Homeಮುಖಪುಟವಾರಣಾಸಿ: ಕೋಮುದ್ವೇಷ ಹರಡಲು ಯತ್ನ ಪ್ರಕರಣ; ಇಬ್ಬರು ದುಷ್ಕರ್ಮಿಗಳ ಬಂಧನ

ವಾರಣಾಸಿ: ಕೋಮುದ್ವೇಷ ಹರಡಲು ಯತ್ನ ಪ್ರಕರಣ; ಇಬ್ಬರು ದುಷ್ಕರ್ಮಿಗಳ ಬಂಧನ

- Advertisement -
- Advertisement -

ವಾರಣಾಸಿಯ ಗಂಗಾನದಿಯ ಘಾಟ್‌ಗಳಲ್ಲಿ ಹಿಂದೂಯೇತರರು ಬರದಂತೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಬಲಪಂಥೀಯ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಇಬ್ಬರು ಸದಸ್ಯರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳಿಂದ ತಲಾ 5 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಬರೆಸಿಕೊಂಡ ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ದ್ವೇಷ ಹರಡಲು ಯತ್ನಿಸಿದ ಆರೋಪಿಗಳನ್ನು ಜೈಲಿಗೆ ಕಳುಹಿಸದ ಯುಪಿ ಪೊಲೀಸರ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.

ವಿಎಚ್‌ಪಿ, ಬಜರಂಗದಳದ ಸ್ಥಳೀಯ ಪದಾಧಿಕಾರಿಗಳೆಂದು ಹೇಳಿಕೊಂಡ ರಂಜನ್ ಗುಪ್ತಾ ಮತ್ತು ನಿಖಿಲ್ ತ್ರಿಪಾಠಿ ಅಲಿಯಾಸ್ “ರುದ್ರ” ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳು ಮತ್ತು ವಿಡಿಯೋಗಳ ಆಧಾರದ ಮೇಲೆ ಪೊಲೀಸರು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿದ್ದರು. ಬಲಪಂಥೀಯ ಕಾರ್ಯಕರ್ತರೊಂದಿಗೆ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕುತ್ತಿರುವವರ ಫೋಟೋಗಳನ್ನು ತ್ರಿಪಾಠಿ ಮತ್ತು ರುದ್ರ ಅವರು ತಮ್ಮ ಸ್ವಂತ ಫೇಸ್‌ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು.

ಈ ಕುರಿತು ‘ದಿ ವೈರ್‌’ ಸುದ್ದಿ ಜಾಲತಾಣದೊಂದಿಗೆ ಮಾತನಾಡಿರುವ ಭೇಲುಪುರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಮಾ ಕಾಂತ್ ದುಬೆ, “ಶಾಂತಿ, ನೆಮ್ಮದಿಯನ್ನು ಖಾತ್ರಿ ಮಾಡಿಕೊಳ್ಳಲು ತಲಾ 5 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ತ್ರಿಪಾಠಿ ಮತ್ತು ರುದ್ರರಿಗೆ ಶುಕ್ರವಾರ ಸಮನ್ಸ್ ಜಾರಿ ಮಾಡಿದ್ದಾರೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 107 ಮತ್ತು 116ರ ಅಡಿಯಲ್ಲಿ ಸಮನ್ಸ್ ನೀಡಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ವಾರಣಾಸಿ: ಕೋಮುದ್ವೇಷ ಹರಡಲು ಪೋಸ್ಟರ್‌ ಅಂಟಿಸಿದ ಐವರು ದುಷ್ಕರ್ಮಿಗಳ ಮೇಲೆ ಎಫ್‌ಐಆರ್‌‌

ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿ ಸಹಾಯಕ ಪೊಲೀಸ್ ಕಮಿಷನರ್ (ಭೇಲುಪುರ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವೈಯಕ್ತಿಕ ಬಾಂಡ್ ಸಲ್ಲಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಇವರ ಬಂಧನದ ಸುದ್ದಿ ಮುಟ್ಟಿದ ಕೂಡಲೇ ಎರಡು ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಬಿಡುಗಡೆಗಾಗಿ ಘೋಷಣೆ ಕೂಗಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಗುಂಪೊಂದು ಕೆಲ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿತು.

“ಈ ಬಗ್ಗೆ ತನಿಖೆ ನಡೆಸುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಅಗತ್ಯ ಕ್ರಮವನ್ನು ಪೊಲೀಸರು ಜರುಗಿಸಲಿದ್ದಾರೆ” ಎಂದು ಎಸಿಪಿ ಪ್ರವೀಣ್ ಕುಮಾರ್ ದಿ ವೈರ್‌ಗೆ ತಿಳಿಸಿದ್ದಾರೆ.

