ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯವರನ್ನು ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಸಾವಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ ಪೊಲೀಸರು ನಿನ್ನೆ ಬಂಧಿಸಿರುವುದು ಸರಿಯಷ್ಟೇ. ಅಲ್ಲದೇ ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಹೈಕೋರ್ಟ್ ಸಹ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ಬಿಜೆಪಿ ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಖಂಡಿಸಿದೆ. ಅದೇ ರೀತಿಯಲ್ಲಿ ಎಡಿಟರ್ ಗಿಲ್ಡ್ ಆಫ್ ಬೆಂಗಳೂರು ಎಂಬ ಪತ್ರಕರ್ತರ ಸಂಘ ಅರ್ನಾಬ್ ಮೇಲಿನ ದಾಳಿ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಟ್ರೋಲ್ ಗೊಳಗಾಗಿದೆ.
ಅರ್ನಾಬ್ ಗೋಸ್ವಾಮಿ ಬಂಧಿತನಾಗಿರುವುದು ಟಿವಿಯಲ್ಲಿ ಪ್ರಸಾರ ಮಾಡಿದ ಸ್ಟೋರಿಯ ಕಾರಣದಿಂದಲ್ಲ. ತನಗೆ ಕೆಲಸ ಮಾಡಿಕೊಟ್ಟ ವ್ಯಕ್ತಿಗೆ ಕೋಟ್ಯಾಂತರ ರೂ ವಂಚಿಸಿ, ಪ್ರಭಾವ ಬಳಸಿ ತಪ್ಪಿಸಿಕೊಂಡು, ಆತ್ಮಹತ್ಯೆಗೆ ಕಾರಣನಾದ ಕ್ರಿಮಿನಲ್ ಪ್ರಕರಣದಲ್ಲಿ… ಇಷ್ಟು ಗೊತ್ತಿಲ್ಲದ ಇವರೆಂಥ ಪತ್ರಕರ್ತರು ಎಂದು ಎಡಿಟರ್ ಗಿಲ್ಡ್ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಈ Editors Guild of Bengaluru ನ ಸದಸ್ಯರು ನೋಡಿ!! ಭಾಜಪದ ವಿ.ಪ್ರ. ಸಭೆ ಇದ್ದಂಗಿದೆ. ಇವರು ಈ ಹಿಂದೆ ಪತ್ರಕರ್ತರ ಮೇಲೆ ಧಾಳಿ ಆದಾಗ, ಬಂಧನವಾದಾಗ ಉಸಿರೆತ್ತಿದ ದಾಖಲೆ ಇಲ್ಲ. ಈಗ ಈ ಗರ್ನಾಲ್ ಆಸಾಮಿ ತನ್ನ ಧೂರ್ತ ಹಣಕಾಸು ವ್ಯವಹಾರದ ಮೂಲಕ ವಾಸ್ತುಶಿಲ್ಪಯೊಬ್ಬನನ್ನು ಆತ್ಮಹತ್ಯೆಗೆ ದೂಡಿದ್ದು ಇವರಿಗೆ ಪತ್ರಿಕಾ ಸ್ವಾತಂತ್ರ್ಯತರ ಕಂಡಿದೆ!!! ಲಜ್ಜೆಗೆಟ್ಟು HMV ಆಗೋದು ಹೀಗೆ ಎಂದು ಸುರೇಶ್ ಕಂಜಾರ್ಪಣೆಯವರು ವ್ಯಂಗ್ಯವಾಡಿದ್ದಾರೆ.
ತಿಂಗಳ ಹಿಂದೆ ಪವರ್ ಟಿವಿ ಮೇಲೆ ದಾಳಿಯಾದಾಗ ಬೆಂಗಳೂರು ಎಡಿಟರ್ಸ್ ಗಿಲ್ಡ್ ಇಂತಹದೊಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತಾ? ನನ್ನ ಗಮನಕ್ಕೆ ಬಂದಿಲ್ಲ. ಅಲ್ಲೂ ಹಳೆಯ ಪ್ರಕರಣ ಸಂಬಂಧ ದಾಳಿ ನಡೆದಿತ್ತು. ಲೈವ್ ಕೊಡದಂತೆ ಚಾನೆಲ್ಲಿನ ಸರ್ವರ್ ಅನ್ನೇ ಸಿಸಿಬಿಯವರು ಕೊಂಡೊಯ್ದಿದ್ದರು.
