ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಇದರ ರಭಸಕ್ಕೆ ತುತ್ತಾಗುತ್ತಿರುವವರಲ್ಲಿ ಸಿನಿಮಾ ತಾರೆಯರು ಸೇರಿಂದಂತೆ ರಾಜಕಾರಣಿಗಳು ಹೊರತಾಗಿಲ್ಲ. ಆದರೆ ನಾವು ಅತ್ಯುತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಆಳುವ ಸರ್ಕಾರಗಳ ಸಚಿವರು ಮಾತ್ರ ತಮಗೆ ವೈರಸ್ ತಗುಲಿದಾಗ ಸರ್ಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ! ಈ ಕುರಿತು ಸ್ಕ್ರೋಲ್.ಇನ್ ವಿಶೇಷ ವರದಿ ಮಾಡಿದೆ.
ನಿನ್ನೆ ಮಧ್ಯಾಹ್ನ ಗೃಹ ಸಚಿವ ಅಮಿತ್ ಷಾರವರು ತಮಗೆ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದರು. ತಮಗೆ ಯಾವುದೇ ರೋಗಲಕ್ಷಣಗಳು ಇಲ್ಲಿದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಕೂಡಲೇ ಗುರ್ಗಾವ್ ಬಳಿಯ ಮೇದಂತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲಾದ ಗೃಹಸಚಿವ ಅಮಿತ್ ಷಾ
ನಂತರ ಸಂಜೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೊರೊನಾ ಪಾಸಿಟಿವ್ ಆಗಿದ್ದಾರೆ. ಕೂಡಲೇ ಅವರು ಬೆಂಗಳೂರಿನ ಮಣಿಪಾಲ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಬಹಳ ಹತ್ತಿರದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಡಿಯೂರಪ್ಪನವರ ಮಗಳು ಸಹ ಕೋವಿಡ್ ಪಾಸಿಟಿವ್ ಆಗಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೊರೊನಾ ಪಾಸಿಟಿವ್ ಆಗಿದ್ದು, ಅವರು ಭೋಪಾಲ್ ಚಿರಾಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅಲ್ಲಿನ ರಾಜ್ಯ ಕಾಂಗ್ರೆಸ್ ಸರ್ಕಾರಿ ಆಸ್ಪತ್ರೆಯಲ್ಲಿ ಏಕೆ ಚಿಕಿತ್ಸೆ ಪಡಯುತ್ತಿಲ್ಲ ಎಂದು ಟೀಕಿಸಿದೆ.
ತಮಿಳುನಾಡಿನ ರಾಜ್ಯಪಾಲರಾದ ಭನ್ವರಿಲಾಲ್ ಪುರೋಹಿತ್ ಸಹ ಕೊರೊನಾ ಪಾಸಿಟಿವ್ ಆಗಿದ್ದಾರೆ. ಇವರಿಗೆ ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ಮನೆಯಲ್ಲಿಯೇ ಐಸೋಲೇಷನ್ನಲ್ಲಿರಲು ವೈದ್ಯರು ಸೂಚಿಸಿದ್ದಾರೆ. ಇವರಿಗೆ ಟೆಸ್ಟ್ ಸೇರಿದಂತೆ ಇತರ ಮಾರ್ಗದರ್ಶನಗಳನ್ನು ನೀಡುವ ಕೆಲಸವನ್ನು ಕಾವೇರಿ ಎಂಬ ಖಾಸಗಿ ಆಸ್ಪತ್ರೆ ನಿರ್ವಹಿಸುತ್ತಿದೆ.