ಗಂಗಾನದಿಯ ದಡದಲ್ಲಿ ಕೋಮುದ್ವೇಶದ ಪೋಸ್ಟರ್‌ಗಳನ್ನು ಅಂಟಿಸಿದವರನ್ನು ಬಂಧಿಸುವಂತೆ ವಿರೋಧ ಪಕ್ಷಗಳು ಒತ್ತಡ ಹೇರಿದ ನಂತರ ಪೊಲೀಸರು ಕ್ರಮಕೈಗೊಂಡರು. “ವಾರಣಾಸಿಯಲ್ಲಿ ಗಂಗಾನದಿಯ ಘಾಟ್‌ಗಳಿಗೆ ಹಿಂದೂಯೇತರರು ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಇದು ಎಚ್ಚರಿಕೆ, ವಿನಂತಿಯಲ್ಲ” ಎಂದು ಪೋಸ್ಟರ್‌‌ನಲ್ಲಿ ಬರೆಯಲಾಗಿತ್ತು. ವಾರಣಾಸಿಯು ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿದೆ.

ಈ ಪೋಸ್ಟರ್‌ಗಳನ್ನು ಜನವರಿ 6ರಂದು ಗಂಗಾ ನದಿಯ ಪಂಚಗಂಗಾ ಘಾಟ್, ರಾಮ್ ಘಾಟ್, ದಶಾಶ್ವಮೇಧ ಘಾಟ್, ಅಸ್ಸಿ ಘಾಟ್ ಮತ್ತು ಮಣಿಕರ್ಣಿಕಾ ಘಾಟ್‌ನಲ್ಲಿ ಹಾಕಲಾಗಿತ್ತು.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದುತ್ವ ಗುಂಪುಗಳು ಅಲ್ಪಸಂಖ್ಯಾತ ವಿರೋಧಿ ಅಭಿಯಾನದಲ್ಲಿ ತೊಡಗಿಸಿಕೊಂಡಿವೆ. ಅದರ ಮುಂದುವರಿದ ಭಾಗವಾಗಿ ಈ ಪೋಸ್ಟರ್‌ಗಳನ್ನು ಹಾಕಲಾಗಿದೆ. ಉತ್ತರಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಹಾಕಲಾಗುತ್ತಿರುವ ಈ ಪೋಸ್ಟರ್‌ಗಳಿಗೆ ರಾಜಕೀಯ ಮಹತ್ವವಿದೆ ಎಂದು ಹಲವರು ನಂಬಿದ್ದಾರೆ.

ಚುನಾವಣಾ ಕಾಲದಲ್ಲಿ ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸಲು ಕೇಸರಿ ಬ್ರಿಗೇಡ್‌ ನಡೆಸಿರುವ ಪಿತೂರಿ ಇದೆಂದು ಪ್ರತಿಪಕ್ಷಗಳು ನಂಬಿವೆ. ಕಾಂಗ್ರೆಸ್ ಪಕ್ಷದ ನಿಯೋಗವು ವಾರಣಾಸಿ ಜಿಲ್ಲಾ ಅಧಿಕಾರಿಗಳನ್ನು ಭೇಟಿ ಮಾಡಿ ಪೋಸ್ಟರ್‌ಗಳನ್ನು ಹಾಕುತ್ತಿರುವ ಎಲ್ಲರನ್ನು ಜೈಲಿಗೆ ಹಾಕುವಂತೆ ಒತ್ತಾಯಿಸಿದೆ. ವಿಎಚ್‌ಪಿ ಮತ್ತು ಬಜರಂಗ ದಳದ ಕಾರ್ಯಕರ್ತರ ಬಿಡುಗಡೆಗೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಚೌಬೆ ಮಾತನಾಡಿ, ‘ಈ ಕಿಡಿಗೇಡಿಗಳ ಬಿಡುಗಡೆ ಇತರ ದ್ವೇಷಿಗಳಿಗೆ ನೆಮ್ಮದಿ ತಂದಿದೆ. ಪೊಲೀಸರ ಕ್ರಮ ಕೇವಲ ಕಣ್ಣೊರೆಸುವ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.

ವಾರಣಾಸಿಯ ವಿವಿಧ ಪ್ರದೇಶಗಳಲ್ಲಿ ಬಲಪಂಥೀಯರು ನಡೆಸಿದ ಮೆರವಣಿಗೆಯಲ್ಲಿ ಕತ್ತಿಗಳನ್ನು ಪ್ರಯೋಗಿಸಲಾಗಿದೆ ಎಂದು ಕಾಂಗ್ರೆಸ್ ದೂರಿದೆ.


ಇದನ್ನೂ ಓದಿರಿ: ಬುಲ್ಲಿ ಬಾಯ್‌‌ ಪ್ರಕರಣ ಬಿಚ್ಚಿಟ್ಟ ‘ಟ್ರ್ಯಾಡ್ಸ್’ ‘ರಾಯ್ತಾಸ್‌’ ಬಲಪಂಥೀಯ ಗುಂಪುಗಳ ಘರ್ಷಣೆ: ಏನಿದು ವಿವಾದ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...