ನೂತನ ಪಠ್ಯ ಪರಿಷ್ಕರಣೆ ರಗಳೆಗಳು ಸದ್ಯಕ್ಕೆ ನಿಲ್ಲುವ ಸೂಚನೆ ಕಂಡುಬರುತ್ತಿಲ್ಲ. ತರಾತುರಿಯಲ್ಲಿ ಪರಿಷ್ಕರಣೆ ಮಾಡಲಾಗಿದ್ದು ಹಲವಾರು ತಪ್ಪುಗಳು ಎದ್ದು ಕಾಣುತ್ತಿವೆ. ಇದೀಗ ರೋಹಿತ್ ಚಕ್ರತೀರ್ಥ ಸಮಿತಿಯು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು 3 ಮತ್ತು 4ನೇ ತರಗತಿಗಳೆರಡಲ್ಲಿಯೂ ಸೇರಿಸಿ ಎಡವಟ್ಟು ಮಾಡಿಕೊಂಡಿದೆ.
ಬಿ.ಎಂ ಶರ್ಮಾರವರು ಬರೆದ ‘ಬಾವಿಯಲ್ಲಿ ಚಂದ್ರ’ ಪ್ರಸಿದ್ದ ಮಕ್ಕಳ ಪದ್ಯ. ಅದನ್ನು ಹಿಂದಿನ ಬರಗೂರು ರಾಮಚಂದ್ರಪ್ಪನವರ ಸಮಿತಿಯು 3 ನೇ ತರಗತಿ ನಲಿಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ನೂತನ ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಅದನ್ನು ಹಾಗೆ ಉಳಿಸಿಕೊಂಡಿದ್ದಲ್ಲದೆ 4ನೇ ತರಗತಿಯ ಸವಿಕನ್ನಡ ಪುಸ್ತಕದಲ್ಲಿಯೂ ಅದೇ ಪದ್ಯವನ್ನು ಸೇರಿಸಿದೆ. ಆ ಮೂಲಕ ಮಕ್ಕಳು 3 ಮತ್ತು 4 ನೇ ಎರಡೂ ತರಗತಿಗಳಲ್ಲಿಯೂ ಒಂದೇ ಪದ್ಯ ಕಲಿಯಬೇಕಾದ ದುಸ್ಥಿತಿ ಒದಗಿದೆ!
ಪಠ್ಯ ಪರಿಷ್ಕರಣೆ ಎಂಬುದು ಮಹತ್ವದ ಕೆಲಸ. ಒಂದೀಡಿ ಪೀಳಿಕೆಯನ್ನು ತಯಾರಿಸುವ ಕೆಲಸ. ಅದನ್ನು ತಜ್ಞರು, ಅನುಭವಿಗಳು ನಿರ್ವಹಿಸಬೇಕು. ಆದರೆ ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದ ರೋಹಿತ್ ಚಕ್ರತೀರ್ಥನಂತವರು ಅದನ್ನು ನಿಭಾಯಿಸಲು ಹೋಗಿ ಭಾರೀ ಅನಾಹುತ ಸೃಷ್ಟಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅದಕ್ಕೆ ಇಂಬುಕೊಡುವಂತೆ ಎಡವಟ್ಟುಗಳು ಕಾಣಸಿಗುತ್ತಿವೆ.
ಇದನ್ನೂ ಓದಿ: ‘ಸಂಸ್ಕೃತಿ ಇಲ್ಲದವರು ಕಾಡುಜನರಂತೆ ಇರುವರು’: ಪರಿಷ್ಕೃತ ಪಠ್ಯದಲ್ಲಿ ಸ್ವಾಮಿ ವಿವೇಕಾನಂದರ ಪಾಠ ಸಂಪೂರ್ಣ ಬದಲು
ನಾಲ್ಕನೇ ತರಗತಿಯ ಪಠ್ಯದಲ್ಲಿರುವ ಈ ಪದ್ಯದಲ್ಲಿ ಮೊದಲನೇ ಶಬ್ದ ತಪ್ಪಾಗಿದೆ: ತಿಂಗಳು ಬೆಳಕಿನ ಎಂದಿದೆ, ಇದು ತಿಂಗಳ ಬೆಳಕಿನ ಎಂದಿರಬೇಕಿತ್ತು. ನಾನು ನಾಲ್ಕನೇ ತರಗತಿ ಕಲಿತಾಗಲೂ ಈ ಪದ್ಯ ಇತ್ತು. ಆಗಲೂ ತಿಂಗಳ ಅಂತಲೇ ಇತ್ತು, ಈಗಿನ 3ನೇ ತರಗತಿ ಪಠ್ಯದಲ್ಲಿ ಸರಿಯಾಗಿದೆ.
ಇಂಥಾ ಎಡವಟ್ಟುಗಳು ಹೊಸದೇನಲ್ಲ.
ನಾವು ನಾಲ್ಕನೇ ತರಗತಿಯಲ್ಲಿದ್ದಾಗ ಇದ್ದ “ಮೂಡುವನು ರವಿ ಮೂಡುವನು” ಪದ್ಯ ಮತ್ತೆ ಆರನೇ ತರಗತಿಗೆ ಬಂದಾಗಲೂ ಇತ್ತು.
ಹಿಂದಿಯಲ್ಲೂ ಇಂಥಹ ಒಂದು ಎಡವಟ್ಟು ನಡೆದಿದ್ದು ನಾವು ಸಾಮಾನ್ಯ ಎಂದೇ ಭಾವಿಸಿ ಎರಡೆರಡು ಸಲ ಓದಿ ಬರೆದು ಮಾಡಿದ್ದೆವು.