ಭಾರತಕ್ಕೆ ಹಸ್ತಾಂತರಿಸಲಾದ 36 ರಫೇಲ್ ಯುದ್ಧ ವಿಮಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆ ನೆರವೇರಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಫೇಲ್ ಯುದ್ಧ ವಿಮಾನದ ಚಕ್ರದ ಕೆಳಗೆ ನಿಂಬೆಹಣ್ಣು ಇಟ್ಟು ಪೂಜೆ ಮಾಡಿರುವುದನ್ನು ಬಹಳಷ್ಟು ಜನ ಟ್ರೋಲ್ ಮಾಡಿದ್ದಾರೆ.
ಈ ಮಧ್ಯೆ ಕರ್ನಾಟಕದ ಮಾಜಿ ಸಚಿವ ರೇವಣ್ಣನವರು ನಿಂಬೆಹಣ್ಣು ಇಟ್ಟುಕೊಳ್ಳತ್ತಿದ್ದನ್ನು ನೆನಪಿಸಿಕೊಳ್ಳಲಾಗಿದೆ. ನಿಂತಲ್ಲಿ, ಕುಂತಲ್ಲಿ, ಪ್ರತಿ ಕೆಲಸಕ್ಕೂ ಮೂಹೂರ್ತ ಫಿಕ್ಸ್ ಮಾಡುತ್ತಿದ್ದ ರೇವಣ್ಣನವರಿಗಿಂತ ರಾಜನಾಥ್ ಸಿಂಗ್ ಏನೂ ಕಡಿಮೆ ಇಲ್ಲ ಎಂದು ಹೋಲಿಕೆ ಮಾಡಲಾಗಿದೆ. ರಾಜನಾಥ್ ಸಿಂಗ್ ವಿಮಾನದ ಕೆಳಗೆ ಇಟ್ಟಿದ್ದು ನಿಂಬೆಹಣ್ಣೋ ಅಥವಾ ಕುಂಬಳಕಾಯಿಯೋ ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.
ದುಷ್ಟ ಕಣ್ಣುಗಳಿಂದ ರಕ್ಷಿಸಿಕೊಳ್ಳಲು ಮತ್ತು ದುಷ್ಟರಿಂದ ರಕ್ಷಣೆಗಾಗಿ ನಾವು ನಿಂಬೆ ಮತ್ತು ಮೆಣಸಿನಕಾಯಿಯಂಥ ಉತ್ತಮ ತಂತ್ರಜ್ಞಾನ ಹೊಂದಿದ್ದೇವೆ ಎಂದು ಟ್ವಿಟ್ಟರ್ ನಲ್ಲಿ ತಮಾಷೆ ಮಾಡಲಾಗಿದೆ. ಮೊದಲು ದೇಶವನ್ನು ರಕ್ಷಿಸಲು ರಫೇಲ್ ಖರೀದಿ ಮಾಡಲಾಗುತ್ತಿತ್ತು. ಆದರೆ ಈಗ ರಫೇಲ್ ರಕ್ಷಣೆಗೆ ನಿಂಬೆಹಣ್ಣು ಖರೀದಿಸಬೇಕಿದೆ ಎಂದು ರಫೇಲ್ ಶಸ್ತ್ರ ಪೂಜೆಗೆ ಕುಟುಕಿದ್ದಾರೆ.
ಇವತ್ತು ಭಕ್ತರು ಯಾವ ಕೆಲಸದಲ್ಲಿ busy ಆಗಿರ್ತಾರೆ ಅಂತೀರಿ? ನೆಹರು, ಇಂದಿರಾ, ರಾಜೀವ್, ಫೈಟರ್ ಜೆಟ್ ನ ಪೂಜೆ ಮಾಡ್ತಿರೋ ಫೋಟೋ ಹುಡುಕೋದ್ರಲ್ಲಿ ಅಥ್ವಾ ಅಂಥಾದೊಂದು ಫೋಟೋ, ಫೋಟೋಶಾಪ್ ಮಾಡೋದ್ರಲ್ಲಿ.. ಎಂದು ಚಿದಂಬಂರ ನರೇಂದ್ರರವರು ಅಭಿಪ್ರಾಯಪಟ್ಟಿದ್ದಾರೆ.
₹ 1638 ಕೋಟಿ < 2 ನಿಂಬೆಹಣ್ಣು.
ಫ್ರಾನ್ಸ್ ಏನೆಲ್ಲಾ ಉತ್ಪಾದನೆ ಮಾಡಿ ಇಡೀ ಪ್ರಪಂಚಕ್ಕೆ ರಪ್ತು ಮಾಡಬಹುದು, ಆದರೆ ಅವು ನಮ್ಮ ದೇಶದ ಬೂದು ಕುಂಬಳ ಕಾಯಿ, ನಿಂಬೆಹಣ್ಣು, ಕರಡಿ ಕೂದಲುಗಳಿಗೆ ಸಮಬಾರವು ಎಂದು ಮಹಾಂತೇಶ್ ದೊಡ್ಡಮನಿಯವರು ವ್ಯಂಗ್ಯವಾಡಿದ್ದಾರೆ.
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಹಿಂದೊಮ್ಮೆ ದೇವೇಗೌಡರು ಹೂ ಮುಡಿದುಕೊಂಡಿದ್ದಕ್ಕೆ ಟ್ವಿಟ್ಟರ್ನಲ್ಲಿ ಗೇಲಿ ಮಾಡಿದ್ದರು. ಈಗ ರಾಜ್ನಾಥ್ ಸಿಂಗ್ ನಿಂಬೆಹಣ್ಣು ಇಟ್ಟಿದ್ದನ್ನು ನಮ್ಮ ಸಂಸ್ಕೃತಿ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಹಿಪಾಕ್ರಸಿಯನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ಈ ಕುರಿತು ನೂರಾರು ವ್ಯಂಗ್ಯ ಚಿತ್ರಗಳು ರಚನೆಯಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಷೇರ್ ಆಗಿವೆ.
ಬಹುನಿರೀಕ್ಷಿತ 36 ರಫೇಲ್ ಯುದ್ದ ವಿಮಾನವನ್ನು ದೀರ್ಘಕಾಲದ ಚರ್ಚೆಯ ಬಳಿಕ ಫ್ರಾನ್ಸ್ ಸರ್ಕಾರ, ಭಾರತಕ್ಕೆ ಔಪಚಾರಿಕವಾಗಿ ಒಂದು ಯುದ್ಧ ವಿಮಾನವನ್ನು ಹಸ್ತಾಂತರಿಸಿದೆ. ಪ್ಯಾರಿಸ್ ನ ಮೆರಿಗ್ನಾಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಮಾನವನ್ನು ಹಸ್ತಾಂತರಿಸಲಾಯಿತು. ಸೆಪ್ಟೆಂಬರ್ 2016ರಲ್ಲಿ ಮಾಡಿಕೊಂಡಿದ್ದ 59 ಸಾವಿರ ಕೋಟಿ ರೂಪಾಯಿ ಮೊತ್ತದ ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ ನಾಲ್ಕು ಯುದ್ಧ ವಿಮಾನಗಳು ಭಾರತಕ್ಕೆ ಬರಲಿವೆ.