ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬೈಸಿಕಲ್, ಶೂ ಮತ್ತು ಸಾಕ್ಸ್ ಅನ್ನು ಆಯವ್ಯದಲ್ಲಿ ಮುಂಜೂರು ಮಾಡದೇ, 2022-23ನೇ ಸಾಲಿಗೆ ಈ ಉಚಿತ ಸೌಲಭ್ಯವನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಾಗದಿರುವುದು ನಿಜಕ್ಕೂ ವಿಷಾದನೀಯ ಎಂದು ‘ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ’ ಖಂಡಿಸಿದ್ದು, ಇದು ಸರಕಾರದ ಬೇಜವಾಬ್ದಾರಿ ನಡೆ ಎಂದು ಕಿಡಿ ಕಾರಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೇದಿಕೆ, “ಇದು ನಮ್ಮ ಮಕ್ಕಳಿಗಾದ ಘೋರ ಅನ್ಯಾಯ. ಮಕ್ಕಳು ಗೌರವ ಮತ್ತು ಆತ್ಮಾಭಿಮಾನದಿಂದ ಸಮವಸ್ತ್ರ ಧರಿಸಿ, ಶೂ ಮತ್ತು ಸಾಕ್ಸ್ ಹಾಕಿಕೊಂಡು ಸಂವಿಧಾನ ಕೊಡಮಾಡಿದ ಉಚಿತ ಹಾಗು ಕಡ್ಡಾಯ ಶಿಕ್ಷಣದ ಹಕ್ಕನ್ನು ಪಡೆದ ಹೆಮ್ಮೆಯಲ್ಲಿ ತಲೆಯೆತ್ತಿ ಶಾಲೆಗೆ ಹೋಗುತ್ತಿದ್ದರು” ಎಂದು ಪ್ರತಿಪಾದಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬೈಸಿಕಲ್, ಶೂ-ಸಾಕ್ಸ್ ಮೂಲಕ ಕನ್ನಡ ಶಾಲೆಗಳಲ್ಲಿ ಮಕ್ಕಳು ಉಳಿದ ಖಾಸಗಿ ಶಾಲೆಗಳ ಮಕ್ಕಳಂತೆಯೇ ಸ್ವಾಭಿಮಾನದ ಗೌರವಯುತ ಕಲಿಕಾ ವಾತಾವರಣದಲ್ಲಿ ಕಲಿಯುವ ಭೂಮಿಕೆಯನ್ನು ಸಂವಿಧಾನದ ಮೂಲಭೂತ ಹಕ್ಕು ಒದಗಿಸಿತ್ತು. ಅವರ ಶೂ ಮತ್ತು ಸಾಕ್ಸ್ ಹಾಗು ಬೈಸಿಕಲ್ ಹಕ್ಕನ್ನು ಕಸಿದಿರುವ ಸರ್ಕಾರ, ಮಕ್ಕಳು ಬರಿಗಾಲಿನಲ್ಲಿ ಹೋಗುವಂತೆ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಇದು ಅವರ ಸಂವಿಧಾನಬದ್ಧ ಹಕ್ಕಿನ ಉಲ್ಲಂಘನೆ. ಮಕ್ಕಳ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ಕುಗ್ಗಿಸುವ ನಡೆ. ಇದು ಸರಕಾರೀ ಶಾಲೆಗಳ ಮಕ್ಕಳಲ್ಲಿ ಮತ್ತಷ್ಟು ಕೀಳಿರಿಮೆ ಬೆಳೆಸಿ ಶಿಕ್ಷಣದ ಆಸಕ್ತಿಯನ್ನು ತಗ್ಗಿಸುತ್ತದೆ. ಸರಕಾರೀ ಶಾಲೆಗಳು ಮತ್ತಷ್ಟು ದುರ್ಬಲವಾಗುತ್ತವೆ” ಎಂದು ಅದು ಹೇಳಿದೆ.
ಇದನ್ನೂ ಓದಿ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ‘ಚಾರ್ಜ್ ಶೀಟ್’ ಹೊರಡಿಸಿದ ಬಹುತ್ವ ಕರ್ನಾಟಕ!
ಕೂಡಲೇ ಸರಕಾರ ಮಕ್ಕಳಿಗೆ ಸಂವಿಧಾನ ದತ್ತವಾಗಿ ಸಿಕ್ಕಿರುವ ಮೂಲಭೂತ ಹಕ್ಕನ್ನು ಗೌರವಿಸಿ, ಉಚಿತ ಶೂ ಮತ್ತು ಸಾಕ್ಸ್ ಹಾಗು ಬೈಸಿಕಲ್ ವಿತರಣೆಗೆ ಕ್ರಮವಹಿಸಬೇಕೆಂದು ಸಮನ್ವಯ ವೇದಿಕೆಯು ಆಗ್ರಹಪೂರ್ವಕವಾಗಿ ಸರ್ಕಾರವನ್ನು ಒತ್ತಾಯಿಸಿದೆ.