ರಾಜ್ಯದ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಿದ್ದು, ಆ್ಯಪ್ ಮೂಲಕ ರಾಜ್ಯದಲ್ಲಿ ಬಿತ್ತನೆಯಾಗಿರೋ ಬೆಳೆಗಳ ಕುರಿತು ನಿಖರ ಮಾಹಿತಿ ಕಲೆಹಾಕಲು ನಿರ್ಧರಿಸಲಾಗಿದೆ. ಆದರೆ ಈ ಆ್ಯಪ್ ಮೂಲಕ ತಾವು ಹೊಲಗಳಲ್ಲಿ ಬೆಳೆಯುತ್ತಿರುವ ಬೆಳೆ ಬಗ್ಗೆ ರೈತರೇ ಸಂಪೂರ್ಣ ಮಾಹಿತಿ ಒದಗಿಸಬೇಕಾಗುತ್ತದೆ.
ತಮ್ಮ ಹೊಲಗಳಿಗೆ ಹೋಗಿ ಫೋಟೋ ತೆಗೆದು ಆಪ್ಲೋಡ್ ಮಾಡುವ ಜೊತೆಗೆ ಆ್ಯಪ್ನಲ್ಲಿ ಕೇಳಲಾದ ಪ್ರಶ್ನೆಗಳಿಗೂ ಅಲ್ಲಿಯೇ ಉತ್ತರ ನೀಡಬೇಕು. ಏಕೆಂದರೆ, ಜಿಪಿಎಸ್ ಮೂಲಕ ಹೊಲ ಇರುವ ಗ್ರಾಮ, ಹೋಬಳಿ, ಸರ್ವೆ ನಂಬರ್ ಇತ್ಯಾದಿ ವಿವರಗಳನ್ನು ತಾಳೆ ಮಾಡಿ ನೋಡಬೇಕಾದ ಕಾರಣ ಸರ್ವೆ ನಂಬರ್ ನೀಡಿರುವ ಹೊಲದಿಂದಲೇ ಎಲ್ಲ ವಿವರ ತುಂಬಬೇಕು. ಇಲ್ಲದಿದ್ದರೇ ಬೆಳೆ ವಿಮೆಯಾಗಲಿ, ಪರಿಹಾರವಾಗಲಿ ರೈತರಿಗೆ ಸಿಗುವುದಿಲ್ಲ.
ಆದರೆ ವಿವರ ತುಂಬಲು ನೀಡಲಾಗಿದ್ದ ಅವಧಿ ಮುಗಿದು, ದಿನಾಂಕ ವಿಸ್ತರಿಸಿದ್ದರೂ ಶೇಕಡಾ 50 ರಷ್ಟು ರೈತರು ಇದನ್ನು ಬಳಸಿಲ್ಲ. ಕಾರಣಗಳು ಅನೇಕ ಆ್ಯಪ್ಗಳನ್ನು ಬಳಸುವಷ್ಟು ತಾಂತ್ರಿಕ ಅರಿವು ರೈತರಿಗೆ ಇಲ್ಲದಿರುವುದು. ಹಳ್ಳಿಗಳಲ್ಲಿ ಸರಿಯಾದ ಇಂಟರ್ನೆಟ್ ಸಂಪರ್ಕ ಸಿಗದೇ ಇರುವುದು ದೊಡ್ಡ ಕಾರಣವಾಗಿವೆ.
ಇದನ್ನೂ ಓದಿ: ಒಂದೂವರೆ ತಿಂಗಳಷ್ಟೇ ಬಳಕೆ: ಬೆಂಗಳೂರಿನ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಮುಚ್ಚಲು ನಿರ್ಧಾರ!
ಆ್ಯಪ್ ಬಳಸಲು ರೈತರಿಗೆ ಕಷ್ಟವಾಗುವಂತಿದೆ. ಕಾರಣ ಇಲ್ಲಿನ ಹಂತಗಳು ಮತ್ತು ಗುಣಮಟ್ಟದ ಇಂಟರ್ನೆಟ್ ಕಡ್ಡಾಯವಾಗಿರುವುದು. ಆದರೂ ಕೃಷಿ ಸಚಿವರು ಮಾತ್ರ ಇದರಿಂದ ರೈತರಿಗೆ ಲಾಭ ಎನ್ನುತ್ತಲೇ ಇದ್ದಾರೆ.
ಇಂದು ಜಿಕೆವಿಕೆಯಲ್ಲಿ ನಡೆದ ರಾಜ್ಯದ ಎಲ್ಲ ಜಿಲ್ಲೆಗಳ ಕೃಷಿ ಅಧಿಕಾರಿಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಈ ವರ್ಷ ತಂತ್ರಜ್ಞಾನ ಬಳಕೆಯ ತೊಡಕು ಮತ್ತು ಮಳೆಯಿಂದ ತೊಂದರೆ ಆಗಿರಬಹುದು. ಆದರೆ, ಬಹುತೇಕ ಕಡೆಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ ಎಂದರು.
ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಈ ವರ್ಷ ಪ್ರಾಯೋಗಿಕವಾಗಿ ಆರಂಭಿಸಿದ್ದರೂ ಮುಂದಿನ ವರ್ಷ ರೈತರು ತಾವೇ ಕಡ್ಡಾಯವಾಗಿ ಸಮೀಕ್ಷೆ ಮಾಡಬೇಕು ಎಂದು ಕೃಷಿ ಸಚಿವರು ಹೇಳಿದ್ದಾರೆ.
ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೈತರು ಆ್ಯಪ್ ಮೂಲಕ ತಪ್ಪದೇ ಬೆಳೆ ಸಮೀಕ್ಷೆ ನಡೆಸಬೇಕು. ರೈತರೇ ಸ್ವಯಂ ಬೆಳೆ ಸಮೀಕ್ಷೆ ನಡೆಸುವುದಕ್ಕೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು. ಹೆಚ್ಚು ಹೆಚ್ಚು ರೈತರು ಬೆಳೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದರು.
ಇನ್ನು ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ನಿಜಕ್ಕೂ ಯೂರಿಯಾ, ರಸಗೊಬ್ಬರದ ಕೊರತೆಯಿಲ್ಲ. ಸರಬರಾಜು ಹಂಚಿಕೆಯಲ್ಲಿ ಎಲ್ಲೋ ಒಂದೆರಡು ಕಡೆ ವಿಳಂಬವಾಗಿರಬಹುದು. ಆದರೆ ಕೊರತೆಯಿಲ್ಲ. ಕಾಳಸಂತೆಕೋರರು ಮತ್ತು ಸುಳ್ಳು ಸುದ್ದಿಹಬ್ಬಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೆಲ ದಿನಗಳ ಹಿಂದಷ್ಟೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯೂರಿಯಾ ಕೊರತೆ ನೀಗಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದರು.