ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತು ಕಾಂಗ್ರೆಸ್ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷರಾದ ಸ್ಯಾಮ್ ಪಿತ್ರೋಡಾ ಅವರು ಸಂದರ್ಶನವೊಂದರಲ್ಲಿ ಹೇಳಿರುವ ಹೇಳಿಕೆಯನ್ನು ಬಿಜೆಪಿ ದೊಡ್ಡ ಮಟ್ಟದಲ್ಲಿ ವಿಭಿನ್ನ ಬಣ್ಣ ಹಚ್ಚಿ ವಿವಾದವನ್ನಾಗಿ ಮಾಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೆ ತರಲಿದೆ. ಈ ಮೂಲಕ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಅವರು ಜೀವನಪೂರ್ತಿ ಸಂಪಾದಿಸಿಟ್ಟಿದ್ದ ಆಸ್ತಿಯ 50% ಸರ್ಕಾರ ಕಿತ್ತುಕೊಳ್ಳಲಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಭಾರತದಲ್ಲಿ ಇಂತಹ ಯಾವುದೇ ಕಾನೂನು ಅಥವಾ ನೀತಿಗಳನ್ನು ತರುವ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಲ್ಲ, ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಹೇಳಿಲ್ಲ. ಆದರೆ ಇಂತದ್ದೊಂದು ವಿಚಾರವನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಮುನ್ನೆಲೆಗೆ ತಂದಿರುವುದು ವಿಪರ್ಯಾಸವಾಗಿದೆ.
ಸ್ಯಾಮ್ ಪಿತ್ರೋಡಾ ಹೇಳಿದ್ದೇನು?
ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷರಾದ ಸ್ಯಾಮ್ ಪಿತ್ರೋಡಾ ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಅಮೆರಿಕಾದಲ್ಲಿ ಚಾಲ್ತಿಯಲ್ಲಿರುವ ಪಿತ್ರಾರ್ಜಿತ ತೆರಿಗೆಯ ಪರಿಕಲ್ಪನೆಯನ್ನು ವಿವರಿಸಿದ್ದರು.
ಅಮೆರಿಕದಲ್ಲಿ, ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ USD ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಮತ್ತು ಅವನು ಸತ್ತಾಗ ಅವನು ಬಹುಶಃ 45 ಪ್ರತಿಶತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು, 55 ಪ್ರತಿಶತವನ್ನು ಸರ್ಕಾರದ ಪಾಲಾಗುತ್ತದೆ. ಅದು ಆಸಕ್ತಿದಾಯಕ ಕಾನೂನು. ನಿಮ್ಮ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ ಮತ್ತು ನೀವು ನಿರ್ಗಮಿಸುವಾಗ ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು, ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನನಗೆ ನ್ಯಾಯೋಚಿತವಾಗಿದೆ, ಎಂದು ಸ್ಯಾಮ್ ಪಿತ್ರೋಡಾ ಅಮೆರಿಕದ ನೀತಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಭಾರತದಲ್ಲಿ ನೀವು ಅಂತಹ ನೀತಿಗಳನ್ನು ಹೊಂದಿಲ್ಲ. ಯಾರಾದರೂ 10 ಬಿಲಿಯನ್ ಮೌಲ್ಯದ ಸಂಪತ್ತನ್ನು ಹೊಂದಿದ್ದು, ಅವರು ಸತ್ತ ಬಳಿಕ ಅವರ 10 ಬಿಲಿಯನ್ ಆಸ್ತಿಯನ್ನು ಮಕ್ಕಳು ಪಡೆಯುತ್ತಾರೆ ಮತ್ತು ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಆದ್ದರಿಂದ ಈ ರೀತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ನಾವು ಜನರ ಹಿತಾಶಕ್ತಿಯಿಂದ ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದರು.
