ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ರಾಜ್ಯದಲ್ಲಿ ‘ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ’ಯನ್ನು ರಚಿಸಿದೆ. ಕೆಪಿಸಿಸಿಯ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಸಂಚಾಲಕರಾಗಿ ಕೆಪಿಸಿಸಿಯ ಮಾದ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬುರನ್ನು ನೇಮಿಸಲಾಗಿದೆ, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಎಂ ಕಾರ್ಯದರ್ಶಿ ಬಸವರಾಜು, ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನೀ, ಸಮಾಜವಾದಿ ಪಕ್ಷದ ಅಧ್ಯಕ್ಷ ಮಂಜಪ್ಪ ಯಾದವ್, ಡಿಎಂಕೆ ಕಾರ್ಯದರ್ಶಿ ರಾಮಸ್ವಾಮಿ ನಟೇಶನ್, ಎನ್ಸಿಪಿ (ಶರದ್ ಪವಾರ್) ಅಧ್ಯಕ್ಷ ಸಿ.ಎಸ್. ಇನಾಮ್ಹಾರ್, ಸಿಪಿಐ(ಎಂಎಲ್)ನ ಕಾರ್ಯದರ್ಶಿ ಕ್ಲಿಪ್ಪನ್ ಡಿ.ರೊಜೆರಿಯೋ, ಫಾರ್ವರ್ಡ್ಬ್ಲಾಕ್ನ ಕಾರ್ಯದರ್ಶಿ ಶಿವಶಂಕರ್ ಜಿ.ಆರ್, ಐಯುಎಂಎಲ್ನ ಅಧ್ಯಕ್ಷ ಜಾವಿದುಲ್ಲಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಇಂಡಿಯಾ ಬಣ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ 10 ರಾಜಕೀಯ ಪಕ್ಷಗಳ ಬೆಂಬಲ ಪಡೆಯಲು ಚರ್ಚೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಹಿಂದೆ ಹೇಳಿದ್ದರು.
ತುಮಕೂರಿನಲ್ಲಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದ್ದವು, ಸಿಪಿಐ ಪಕ್ಷವು 17,000 ಮತಗಳನ್ನು ಗಳಿಸಿತ್ತು ಮತ್ತು ದೇವೇಗೌಡರು ಕೇವಲ 12,000 ಮತದಾನದ ಅಂತರದಿಂದ ಚುನಾವಣೆಯಲ್ಲಿ ಸೋತರು. 2024ರ ಚುನಾವಣೆಯಲ್ಲಿ ಅಂತಹ ಪರಿಸ್ಥಿತಿ ನಮಗೆ ಬೇಕಾಗಿಲ್ಲ. ಆದ್ದರಿಂದ, ನಾವು ಎಲ್ಲಾ ಮೈತ್ರಿ ಪಕ್ಷಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡಲು, ನಾವು ಈ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಹೇಳಿದ್ದರು.
‘ಇಂಡಿಯಾ’ ಒಕ್ಕೂಟದಿಂದ ಕಾಂಗ್ರೆಸ್ಗೆ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಅನುಕೂಲವಾಗಲಿದೆ. ರಾಜಕಾರಣದಲ್ಲಿ 49 ಎಂದರೆ ಸೊನ್ನೆ, 51 ಎಂದರೆ ನೂರು ಎಂದರ್ಥ. ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಧ್ರುವನಾರಾಯಣ್ 1 ಮತದಿಂದ ಗೆದ್ದಿದ್ದರು. ದಿನೇಶ್ ಗುಂಡೂರಾವ್ ಅಲ್ಪ ಮತಗಳ ಅಂತರದಲ್ಲೇ ಗೆದ್ದರು. ಸೌಮ್ಯಾ ರೆಡ್ಡಿ 16 ಮತಗಳಿಂದ ಸೋತರು, ಹೀಗಾಗಿ ಒಂದೊಂದು ಮತವೂ ಮುಖ್ಯ ಎಂದು ಹೇಳಿದ್ದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆಯನ್ನು ಎದುರಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಣ್ಣ ಸಣ್ಣ ಪಕ್ಷಗಳ ಬೆಂಬಲವನ್ನು ಕೂಡ ಪಡೆಯಲು ಮುಂದಾಗಿದೆ. ಮತ ವಿಭಜನೆಯನ್ನು ತಡೆಗಟ್ಟಲು ಮಹತ್ವದ ತಂತ್ರವನ್ನು ರೂಪಿಸುತ್ತಿದೆ.
ಇದನ್ನು ಓದಿ: ಲೆಬನಾನ್ ಮೇಲೆ ಇಸ್ರೇಲ್ನಿಂದ ವೈಮಾನಿಕ ದಾಳಿ: ಹೆಚ್ಚಿದ ಪ್ರಾದೇಶಿಕ ಸಂಘರ್ಷದ ಭೀತಿ