ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಜಾರ್ಖಂಡ್ ಮೂಲದ ಬಾಲಕಿಯ ಮೇಲೆ ವಿವಿಧ ಸಂದರ್ಭಗಳಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 18ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ನಾಪತ್ತೆಯಾಗಿದ್ದ 17 ವರ್ಷದ ಹುಡುಗಿಯನ್ನು ಎರಡು ಪ್ರತ್ಯೇಕ ಪುರುಷರ ಗುಂಪುಗಳು ಹಲವಾರು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಒಡಿಶಾದಲ್ಲಿ ನಾಲ್ಕು ದಿನಗಳ ನಂತರ ಆಕೆ ಪತ್ತೆಯಾಗಿದ್ದಳು.
ಡಿಸೆಂಬರ್ 17,2023 ರಂದು ಬಾಲಕಿಯ ಜನ್ಮದಿನ ಆಚರಿಸುವ ನೆಪದಲ್ಲಿ, ಆಕೆಗೆ ಆಪ್ತನಾಗಿದ್ದ ಜಾರ್ಖಂಡ್ನ ವಲಸೆ ಕಾರ್ಮಿಕನೋರ್ವ ಮನೆ ಸಮೀಪದ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಆರೋಪಿ ತನ್ನ ಸ್ನೇಹಿತನನ್ನು ಕರೆಸಿದ್ದ. ಆತನೂ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ವಿಶಾಖಪಟ್ಟಣಂ ವಲಯ-1 ಉಪ ಪೊಲೀಸ್ ಆಯುಕ್ತ ಕೆ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ಇದರಿಂದ ಆಘಾತಕ್ಕೆ ಒಳಗಾಗಿದ್ದ ಬಾಲಕಿ ಆತ್ಮಹತ್ಯೆಗೈಯ್ಯಲು ವಿಶಾಖಪಟ್ಟಣಂ ಆರ್.ಕೆ ಬೀಚ್ಗೆ ತೆರಳಿದ್ದಳು. ಅಲ್ಲಿ ಆಕೆಗೆ ಪ್ರವಾಸಿಗರ ಫೋಟೋ ತೆಗೆಯುವ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಆತ ಬಾಲಕಿಗೆ ಸಹಾಯ ಮಾಡುವ ಬದಲು ಲಾಡ್ಜ್ ಒಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ.
ನಂತರ, ಬಾಲಕಿಯನ್ನು ಮತ್ತೊಂದು ಕೋಣೆಗೆ ಕರೆದೊಯ್ದಿದ್ದ. ಅಲ್ಲಿ ಆತನ ಎಂಟರಿಂದ ಒಂಬತ್ತು ಸ್ನೇಹಿತರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೌರ್ಜನ್ಯದಿಂದ ಕುಗ್ಗಿ ಹೋಗಿದ್ದ ಬಾಲಕಿ ಹೇಗೋ ತಪ್ಪಿಸಿಕೊಂಡು ವಿಶಾಖಪಟ್ಟಣಂನಿಂದ ಒಡಿಶಾಗೆ ತೆರಳಿದ್ದಳು. ಬಾಲಕಿ ಕಾಣದಿದ್ದಾಗ ಆಕೆಯ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ಬಾಲಕಿ ಒಡಿಶಾದಲ್ಲಿ ಪತ್ತೆಯಾಗಿದ್ದಾಳೆ. ಡಿಸೆಂಬರ್ 25 ರಂದು ಪೊಲೀಸರು ಆಕೆಯನ್ನು ವಿಶಾಖಪಟ್ಟಣಂಗೆ ಕರೆ ತಂದಿದ್ದಾರೆ.
ಡಿಸೆಂಬರ್ 20, 21 ಮತ್ತು 22 ರಂದು ಫೋಟೋಗ್ರಾಫರ್ ಮತ್ತು ಆತನ ಸ್ನೇಹಿತರು ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 18 ಮತ್ತು 19 ರಂದು ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಪೊಲೀಸರು ಬಾಲಕಿಯ ನಾಪತ್ತೆ ಪ್ರಕರಣವನ್ನು ಅತ್ಯಾಚಾರ (ಐಪಿಸಿ ಸೆಕ್ಷನ್ 376) ಆಗಿ ಮಾರ್ಪಡಿಸಿದ್ದಾರೆ ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಕೂಡ ಸೇರಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಕೆ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ: ಬಸ್-ಟ್ರಕ್ ನಡುವೆ ಅಪಘಾತ; 12 ಮಂದಿ ಸಾವು, 25 ಜನರಿಗೆ ಗಾಯ