ಬೆಂಗಳೂರಿನ ಪಾದರಾಯನಪುರದ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನಿಡುವ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ತೀರ್ಮಾನಕ್ಕೆ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗ್ಡೆ ವಿರೋಧ ವ್ಯಕ್ತಪಡಿಸಿದ್ದಾರೆ. “ರಸ್ತೆಗಳಿಗೆ ಮುಸ್ಲಿಂ ಸಮಾಜ ಸೇವಕರ ಹೆಸರಿಟ್ಟರೆ ಕೋಮು ಸಾಮರಸ್ಯ ಹದಗೆಡುತ್ತದೆ” ಎಂದು ಪತ್ರ ಬರೆದಿದ್ದಾರೆ.
“ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಸಮಾಜ ಸೇವಕರ ಹೆಸರಿನಲ್ಲಿ ಮುಸ್ಲಿಮರ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಈ ಮೂಲಕ ಒಂದು ಕೋಮಿನ ತುಷ್ಠೀಕರಣಕ್ಕೆ ಮುಂದಾಗುವುದು ಸರಿಯಲ್ಲ. ಇದು ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು?
ಬಿಬಿಎಂಪಿ ನೀಡಿರುವ ಆದೇಶ:
“ಪಾಲಿಕೆಯಂತೆಯೇ ಹಿಂದೂಗಳು ಬಹುಸಂಖ್ಯಾತರಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ಗಳೂ ಇದೇ ನಿರ್ಧಾರವನ್ನು ತೆಗೆದುಕೊಂಡರೆ ಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯ. ಹಾಗೇನಾದರೂ ಹೆಸರಿಡುವ ಅನಿವಾರ್ಯತೆಯಿದ್ದರೆ, ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಹೋರಾಡಿದ ವೀರ ಸೈನಿಕರು, ರಾಷ್ಟ್ರದ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಬಹುದು. ಆದರೆ ಮುಸಲ್ಮಾನರ ಹೆಸರುಗಳನ್ನು ಇಡಬಾರದು ಎಂದು ಈ ಮೂಲಕ ಆಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ.
“ಬಿಬಿಎಂಪಿಯ ಈ ಬೇಜವಾಬ್ದಾರಿತನದ ಪರಮಾವಧಿಯ ನಿರ್ಧಾರವನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಅಗ್ರಹಿಸುತ್ತೇನೆ” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಭಾರಿ ಮುಖಭಂಗ
ಸಂಸದ ಅನಂತ ಕುಮಾರ್ ಹೆಗ್ಡೆ ಬರೆದಿರುವ ಪತ್ರ:
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ವೆಲ್ಫೇರ್ ಪಾರ್ಟಿಯ ಮುಖಂಡರಾದ ತಾಹೀರ್ ಹುಸೇನ್, “ಸಮಾಜ ಸೇವಕರು ಅಂದರೆ ಅವರು ಸಮಾಜ ಸೇವಕರು ಮಾತ್ರ. ಅವರಲ್ಲಿ ಜಾತಿ ಧರ್ಮ ಹುಡುಕುವುದು ಸರಿಯಲ್ಲ. ಅದಾಗ್ಯೂ ಬೇರೆ-ಬೇರೆ ಸಮುದಾಯದವರು ಇದ್ದರೂ ಒಳ್ಳೆಯದೇ. ಆದರೆ ಇದನ್ನೇ ನೆಪ ಮಾಡಿಕೊಂಡು ವಿರೋಧ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಕೋಮು ಬಣ್ಣ ಹಚ್ಚುವುದು ಸರಿಯಲ್ಲ” ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈತಸಂಘದ ಉಪಾಧ್ಯಕ್ಷರಾದ ವೀರಸಂಗಯ್ಯ, “ಬಿಬಿಎಂಪಿಯ ಈ ನಿರ್ಧಾರದಿಂದ ಸಾಮರಸ್ಯ ಹೆಚ್ಚಾಗುತ್ತದೆಯೇ ಹೊರತು ಹಾಳಾಗುವುದಿಲ್ಲ. ಯಾವುದೇ ಆದರ್ಶ ವ್ಯಕ್ತಿಗಳನ್ನ ಸಾಧಕರನ್ನ ಅವರ ಜಾತಿ-ಧರ್ಮದ ಹಿನ್ನೆಲೆಯಲ್ಲಿ ನೋಡಬಾರದು. ಅವರನ್ನು ಮಹಾಮಾನವರನ್ನಾಗಿಯೇ ಸ್ವೀಕರಿಸಬೇಕು. ಹಾಗಾಗಿ ಅನಂತಕುಮಾರ್ ಹೆಗ್ಡೆ ಕೂಡ ಈ ಸೌಹಾರ್ದಯುತ ಭಾವನೆಗೆ ಒಳಪಡಬೇಕು ಎನ್ನುವುದು ನಮ್ಮ ಒತ್ತಾಯ” ಎಂದು ಹೇಳಿದರು.
ಇದನ್ನೂ ಓದಿ: ಶಾಹೀನ್ ಬಾಗ್ ಶೂಟರ್ನ ಪಕ್ಷಕ್ಕೆ ಸೇರಿಸಿ ಕೆಲವೇ ಗಂಟೆಗಳಲ್ಲಿ ಉಚ್ಛಾಟಿಸಿದ ಬಿಜೆಪಿ!