ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಅವರ ಬಂಧನವಾದ ನಂತರ ಅವರಿಗೂ ಬಿಜೆಪಿಗೂ ಇರುವ ನಂಟಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಆದರೆ ಬಿಜೆಪಿ ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದು, ನಟಿ ರಾಗಿಣಿ ಬಿಜೆಪಿ ಸದಸ್ಯರಲ್ಲ. ಅವರ ವೈಯಕ್ತಿಕ ಅಥವಾ ವೃತ್ತಿ ಜೀವನದ ಕಾರ್ಯಚಟುವಟಿಕೆಗಳಿಗೆ ಪಕ್ಷ ಹೊಣೆಯಾಗದು ಎಂದು ಹೇಳಿದೆ.
ಬಿಜೆಪಿಯ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, “ರಾಗಿಣಿ ಬಿಜೆಪಿ ಸದಸ್ಯರಲ್ಲ. ಪಕ್ಷವು ಅವರಿಗೆ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ವಹಿಸಿರಲಿಲ್ಲ. 2019 ರ ಉಪಚುನಾವಣೆ ವೇಳೆ ಸ್ವಇಚ್ಛೆಯಿಂದ ಬಿಜೆಪಿಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಅವರ ವೈಯಕ್ತಿಕ ಅಥವಾ ವೃತ್ತಿ ಜೀವನದ ಕಾರ್ಯಚಟುವಟಿಕೆಗಳಿಗೆ ಪಕ್ಷ ಹೊಣೆಯಾಗದು. ಅದಕ್ಕೆ ಉತ್ತರಿಸುವ ಅಗತ್ಯವು ಇಲ್ಲ. ಈ ಘಟನೆಗೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಿಂದ ಪಕ್ಷವು ಅಂತರ ಕಾಯ್ದುಕೊಳ್ಳಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಮಾಫಿಯ ಪ್ರಕರಣ: ಪೊಲೀಸರ ವಶದಲ್ಲಿರುವ ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ ಬಿಜೆಪಿ ಕಾರ್ಯಕರ್ತನೆ?
ಆದರೆ ನಟಿ ರಾಗಿಣಿಗೆ ಬಿಜೆಪಿಯೊಂದಿಗೆ ನಿರಂತರ ಸಂಪರ್ಕವಿದ್ದು, ಎಪ್ರಿಲ್ 13, 2019 ರಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ, ಕಾರಣಾತರಗಳಿಂದ ರದ್ದಾಗಿತ್ತು.
ಕೆಳೆದ ವಾರ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಿದ್ದ ಆರೋಪಿ ಕಾರ್ತಿಕ್ ರಾಜ್ ಬಿಜೆಪಿ ಪಕ್ಷದ ಕಾರ್ಯಕರ್ತನೆಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ನಾಯಕ ಮಾಜಿ ಸಚಿವ ಜನಾರ್ಧನ ರೆಡ್ಡಿಯೊಂದಿಗೆ ಕಾರ್ತಿಕ್ ರಾಜ್ ನಿಂತ ಪೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ನಡುವೆ ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ನಾಪತ್ತೆಯಾಗಿದ್ದು, ಇವರು ಪ್ರಕರಣದಲ್ಲಿ ಆರನೆ ಆರೋಪಿ ಎಂದು ಕನ್ನಡ ಪ್ರಭ ವರದಿ ಮಾಡಿದೆ. ಆದಿತ್ಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿದ್ದಾರೆ.
ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್, ಸೆನೆಗಲ್ ಮೂಲದ ಡ್ರಗ್ ಪೆಡ್ಲರ್ ಲೂಮ್ ಪೆಪ್ಪೆರ್, ವಿರೇನ್ ಖನ್ನಾ ಹಾಗೂ ರಾಹುಲ್ನನ್ನು ಪೊಲೀಸರು ನಿನ್ನೆಯು ತೀವ್ರ ವಿಚಾರಣೆ ನಡೆಸಿದ್ದಾರೆ. ಲೂಮ್ ಪೆಪ್ಪೆರ್ ಅಂತರಾಷ್ಟ್ರೀಯ ಡ್ರಗ್ ಪೆಡ್ಲೆರ್ ಎಂದು ತಿಳಿದು ಬಂದಿದ್ದು, ಆತ ವಿಚಾರಣೆ ವೇಳೆ ಹಲವರು ಹೆಸರನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ; ನಟಿಯರಿಂಲೇ ಹೆಚ್ಚು ಬೇಡಿಕೆ: ತನಿಖೆಯಿಂದ ಬಹಿರಂಗ
ನಿನ್ನೆ ರಾಗಿಣಿ ಮನೆಯಲ್ಲಿ ಗಾಂಜಾ ತುಂಬಿಟ್ಟಿದ್ದ ಸಿಗರೇಟ್ ಪತ್ತೆಯಾಗಿದ್ದು, ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿ “ನನಗೂ ಸಿಗರೇಟ್ಗಳಿಗೂ ಯಾವುದೇ ಸಂಬಂಧವಿಲ್ಲ, ನಾನು ಧೂಮಪಾನಿಯಲ್ಲ” ಎಂದು ಹೇಳಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಈ ಮಧ್ಯೆ ಕಾಂಗ್ರೆಸ್ ಬಿಜೆಪಿ ವಿರುದ್ದ ತೀವ್ರ ದಾಳಿ ಮಾಡಿದ್ದು, ರಾಗಿಣಿ ಬಿಜೆಪಿಯ ರಾಯಭಾರಿ ಎಂದು ಆರೋಪಿಸಿದೆ. “2019 ರ ಲೋಕಸಭಾ ಚುನಾವಣೆಯಲ್ಲಿ ಸಿ.ಟಿ.ರವಿ ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರಿನಲ್ಲಿ ರಾಗಿಣಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಜೊತೆಯೂ ರಾಗಿಣಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ” ಎಂದು ಆರೋಪಿಸಿರುವ ಕೆಪಿಸಿಸಿಯ ವಕ್ತಾರ ಎಂ. ಲಕ್ಷ್ಮಣ್ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ನಿನ್ನೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಕಳೆದ 10 ವರ್ಷಗಳ ಜಿಲ್ಲಾವಾರು ವಿವರಗಳನ್ನು ನೀಡಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆ: ಜಿಲ್ಲಾವಾರು ಮಾಹಿತಿ ಕೋರಿ ಗೃಹಸಚಿವರಿಗೆ ಪತ್ರ ಬರೆದ ಸಿದ್ಧರಾಮಯ್ಯ