ಇದು ನೀತಿಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವು ಸಂಪತ್ತಿನ ಹಂಚಿಕೆ ಉತ್ತಮವಾಗುವಂತೆ ನೀತಿಯನ್ನು ರೂಪಿಸುತ್ತದೆ. ನಮಗೆ (ಭಾರತದಲ್ಲಿ) ಕನಿಷ್ಠ ವೇತನವಿಲ್ಲ. ನಾವು ದೇಶದಲ್ಲಿ ಕನಿಷ್ಠ ವೇತನವನ್ನು ತಂದರೆ ಬಡವರಿಗೂ ಕನಿಷ್ಠ ವೇತನ ಸಿಗುವಂತಾಗುತ್ತದೆ. ಇದು ಸಂಪತ್ತಿನ ಹಂಚಿಕೆಯಾಗಿದೆ, ಶ್ರೀಮಂತರು ತಮ್ಮ ಸೇವಕರು ಮತ್ತು ಮನೆಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಪಾವತಿಸುವುದಿಲ್ಲ, ಆದರೆ ಅವರು ದುಬೈ ಮತ್ತು ಲಂಡನ್ನಲ್ಲಿ ರಜೆಗಾಗಿ ಹಣವನ್ನು ಖರ್ಚು ಮಾಡುತ್ತಾರೆ. ಸಂಪತ್ತಿನ ಹಂಚಿಕೆ ಎಂದರೆ ನೀವು ಕುರ್ಚಿಯ ಮೇಲೆ ಕುಳಿತು ನನ್ನ ಬಳಿ ಇಷ್ಟು ಹಣವಿದೆ ಅದನ್ನು ಎಲ್ಲರಿಗೂ ಹಂಚುತ್ತೇನೆ ಎಂದು ಹೇಳುವುದಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.
ಹೇಳಿಕೆಯನ್ನು ವಿವಾದ ಮಾಡಿದ ಬಿಜೆಪಿ:
ಸ್ಯಾಮ್ ಪಿತ್ರೋಡಾ ಹೇಳಿಕೆಯ ನಂತರ ಬಿಜೆಪಿ ಕಾಂಗ್ರೆಸ್ನ್ನು ಗುರಿಯಾಗಿಸಿದೆ. ಸ್ಯಾಮ್ ಪಿತ್ರೋಡಾ ಸಂದರ್ಶನದ ನಂತರ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಛತ್ತೀಸ್ಗಢದಲ್ಲಿ ನಡೆದ ರ್ಯಾಲಿಯಲ್ಲಿ, ಕಾಂಗ್ರೆಸ್ ಪಕ್ಷದ ಅಪಾಯಕಾರಿ ಉದ್ದೇಶಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಈಗ ಈ ಜನರು ತಮ್ಮ ಪೋಷಕರಿಂದ ಮಕ್ಕಳಿಗೆ ಉಯಿಲು ಮಾಡಿದ ಆಸ್ತಿಗಳ ಮೇಲೆ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ ಮತ್ತು ಎಸ್ಸಿ, ಎಸ್ಟಿ ಮತ್ತು ಒಸಿಬಿ ಸಮುದಾಯಗಳ ಕೋಟಾದಿಂದ ಮುಸ್ಲಿಮರಿಗೆ ಮೀಸಲಾತಿ ನೀಡುತ್ತದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡುತ್ತಾ, ಸಂಪತ್ತು ಮರುಹಂಚಿಕೆ ಕುರಿತು ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ನ ತುಷ್ಟೀಕರಣದ ರಾಜಕೀಯ ನಿಲುವು ಬಹಿರಂಗವಾಗಿದೆ. ಅವರು ಬಹುಸಂಖ್ಯಾತರ ಆಸ್ತಿಯನ್ನು ವಶಪಡಿಸಿಕೊಂಡು ಅಲ್ಪಸಂಖ್ಯಾತರಿಗೆ ಹಂಚುವ ಪಕ್ಷದ ಉದ್ದೇಶವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಭಾರತದ ಬಡವರು, ದಲಿತರು, ಯುವಕರು, ಬುಡಕಟ್ಟುಗಳು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣವು ಕಾಂಗ್ರೆಸ್ನ ಕಾರ್ಯಸೂಚಿಯಲ್ಲಿ ಎಂದಿಗೂ ಇರಲಿಲ್ಲ ಎಂಬುದನ್ನು ಇದು ಮತ್ತೊಮ್ಮೆ ಮುನ್ನೆಲೆಗೆ ತರುತ್ತದೆ ಎಂದು ಅಮಿತ್ ಶಾ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಹೇಳಿದ್ದಾರೆ.
