ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಅಂತರಾಷ್ಟ್ರೀಯ ಗಡಿ ಸಮೀಪದ ಬೈಷ್ನಾಬ್ಪುರ ಗ್ರಾಮದ 2 ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಸಬ್ರೂಮ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಅಪು ದಾಸ್ ಮಾದ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾ ಪ್ರಜೆಗಳ ಜೊತೆಗೆ ಬಾಂಗ್ಲಾದೇಶಿ ಪ್ರಜೆಗಳಿಗೆ ಆಶ್ರಯ ನೀಡಿದ ಮೂವರು ಸ್ಥಳೀಯ ನಿವಾಸಿಗಳನ್ನು ಕೂಡ ಬಂಧಿಸಲಾಗಿದೆ.
ಸಬ್ರೂಮ್ ಉಪವಿಭಾಗದ 62 ಕಿಮೀ ಗಡಿಗೆ ಭೌಗೋಳಿಕ ಕಾರಣಗಳಿಂದ ಸಂಪೂರ್ಣವಾಗಿ ಬೇಲಿ ಅಳವಡಿಕೆಯಾಗಿಲ್ಲ. ಇದೇ ರಸ್ತೆಯನ್ನು ಮಾನವ ಕಳ್ಳಸಾಗಣೆದಾರರು ಬಳಸುತ್ತಿದ್ದಾರೆ. ಮಾನವ ಕಳ್ಳಸಾಗಣೆ ಬಗ್ಗೆ ನಾವು ಶೂನ್ಯ ಸಹನೆಯನ್ನು ಹೊಂದಿದ್ದೇವೆ. ಒಳನುಸುಳುವಿಕೆಗೆ ಸಹಾಯ ಮಾಡಿದ ಆರೋಪಿಗಳ ಮೇಲೆ ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಕಠಿಣ ಕಾನೂನುಗಳಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಪು ದಾಸ್ ಹೇಳಿದ್ದಾರೆ.
ಇನ್ನು ಕೋಲ್ಕತ್ತಾದಲ್ಲಿ ಇಬ್ಬರು ಬಾಂಗ್ಲಾ ದೇಶದ ಪ್ರಜೆಗಳನ್ನು ಭಯೋತ್ಪಾದಕರ ಜೊತೆಗಿನ ನಂಟಿನ ಶಂಕೆಯಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ ವೀಸಾ ಅಥವಾ ಭಾರತದ ಪ್ರಯಾಣಕ್ಕೆ ಬೇಕಾಗಿದ್ದ ಸೂಕ್ತ ದಾಖಲೆಗಳು ಇರಲಿಲ್ಲ. ಶನಿವಾರ ರಾತ್ರಿ ಇಬ್ಬರನ್ನು ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಏರಿಯಾದಿಂದ ಬಂಧಿಸಲಾಗಿದೆ. ಬಂಧಿತರನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಛತ್ತೀಸ್ಗಢ: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 15,000ರೂ. ಘೋಷಿಸಿದ ಕಾಂಗ್ರೆಸ್