ಅರ್ನಬ್ ನ ಬಂಧನ ಹಣವಂಚನೆ ಮತ್ತು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣ. ಇದು ಯಾವ ಆ್ಯಂಗಲ್ ನಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂಬುದನ್ನು ಬಹುಮಾನ್ಯ ಕನ್ನಡದ ಸಂಪಾದಕರು ಸಂಪಾದಕೀಯ ಬರೆದು ವಿವರಿಸಿದ್ರೆ ತಿಳಿದುಕೊಳ್ಳಬಹುದಿತ್ತು ಎಂದು ಪತ್ರಕರ್ತೆ ಹೇಮಾವತಿ ವೆಂಕಟ್ ಪ್ರಶ್ನಿಸಿದ್ದಾರೆ.
ಇನ್ನು ಗಿಲ್ಡ್ನ ಅಧ್ಯಕ್ಷರೆಂದು ಘೋಷಿಸಿಕೊಂಡಿರುವ ವಿಶ್ವೇಶ್ವರ ಭಟ್ ತಮ್ಮ ಫೇಸ್ಬುಕ್ನಲ್ಲಿ ಈ ಖಂಡನಾ ಪತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ನೂರಾರು ಜನ ಪ್ರತಿಕ್ರಿಯಿಸಿದ್ದು ಟ್ರೋಲ್ ಮಾಡಿದ್ದಾರೆ.
Editors Guild of Bengaluru was in isolation ward when Bengaluru based @powertvnews was illegally shut down by state govt for exposing corruptions of CM's Son and Grandson. #ArnabGoswamy https://t.co/otMhlrxzXI
— Prathap ಕಣಗಾಲ್ (@Kanagalogy) November 4, 2020
ಭಟ್ಟರೇ ಆರ್ನಬ್ ಸಹ ನಿನ್ನ ತರಹ ಒಂದು ಪಕ್ಷದ ಏಜೆಂಟ್, ಅಂತಹ ವ್ಯಕ್ತಿಯಿಂದ ನಾವು ಸಮಾಜಕ್ಕೆ ಏನನ್ನು ನಿರೀಕ್ಷಿಸಲು ಸಾಧ್ಯ, ಒಂದು ಪಕ್ಷಕ್ಕೆ ಯಾವುದೇ ವ್ಯಕ್ತಿ ಸೀಮಿತನಾಗಿದ್ದರೆ , ಅಥವಾ ಒಂದು ಪಕ್ಷದ ಓಲೈಕೆ ಮಾಡುತ್ತಿದ್ದರೆ ಅದು ಯಾವ ಪತ್ರಿಕಾ ಧರ್ಮ ಹೇಳುವಿರ? ಎಂದು ರವಿಶಂಕರ್ ಎಂಬುವವರ ಪ್ರಶ್ನಿಸಿದ್ದಾರೆ.
ಈ ನಿಮ್ಮ ಪತ್ರಿಕಾ ಧರ್ಮ, ಪವರ್ ಟಿವಿ ಮೇಲೆ ಸರ್ಕಾರ ಪ್ರಹಾರ ಮಾಡಿದಾಗ ಎಲ್ಲಿ ಹೋಗಿತ್ತು ಸಾರ್……..!? ಎಂದು ಕುಮಾರಸ್ವಾಮಿ ಎಂಬುವವರು ಪ್ರಶ್ನಿಸಿದ್ದಾರೆ.
ಈ ಖಂಡನಾ ಪತ್ರಕ್ಕೆ ಸಹಿ ಮಾಡಿದ ಸಂಪಾದಕರು ತಮ್ಮ ಪತ್ರಿಕೆಗಳಲ್ಲಿ ಇಲ್ಲಿ ಬಂದಿರುವ ಎಲ್ಲ ಪ್ರತಿಕ್ರಿಯೆಗಳನ್ನು ಪ್ರಕಟಿಸಲು ನಿಮಗೆ ಸಾಧ್ಯವಾಗುತ್ತದೆಯೇ? ಕುಶ್ವಂತ್ ಸಿಂಗ್ ಮತ್ತು ವಿನೋದ್ ಮೆಹ್ತಾ ಅವರಂತಹ ಸಂಪಾದಕರು ಇದನ್ನು ಮಾಡಿದ್ದಾರೆ. ಆಗ ಮಾತ್ರ ಪತ್ರಿಕೋದ್ಯಮದ ನಿಮ್ಮ ಬದ್ದತೆ ತಿಳಿಯುತ್ತದೆ ಎಂದು ವಿಠ್ಠಲ್ ಶೆಟ್ಟಿ ಎಂಬುವವರು ಸವಾಲು ಹಾಕಿದ್ದಾರೆ.
