2021ಕ್ಕೆ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಒಂದು ಕಾಲಕ್ಕೆ ಚಿತ್ರರಂಗದ ದಿಗ್ಗಜರಿಂದ ಆಳಲ್ಪಟ್ಟ ತಮಿಳುನಾಡಿನಲ್ಲಿ ಮತ್ತೆ ತಮ್ಮ ಪ್ರಾಬಲ್ಯ ಮೆರೆಯಲು ಹಿರಿಯ ನಟರಾದ ರಜಿನಿಕಾಂತ್, ಕಮಲ್ ಹಾಸನ್ ಪ್ರಯತ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ‘ಇಳಯ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಎಂಬ ಪಕ್ಷ ಸದ್ದು ಮಾಡುತ್ತಿದೆ.
ತಮಿಳಿನ ಖ್ಯಾತ ನಟ, ದಳಪತಿ ಬಿರುದಾಂಕಿತ ವಿಜಯ್ ಹೆಸರಿನಲ್ಲಿ ಅವರ ತಂದೆ ಎಸ್.ಎ ಚಂದ್ರಶೇಖರ್ ರಾಜಕೀಯ ಪಕ್ಷವೊಂದನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ ತನ್ನ ಮಗ ವಿಜಯ್ ಇದನ್ನು ಪ್ರಚಾರ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ವಿಜಯ್ ಮಾತ್ರ ತಮ್ಮ ಅಭಿಮಾನಿಗಳಲ್ಲಿ ಇದು ನನ್ನ ಒಪ್ಪಿಗೆಯಿಲ್ಲದೇ ನೋಂದಣಿಯಾಗಿರುವ ಪಕ್ಷ. ಇದಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರು, ಭಾವಚಿತ್ರವನ್ನು ಬಳಸಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಯಾರೂ ಪಕ್ಷ ಸೇರಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಅವರ ತಂದೆ ಚಂದ್ರಶೇಖರ್ ಮಾತ್ರ ತಮ್ಮ ಮಗನ ಹೆಸರಿನ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ. ನನಗೆ ರಾಜಕೀಯ ಪಕ್ಷವೊಂದು ಬೇಕಾಗಿದೆ. ಹಾಗಾಗಿ ನೋಂದಣಿ ಮಾಡಿಸಿದ್ದೇನೆ ಎಂದಿದ್ದಾರೆ.
ವಿಜಯ್ರವರ ಸರ್ಕಾರ್ ಮತ್ತು ಮೆರ್ಸಲ್ ಚಿತ್ರಗಳಲ್ಲಿ ಅವರು ಆಳುವ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವ ಡೈಲಾಗ್ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಅದೇ ಸಮಯದಲ್ಲಿ ಅವರ ಮನೆ ಮೇಲೆ ಐಟಿ ದಾಳಿಗಳು ಸಹ ನಡೆದಿದ್ದವು. ಇವೆಲ್ಲವೂ ಅವರು ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಉಹಾಪೋಹಗಳನ್ನು ಸೃಷ್ಟಿಸಿದ್ದವು. ಆದರೆ ವಿಜಯ್ ಮಾತ್ರ ಅವೆಲ್ಲವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ರಜನಿಕಾಂತ್ ಬೆಂಬಲ ಕೇಳುತ್ತೇನೆ: ಕಮಲ್ ಹಾಸನ್