Homeಮುಖಪುಟಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

'ಹಿಂದೂ-ಮುಸ್ಲಿಮ್ ಗಲಭೆ ನಡೆದರೆ ಎಬಿವಿಪಿ ಆ ಸ್ಥಳಕ್ಕೆ ಹಾಜರಾಗುತ್ತಿತ್ತು. ಆದರೆ ದಲಿತರ ಮೇಲೆ ಮೇಲುಜಾತಿಯ ಹಿಂದೂಗಳು ದೌರ್ಜನ್ಯ ನಡೆಸಿದರೆ ಎಬಿವಿಪಿ ಅಲ್ಲಿಗೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್.

- Advertisement -
- Advertisement -

ಈಗ ಎಲ್ಲೆಡೆ ಚಂದ್ರಶೇಖರ್ ಆಜಾದ್ ಎಂಬ ಯುವಕನದ್ದೇ ಸದ್ದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಏರಿ ಮೂರು ತಿಂಗಳೂ ಆಗಿಲ್ಲ; ಆಗಲೇ ಅಲ್ಲಿನ ಮುಖ್ಯಮಂತ್ರಿಗೆ ಮುಖಭಂಗ ಮಾಡಿರುವ ಚಂದ್ರಶೇಖರ್ ಯೋಗಿಯ ನಿದ್ದೆಕೆಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ದೇಶದಾದ್ಯಂತ ಪ್ರಗತಿಪರರಲ್ಲಿ ಸಂಚಲನ ಮೂಡಿಸಿರುವ ಚಂದ್ರಶೇಖರ್ ಯುವಜನತೆಯಲ್ಲಿ ರೋಮಾಂಚನ ಸೃಷ್ಟಿಸಿದ್ದಾರೆ.

ತನ್ನ ಯೌವನವನ್ನು ಡೆಹರಾಡೂನ್‌ನಲ್ಲಿ ಕಳೆದ ಚಂದ್ರಶೇಖರ್ 2013ರ ಹೊತ್ತಿಗೆ ಕಾನೂನು ಪದವಿ ಪಡೆದು ವಕೀಲನಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ ಅದೇ ಹೊತ್ತಿಗೆ ಅವರ ತಂದೆ ಗೋವರ್ಧನ್ ದಾಸ್ ಅವರಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿತು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ದಾಸ್ ಅವರು ತಮ್ಮ ವೃತ್ತಿಯ ನಿಮಿತ್ತ ಬೇರೆಬೇರೆ ಕಡೆ ಸೇವೆ ಸಲ್ಲಿಸಿದ್ದರಿಂದ ಅವರ ಅರಿವಿಗೆ ಬಾರದಂತೆ ತಂದೆ ಮತ್ತು ಮಗನ ನಡುವೆ ಅಂತರ ಬೆಳೆದಿತ್ತು. ಆದರೆ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಿಸುವಾಗ ಅವರಿಬ್ಬರೂ ಹತ್ತಿರವಾದರು. ದಲಿತರಾದ ದಾಸ್ ಅವರು ಜಾತಿಕಾರಣಕ್ಕೆ ತಮಗಾದ ಅವಮಾನಗಳನ್ನು ತಮ್ಮ ಪುತ್ರನಿಗೆ ವಿವರಿಸಿದರು. ಅವರು ಶಾಲೆಯ ಮುಖ್ಯಸ್ಥರಾಗಿದ್ದರೂ ಶಾಲಾ ಸಿಬ್ಬಂದಿ ಅವರಿಗೆ ಪ್ರತ್ಯೇಕವಾಗಿ ಕುಡಿಯುವ ನೀರು ಇಡುತ್ತಿದ್ದರು. ಸಭೆಗಳಲ್ಲಿ ಅವಮಾನ ಮಾಡುತ್ತಿದ್ದರು. ಇಂತಹ ನೂರಾರು ಪ್ರಕರಣಗಳನ್ನು ಅವರು ನೆನಪು ಮಾಡಿಕೊಂಡರು. ಚಂದ್ರಶೇಖರ್ ಅವರಿಗೆ ಇಂತಹ ಅವಮಾನಗಳು ಆಗಿರದಿದ್ದರೂ ತಂದೆಯ ಬದುಕು ಅವರ ಕಣ್ಣು ತೆರೆಸಿತು. ದಾಸ್ ಅವರು ತೀರಿಕೊಂಡ ನಂತರ ತನ್ನ ಜನರಿಗೆ ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ ಚಂದ್ರಶೇಖರ್ ಶಹರನಪುರ್ ಜಿಲ್ಲೆಯಲ್ಲಿರುವ ತನ್ನ ಮೂಲ ಊರಾದ ಚುತ್ಮಲಪುರಕ್ಕೆ ಹಿಂದಿರುಗಿದರು. ಚುತ್ಮಲಪುರ್ ಹೆಚ್ಚಾಗಿ ದಲಿತರು ಮತ್ತು ಮುಸಲ್ಮಾನರು ಇರುವ ಊರು. ಅಲ್ಲಿ ತನ್ನ ಹಲವು ದಲಿತ ಮಿತ್ರರನ್ನು ಜೊತೆಹಾಕಿಕೊಂಡ ಚಂದ್ರಶೇಖರ್ ಎರಡು ವರ್ಷಗಳ ಹಿಂದೆ ‘ಭೀಮ್‌ಆರ್ಮಿ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಇದರ ಉದ್ದೇಶ ಜಾತಿ ದೌರ್ಜನ್ಯವನ್ನು ವಿರೋಧಿಸುವುದು.

