ವಂಚನೆ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿ ನೂರಾರು ಹೋರಾಟಗಾರರು ಹಲವಾರು ವರ್ಷಗಳಿಂದ ರಾಜಕೀಯ ಖೈದಿಗಳಾಗಿ ಜೈಲಿನಲ್ಲಿದ್ದರೂ ಅವರಿಗೆ ಏಕೆ ಜಾಮೀನು ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಖ್ಯಾತ ಸ್ಟಾಂಡಪ್ ಕಮಿಡಿಯನ್ ಕುನಾಲ್ ಕಮ್ರ ಸುಪ್ರೀಂ ತೀರ್ಪನ್ನು ಟ್ರೋಲ್ ಮಾಡಿದ್ದರು. ಅದನ್ನು ಖಂಡಿಸಿ ಅವರ ವಿರುದ್ದ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಲು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅನುಮತಿ ನೀಡಿರುವುದು ಸರಿಯಷ್ಟೆ. ಈಗ ಟ್ವಿಟ್ಟರ್ನಲ್ಲಿ ಮತ್ತಷ್ಟು ಟ್ರೋಲ್ಗಳು ಆರಂಭವಾಗಿವೆ.
ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಚಂದ್ರಚೂಡ್ರವರು “ನಾನು ಆತನ ಚಾನೆಲ್ ನೋಡುವುದೇ ಇಲ್ಲ. ನಿಮಗೆ ಕಷ್ಟವಾದರೆ ನೀವು ಆತನ ಚಾನೆಲ್ ನೋಡಬೇಡಿ, ನಿರ್ಲಕ್ಷ್ಯ ಮಾಡಿ” ಎಂದು ಹೇಳಿದ್ದರು. ಈಗ ಅದೇ ಮಾತುಗಳನ್ನು ಪುನರುಚ್ಚರಿಸುತ್ತಿರುವ ನೆಟ್ಟಿಗರು “ಕುನಾಲ್ ಕಮ್ರ ಟ್ವೀಟ್ ನಿಮಗೆ ಇಷ್ಟವಾಗದಿದ್ದರೆ ಅದನ್ನು ಓದಬೇಡಿ ಅಷ್ಟೇ” ಅವರ ಮೇಲೆಕೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುತ್ತೀರಿ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸುತ್ತಿದ್ದಾರೆ.
If you don't like Kunal Kamra's tweets, don't read it.
— PuNsTeR™ (@Pun_Starr) November 11, 2020
ಅರ್ನಾಬ್ ಗೋಸ್ವಾಮಿಗೆ ನವೆಂಬರ್ 9 ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಆಗ ಶೆಫಾಲಿ ವೈದ್ಯೆ ಎಂಬುವವರು “ಭಾರತವು ಸರಿಯಾದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿಲ್ಲ. ನಾವು ಇದುವರೆಗೂ ಹೊಂದಿರುವುದು ಕೇವಲ ಜೋಕ್ ಅಷ್ಟೇ” ಎಂದು ಟ್ವೀಟ್ ಮಾಡಿದ್ದರು.
ನವೆಂಬರ್ 11 ರಂದು ಸುಪ್ರೀಂ ಕೋರ್ಟ್ ಅರ್ನಾಬ್ಗೆ ಜಾಮೀನು ನೀಡಿತ್ತು. ಆ ಸಂದರ್ಭದಲ್ಲಿ ಕುನಾಲ್ ಕಮ್ರ “ಈ ದೇಶದ ಸುಪ್ರೀಂ ಕೋರ್ಟ್ ಎನ್ನುವುದು, ಈ ದೇಶದ ಸುಪ್ರೀಂ ಜೋಕ್” ಎಂದು ಟ್ರೋಲ್ ಮಾಡಿದ್ದರು. ಅಲ್ಲದೇ ನ್ಯಾಯಾಂಗ ನಿಂದನೆ ಎನ್ನುವುದು ಹೀಗೆ ತೋರುತ್ತದೆ ಎಂದು ಸುಪ್ರೀಂ ಕೋರ್ಟಿಗೆ ಕೇಸರಿ ಬಣ್ಣ ಬಳಿದು, ಬಿಜೆಪಿ ಬಾವುಟ ಹಾರಿಸಿರುವ ಚಿತ್ರವೊಂದನ್ನು ಅವರು ಟ್ವೀಟ್ ಮಾಡಿದ್ದರು.
“ಇದನ್ನು ನ್ಯಾಯಾಂಗ ನಿಂದನೆ ಎಂದು ಕರೆಯಬೇಡಿ, ಇದನ್ನು ಭವಿಷ್ಯದ ರಾಜ್ಯಸಭೆ ಸ್ಥಾನದ ನಿಂದನೆ ಎಂದು ಕರೆಯಿರಿ” ಎಂಬುದಾಗಿ ನೇರವಾಗಿ ಚಂದ್ರಚೂಡ್ರವರನ್ನು ಟೀಕಿಸಿದ್ದ ಕುನಾಲ್ ಕಮ್ರರವರ ನಾಲ್ಕು ಟ್ವೀಟ್ಗಳ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಗೆ ಗುರುವಾರ ಅನುಮತಿ ನೀಡಲಾಯಿತು. ಇದನ್ನು ವಿರೋಧಿಸಿ ಪ್ರತಿರೋಧದ ಭಾಗವಾಗಿ ಕವಿತಾ ಕೃಷ್ಣನ್, ರವಿ ನಾಯರ್, ಅಶೋಕ್ ಸ್ವೈನ್ ಸೇರಿದಂತೆ ನೂರಾರು ಹೋರಾಟಗಾರರು ಕುನಾಲ್ ಕಮ್ರರವರ ಆ ಟ್ವೀಟ್ಗಳನ್ನು ರೀಟ್ವೀಟ್ ಮಾಡುವ ಮೂಲಕ ಅವರಿಗೆ ಬೆಂಬಲ ಸೂಚಿಸಿದ್ದಾರೆ.
If CJIs become RS MPs as soon as they retire, aren't they asking for this? Citizens have a right to say this, and comedians have a right to poke fun at it. #kunalkamra #ContemptOfCourt https://t.co/M4fU0uW1z0
— Kavita Krishnan (@kavita_krishnan) November 12, 2020
ಅಲ್ಲದೇ ನೀವು ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುವುದಾದರೆ ಈ ದೇಶದ ನ್ಯಾಯಾಂಗದಲ್ಲಿ ನಂಬಿಕೆಯಿಲ್ಲ ಎಂದು ನವೆಂಬರ್ 9 ರಂದು ಟ್ವೀಟ್ ಮಾಡಿದ್ದ ಶೆಫಾಲಿ ವೈದ್ಯೆಯ ವಿರುದ್ಧ ಮೊದಲು ವಿಚಾರಣೆ ನಡೆಸಿ. ನಂತರ ಕುನಾಲ್ ಮೇಲೆ. ನೀವು ಕ್ಯು ವ್ಯವಸ್ಥೆಯನ್ನು ಪಾಲಿಸಬೇಕು ಎಂದು ಟ್ರೋಲ್ ಮಾಡಿದ್ದಾರೆ.
If justice is not from your side then troll justice system, is it?#kunalkamra pic.twitter.com/1lgBtZ3GhM
— Neutral?? (@Neutral99589580) November 13, 2020
ರಿಲ್ಯಾಕ್ಸ್, ಹುಡುಗರೇ. ಕುನಾಲ್ ಕಮ್ರಾ ಅವರಿಗೆ ಏನೂ ಆಗುವುದಿಲ್ಲ. ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಇದೆ ಎಂದು ಪನ್ಸ್ಟಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
Relax, guys. Nothing will happen to Kunal Kamra. Supreme Court is there to protect the personal liberty of individuals.
