ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, “ಅತ್ಯಂತ ಅನಾಗರಿಕ, ವಿಕೃತವಾಗಿ ಮಾತನಾಡಿರುವ ರಾಜಣ್ಣನಿಗೆ ತಕ್ಕ ಪಾಠ ಕಲಿಸುತ್ತೇನೆ” ಎಂದು ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ‘‘ಜನತಾ ಮಿತ್ರ” ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆಯೇ ಆಕ್ರೋಶ ಹೊರ ಹಾಕಿದ ಕುಮಾರಸ್ವಾಮಿ, “ದೇವೇಗೌಡರ ಬಗ್ಗೆ ವಿಕೃತವಾಗಿ ಮಾತನಾಡಿರುವ ರಾಜಣ್ಣ ತನ್ನ ಹೀನ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ದುರಹಂಕಾರದ ಮಾತುಗಳಿಗೆ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ” ಎಂದು ಕಿಡಿಕಾರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“2004ರಲ್ಲಿ ರಾಜಣ್ಣ ಅವರು ಬೆಳ್ಳಾವಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯ ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆಗ ಆ ವ್ಯಕ್ತಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ಇಲ್ಲದಿದ್ದರೆ ಅವರನ್ನು ಯಾರು ಕೇಳುತ್ತಿದ್ದರು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ: ರಾಜಣ್ಣ ಕ್ಷಮೆ ಕೇಳಬೇಕು ಎಂದ ಡಿಕೆ ಶಿವಕುಮಾರ್
“ದೇವೇಗೌಡರು ಅಂದು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ತೆರಳಿ ಪ್ರಚಾರ ಮಾಡಿದ್ದರು. ಇಬ್ಬರು ದೇವೇಗೌಡರ ಹೆಗಲಿಗೆ ಹೆಗಲು ಕೊಡುತ್ತಾರೆ. ನಿಜ, ರಾಜಣ್ಣನವರಿಗೆ ಅರಿವಿದ್ದಂತೆ ಇಲ್ಲ. ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸುತ್ತೇವೆ. ದೇವರ ಮೆರವಣಿಗೆಗೂ ಭುಜ ಕೊಡುತ್ತೇವೆ. ಭುಜ ಕೊಟ್ಟೇ ಮೆರವಣಿಗೆ ಮಾಡೋದಲ್ಲವೇ? ದೇವೇಗೌಡರು ಕೂಡ ಹಾಗೆಯೇ, ನಮ್ಮ ಪಾಲಿಗೆ ಅವರು ದೈವವೇ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
“ರಾಜಣ್ಣನ ಮಾತಿನ ದುರಹಂಕಾರ ಕೇಳಿದ್ದೇನೆ. ಆತ ಬ್ರಹ್ಮನಲ್ಲ, ಆತನೂ ಒಬ್ಬ ಹುಲು ಮಾನವ. ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ ಎಂಬ ನಂಬಿಕೆ ನನ್ನದು. ಹಲವಾರು ಒತ್ತಡಗಳಿಂದ ತುಮಕೂರಿನಲ್ಲಿ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದರು. ಅವರನ್ನು ಸೋಲಿಸಲು ಕುತಂತ್ರ ನಡೆಸಿದ್ದು ಇದೇ ರಾಜಣ್ಣ” ಎಂದು ಅವರು ಹೇಳಿದ್ದಾರೆ.
“ಇನ್ನೆರಡು ಮೂರು ತಿಂಗಳು ನೋಡಲಿ. ದೇವೇಗೌಡರೇ ಸ್ವತಂತ್ರವಾಗಿ ಓಡಾಡುತ್ತಾರೆ. ರಾಜಣ್ಣ ಕ್ಷಮೆ ಕೇಳಬೇಕು ಅಂತಾ ಹೇಳುವುದಿಲ್ಲ. ದೇವೇಗೌಡರ ಮಗ ನಾನು ಇನ್ನೂ ಬದುಕಿದ್ದೇನೆ. ಮಧುಗಿರಿಗೆ ಬಂದು ತೋರಿಸುತ್ತೇನೆ. ನಾನು ಉತ್ತರ ಕೊಡುವುದಲ್ಲ, ಅಲ್ಲಿನ ಜನರಿಂದಲೇ ಉತ್ತರ ಕೊಡಿಸುತ್ತೇನೆ” ಎಂದು ಕುಮಾರಸ್ವಾಮಿ ಅವರು ಪ್ರತಿಜ್ಞೆಗೈದಿದ್ದಾರೆ.
ಇದನ್ನೂ ಓದಿ: ಜುಬೇರ್ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕುತ್ತಿರುವ ದೆಹಲಿ ಪೊಲೀಸರು!
ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಹೇಳಿದ್ದೇನು?
ಮಧುಗಿರಿ ತಾಲ್ಲೂಕಿನ ಕಾವಣದಾಲ ಗ್ರಾಮದಲ್ಲಿ ಮಾತನಾಡುತ್ತಿದ್ದ ಅವರು, “ಇದು ನನ್ನ ಕೊನೇ ಚುನಾವಣೆ. ಶೋಕಿಗೆ, ಮುಖಸ್ತುತಿಗೆ ರಾಜಕಾರಣ ಮಾಡೋದು ಬೇಡ. ನಾನು ಶಾಸಕನಾದರೆ ನೀವೆಲ್ಲರೂ ಆದಂತೆ. ನೀವು ಹೋರಾಟ ಮಾಡಿ, ನಾನು ಶಾಸಕನಾದರೆ ನಾಮಕಾವಸ್ಥೆಗೆ ಇರ್ತೀನಿ. ಏನಾದರೂ ಕೆಲಸ ಆಗಬೇಕಾದ್ರೆ ನೀವೇ ಅಧಿಕಾರಿಗಳನ್ನ ಕೇಳೋ ಶಕ್ತಿ ಬರುತ್ತೆ” ಎಂದು ಹೇಳಿದ್ದರು.
“ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ಓಟ್ ಕೇಳ್ತೀನಿ. ಮುಂದೆ ನೀವು ನಿಂತ್ಕೋ ಅಂದ್ರೂ ನಿಲ್ಲಲ್ಲಾ… ನನಗೆ ಆಗಲೇ 72 ವರ್ಷ, 77 ಆದ್ರೆ ಕೈಕಾಲು ಅಲಾಡ್ತಿರುತ್ತೆ. ನಮ್ಮ ಸರ್ಕಾರ ಬಂದ್ರೆ ನೂರಕ್ಕೆ ನೂರರಷ್ಟು ಮಂತ್ರಿ ಆಗ್ತೀನಿ. ದೇವೇಗೌಡರು ಇಬ್ಬರು ಮೇಲೆ ಹಾಕ್ಕೊಂಡು ಹೋಗ್ತಾವ್ರೇ.. ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು” ಎಂದು ರಾಜಣ್ಣ ಹೇಳಿದ್ದರು.