ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯದ ಹಲವು ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಐಕ್ಯ ಹೋರಾಟವನ್ನು ಹಮ್ಮಿಕೊಂಡಿವೆ. ರಾಜ್ಯ ಸರ್ಕಾರ ಈ ಕೂಡಲೇ ರೈತವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯದಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ ಎಂದು ರೈತಸಂಘದ ರಾಜ್ಯಾದ್ಯಕ್ಷರಾದ ಬಡಗಲಪುರ ನಾಗೇಂದ್ರ ಸವಾಲು ಹಾಕಿದ್ದಾರೆ.
ಇಂದಿನಿಂದ ಕರ್ನಾಟಕ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಇಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಸುಗ್ರೀವಾಜ್ಞೆ ಮೂಲಕ ತಂದಿರುವ ಕೆಲವು ಮಸೂದೆಗಳಿಗೆ ಅಧಿಕೃತವಾಗಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ಇದರಲ್ಲಿ ಕೃಷಿ ಸಂಬಂಧಿತ ಮಸೂದೆಗಳೂ ಸೇರಿದ್ದು, ಅವುಗಳು ರೈತವಿರೋಧಿಯಾಗಿವೆ ಎಂದು ರಾಜ್ಯದಾದ್ಯಂತ ಇರುವ ರೈತ, ದಲಿತ, ಕಾರ್ಮಿಕ ಮತ್ತು ಇತರ ಸಂಘಟನೆಗಳು ಒಟ್ಟಾಗಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: ಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?
ಇಂದು ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರು ಬೆಂಗಳೂರು ರೈಲು ನಿಲ್ದಾಣದಿಂದ ಹೊರಟು ಫ್ರೀಡಂ ಪಾರ್ಕ್ವರೆಗೆ ದೊಡ್ಡಮಟ್ಟದ ರ್ಯಾಲಿ ನಡೆಸಿ, ನಂತರ ಅಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ರೈತಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
“ಸರ್ಕಾರ ಭೂಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತಂದು ಅವುಗಳನ್ನು ರೈತವಿರೋಧಿ ಕಾಯ್ದೆಗಳನ್ನಾಗಿ ಮಾಡಲು ಹೊರಟಿದೆ. ಇದರ ಮೂಲಕ ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಟ್ಟು, ರೈತರನ್ನು ಅವರ ಗುಲಾಮರಾಗುವಂತೆ ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಈ ಕಾಯ್ದೆಗಳಿಗೆ ತಿದ್ದುಪಡಿ ತರುವ ಅಗತ್ಯವೇನಿತ್ತು. ಭೂ ಒಡೆತನ, ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮುಂತಾದ ಕಾಯ್ದೆಗಳ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಾಡಿನ ರೈತ, ದಲಿತ ಮತ್ತು ಕಾರ್ಮಿಕ ಸಮುದಾಯವನ್ನು ಎದುರು ಹಾಕಿಕೊಂಡಿದೆ. ಈಗ ತಿದ್ದುಪಡಿ ಕಾಯ್ದೆಗಳನ್ನು ಈ ಕೂಡಲೇ ವಾಪಸ್ಸು ಪಡೆಯದಿದ್ದರೇ, ಯಡಿಯೂರಪ್ಪನವರ ಕುರ್ಚಿಯನ್ನು ಅವರು ಹೇಗೆ ಉಳಿಸಿಕೊಳ್ಳುತ್ತಾರೆ ನೋಡೋಣ. ರಾಜ್ಯದ ರೈತರು ದಲಿತರು ಕಾರ್ಮಿಕರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಅಧಿವೇಶನದಲ್ಲಿ ರೈತಪರವಾದ ನಿಲುವಿಗೆ ಬರದಿದ್ದರೆ ಖಂಡಿತವಾಗಿಯೂ ನಾವು ಅವರನ್ನು ಕುರ್ಚಿಯಿಂದ ಇಳಿಸುತ್ತೇವೆ” ಎಂದು ಹೇಳಿದರು.
ಈಗಾಗಲೇ ನೂರಾರು ರೈತರು, ಭೂಹೀನರು, ಹೋರಾಟಗಾರರು ರೈಲು ನಿಲ್ದಾಣದ ಬಳಿ ಸೇರುತ್ತಿದ್ದು, ಇನ್ನೇನು ಕೆಲವೇ ನಿಮಿಷಗಳಲ್ಲಿ ರ್ಯಾಲಿ ಹೊರಡಲಿದೆ.
ಇದನ್ನೂ ಓದಿ:ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗಿಕಾರ ಖಂಡಿಸಿ‘#KisanVirodhiNarendraModi’ ಟ್ರೆಂಡ್
ಈ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಜನತಾಧಿವೇಶನ ನಡೆಸಿ, ಚರ್ಚೆ ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರಾಜ್ಯದ 39 ಸಂಘಟನೆಗಳ ಹೋರಾಟಗಾರರು ಸೇರಿದಂತೆ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಯೋಗೇಂದ್ರ ಯಾದವ್, ಹೋರಾಟಗಾರರು ಮತ್ತು ಸಾಹಿತಿಗಳಾದ ದೇವನೂರು ಮಹಾದೇವ, ವಿಶ್ರಾಂತ ನ್ಯಾ. ಎಚ್.ಎನ್.ನಾಗಮೋಹನದಾಸ್, ಅಖಿಲಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಡಾ.ಅಶೋಕ್ ದಾವಲೆ, ನೂರ್ ಶ್ರೀಧರ್, ಎಸ್.ಆರ್.ಹಿರೇಮಠ್, ಶಿವಕುಮಾರ್ ಕಕ್ಕಾಚಿ, ಮೈಕೆಲ್ ಬಿ.ಫರ್ನಾಂಡೀಸ್ ಸೇರಿಂದಂತೆ ಹಲವಾರು ಚಿಂತಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆ ಎರಡು ಕೃಷಿ ಮಸೂದೆ ಅಂಗೀಕಾರ