ಪಂಚಾಯತ್ ಮುಖ್ಯಸ್ಥನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯೊಬ್ಬ ತಮಗೆ ಓಟು ಹಾಕದ ಕಾರಣಕ್ಕಾಗಿ ದಲಿತ ಯುವಕರಿಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ನೆಲಕ್ಕೆ ಎಂಜಲು ಉಗಿದು ಅದನ್ನು ನೆಕ್ಕುವಂತೆ ಬಲವಂತ ಮಾಡಿರುವ ಅಮಾನವೀಯ, ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಭ್ಯರ್ಥಿ ಬಲ್ವಂತ್ ಸಿಂಗ್ ಎಂಬಾತ ದಲಿತ ಸಮುದಾಯಕ್ಕೆ ಸೇರಿದ ಅನಿಲ್ ಕುಮಾರ್ ಮತ್ತು ಮಂಜಿತ್ ಕುಮಾರ್ ಎಂಬ ಇಬ್ಬರು ದಲಿತ ಯುವಕರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ, ಶಿಕ್ಷೆಯಾಗಿ ಅವರನ್ನು ತಮ್ಮ ಕಿವಿ ಹಿಡಿದುಕೊಂಡು ಕುಕ್ಕರುಗಾಲಿನಲ್ಲಿ ಕೂತು ಎದ್ದೇಳುವಂತೆ ಒತ್ತಾಯಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ತುಣುಕಿನಲ್ಲಿ, ಅಭ್ಯರ್ಥಿ ಬಲ್ವಂತ್ ಸಿಂಗ್ ಒಬ್ಬ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುತ್ತಿಗೆ ಹಿಡಿದು ಬಲವಂತವಾಗಿ ನೆಲಕ್ಕೆ ಬೀಳಿಸುತ್ತಿರುವುದು ಕಂಡು ಬಂದಿದೆ. ನಂತರ, ನೆಲದ ಮೇಲೆ ಉಗುಳಿ, ಅದನ್ನು ನೆಕ್ಕಲು ಒತ್ತಾಯಿಸಿ, ಹಿಂಸಿಸಿ ಕ್ರೌರ್ಯ ಮೆರೆದಿದ್ದಾನೆ.
ಬಲ್ವಂತ್ ಸಿಂಗ್ ತನಗೆ ಮತ ಹಾಕುವಂತೆ ಇಬ್ಬರು ಮತದಾರರಿಗೆ ಹಣ ನೀಡಿದ್ದು, ಆದರೆ ಅವರು ಈತನಿಗೆ ಮತ ಹಾಕಿಲ್ಲದ ಕಾರಣಕ್ಕಾಗಿ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾನೆ ಎಂದು ವರದಿಯಾಗಿದೆ.
ಇಬ್ಬರು ವ್ಯಕ್ತಿಗಳು ಕುಡಿದು ಗಲಾಟೆ ಮಾಡುತ್ತಿದ್ದರು ಅದಕ್ಕಾಗಿ ಅವರಿಗೆ ಶಿಕ್ಷೆ ನೀಡಲಾಯಿತು ಎಂದು ಬಲ್ವಂತ್ ವಾದಿಸಿದ್ದಾನೆ. ಈ ವಿಡಿಯೋ ವೈರಲ್ ಆದ ನಂತರ ಅಂಬಾ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಬಿಎಸ್ಇ ಪ್ರಶ್ನೆಪತ್ರಿಕೆಯಲ್ಲಿ ಸ್ತ್ರೀದ್ವೇಷ: ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಕಿಡಿ