“ಜಮ್ಮು ಕಾಶ್ಮಿರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ ನಿರ್ಧಾರದಿಂದ ನೀವು ತೃಪ್ತರಾಗಿದ್ದರೆ ನನ್ನ ಪಕ್ಷಕ್ಕೆ ಮತ ಹಾಕಬೇಡಿ” ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೋಮವಾರ(ಮಾ.8) ಹೇಳಿದ್ದಾರೆ.
ದೆಹಲಿಗೆ ಸಂದೇಶ ರವಾನಿಸಲು ಬಿಜೆಪಿ ಮತ್ತು ಅದರ ‘ಬಿ’ ಮತ್ತು ‘ಸಿ’ ತಂಡಗಳನ್ನು ಸೋಲಿಸುವಂತೆ ಫಾರೂಕ್ ಅಬ್ದುಲ್ಲಾ ಕೇಂದ್ರಾಡಳಿತ ಪ್ರದೇಶದ ಜನರಿಗೆ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಅಬ್ದುಲ್ಲಾ ಅವರು ಸೋಮವಾರ ಎನ್ಸಿ ಪಕ್ಷದ ಕ್ಷೇತ್ರ ಉಸ್ತುವಾರಿಗಳೊಂದಿಗೆ ಪಕ್ಷದ ಪ್ರಧಾನ ಕಚೇರಿ ನವಾ-ಇ-ಸುಬಾಹ್ನಲ್ಲಿ ಸಭೆ ನಡೆಸಿದ್ದಾರೆ.
ಜಮ್ಮು ಕಾಶ್ಮೀರದ ಜನರಲ್ಲಿ ಬಿಜೆಪಿ ವಿರುದ್ಧ ಕ್ರೋಧವಿದೆ. ಅದನ್ನು ಚುನಾವಣೆಯಲ್ಲಿ ಪ್ರದರ್ಶಿಸಬೇಕಿದೆ. ಜನರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಬಿಜೆಪಿಯು ಕಾಶ್ಮೀರದ ಜನರಿಗೆ ನೀಡಿದ್ದ ಭೂಮಿ, ಉದ್ಯೋಗದ ಹಕ್ಕುಗಳ ಭರವಸೆಗಳನ್ನು ಪೂರೈಸಿಲ್ಲ. ಈ ಬಗ್ಗೆ ಜನರಿಗೆ ಅರಿವು ಹೆಚ್ಚುತ್ತಿದೆ. ಬಿಜೆಪಿ ಧ್ವಂದ್ವ ನೀತಿಯ ಬಗ್ಗೆ ಜನರಿಗೆ ಗೊತ್ತಿದೆ. ಇವೆಲ್ಲದಕ್ಕೂ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಜನರು ಆಗಸ್ಟ್ 5, 2019 ರ ಕೇಂದ್ರ ಸರ್ಕಾರದ ನಿರ್ಧಾರದಿಂದ ತೃಪ್ತರಾಗಿದ್ದರೆ, ಅವರು ನ್ಯಾಷನಲ್ ಕಾನ್ಫರೆನ್ಸ್ಗೆ ಮತ ಹಾಕಬಾರದು. ಈ ಮೂಲಕ ದೆಹಲಿಗೆ ಸಂದೇಶ ಕಳುಹಿಸಲಿ ಎಂದು ಅಬ್ದುಲಾ ಹೇಳಿದ್ದಾರೆ.