ಭೀಮಸೇನೆ ಎಲ್ಲರ ಗಮನಕ್ಕೆ ಬಂದದ್ದು ಹೋದ ವರ್ಷ. ಶಹರನಪುರ್ ಹತ್ತಿರದಲ್ಲೇ ಇರುವ ಘರ್ಕೊಲಿ ಎಂಬ ಹಳ್ಳಿಯಲ್ಲಿ ದಲಿತ ಯುವಕರು ಅಂಬೇಡ್ಕರ್ ಪ್ರತಿಮೆಯ ಹತ್ತಿರ ‘ದಿ ಗ್ರೇಟ್ ಚಮ್ಮಾರ್ ಡಾ. ಭೀಮ್‌ರಾವ್ ಅಂಬೇಡ್ಕರ್ ಗ್ರಾಮ ಘರ್ಕೊಲಿ’ ಎಂಬ ಬೋರ್ಡ್ ಹಾಕಿದರು. ಇದು ಅದೇ ಹಳ್ಳಿಯ ಥಾಕೂರರನ್ನು ಕೆರಳಿಸಿತು. “ಚಮ್ಮಾರನೊಬ್ಬ ಅದು ಹೇಗೆ ‘ಗ್ರೇಟ್ ಆಗಲು ಸಾಧ್ಯ’ ಎಂದು ವಾದಿಸಿದ ಥಾಕೂರರು ಮೊದಲು ಆ ಬೋರ್ಡ್ ಕಿತ್ತುಹಾಕಬೇಕೆಂದು ತಾಕೀತು ಮಾಡಿದರು. ಅದಕ್ಕೆ ಬಗ್ಗದ ದಲಿತ ಯುವಕರು “ನಾವು ಅದನ್ನು ನಮಗೆ ಸೇರಿರುವ ಖಾಸಗಿ ಭೂಮಿಯಲ್ಲಿ ಹಾಕಿಕೊಂಡಿದ್ದೇವೆ. ನಿಮ್ಮದೇನು ರಗಳೆ” ಎಂದರು. ಥಾಕೂರರು ಪೊಲೀಸರಿಗೆ ದೂರು ಸಲ್ಲಿಸಿದರು. ಈ ಪ್ರಕರಣದ ಇತ್ಯರ್ಥಕ್ಕೆ ಡಿವೈಎಸ್ಪಿ ಆನಂದ್ ಪಾಂಡೆ ಬಂದ. ಆತ ಬ್ರಾಹ್ಮಣ. ಥಾಕೂರರ ಜೊತೆ ಕೈಜೋಡಿಸಿದ ಪೊಲೀಸಪ್ಪ ಆ ಬೋರ್ಡ್‌ಗೆ ಕಪ್ಪು ಬಣ್ಣ ಬಳಿಸಿದ. ಅದಾದ ಕೆಲ ಗಂಟೆಗಳಲ್ಲಿ ಅದ್ಯಾರೋ ಅಂಬೇಡ್ಕರ್ ಅವರ ಪ್ರತಿಮೆಗೂ ಕಪ್ಪು ಬಣ್ಣ ಬಳಿದರು. ಇದು ದಲಿತರನ್ನು ಕೆರಳಿಸಿತು. ಅವರಲ್ಲಿ ಒಬ್ಬ ಭೀಮಸೇನೆಗೆ ಫೋನ್ ಮಾಡಿದ. ತಮ್ಮ ಪಂಚಾಯತಿಯನ್ನು ವಿರೋಧಿಸಿದ ದಲಿತರನ್ನು ಬಡಿಯಲು ಪೊಲೀಸರು ಸಜ್ಜಾಗುತ್ತಿದ್ದಂತೆ ಹತ್ತಾರು ಮೋಟಾರ್ ಬೈಕ್‌ಗಳನ್ನೇರಿ ದೊಡ್ಡ ಗುಂಪೊಂದು “ಜೈ ಭೀಮ್’ ಎಂದು ಕೂಗುತ್ತಾ ಹಾಜರಾಯಿತು. ಅದರ ನೇತೃತ್ವ ವಹಿಸಿದ್ದವ ಬಿಳಿ ಶರ್ಟ್, ಕಪ್ಪು ಪ್ಯಾಂಟ್, ಕೊರಳ ಸುತ್ತ ನೀಲಿ ಸ್ಕಾರ್ಫ್ ಕಟ್ಟಿಕೊಂಡಿದ್ದ ಅಂದವಾದ ಯುವಕ. ಅವರೇ ಚಂದ್ರಶೇಖರ್ ಆಜಾದ್. ಅವತ್ತು ದಲಿತರ ಮತ್ತು ಪೊಲೀಸರ ನಡುವೆ ನಡೆದ ಚಕಮಕಿಯಲ್ಲಿ ಡಿವೈಎಸ್ಪಿ ಸಾಹೇಬನಿಗೂ ಲಾತಾ ಬಿದ್ದು ಪೊಲೀಸರೆಲ್ಲ ಓಡಿಹೋದರು.

