ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ವಿವಾದಾತ್ಮಕ ಕೃಷಿ ಮಸೂದೆಗಳಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕಡ್ಡಾಯ ನಿಬಂಧನೆಯಾಗಿ ಸೇರಿಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, “ಸರ್ಕಾರ MSPಗೆ ಬದ್ದವಾಗಿದ್ದರೂ, ಈ ಹಿಂದೆಯೂ ಇದು ಕಾನೂನಿನ ಭಾಗವಾಗಿರಲಿಲ್ಲ, ಹಾಗಾಗಿ ಈಗಲೂ ಇಲ್ಲ” ಎಂದು ಹೇಳಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ನ ಆನ್ಲೈನ್ ಐಡಿಯಾ ಎಕ್ಸ್ಚೇಂಜ್ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನರೇಂದ್ರ ಸಿಂಗ್ ತೋಮರ್, “MSP ಅಷ್ಟೊಂದು ಅಗತ್ಯವಾಗಿದ್ದರೆ, ನೀವು ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಅದನ್ನು ಕಾನೂನಿನ ಭಾಗವಾಗಿ ಏಕೆ ಸೇರಿಸಲಿಲ್ಲ? ಹಾಗಾಗಿ MSP ಮೇಲಿನ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ಒಪ್ಪುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ವಿರೋಧಿಸಿ ಗದ್ದಲ: ಅಧಿವೇಶನದಿಂದ 8 ಸಂಸದರ ಅಮಾನತು
ದೇಶದಾದ್ಯಂತ ರೈತರ ಪ್ರತಿಭಟನೆಯ ಹೊರತಾಗಿಯೂ ಕೇಂದ್ರ ಸರ್ಕಾರ ಮಾನ್ಸೂನ್ ಅಧಿವೇಶನದಲ್ಲಿ, 3 ಕೃಷಿ ಮಸೂದೆಗಳನ್ನು ಅಂಗೀಕರಿಸಿತು. ಎಪಿಎಂಸಿಯ ಮಂಡಿ ಪದ್ದತಿ ಕೊನೆಗೊಂಡರೆ ಬೆಂಬಲ ಬೆಲೆಯನ್ನು ರದ್ದುಗೊಳಿಸಿದಂತಾಗುತ್ತದೆ ಎಂದು ಪ್ರತಿಭಟನಾ ನಿರತ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನ್ನು ಲೋಕಸಭೆಯಲ್ಲಿ ಗುರುವಾರ (ಸೆ.17) ಅಂಗೀಕರಿಸಲಾಯಿತು. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಸೆಪ್ಟೆಂಬರ್ 13 ರಂದು ಅಂಗೀಕರಿಸಲಾಗಿದೆ.
ಇದನ್ನೂ ಓದಿ: ಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?
“ಮಸೂದೆಗಳ ಅಂಗೀಕಾರದ ನಂತರ, ಸರ್ಕಾರವು ಗೋಧಿ ಸೇರಿದಂತೆ ಆರು ರಬಿ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸುವುದರೊಂದಿಗೆ, MSP ಆಧಾರಿತ ಖರೀದಿ ಮುಂದುವರಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಆದ್ದರಿಂದ ಯಾರಾದರೂ ಏಕೆ ಚಿಂತಿಸಬೇಕು? ಈ ಮಸೂದೆಗಳಿಗೂ MSPಗೂ ಯಾವುದೇ ಸಂಬಂಧವಿಲ್ಲ. ಮಂಡಿಯ ಆವರಣದ ಹೊರಗಿನ ವ್ಯಾಪಾರದೊಂದಿಗೆ ಮಸೂದೆಗಳು ವ್ಯವಹರಿಸುತ್ತವೆ” ಎಂದು ತೋಮರ್ ಹೇಳಿದರು.
ಮಸೂದೆಗಳನ್ನು ಸಮರ್ಥಿಸಿಕೊಂಡ ತೋಮರ್, “ದೇಶದ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಮತಗಳನ್ನು ಲೆಕ್ಕಿಸದೆ ನಿರ್ಧಾರ ತೆಗೆದುಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದೆ. ಈ ಮಸೂದೆಗಳಿಂದ ಕೃಷಿ ಮತ್ತು ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದರು.
ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳ ವಾಪಸಾತಿಗೆ ಆಗ್ರಹ: ಸೆ. 28 ರಂದು ’ಭಾರತ್ ಬಂದ್’