ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಬಂಧನ ವಿರೋಧಿಸಿ, ಅವರನ್ನು ಶೀಘ್ರ ಬಿಡುಗಡೆ ಮಾಡುವಂತೆ ಕಾರ್ನೆಲ್ ವೆಸ್ಟ್, ನೋಮ್ ಚೋಮ್ಸ್ಕಿ, ಅಮಿತಾವ್ ಘೋಷ್, ಸಲ್ಮಾನ್ ರಶ್ದಿ ಮತ್ತು ಮೀರಾ ನಾಯರ್ ಸೇರಿದಂತೆ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಚಲನಚಿತ್ರ ನಿರ್ಮಾಪಕರು ಮತ್ತು ಲೇಖಕರು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.
ಉಮರ್ ಖಾಲಿದ್ ಅವರನ್ನು ಬಿಡುಗಡೆ ಮಾಡಬೇಕು. ಜೊತೆಗೆ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಕಾಯ್ದೆ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸುಳ್ಳು ಪ್ರಕರಣಗಳಡಿ ಬಂಧಿತರಾಗಿರುವ ಎಲ್ಲರನ್ನು ಬಂಧಮುಕ್ತಗೊಳಿಸಿ ಎಂದು ನಾವು ಭಾರತ ಸರ್ಕಾರವನ್ನು ಕೋರುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಫೆಬ್ರವರಿಯಲ್ಲಿ ದೆಹಲಿಯ ಈಶಾನ್ಯ ಭಾಗಗಳಲ್ಲಿ ಸಂಭವಿಸಿದ ಗಲಭೆಗಳಲ್ಲಿ ಉಮರ್ ಖಾಲಿದ್ ಪಾತ್ರವಿದೆ ಎಂದು ಸೆಪ್ಟೆಂಬರ್ 13 ರಂದು ದೆಹಲಿ ಪೊಲೀಸರ ವಿಶೇಷ ಘಟಕ ಅವರನ್ನು ಬಂಧಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ನಿನ್ನೆ(ಸೆ.24) ದೆಹಲಿ ನ್ಯಾಯಾಲಯ ಅಕ್ಟೋಬರ್ 22 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಬೇಕೆಂದು ಆದೇಶಿಸಿದೆ.
ಇದನ್ನೂ ಓದಿ: ಉಮರ್ ಖಾಲಿದ್ಗೆ ಅ. 22 ರವರೆಗೆ ನ್ಯಾಯಾಂಗ ಬಂಧನ: ದೆಹಲಿ ಕೋರ್ಟ್
ತಜ್ಞರ ಹೇಳಿಕೆಯಲ್ಲಿ “ಖಾಲಿದ್ ತಮ್ಮ ದೇಶಕ್ಕಾಗಿ ಬದ್ಧತೆ ತೋರಿದ್ದಾರೆ. ಸಮಾನ ಪೌರತ್ವಕ್ಕಾಗಿ ಆಗ್ರಹಿಸಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಧ್ವನಿ ಎತ್ತಿದ್ದಾರೆ. ಪ್ರತಿಭಟನೆಗಾಗಿ ತಾನು ಪಡೆದ ಶಿಕ್ಷಣವನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಉಮರ್ ಖಾಲಿದ್ ಮಾಡಿದ ಅಪರಾಧ ಯಾವುದು?” ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಖಾಲಿದ್ ಹೊರತು ಪಡಿಸಿ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿಸಿದವರ ಹೆಸರಿನ ಪಟ್ಟಿ ಹೀಗಿದೆ. ಇಶ್ರತ್ ಜಹಾನ್, ಗುಲ್ಫಿಷಾ ಫಾತಿಮಾ, ಶಾರ್ಜೀಲ್ ಇಮಾಮ್, ಖಾಲಿದ್ ಸೈಫಿ, ಸಫೂರಾ ಜರ್ಗರ್, ಮೀರನ್ ಹೈದರ್, ಆಸಿಫ್ ಇಕ್ಬಾಲ್ ತನ್ಹಾ, ಅಥರ್ ಖಾನ್, ಉಮರ್ ಖಾಲಿದ್, ನತಾಶಾ ನರ್ವಾಲ್, ದೇವಂಗನಾ ಕಾಳಿತಾ ಮತ್ತು ಇತರೆ 10 ಮಂದಿ ಇದ್ದಾರೆ. ಇದರಲ್ಲಿ ಬಹುತೇಕರು ಮುಸ್ಲಿಂ ಧರ್ಮಿಯರೆ ಆಗಿದ್ದಾರೆ ಏಕೆ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ದೇವಂಗನಾ ಕಾಳಿತಾ ಮತ್ತು ನತಾಶಾ ನರ್ವಾಲ್ ಇಬ್ಬರು ಮುಸ್ಲಿಮೇತರರು ಮತ್ತು ಯುವ ಸ್ತ್ರೀವಾದಿಗಳು, ಇವರು ಪುರುಷ ಪ್ರಾಬಲ್ಯದ ಕ್ಯಾಂಪಸ್ಗಳಲ್ಲಿ ಮಹಿಳಾ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡಿದವರು. ಇನ್ನು 3 ತಿಂಗಳ ಗರ್ಭಿಣಿ ಸಫೂರಾ ಜರ್ಗರ್ರನ್ನು ಕೊರೊನಾ ಹೆಚ್ಚಾಗುತ್ತಿದ್ದ ಸಮಯದಲ್ಲೂ 2 ತಿಂಗಳ ಕಾಲ ಕಿಕ್ಕಿರಿದ ಜೈಲಿನಲ್ಲಿ ಬಂಧಿಸಲಾಗಿತ್ತು. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮಾನವೀಯ ನೆಲೆಯಲ್ಲಿ ಆಕೆಗೆ ಜಾಮೀನು ನೀಡಲಾಗಿದೆ ಎಂದು ಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಫೂರಾ ಜರ್ಗರ್ಗೆ ಮಾನವೀಯ ಆಧಾರದ ಮೇಲೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ
ಪ್ರಸ್ತುತ, ಭಯೋತ್ಪಾದಕ ಕಾನೂನಿನಡಿಯಲ್ಲಿ ಸುಳ್ಳು ಆರೋಪ ಹೊತ್ತಿರುವ 21 ಜನರಲ್ಲಿ 19 ಮಂದಿ ಮುಸ್ಲಿಮರು. ಅವರ ಗುರುತೇ ಅವರನ್ನು ಅಪರಾಧಿಯಾಗಿಸುತ್ತದೇ ಎಂದರೇ, ಜಾತ್ಯತೀತ ರಾಷ್ಟ್ರವಾಗಿ ಭಾರತ ಜಾಗತಿಕ ಮಟ್ಟದಲ್ಲಿ ನಾಚಿಕೆಪಡುತ್ತದೆ ಎಂದು ತಜ್ಞರು ವಿಷಾಧಿಸಿದ್ದಾರೆ.
ದೆಹಲಿ ಪೊಲೀಸರು ಬಂಧಿಸಿರುವ ಇವರು ಭಯೋತ್ಪಾದಕರಲ್ಲ. ದೆಹಲಿ ಗಲಭೆಗಳ ಬಗ್ಗೆ ಪೊಲೀಸರ ತನಿಖೆ ತನಿಖೆಯೇ ಅಲ್ಲ. ಅದೊಂದು ಪೂರ್ವನಿಯೋಜಿತ ಕೃತ್ಯ. ಯಾವುದೇ ರಾಷ್ಟ್ರದ ಯುವಕರು ಆ ರಾಷ್ಟ್ರದ ಭವಿಷ್ಯ. ಅವರಿಗೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಪ್ರಜಾಪ್ರಭುತ್ವ ಭವಿಷ್ಯಕ್ಕೆ ನ್ಯಾಯ ಒದಗಿಸಿದಂತೆ ಎಂದಿದ್ದಾರೆ.
ಹೇಳಿಕೆಗೆ ಸಹಿ ಮಾಡಿದವರಲ್ಲಿ ಪತ್ರಕರ್ತ ಪಿ.ಸಾಯಿನಾಥ್, ನಟ ರತ್ನ ಪಾಠಕ್ ಷಾ, ಚಲನಚಿತ್ರ ನಿರ್ಮಾಪಕ ನಕುಲ್ ಸಾಹ್ನಿ, ಲೇಖಕಿ ಅರುಂಧತಿ ರಾಯ್, ಮತ್ತು ಪ್ರಸಿದ್ಧ ವಿದ್ವಾಂಸರಾದ ಜುಡಿತ್ ಬಟ್ಲರ್, ರೋಮಿಲಾ ಥಾಪರ್ ಮತ್ತು ಶೆಲ್ಡನ್ ಪೊಲಾಕ್ ಕೂಡ ಇದ್ದಾರೆ.