ಆನಂತರ ಚಂದ್ರಶೇಖರರನ್ನು ಪೊಲೀಸರು ಬಂಧಿಸಿದರಲ್ಲದೆ ಅವರ ವಿರುದ್ಧ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಮುಂದಾದರು. ದಲಿತರ ಪರ ಹೋರಾಡಿದ್ದಕ್ಕೆ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಕ್ರಮವೇ ಎಂದು ವಿರೋಧಿಸಿದ ಪ್ರಜ್ಞಾವಂತರು ಚಂದ್ರಶೇಖರ್ ಪರವಾಗಿ ದೊಡ್ಡ ರ್‍ಯಾಲಿಯನ್ನು ನಡೆಸಿದರು. ಪೊಲೀಸರು ತೆಪ್ಪಗಾಗಿ ಚಂದ್ರಶೇಖರ ಅವರನ್ನು ಬಿಡುಗಡೆ ಮಾಡಿದರು. ಈ ಪ್ರಕರಣದ ನಂತರ ಭೀಮ ಸೇನೆ ಇನ್ನೂ ದೊಡ್ಡದಾಯಿತು. ಚಂದ್ರಶೇಖರ್ ಪ್ರಕಾರ ಇವತ್ತು ಭೀಮಸೇನೆಯಲ್ಲಿ 40,000 ಯುವಕರು ಇದ್ದಾರಲ್ಲದೆ, ಇತರೆ ಏಳು ರಾಜ್ಯಗಳಲ್ಲಿ ಅದರ ವಿಭಾಗಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಭೀಮ ಸೇನೆಯು ಇಂದು ದಲಿತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಿದ್ದು ತಮ್ಮ ಮೇಲೆ ದೌರ್ಜನ್ಯ ಎಸಗುವವರನ್ನು ವಿರೋಧಿಸುವ ಛಲ ಸೃಷ್ಟಿ ಮಾಡಿದೆ.