ಕರ್ನಾಟಕ ಎಡಿಟರ್ಸ್ ಗಿಲ್ಡ್ನವರು ಗೌರಿ ಲಂಕೇಶರ ಹತ್ಯೆಯನ್ನು ಖಂಡಿಸಿ ಇಂತಹ ಹೇಳಿಕೆಯನ್ನೇನಾದರೂ ಕೊಟ್ಟಿದ್ದರೆ? ಆಗ ಅದು ಅಸ್ತಿತ್ವದಲ್ಲಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಸಂದರ್ಭದಲ್ಲಿ ನೀಚ ಬರಹವನ್ನು ಬರೆದ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಇಂತಹ ಹೇಳಿಕೆ ನೀಡಲು ನಿಮಗೆ ಒಪ್ಪಿಗೆಯಿದೆಯಾ ಎಂದು ಮಿಕ್ಕವರನ್ನು ಕೇಳುವುದೂ ಇಲ್ಲ. ಆದರೆ ಪ್ರಜಾವಾಣಿಯ ಸಂಪಾದಕರಿಂದ ಅಂತಹದೊಂದು ಸ್ಪಷ್ಟೀಕರಣವನ್ನು ಕೇಳಬೇಕಿದೆ ಎಂದು ನ್ಯಾಯಪಥ ಪತ್ರಿಕೆಯ ಸಂಪಾದಕರಾದ ಡಾ.ಎಚ್.ವಿ ವಾಸುರವರು ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣ ಎಲ್ಲಿ ಬರುತ್ತೆ? ಕಳೆದಬಾರಿ ತನ್ನ ಪತ್ರಿಕೆಯಲ್ಲಿ ಈ ಹಿಂದೆ ಕೆಲಸ ಮಾಡುತಿದ್ದ ವರದಿಗಾರ ಸುನೀಲ್ ಹೆಗ್ಗರವಳಿ ಎಂಬವರ ಹತ್ಯೆಗೆ ಸುಫಾರಿ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ರವಿ ಬೆಳಗೆರೆಯನ್ನು ಕರ್ನಾಟಕ ಪೋಲೀಸರು ಬಂಧಿಸಿದ್ದಿಲ್ವಾ? ಆವಾಗ ಯಾರಾದ್ರೂ ಅದು ಪತ್ರಕರ್ತರ ಮೇಲಿನ ಹಲ್ಲೆ, ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದೆಲ್ಲಾ ಬೆಳಗೆರೆ ಪರ ನಿಂತಿದ್ದರೇ? ಟಿಆರ್ಪಿ ಕೇಸ್ ಬೇರೆಯದ್ದೇ. ಅದರಲ್ಲಿ ಏನಾಗುತ್ತದೆಯೆಂದು ಇನ್ನೂ ಗೊತ್ತಿಲ್ಲ. ಆದರೆ ಈಗಿರುವುದು ಕ್ರಿಮಿನಲ್ ಪ್ರಕರಣ. ವಂಚನೆ ಹಾಗೂ ಆತ್ಮಹತ್ಯೆಗೆ ಪ್ರೇರಣೆಯ ಆರೋಪ. ಆರೋಪವನ್ನು ಮಾಡಿದವರು ಆತ್ಮಹತ್ಯೆಗೈದ ವ್ಯಕ್ತಿಯ ಮಗಳು ಹಾಗೂ ಹೆಂಡತಿ. ಪ್ರಕರಣ ನಡೆದದ್ದು ಬಿಜೆಪಿ-ಶಿವಸೇನೆ ಸರಕಾರವಿದ್ದಾಗ. ಮೊದಲ ಎಫ್ಐಆರ್ ಆಗಿದ್ದೂ ಆವಾಗ್ಲೇ. ಆರು ತಿಂಗಳ ಹಿಂದೆ ಸಂತ್ರಸ್ತ ಕುಟುಂಬ ಪ್ರಕರಣವನ್ನು ಪುನಃ ತನಿಖೆ ಮಾಡಬೇಕೆಂದು ಕೇಳಿಕೊಂಡಿತ್ತು ಹಾಗೂ ಆಗಲೇ ಗೃಹಮಂತ್ರಿ ತನಿಖೆ ನಡೆಸುವುದಾಗಿಯೂ ಹೇಳಿದ್ದರು. ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಲ್ಲಿಂದ ಬಂತು? ಎಂದು ಅಲ್ಮೆಡ ಗ್ಲಾಡ್ಸನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅರ್ನಾಬ್ ಬಂಧನ: ಸಾಮಾಜಿಕ ಮಾಧ್ಯಮಗಳಲ್ಲಿ ಭುಗಿಲೆದ್ದ ಪರ-ವಿರೋಧದ ಚರ್ಚೆ!