ಉತ್ತರ ಪ್ರದೇಶದ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಕೇಶವ್ ಪ್ರಸಾದ್ ಮೌರ್ಯ ಅವರು ಬಿಬಿಸಿ ಸಂದರ್ಶನವನ್ನು ಮೊಟುಕುಗೊಳಿಸಿ ಸಂದರ್ಶನದ ದೃಶ್ಯಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿರುವ ಘಟನೆ ನಡೆದಿದೆ.
ಹರಿದ್ವಾರದ ಧರ್ಮ ಸಂಸದ್ನಲ್ಲಿ ಮುಸ್ಲಿಂ ವಿರೋಧಿಯಾಗಿ ಮಾಡಲಾದ ದ್ವೇಷ ಭಾಷಣಗಳ ಕುರಿತ ಪ್ರಶ್ನೆಗಳಿಗೆ ಕೋಪಗೊಂಡ ಕೇಶವ್ ಪ್ರಸಾದ್, ಸಂದರ್ಶನವನ್ನು ಮಧ್ಯದಲ್ಲೇ ನಿಲ್ಲಿಸಿದ್ದಾರೆ. ಸಂದರ್ಶನದ ದೃಶ್ಯಗಳನ್ನು ಅಳಿಸಲು ಸೂಚಿಸಿದ್ದಾರೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಮೌರ್ಯ ಅವರು ನಂತರದಲ್ಲಿ ಪ್ರತಿಕ್ರಿಯಿಸಿದ್ದು ಈ ಘಟನೆಯನ್ನು “ದುರದೃಷ್ಟಕರ ಘಟನೆ” ಎಂದು ಕರೆದ್ದಾರೆ.
ಧಾರ್ಮಿಕ ಸಮಾವೇಶದ ದ್ವೇಷ ಭಾಷಣಗಳ ಬಗ್ಗೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪಕ್ಷದ ನಾಯಕರು ಮೌನ ತಾಳಿರುವುದನ್ನು ಮೌರ್ಯ ಅವರಲ್ಲಿ ಬಿಬಿಸಿ ಸಂದರ್ಶಕರು ಪ್ರಶ್ನಿಸುತ್ತಾರೆ.
ನಾಯಕರು ಇಂತಹ ಘೋಷಣೆಗಳ ವಿರುದ್ಧ ಮಾತನಾಡುವ ಮೂಲಕ ಜನರಿಗೆ ಧೈರ್ಯ ತುಂಬಬೇಕೇ ಎಂದು ಕೇಳಿದಾಗ ಮೌರ್ಯ ಅವರು ಪ್ರತಿಕ್ರಿಯಿಸಿ, “ನಾವು ನಮ್ಮನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್ (ಎಲ್ಲರ ಅಭಿವೃದ್ಧಿ ಮತ್ತು ಬೆಂಬಲ) ನಲ್ಲಿ ನಂಬಿಕೆ ಹೊಂದಿದ್ದೇವೆ. ತಮ್ಮ ವಿಚಾರಗಳನ್ನು ಹೇಳುವುದಕ್ಕೆ ಧಾರ್ಮಿಕ ಮುಖಂಡರಿಗೆ ಹಕ್ಕು ಇದೆ” ಎನ್ನುತ್ತಾರೆ.
ಮುಂದುವರಿದು, “ಹಿಂದೂ ಧಾರ್ಮಿಕ ಮುಖಂಡರನ್ನು ಮಾತ್ರ ಯಾಕೆ ಎತ್ತಿ ತೋರಿಸುತ್ತೀರಿ” ಎಂದು ಉಪಮುಖ್ಯಮಂತ್ರಿ ಸಂದರ್ಶಕರಲ್ಲಿ ಪ್ರಶ್ನಿಸುತ್ತಾರೆ.
“ಹಿಂದೂ ನಾಯಕರ ಬಗ್ಗೆ ಮಾತ್ರ ಏಕೆ ಕೇಳುತ್ತಿದ್ದೀರಿ? ಇತರ ಧಾರ್ಮಿಕ ಮುಖಂಡರು ಮಾಡಿದ ಕಮೆಂಟ್ಗಳ ಬಗ್ಗೆ ಯಾಕೆ ಮಾತನಾಡಲ್ಲ? 370ನೇ ವಿಧಿಯನ್ನು ರದ್ದುಗೊಳಿಸುವ ಮೊದಲು ಎಷ್ಟು ಮಂದಿ ಜಮ್ಮು ಮತ್ತು ಕಾಶ್ಮೀರವನ್ನು ತೊರೆಯಬೇಕಾಯಿತು, ನೀವು ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ? ಧರ್ಮ ಸಂಸದ್ ಬಿಜೆಪಿ ಕಾರ್ಯಕ್ರಮವಲ್ಲ, ಧಾರ್ಮಿಕ ಮುಖಂಡರದ್ದು’’ ಎಂದು ತಿಳಿಸುತ್ತಾರೆ.