ಬಿಜೆಪಿ ವಕ್ತಾರ ಜೈವೀರ್ ಶೆರ್ಗಿಲ್ ಅವರು ಸ್ಯಾಮ್ ಪಿತ್ರೋಡಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಆಸ್ತಿ ದೋಚುವವರ ಬಗ್ಗೆ ಮತದಾರರು ಜಾಗೃತರಾಗಿರಬೇಕು. ಬೆಕ್ಕು ಚೀಲದಿಂದ ಹೊರ ಬಂದಿದೆ. ರಾಹುಲ್ ಗಾಂಧಿಯವರ ಮುಖ್ಯ ಸಲಹೆಗಾರ ಸ್ಯಾಮ್ ಪಿತ್ರೋಡಾ ಯುಎಸ್ನಲ್ಲಿರುವ ‘ಪಿತ್ರಾರ್ಜಿತ ತೆರಿಗೆ’ಯನ್ನು ಪ್ರಸ್ತಾಪಿಸಿದ್ದಾರೆ, ಅಲ್ಲಿ ಸರ್ಕಾರವು ನಿಮ್ಮ ಸಂಪತ್ತಿನ 50 ಪ್ರತಿಶತವನ್ನು ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ಗೆ ಮತ ಹಾಕುವುದು ನಿಮ್ಮ ಆಸ್ತಿಯನ್ನು ಕಳೆದುಕೊಂಡಂತೆ, ಮತದಾರರು ಜಾಗೃತರಾಗಿರಿ, ಆಸ್ತಿ ಕಿತ್ತುಕೊಳ್ಳುವವರು ಇಲ್ಲಿದ್ದಾರೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಬಿಜೆಪಿ ಪಕ್ಷದ ವಕ್ತಾರ ಶೆಹಜಾದ್ ಪೂನಾವಾಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಜನರು ಕಷ್ಟಪಟ್ಟು ಸಂಪಾದಿಸಿದ ತೆರಿಗೆದಾರರ ಸಂಪನ್ಮೂಲಗಳನ್ನು ದೋಚಲು ಬಯಸಿದೆ. ಇದನ್ನು ಕಾಂಗ್ರೆಸ್, ಗಾಂಧಿ ವಾದ್ರಾ ಕುಟುಂಬದ ಆಪ್ತ ಸಹಾಯಕ ಸ್ಯಾಮ್ ಪಿತ್ರೋಡಾ ಮೂಲಕ ಮೂಲಭೂತವಾಗಿ ಹೇಳಿಸಿದೆ, ನೀವು ಗಳಿಸಿದ 55% ಸಂಪತ್ತು ನಿಮ್ಮ ಮರಣದ ನಂತರ ಕಿತ್ತುಕೊಳ್ಳಲಾಗುವುದು. ನೀವು ರೈತರಾಗಿದ್ದರೆ ನಿಮ್ಮ ಭೂಮಿಯಲ್ಲಿ 55% ತೆಗೆದುಕೊಳ್ಳಲಾಗುತ್ತದೆ. ಉದ್ಯಮಿಯಾಗಿದ್ದರೆ ನಿಮ್ಮ ವ್ಯವಹಾರದ 55% ನಿಮ್ಮ ಮಕ್ಕಳಿಗಾಗಿ ನೀವು ಇಟ್ಟುಕೊಂಡಿರುವ ನಿಮ್ಮ ಉಳಿತಾಯದ 55% ತೆಗೆದುಕೊಳ್ಳಲಾಗುತ್ತದೆ, ವಿಪರ್ಯಾಸವೆಂದರೆ ಗಾಂಧಿಯವರು ತಮ್ಮ ಸ್ವಂತ ಮಕ್ಕಳು ಮತ್ತು ಅಳಿಯನಿಗಾಗಿ ದೊಡ್ಡ ಖಜಾನೆಯನ್ನು ನಿರ್ಮಿಸಿದರು ಆದರೆ ಅವರು ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಕಿತ್ತುಕೊಳ್ಳಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ. ಈಗ, ಸ್ಯಾಮ್ ಪಿತ್ರೋಡಾ ಅವರು ಸಂಪತ್ತಿನ ಮರುಹಂಚಿಕೆಗಾಗಿ 50 ಪ್ರತಿಶತ ಪಿತ್ರಾರ್ಜಿತ ತೆರಿಗೆಯ ಬಗ್ಗೆ ಪ್ರತಿಪಾದಿಸಿದ್ದಾರೆ. ಇದರರ್ಥ ನಮ್ಮ ಎಲ್ಲಾ ಶ್ರಮದಿಂದ ನಾವು ಸಂಪಾದಿಸಿದ 50 ಪ್ರತಿಶತ ಸಂಪತ್ತನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿತ್ತುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ಸ್ಪಷ್ಟನೆ:
ಪಿತ್ರಾರ್ಜಿತ ಆಸ್ತಿ ಮೇಲಿನ ತೆರಿಗೆಯ ಕುರಿತಾದ ತಮ್ಮ ಹೇಳಿಕೆಯ ಬಗ್ಗೆ ಬುಧವಾರ ಕಾಂಗ್ರೆಸ್ ಸ್ಪಷ್ಟೀಕರಣವನ್ನು ನೀಡಿದ್ದು, ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಹರಡುತ್ತಿರುವ ಸುಳ್ಳುಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಈ ರೀತಿ ಹೇಳಲಾಗಿದೆ. ನಾನು ಒಬ್ಬ ವ್ಯಕ್ತಿಯಾಗಿ USನಲ್ಲಿರುವ ಉತ್ತರಾಧಿಕಾರ ತೆರಿಗೆಯ ಕುರಿತು ಹೇಳಿದ್ದನ್ನು ಗೋದಿ ಮಾಧ್ಯಮಗಳು ತಿರುಚಿರುವುದು ದುರದೃಷ್ಟಕರ. ಇದು ಮಂಗಳಸೂತ್ರ, ಚಿನ್ನದ ಕುರಿತ ಪ್ರಧಾನಿಯ ಹೇಳಿಕೆಯಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಸ್ಯಾಮ್ ಪಿತ್ರೋಡಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರತಿಕ್ರಿಯೆಯೇನು?