ವಿಚಿತ್ರವೆಂದರೆ ಚಂದ್ರಶೇಖರ್ ವಿದ್ಯಾರ್ಥಿಯಾಗಿದ್ದಾಗ ಸಂಘ ಪರಿವಾರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲಿದ್ದವರು. ಆಗ ಅವರಿಗೆ ಆರೆಸ್ಸೆಸ್‌ನ ಅಸಲಿಯತ್ತು ಅರ್ಥವಾಯಿತು. “ಹಿಂದೂ-ಮುಸ್ಲಿಮ್ ಗಲಭೆ ನಡೆದರೆ ಎಬಿವಿಪಿ ಆ ಸ್ಥಳಕ್ಕೆ ಹಾಜರಾಗುತ್ತಿತ್ತು. ಆದರೆ ದಲಿತರ ಮೇಲೆ ಮೇಲುಜಾತಿಯ ಹಿಂದೂಗಳು ದೌರ್ಜನ್ಯ ನಡೆಸಿದರೆ ಎಬಿವಿಪಿ ಅಲ್ಲಿಗೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್. ಆಗ ಅಂಬೇಡ್ಕರ್ ಬರಹಗಳನ್ನು ಓದಲಾರಂಭಿಸಿದ ಚಂದ್ರಶೇಖರ್ ಭೀಮ ಸೇನೆ ಸ್ಥಾಪಿಸಿ ತನ್ನ ಸಮುದಾಯದ ಏಳಿಗೆಗೆ ದುಡಿಯಲು ನಿರ್ಧರಿಸಿದರು. ಅವರ ಭೀಮಸೇನೆ ಇವತ್ತು ಶಹರನಪುರದಲ್ಲಿ ಹಲವಾರು ‘ಶಾಲೆ’ಗಳನ್ನು ನಡೆಸುತ್ತದೆ. ಅದಕ್ಕೆ ಭೀಮ್ ಪಾಠಾಶಾಲಾ ಎಂದು ಕರೆಯಲಾಗುತ್ತದೆ. ಅಲ್ಲಿ ಕಾಲೇಜು ಮುಗಿಸಿರುವ ದಲಿತ ಯುವಕರು ಶಾಲೆಗಳಲ್ಲಿ ಓದುತ್ತಿರುವ ದಲಿತ ಮಕ್ಕಳಿಗೆ ಪ್ರತಿದಿನ ಪಾಠ ಹೇಳಿಕೊಡುತ್ತಾರೆ. ಹಾಗೆಯೇ ಹಿರಿಯ ದಲಿತ ಅಧಿಕಾರಿಗಳು ಯುವ ದಲಿತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಕೊಡುತ್ತಾರೆ.

ನೀಲಿ ಆಗಸದಲ್ಲಿ ಚಂದ್ರಶೇಖರ್ ಆಜಾದ್ ಎಂಬ ಇನ್ನೊಂದು ನಕ್ಷತ್ರ ಪ್ರಜ್ವಲಿಸಲಾರಂಭಿಸಿದೆ. ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಉಮರ್‌ ಖಾಲಿದ್, ಶೆಹ್ಲಾ ರಶೀದ್ ಮತ್ತು ಚಂದ್ರಶೇಖರ್ ಎಂಬ ಈ ನಕ್ಷತ್ರಗಳು ಎಲ್ಲರಲ್ಲಿ ಭರವಸೆ ಮೂಡಿಸುತ್ತಿವೆ.

  • ಗೌರಿ ಲಂಕೇಶ್

ಮೇ, 31 2017.


ಇದನ್ನೂ ಓದಿ: ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...