“ಸ್ವಾಮೀಜಿಗಳು ನಂಬಿದ್ದನ್ನು ಹೇಳಿದ್ದಾರೆ. ಇದು ರಾಜಕೀಯಕ್ಕೆ ಸಂಬಂಧಿಸಿಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ನಾಯಕರೂ ಇದ್ದಾರೆ. ಅವರ ಬಗ್ಗೆಯೂ ಮಾತನಾಡಿ” ಎಂದು ಉಪಮುಖ್ಯಮಂತ್ರಿ ಒತ್ತಾಯಿಸುತ್ತಾರೆ.
ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆಯನ್ನು ಕೇಂದ್ರೀಕರಿಸಿ, “ಇಂತಹ ಭಾಷಣಗಳು ಚುನಾವಣೆಗೆ ಮುನ್ನ ವಾತಾವರಣವನ್ನು ಹಾಳುಮಾಡುತ್ತವೆಯಲ್ಲ?” ಎಂದು ಸಂದರ್ಶಕರು ಎಂದು ಕೇಳುತ್ತಾರೆ. ಜೊತೆಗೆ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಕೂಗಲಾದ ಘೋಷಣೆಗಳ ಆಧಾರದಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಿರುವುದರ ಕುರಿತೂ ಅವರು ಕೇಳುತ್ತಾರೆ.
“ದೇಶದ್ರೋಹ ಬೇರೆ ವಿಷಯ. ಆದರೆ ಇದು ಧರ್ಮ ಸಂಸದ್. ಆಗ ನಾವು ಹೇಳಬಹುದು- ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸೂರ್ಯ ನಮಸ್ಕಾರದ ವಿರುದ್ಧ ಪ್ರತಿಭಟಿಸುವ ಹಕ್ಕು ಇಲ್ಲ” ಎಂದು ಮೌರ್ಯ ಉತ್ತರಿಸುತ್ತಾರೆ.
ವಿವಾದಾತ್ಮಕ ಧಾರ್ಮಿಕ ಸಮಾವೇಶದಲ್ಲಿ ಎದ್ದಿರುವ ನರಮೇಧದ ಕರೆಗಳ ಬಗ್ಗೆ ಕೇಳಿದಾಗ ಡಿಸಿಎಂ ಸಿಟ್ಟಿಗೆದ್ದರು. “ನೀವು ಯಾವ ವೀಡಿಯೊದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ, ನೀವು ಚುನಾವಣೆಯ ಬಗ್ಗೆ ಕೇಳುತ್ತೀರಾ? ನೀವು ಪತ್ರಕರ್ತರಂತೆ ಮಾತನಾಡುತ್ತಿಲ್ಲ. ನೀವು ನಿರ್ದಿಷ್ಟ ಗುಂಪಿನ ಏಜೆಂಟರಂತೆ ಮಾತನಾಡುತ್ತಿದ್ದೀರಿ. ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ” ಎಂದು ಮೈಕ್ ಕಿತ್ತೆಸೆಯುತ್ತಾರೆ.
ಉತ್ತರ ಪ್ರದೇಶ ಮತ್ತು ಇನ್ನೂ ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮಾಡುವಾಗ, ಬಿಜೆಪಿಯು ಧರ್ಮ ಸಂಸದ್ ಬಗೆಗಿನ ಪ್ರಶ್ನೆಗಳನ್ನು ಎದುರಿಸುತ್ತಿದೆ. ಧರ್ಮ ಸಂಸತ್ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಧಾರ್ಮಿಕ ಮುಖಂಡರು, ಹಿಂಸಾಚಾರ ಮತ್ತು ನರಮೇಧಕ್ಕೆ ಕರೆಗಳನ್ನು ನೀಡುತ್ತಾರೆ. ಈ ಧಾರ್ಮಿಕ ಮುಖಂಡರು ಆಡಳಿತ ಪಕ್ಷದೊಂದಿಗೆ ಒಡನಾಟದಲ್ಲಿದ್ದಾರೆ.
ಪ್ರೀಮಿಯರ್ ಐಐಎಂ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್) ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ದ್ವೇಷ ಭಾಷಣಗಳ ವಿರುದ್ಧ ಮಾತನಾಡುವಂತೆ ಒತ್ತಾಯಿಸಿದ್ದಾರೆ.
“ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಿಮ್ಮ ಮೌನವು ದ್ವೇಷ ತುಂಬಿದ ಧ್ವನಿಗಳಿಗೆ ಧೈರ್ಯ ತುಂಬುತ್ತದೆ. ನಮ್ಮ ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರುತ್ತದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ” ಎಂದು ಬಹಿರಂಗ ಪತ್ರದಲ್ಲಿ ಕೋರಲಾಗಿದೆ.
ಇದನ್ನೂ ಓದಿರಿ: ವಾರಣಾಸಿ: ಕೋಮುದ್ವೇಷ ಹರಡಲು ಯತ್ನ ಪ್ರಕರಣ; ಇಬ್ಬರು ದುಷ್ಕರ್ಮಿಗಳ ಬಂಧನ