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ವಂತ ಅಭಿಪ್ರಾಯಗಳನ್ನು ಹೇಳಿದ್ದಾರೆ. ಆದರೆ ಇದು ಯಾವಾಗಲೂ ಪಕ್ಷದ ನಿಲುವಲ್ಲ. ಸ್ಯಾಮ್ ಪಿತ್ರೋಡಾ ಅವರು ನನ್ನನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತದ ಅನೇಕರಿಗೆ ಮಾರ್ಗದರ್ಶಕ, ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಿಯಾಗಿದ್ದಾರೆ. ಅವರು ಭಾರತದ ಬೆಳವಣಿಗೆಗಳಿಗೆ ನಿರಂತರ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದಾರೆ. ಪಿತ್ರೋಡಾ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಚರ್ಚಿಸಲು, ವ್ಯಕ್ತಪಡಿಸಲು ಮತ್ತು ಚರ್ಚಿಸಲು ಸ್ವಾತಂತ್ರ್ಯವಿದೆ ಎಂದು ಅವರು ಖಚಿತವಾಗಿ ಭಾವಿಸುತ್ತಾರೆ ಎಂದು ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸ್ಯಾಮ್ಪಿತ್ರೋಡಾ ಯಾರು?
ಸ್ಯಾಮ್ಪಿತ್ರೋಡಾ ಅವರು ಕಾಂಗ್ರೆಸ್ ಪಕ್ಷದ ಸಾಗರೋತ್ತರ ವಿಭಾಗ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದಾರೆ. ಸ್ಯಾಮ್ ಪಿತ್ರೋಡಾ ಅವರ ವೈಯಕ್ತಿಕ ವೆಬ್ಸೈಟ್ ಅವರನ್ನು ಟೆಲಿಕಾಂ ಉದ್ಯಮಿ, ಹೂಡಿಕೆದಾರ, ಚಿಂತಕ ಮತ್ತು ನೀತಿ ನಿರೂಪಕ ಎಂದು ಹೇಳಿಕೊಳ್ಳುತ್ತದೆ. ಅವರು ಐಟಿ ಕ್ಷೇತ್ರದಲ್ಲಿ 50 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಪಿತ್ರೋಡಾ ಅವರು ಕಾಂಗ್ರೆಸ್ ಆಳ್ವಿಕೆಯಲ್ಲಿ ಮೂವರು ಪ್ರಧಾನ ಮಂತ್ರಿಗಳೊಂದಿಗೆ ಕೆಲಸ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಪಿತ್ರೋಡಾ ಅವರು ರಾಜೀವ್ ಗಾಂಧಿ ಅವರೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣಕರ್ತರು ಎಂದು ಹೇಳಲಾಗಿದೆ.
ಅವರು ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ ರಾಷ್ಟ್ರೀಯ ಜ್ಞಾನ ಆಯೋಗದ ನೇತೃತ್ವ ವಹಿಸಿದ್ದರು. ಈಗ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸ್ಯಾಮ್ ಪಿತ್ರೋಡಾ ಅವರಿಗೆ ಈಗ 81 ವರ್ಷ ವಯಸ್ಸಾಗಿದ್ದು, ಅವರು ಇಂಡಿಯಾ ಫುಡ್ ಬ್ಯಾಂಕ್, ಗ್ಲೋಬಲ್ ನಾಲೆಡ್ಜ್ ಇನಿಶಿಯೇಟಿವ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಟ್ರಾನ್ಸ್ಡಿಸಿಪ್ಲಿನರಿ ಹೆಲ್ತ್ ಸೇರಿದಂತೆ ಐದು ಎನ್ಜಿಒಗಳ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಹಲವಾರು ಕಂಪನಿಗಳ ಮಾಲೀಕತ್ವವನ್ನು ಅವರು ಹೊಂದಿದ್ದಾರೆ.
ಇದನ್ನು ಓದಿ: 2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ ಕಾರಣವೇನು?