ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಸರಕಾರದಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರ ಖಾತೆಗಳಿಗೆ ವಾರ್ಷಿಕ 1 ಲಕ್ಷ ರೂಪಾಯಿಗಳನ್ನು ವರ್ಗಾಯಿಸುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.
ಮಂಡ್ಲಾ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಸಿಯೋನಿ ಜಿಲ್ಲೆಯ ಧನೋರಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಿರುದ್ಯೋಗಿ ಯುವಕರಿಗೆ ಶಿಷ್ಯವೇತನ ನೀಡುವುದಾಗಿ ಕೂಡ ಭರವಸೆ ನಿಡಿದ್ದಾರೆ. ಪ್ರಣಾಳಿಕೆಯಲ್ಲಿ ಮೂರ್ನಾಲ್ಕು ಕ್ರಾಂತಿಕಾರಿ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ ಎಸ್ಸಿ ಮತ್ತು ಎಸ್ಟಿ ವರ್ಗಗಳ ಮಹಿಳೆಯರು, ಹಿಂದುಳಿದ ವರ್ಗಗಳು ಮತ್ತು ಬಡ ಕುಟುಂಬಗಳ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 1 ಲಕ್ಷ ರೂ.ಗಳನ್ನು ವರ್ಗಾಯಿಸುವುದಾಗಿದೆ. ಇದರ ಭಾಗವಾಗಿ ನಾವು ಮಹಿಳೆಯರ ಖಾತೆಗೆ ಸಾವಿರಾರು ರೂ. ಹಣ ವರ್ಗಾವಣೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದ ನಿರುದ್ಯೋಗಿ ಯುವ ಜನರಿಗೆ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಒಂದು ವರ್ಷ ಶಿಷ್ಯ ವೃತ್ತಿ ಹಾಗೂ ಈ ಅವಧಿಯಲ್ಲಿ 1 ಲಕ್ಷ ರೂ. ಭತ್ತೆಯ ಖಾತರಿ ನೀಡುವ ನೂತನ ಕಾನೂನನ್ನು ನಾವು ಜಾರಿಗೆ ತರಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೇಂದ್ರದಲ್ಲಿ ಸರಕಾರ ರೂಪಿಸಿದ ಬಳಿಕ ನಾವು ಉದ್ಯೋಗದಲ್ಲಿ ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸುತ್ತೇವೆ. ಸಾರ್ವಜನಿಕ ವಲಯದಲ್ಲಿ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಬುಡಕಟ್ಟು ಜನರನ್ನು ಆದಿವಾಸಿ ಎಂದು ಕರೆಯುವ ಬದಲು ಉದ್ದೇಶಪೂರ್ವಕವಾಗಿ ‘ವನವಾಸಿ’ ಎಂದು ಕರೆಯುತ್ತಿದೆ. ಅವರನ್ನು ಭೂಮಿಯಿಂದ ಪ್ರತ್ಯೇಕಿಸಲು ಹಾಗೂ ನೀರು, ಅರಣ್ಯ, ಭೂಮಿಯ ಮೇಲಿನ ಅವರ ಹಕ್ಕನ್ನು ಕಿತ್ತುಕೊಳ್ಳುಲು ಬಿಜೆಪಿ ಅವರನ್ನು ವನವಾಸಿ ಎಂದು ಕರೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ ಹಣವನ್ನು ದ್ವಿಗುಣಗೊಳಿಸಲಾಗುವುದು, ದೇಶದ ಪ್ರತಿಯೊಬ್ಬ ನಿರುದ್ಯೋಗಿ ಯುವಕರು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಒಂದು ವರ್ಷದ ಅವಧಿಗೆ ಶಿಷ್ಯವೇತನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಹೊಸ ಕಾನೂನನ್ನು ತರುತ್ತೇವೆ, ಈ ಸಮಯದಲ್ಲಿ ಅವರು ಒಂದು ಲಕ್ಷ ರೂಪಾಯಿಗಳನ್ನು ಭತ್ಯೆಯಾಗಿ ಪಡೆಯಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ದೇಶದ ಜನತೆಗೆ ಪಂಚ ಗ್ಯಾರೆಂಟಿಯನ್ನು ಘೋಷಿಸಿದ್ದು, ಅದರಡಿಯಲ್ಲಿ ಒಟ್ಟು 15 ಭರವಸೆಗಳನ್ನು ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಗ್ಯಾರೆಂಟಿ ಸೌಲಭ್ಯಗಳು ಜನರಿಗೆ ಲಭ್ಯವಾಗಲಿದೆ. ಕಾಂಗ್ರೆಸ್ ಈಗಾಗಲೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಉದ್ಯೋಗ ಸೃಷ್ಟಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಜಾತಿ ಗಣತಿ ಸೇರಿದಂತೆ ಹಲವು ಗ್ಯಾರೆಂಟಿಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಇದನ್ನು ಓದಿ; ಲೆಬನಾನ್ ಮೇಲೆ ಇಸ್ರೇಲ್ನಿಂದ ವೈಮಾನಿಕ ದಾಳಿ: ಹೆಚ್ಚಿದ ಪ್ರಾದೇಶಿಕ ಸಂಘರ್ಷದ ಭೀತಿ