ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್ಆರ್ಟಿಸಿ) ಬಸ್ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ, ಟೋಲ್ ಪ್ಲಾಜಾ ಬಳಿಯ ಸಿಮೆಂಟ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ಜನಗಾಂವ್ ಜಿಲ್ಲೆಯ ಪಾಲಕುರ್ತಿಯ ನಿವಾಸಿ ವೆಂಕಣ್ಣ ಎಂದು ಗುರುತಿಸಲಾದ ಆರೋಪಿ, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಲಿ ಬಸ್ ಅನ್ನು ಕುಡಿದ ಮತ್ತಿನಲ್ಲಿ ತೆಗೆದುಕೊಂಡು ಸೂರ್ಯಪೇಟೆ ಕಡೆಗೆ ಚಲಾಯಿಸಿದ್ದಾನೆ ಎಂದು ವರದಿಯಾಗಿದೆ.
ಸಿಂಗರಾಜುಪಲ್ಲಿ ಟೋಲ್ ಗೇಟ್ ಬಳಿ ವಾಹನ ಸವಾರರು ಬಸ್ ಅನ್ನು ನಿಲ್ಲಿಸಿದಾಗ, ಬಸ್ ಸಿಮೆಂಟ್ ಬ್ಲಾಕ್ಗೆ ಡಿಕ್ಕಿ ಹೊಡೆದು ಹಠಾತ್ತನೆ ನಿಂತಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ವೆಂಕಣ್ಣನನ್ನು ವಶಕ್ಕೆ ಪಡೆದು ವಾಹನ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯು ನಿಲ್ಲಿಸಿದ್ದ ಬಸ್ಗೆ ಹೇಗೆ ಪ್ರವೇಶ ಪಡೆದ? ಅದನ್ನು ಓಡಿಸಿದ್ದಾದರೂ ಹೇಗೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜನಗಾಂವ್ ಸಬ್-ಇನ್ಸ್ಪೆಕ್ಟರ್ (ಎಸ್ಐ) ಎಂ. ಭರತ್, “ಬಸ್ ಚಾಲಕ ಗೋಪಿಕೃಷ್ಣ ರೆಡ್ಡಿ, ಪ್ರಯಾಣ ಮುಗಿದ ನಂತರ ಆರ್ಟಿಸಿ ಬಸ್ ನಿಲ್ದಾಣ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಬಸ್ ಕಳುವಾಗಿದೆ ಎಂದು ದೂರು ದಾಖಲಿಸಿದ್ದಾರೆ” ಎಂದು ಹೇಳಿದರು.
ಚಾಲಕ ಎಂದಿನಂತೆ ಕೀಲಿಯನ್ನು ರಹಸ್ಯ ಸ್ಥಳದಲ್ಲಿ ಇಟ್ಟಿದ್ದನು, ಮುಂದಿನ ಶಿಫ್ಟ್ ಚಾಲಕ ಕರ್ತವ್ಯಕ್ಕೆ ಬಂದಾಗ ಆತನಿಗೆ ಸುಲಭವಾಗಿ ಸಿಗಲಿ ಎಂದು ಕೀ ಅಲ್ಲೇ ಇಡಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.
ಕದ್ದ ಬಸ್ನಲ್ಲಿ ವೆಂಕಣ್ಣ ಜನಗಾಂವ್ ಪಟ್ಟಣದಿಂದ 21 ಕಿಲೋಮೀಟರ್ ಪ್ರಯಾಣಿಸಿದ್ದ, ಜನಗಾಂವ್ ಜಿಲ್ಲೆಯ ದೇವುರುಪ್ಪಳ ಮಂಡಲದ ಅಡಿಯಲ್ಲಿ ಬರುವ ಸಿಂಗರಾಜಪಲ್ಲೆ ಗ್ರಾಮ ಮಿತಿಯಲ್ಲಿರುವ ಟೋಲ್ ಪ್ಲಾಜಾ ತಲುಪಿದ ನಂತರ, ಆತ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಮೊದಲು ರಸ್ತೆಬದಿಯ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಟೋಲ್ ಗೇಟ್ ಸಿಬ್ಬಂದಿ ತಕ್ಷಣ ದೇವುರುಪ್ಪಳ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಟೋಲ್ ಪ್ಲಾಜಾಗೆ ಧಾವಿಸಿ ವೆಂಕಣ್ಣನನ್ನು ವಿಚಾರಣೆ ನಡೆಸಿದರು.
ಚೆನ್ನೂರು ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ನಡೆದ ಘರ್ಷಣೆಯ ನಂತರ, ಆತ ಮದ್ಯ ಸೇವಿಸಿ ತಿರುಪತಿಗೆ ಭೇಟಿ ನೀಡಲು ಜನಗಾಂವ್ ರೈಲು ನಿಲ್ದಾಣಕ್ಕೆ ಹೋಗಿದ್ದಾಗಿ ಬಹಿರಂಗಪಡಿಸಿದ್ದಾನೆ.
ರಾತ್ರಿ ವೇಳೆ ರೈಲುಗಳು ಲಭ್ಯವಿಲ್ಲದ ಕಾರಣ, ಆತ ಜನಗಾಂವ್ ಟೌನ್ ಬಸ್ ನಿಲ್ದಾಣ ತಲುಪಲು ಬಸ್ ಹತ್ತಿದ. ನಿಂತಿದ್ದ ಬಸ್ ನೋಡಿ ಅದನ್ನು ಪ್ರವೇಶಿಸಿ ನಿದ್ರೆಗೆ ಜಾರಿದ್ದಾನೆ. ಎಚ್ಚರವಾದಾಗ, ಆತನಿಗೆ ಬಸ್ಸಿನ ಕೀ ಸಿಕ್ಕದೆ, ಕೂಡಲೇ ಆತ ಬಸ್ ಅನ್ನು ಪ್ರಾರಂಭಿಸಿದ್ದಾನೆ.
“ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ” ಎಂದು ಎಸ್ಐ ಭರತ್ ಹೇಳಿದರು.