— PuNsTeR™ (@Pun_Starr) November 12, 2020
ಜಸ್ಟಿಸ್ ಚಂದ್ರಚೂಡ್ ಅವರ ತೀರ್ಪು ಸರಿಯಾಗಿತ್ತು. ಅದರ ಟೀಕೆ ಸರಿಯಾದುದಲ್ಲ. ಇನ್ನೊಂದು ಕೇಸಿನಲ್ಲಿ ಅನ್ಯಾಯವಾಗಿದೆಯೆಂದು ಹೇಳುವುದಕ್ಕೆ ಈ ಜಡ್ಮೆಂಟನ್ನು ದೂರವುದು ತಪ್ಪಾಗುತ್ತದೆ. ನಾವೇ ಘನತೆಯಿತ್ತು ಕಟ್ಟಿಕೊಂಡ ಸಂಸ್ಥೆಯೊಂದನ್ನು ಟೀಕಿಸುವಾಗ ನಾವು ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕು . ಇಷ್ಟಾಗಿಯೂ ಕುನಾಲ್ ಅವರನ್ನು ಕೋರ್ಟ್ ಮನ್ನಿಸುತ್ತದೆಂದು ನಾನು ಭಾವಿಸಿದ್ದೇನೆ. ಇನ್ನು ವ್ಯವಸ್ಥೆಯಲ್ಲಿನ ಪಕ್ಷಪಾತದ ಬಗ್ಗೆ. ಒಕ್ಕೂಟ ಸರ್ಕಾರ ತನಗೆ ಬೇಕಾದಂತೆ ನಿಯಂತ್ರಿಸುತ್ತಿರುವುದರ ಬಗ್ಗೆ. ಆ ಬಗ್ಗೆ ಯಾವುದೇ ಸಂಶಯ ಬೇಡ. ಸುಧಾ ಭಾರದ್ವಾಜ್, ತೇಲ್ತುಂಬೆ ಕೇಸ್ ನ್ಯಾಯಮೂರ್ತಿ ಚಂದ್ರಚೂಡ್ ಪೀಠದ ಮುಂದೆ ಬಂದರೆ ನಿನ್ನೆ ಕೊಟ್ಟ ಕಾರಣ ನೀಡಿ ಚಂದ್ರಚೂಡ್ ಸರ್ಕಾರಕ್ಕೊಂದಿಷ್ಟು, ಪೊಲೀಸರಿಗೊಂದಿಷ್ಟು ಉಗಿದು ಬೇಲ್ ಕೊಡುತ್ತಾರೆ. ಆದರೆ ತನಗಾಗದ ಈ ಸಾಮಾಜಿಕ ಕಾರ್ಯಕರ್ತರ ಬೇಲ್ ಅರ್ಜಿ ಚಂದ್ರಚೂಡ್ ಪೀಠದ ಮುಂದೆ ಬರದಂತೆ ಈ ಸರ್ಕಾರ ನೋಡುಕೊಳ್ಳುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಬೇಡ. ಇಷ್ಟರವರೆಗೆ ಆಗಿರುವುದೂ ಅದೇ. ನಿನ್ನೆ ಆರ್ನಬ್ ಗೆ ಬೇಲ್ ಸಿಕ್ಕಿದೊಡನೆ ಗಾಳಿಯಲ್ಲಿ ಹಾರಿದವರಿಗೆ ಈ ಕಟು ಸತ್ಯ ಗೊತ್ತಿದ್ದರೆ ಈ ಅನ್ಯಾಯದ ವ್ಯವಸ್ಥೆಯಲ್ಲಿ ನಿಮ್ಮ ಪಾಲೂ ಇದೆ ಎಂಬ ಅರಿವು ಮೂಡಲಿ ಎಂದು ಕುಂಟಾಡಿ ನಿತೇಶ್ ಎಂಬುವವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆತನ ಚಾನೆಲ್ ನೋಡುವುದೇ ಇಲ್ಲ: ಅರ್ನಾಬ್ಗೆ ಜಾಮೀನು ನೀಡಿದ ನ್ಯಾಯಮೂರ್ತಿ ಹೇಳಿಕೆ!