ತಮಿಳುನಾಡಿನ ಇಂಧನ ಸಚಿವ ಪಿ ತಂಗಮಣಿ ಅಪೋಲೊ ಆಸ್ಪತ್ರೆಯಲ್ಲಿ, ಶಿಕ್ಷಣ ಸಚಿವ ಕೆ.ಪಿ ಅನ್ಬುಗಳಂ ಮತ್ತು ಸಹಕಾರ ಸಚಿವ ಸೆಲ್ಲೂರು ಕೆ.ರಾಜ್ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಆರ್ಥೋಪೆಡಿಕ್ ಅಂಡ್ ಟ್ರಾಮಾಲಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಂಜಾಬ್ನ ಗ್ರಾಮೀಣಾಭಿವೃದ್ದಿ ಸಚಿವ ತ್ರಿಪಾಠ್ ಸಿಂಗ್ ಭಾಜ್ವಾ ಕೊರೊನಾ ಪಾಸಿಟಿವ್ ಆಗಿದ್ದು ಅವರು ಮೊಹಾಲಿಯ ಫೋರ್ಟಿಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿಯ ಆರೋಗ್ಯ ಸಚಿವ ಸತ್ಯೆಂದರ್ ಜೈನ್ ಕೊರೊನಾ ಪಾಸಿಟಿವ್ ಆದಾಗ ಜೂನ್ 15 ರಂದು ಸರ್ಕಾರಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜೂನ್ 16 ರಂದು ಅವರನ್ನು ದೆಹಲಿಯ ಮಾಕ್ಸ್ ಆಸ್ಪತ್ರೆಗೆ ವರ್ಗಾಹಿಸಲಾಯಿತು. ಅವರಿಗೆ ಪ್ಲಾಸ್ಲಾ ಚಿಕಿತ್ಸೆ ಅಗತ್ಯವಿದ್ದು, ಅದನ್ನು ಮಾಡಲು ಸರ್ಕಾರಿ ಆಸ್ಪತ್ರೆಗೆ ಅನುಮತಿ ಸಿಗದಿದ್ದ ಕಾರಣಕ್ಕೆ ಮಾತ್ರ ಅವರನ್ನು ವರ್ಗಾಹಿಸಲಾಗಿತ್ತು ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ವೃತ್ತಿಪರ ಶಿಕ್ಷಣ ಸಚಿವೆ ಕಮಲ್ ರಾಣಿ ವರುಣ್ ಕೊರೊನಾ ಪಾಸಿಟಿವ್ ಆದಾಗ ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸನ್ಸ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಆಗಸ್ಟ್ 2 ರಂದು ನಿಧನ ಹೊಂದಿದ್ದರು.
ಇವಿಷ್ಟು ಉದಾಹರಣೆಗಳಾದರೆ ಇನ್ನು ಹಲವಾರು ರಾಜಕಾರಣಿಗಳು, ಚಿತ್ರನಟರು ಕೊರೊನಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಳುವ ಸರ್ಕಾರಗಳಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇಲ್ಲ ಎಂದರೆ ಏನರ್ಥ?
ಈ ಎಲ್ಲರೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದರೆ ಒಂದಷ್ಟು ಮೂಲಸೌಕರ್ಯ ಹೆಚ್ಚುತ್ತಿತ್ತು ಮತ್ತು ವೈದ್ಯರು, ಸಿಬ್ಬಂದಿ ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡುತ್ತಿದ್ದರು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಒತ್ತಾಯಿಸಿದ್ದಾರೆ.
ಭಾರತಕ್ಕೆ ಕೊರೊನಾ ಕಾಲಿಟ್ಟು ಆರು ತಿಂಗಳಾಗಿದೆ. ಆದರೂ ಆಳುವ ಸರ್ಕಾರಗಳು ದಕ್ಷ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವಲ್ಲಿ ವಿಫಲರಾಗಿದ್ದಾರೆ ಅಥವಾ ಆ ಇಚ್ಛಾಶಕ್ತಿ ಅವರಲಿಲ್ಲ ಎಂಬುದು ತಿಳಿಯುತ್ತದೆ. ಎಲ್ಲಿಯವರೆಗೆ ಅತ್ಯುತ್ತಮ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಖಾತ್ರಿಯಾಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಕೊರೊನಾದಿಂದ ಸಾವನಪ್ಪಿದ ಉತ್ತರಪ್ರದೇಶದ ಸಚಿವೆ ಕಮಲ್ ರಾಣಿ ವರುಣ್