂಬಗಳ ಮನಸ್ಸಿನ ಶಾಂತಿಯನ್ನು ಕಳೆದುಕೊಂಡಿದ್ದಾರೆ. ಅವರು ಯಾಕೆ ತೊಂದರೆ ತೆಗೆದುಕೊಳ್ಳುತ್ತಿದ್ದಾರೆ?
“ನೀವು ಎಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಪರಿಸ್ಥಿತಿಗಳು ಏನೇ ಇರಲಿ, ಯಾರೂ ಸಾಯಲು ಅರ್ಹರಲ್ಲ. ವಿಶೇಷವಾಗಿ ಅವರ ಚರ್ಮದ ಬಣ್ಣದ ಕಾರಣಕ್ಕಾಗಿ ಇನ್ನೊಬ್ಬರ ಕೈಯಲ್ಲಿ ಸಾಯಲು ಯಾರೂ ಅರ್ಹರಲ್ಲ” ಎಂದು ಚೋಪ್ರಾ ಹೇಳಿದ್ದಾರೆ. ಆದರೆ ಅವರು ಹೇಳಿದಂತೆ ‘ಅವರ ದೇಶದ’ ಬಗ್ಗೆ ಏನು?
- ಪಿಯಾಶ್ರಿ ದಾಸ್ಗುಪ್ತಾ
- ಕೃಪೆ: ಹಫ್ಪೋಸ್ಟ್
- ಅನುವಾದ: ಬಾಪು ಅಮ್ಮೆಂಬಳ
ಓದಿ: ಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್