ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಮಗ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ Power TV ಯ ಪ್ರಸಾರಕ್ಕೆ ತೆಡೆಯೊಡ್ಡಲಾಗಿದೆ. ಇದನ್ನು ಸಿಎಂ ಮತ್ತು ಅವರ ಮಗ ವಿಜಯೇಂದ್ರ ಮಾಡುತ್ತಿದ್ದಾರೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಪವರ್ ಟಿವಿ ಇದಕ್ಕೆ ಬಗ್ಗುವುದಿಲ್ಲ. ನಾವು ಕಾನೂನಾತ್ಮವಾಗಿ ಹೋರಾಡುತ್ತೇವೆ ಎಂದು ಪವರ್ ಟಿವಿಯ ಪ್ರಿನ್ಸಿಪಲ್ ಎಡಿಟರ್ ರಹಮಾನ್ ಹಾಸನ್ ಹೇಳಿದ್ದಾರೆ.
ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಕಳೆದ ಹಲವು ದಿನಗಳಿಂದ ದಾಖಲೆ ಸಹಿತ ಸತತವಾಗಿ ವರದಿ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ “Power TV”ಯ ಪ್ರಸಾರವನ್ನು ನಿನ್ನೆ ರಾತ್ರಿಯಿಂದ ತಡೆಹಿಡಿಯಲಾಗಿದೆ.
ಇದನ್ನೂ ಓದಿ: ಸಿಎಂ ಮಗನ ಭ್ರಷ್ಟಾಚಾರ ಬಯಲು: Power TV ಪ್ರಸಾರಕ್ಕೆ ತಡೆ!
ಈ ಕುರಿತು ಇಂದು ಬೆಳಿಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಹಮಾನ್ ಹಾಸನ್, “ಸಿಸಿಬಿ ಅಧಿಕಾರಿಗಳು ನಿನ್ನೆ ಸರ್ಚ್ ವಾರೆಂಟ್ ತಂದು ಪವರ್ ಟಿವಿಯ ಲೈವ್ ಅನ್ನು ತಡೆ ಹಿಡಿದಿದ್ದಾರೆ. ನಮ್ಮ ಹಾರ್ಡ್ಡಿಸ್ಕ್, ಲ್ಯಾಪ್ಟಾಪ್ ಇತ್ಯಾದಿ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ನಮ್ಮ ಸರ್ವರ್ ರೂಮ್ಗೆ ತೆರಳಿ ನಮ್ಮ ಮುಖ್ಯವಾದ ಸರ್ವರ್ನಲ್ಲಿರುವ ಡಾಟಾ ಎಲ್ಲವೂ ಬೇಕು ಎಂದಿದ್ದಾರೆ, ಅದಕ್ಕೆ ನಾವು ಡಾಟಾ ಎಲ್ಲವನ್ನೂ ನಿಮಗೆ ಕಾಪಿ ಮಾಡಿ ಕೊಡುತ್ತೇವೆ ಎಂದೆವು ಆದರೆ ಅವನ್ನು ಕೇಳದೆ ಸಂಪೂರ್ಣ ಸರ್ವರ್ ಸಿಸ್ಟಂ ಅನ್ನೇ ಪಡೆದುಕೊಂಡಿದ್ದಾರೆ. ಇದರಿಂದಾಗಿ ನಮ್ಮ ಲೈವ್ ಕಟ್ ಆಗಿದೆ” ಎಂದಿದ್ದಾರೆ.
“ಇಷ್ಟೇ ಅಲ್ಲದೆ, ಫೇಸ್ಬುಕ್ ಖಾತೆಗಳನ್ನು, ಯೂಟ್ಯೂಬ್ ಚಾನೆಲ್ನ ಪಾಸ್ವರ್ಡ್ ಚೇಂಜ್ ಮಾಡಿ ಅದರ ಪ್ರಸಾರ ನಿಲ್ಲಿಸಿದ್ದಾರೆ. ಇದು ಖಂಡಿತವಾಗಿಯೂ ಅಧಿಕಾರದ ದುರುಪಯೋಗ, ಇದನ್ನು ಸಿಎಂ ಮತ್ತು ಅವರ ಮಗ ಇದನ್ನು ಮಾಡಿದ್ದಾರೆ ಎಂಬುವುದರಲ್ಲಿ ಅನುಮಾನವೆ ಇಲ್ಲ. ಯಾಕೆಂದರೆ ನಾವು ಅವರ ಭ್ರಷ್ಟಾಚಾರವನ್ನು ಸುದ್ದಿ ಮಾಡಿದ್ದೆವು. ಮಾಧ್ಯಮದ ಸ್ವಾತಂತ್ಯ್ರವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ರಹಮಾನ್ ಹೇಳಿದ್ದಾರೆ.
“ಆದರೆ ನಮ್ಮ ಪ್ರತಿಪಾದನೆಯೇನೆಂದರೆ ನಮ್ಮ ಎಂ.ಡಿ ರಾಕೇಶ್ ಶೆಟ್ಟಿಯವರ ಮೇಲೆ ಏನೇ ಪ್ರಕರಣಗಳಿದ್ದರೂ ಅದನ್ನು ಕೋರ್ಟ್ನಲ್ಲಿ ಇತ್ಯರ್ಥ ಮಾಡಬೇಕು. ಆದರೆ ಚಾನೆಲ್ ತಡೆಹಿಡಿಯುವುದು ಉದ್ಯೋಗಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಇದು ಖಂಡನೀಯ. ಪತ್ರಕರ್ತರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದಕ್ಕೆ ನಾವು ಬಗ್ಗುವುದಿಲ್ಲ. ಇದನ್ನು ನಾವು ಕಾನೂನಾತ್ಮಕವಾಗಿ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ Power TV MD ಮನೆ ಮೇಲೆ ಪೊಲೀಸರ ದಾಳಿ!